ಪಶ್ಚಿಮ ಬಂಗಾಳ | ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ 39 ಮಕ್ಕಳು ಅಸ್ವಸ್ಥ!

PC : indianexpress.com
ಕೋಲ್ಕತಾ,ಆ.15: ಪಶ್ಚಿಮಬಂಗಾಳ ಸರಕಾರ ಶುಕ್ರವಾರ ನಗರದ ರೆಡ್ರೋಡ್ ನಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಪರೇಡ್ ನಲ್ಲಿ ಭಾಗವಹಿಸಿದ್ದ ಕನಿಷ್ಠ 39 ಮಂದಿ ವಿದ್ಯಾರ್ಥಿಗಳು ತೀವ್ರ ತಾಪಮಾನ ಹಾಗೂ ತೇವಾಂಶಭರಿತ ವಾತಾವರಣದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದಾರೆ.
ವಿದ್ಯಾರ್ಥಿಗಳನ್ನು ಕೂಡಲೇ ಎಸ್ಎಸ್ಕೆಎಂ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಲಾಗಿದೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆನಂತರ ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು.
ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ ಸೇವಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಅವರು ಉದ್ವೇಗಭರಿತರಾಗಿದ್ದರು. ಅವರಲ್ಲಿ ಹಲವರಿಗೆ ನಿರ್ಜಲೀಕರಣದ ತೊಂದರೆಯುಂಟಾಗಿತ್ತು. ಇದು ಅವರಲ್ಲಿ ಮಾನಸಿಕತೆಯ ಮೇಲೆ ಪರಿಣಾಮವನ್ನುಂಟು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಓರ್ವ ವಿದ್ಯಾರ್ಥಿ ಅಸ್ವಸ್ಥನಾದಾಗ ಆತನ ಸ್ನೇಹಿತ ಕೂಡಾ ಅಸ್ವಸ್ಥನಾಗುತ್ತಾನೆ. ಈಗ ಎಲ್ಲಾ ವಿದ್ಯಾರ್ಥಿಗಳು ಕ್ಷೇಮವಾಗಿದ್ದಾರೆಂದು ಮಮತಾ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ರಿಹರ್ಸಲ್ ಸಂದರ್ಭದಲ್ಲೂ ಕೆಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಅವರಲ್ಲಿ ಕೆಲವರನ್ನು ಎಸ್ಎಸ್ಕೆಎಂ ಆಸ್ಪತ್ರೆಗೆ,ಇನ್ನು ಕೆಲವರನ್ನು ಕೋಲ್ಕತಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.







