ಪಶ್ಚಿಮಬಂಗಾಳ: ತೆರವು ಕಾರ್ಯಾಚರಣೆ ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳಿಂದ ರೈಲ್ ರೋಕೋ

Photo Credit : indiatoday.in
ಕೋಲ್ಕತ್ತಾ, ಜೂ. 2: ಪಶ್ಚಿಮಬಂಗಾಳದಾದ್ಯಂತ ನಡೆಯುತ್ತಿರುವ ಅತಿಕ್ರಮಣ ತೆರವು ಕಾರ್ಯಾಚರಣೆ ನಡುವೆ, ವರ್ತಕರು ಮತ್ತು ಬೀದಿ ಬದಿ ವ್ಯಾಪಾರಿಗಳು ಉತ್ತರ 24 ಪರಗಣ ಜಿಲ್ಲೆಯ ಗೋಬರ್ದಂಗ ರೈಲು ನಿಲ್ದಾಣದಲ್ಲಿ ಮಂಗಳವಾರ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸುವುದನ್ನು ವಿರೋಧಿಸಿ ರೈಲು ಹಳಿಗಳ ಮೇಲೆ ಕುಳಿತು ‘‘ನಾವು ಇದನ್ನು ಸಹಿಸುವುದಿಲ್ಲ’’ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ತಮ್ಮ ಜೀವನೋಪಾಯ ಸಂಪೂರ್ಣವಾಗಿ ಈ ನಿಲ್ದಾಣದಲ್ಲಿ ನಡೆಸುವ ವ್ಯಾಪಾರದ ಮೇಲೆ ಅವಲಂಬಿತವಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ. ರೈಲ್ವೇ ಅಧಿಕಾರಿಗಳು ತಮ್ಮ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರೈಲ್ವೆ ಇಲಾಖೆ ಕಳೆದ ತಿಂಗಳು ಆರಂಭಿಸಿದ ಬೃಹತ್ ಭೂಮಿ ಮುಕ್ತಗೊಳಿಸುವ ಉಪಕ್ರಮಗಳ ನಡುವೆ ಈ ಪ್ರತಿಭಟನೆ ನಡೆದಿದೆ. ಸಾರ್ವಜನಿಕ ಸ್ಥಳಗಳನ್ನು ಮುಕ್ತಗೊಳಿಸುವ ಮತ್ತು ಪ್ರಯಾಣಿಕರ ಸೌಕರ್ಯವನ್ನು ಸುಧಾರಿಸುವ ಉದ್ದೇಶದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿರುವ ಅಧಿಕಾರಿಗಳು, ಪ್ರಮುಖ ರೈಲು ನಿಲ್ದಾಣಗಳ ಸಮೀಪ ಇದ್ದ ತಾತ್ಕಾಲಿಕ ಅಂಗಡಿ, ಶೆಡ್ ಮತ್ತು ಇತರ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ.
ಮೇ 21ರಂದು ರೈಲ್ವೇ, ಕೋಲ್ಕತಾ ಪೊಲೀಸ್ ಮತ್ತು ಅರೆ ಸೇನಾ ಪಡೆಗಳ ಜಂಟಿ ತಂಡ ಡಮ್ಡಮ್ ಜಂಕ್ಷನ್ಲ್ಲಿ ರಾತ್ರೋರಾತ್ರಿ ತೆರವು ಕಾರ್ಯಾಚರಣೆ ನಡೆಸಿತ್ತು.
ಇದಕ್ಕೂ ಮುನ್ನ ಹೌರಾ ನಿಲ್ದಾಣದ ಆವರಣದಿಂದ ಸುಮಾರು 250 ಬೀದಿ ವ್ಯಾಪಾರಿಗಳು ಮತ್ತು ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಬಸ್ ನಿಲ್ದಾಣ ಮತ್ತು ಗಂಗಾ ಘಾಟ್ ಪ್ರದೇಶದ ಸಮೀಪದಲ್ಲಿರುವ ಪಾದಚಾರಿ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಗಳನ್ನು ಆತಿಕ್ರಮಿಸಿಕೊಂಡಿದ್ದ ತಾತ್ಕಾಲಿಕ ಕಟ್ಟಡಗಳನ್ನು ಬುಲ್ಡೋಜರ್ ಮತ್ತು ಜೆಸಿಬಿಗಳ ಮೂಲಕ ಧ್ವಂಸಗೊಳಿಸಲಾಗಿತ್ತು.
ಈ ಕಾರ್ಯಾಚರಣೆಯಿಂದ ಸಂತ್ರಸ್ತರಾದ ಹಲವು ಬೀದಿ ಬದಿ ವ್ಯಾಪಾರಿಗಳು, ಧ್ವಂಸಗೊಳಿಸುವ ಮುನ್ನ ನಮಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ಕ್ರಮದಿಂದ ತಮ್ಮ ಜೀವನೋಪಾಯಕ್ಕೆ ತೀವ್ರ ಧಕ್ಕೆಯಾಗಿದೆ ಎಂದು ಹಲವರು ಹೇಳಿದ್ದಾರೆ. ಯಾವುದೇ ತೆರವು ಕಾರ್ಯಾಚರಣೆ ಮುನ್ನ ತಮಗೆ ಪುನರ್ವಸತಿ ಅಥವಾ ಪರ್ಯಾಯ ವ್ಯಾಪಾರ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘‘ನಮಗೆ ಯಾವುದೇ ಪುನರ್ವಸತಿ ಕಲ್ಪಿಸದಿದ್ದರೆ ನಾವು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ’’ ಎಂದು ಈ ಕಾರ್ಯಾಚರಣೆಯಿಂದ ಬಾಧಿತರಾದ ಅಂಗಡಿ ಮಾಲಿಕರೊಬ್ಬರು ತಿಳಿಸಿದ್ದಾರೆ.
‘‘ಸಾಮಾನ್ಯ ಜನರು ಮತ್ತು ಸಣ್ಣ ವ್ಯಾಪಾರಿಗಳು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ’’ ಎಂದು ಆರೋಪಿಸಿರುವ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ, ಸೂಕ್ತ ಪುನರ್ವಸತಿ ಕಲ್ಪಿಸದೆ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದಿದ್ದಾರೆ.






