‘The Wire’ ವೆಬ್ಸೈಟ್ ಮೇಲಿನ ನಿರ್ಬಂಧ ಹಿಂದೆಗೆದುಕೊಂಡ ಸರಕಾರ
ರಫೇಲ್ ವಿಮಾನ ಹೊಡೆದುರುಳಿಸಲಾಗಿದೆ ಎಂಬ ವರದಿಗೆ ಸಂಬಂಧಿಸಿ ನಿರ್ಬಂಧ!

ಹೊಸದಿಲ್ಲಿ: ಸುದ್ದಿ ಜಾಲತಾಣ ‘ದಿ ವೈರ್’ನ ವೆಬ್ಸೈಟ್ ಮೇಲೆ ನಿನ್ನೆ ದಿನವಿಡೀ ನಿರ್ಬಂಧವನ್ನು ಹೇರಿದ್ದ ಕೇಂದ್ರ ಸರಕಾರ ಕೊನೆಗೂ ನಿರ್ಬಂಧವನ್ನು ಹಿಂದೆಗೆದುಕೊಂಡಿದೆ. ಸರಕಾರ ನಿರ್ಬಂಧವನ್ನು ಹಿಂದೆಗೆದುಕೊಂಡು ಆದೇಶವನ್ನು ಹೊರಡಿಸಿದ 12 ಗಂಟೆಗಳ ನಂತರವೂ ದೇಶದ ಹಲವೆಡೆಗಳಲ್ಲಿ ಕೆಲವು ನೆಟ್ವರ್ಕ್ಗಳಲ್ಲಿ ವೆಬ್ಸೈಟ್ನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು thewire ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ವೆಬ್ಸೈಟ್ನ್ನು ಭಾರತದಲ್ಲಿ ನಿರ್ಬಂಧಿಸಿರುವ ಬಗ್ಗೆ ವಿವರಣೆ ಕೋರಿ ‘ದಿ ವೈರ್’ ನಿನ್ನೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ(ಎಂಐಬಿ) ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಗೆ ಪತ್ರಗಳನ್ನು ಬರೆದಿತ್ತು. ಎಂಟು ಗಂಟೆಗಳ ಬಳಿಕ ರಾತ್ರಿ ಎಂಐಬಿ ಲಿಖಿತ ವಿವರಣೆಯನ್ನು ನೀಡಿದೆ.
ಪಾಕಿಸ್ತಾನವು ಭಾರತದ ರಫೇಲ್ ವಿಮಾನವನ್ನು ಹೊಡೆದುರುಳಿಸಿದೆ ಎಂಬ ವರದಿಗೆ ಸಂಬಂಧಿಸಿದಂತೆ ವೆಬ್ಸೈಟ್ನ್ನು ನಿರ್ಬಂಧಿಸುವಂತೆ ತಾನು ಸ್ವೀಕರಿಸಿದ್ದ ಮನವಿಯ ಆಧಾರದಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಎಂಐಬಿ ತನ್ನ ಇಮೇಲ್ನಲ್ಲಿ ತಿಳಿಸಿತ್ತು. ವೆಬ್ಸೈಟ್ಗಳ ಪ್ರಕರಣದಲ್ಲಿ ಸಂಪೂರ್ಣ ಡೊಮೇನ್ಗಳನ್ನು ಮಾತ್ರ ನಿರ್ಬಂಧಿಸಬಹುದು, ಉಪಪುಟಗಳನ್ನಷ್ಟೇ ನಿರ್ಬಂಧಿಸಲಾಗುವುದಿಲ್ಲ ಎಂಬ ತಾಂತ್ರಿಕ ಮಿತಿಯಿಂದಾಗಿ thewire.in ಅನ್ನು ನಿರ್ಬಂಧಿಸಲಾಗಿದೆ ಎಂದೂ ಅದು ವಿವರಣೆ ನೀಡಿತ್ತು. ಸೂಚಿತ ಕಂಟೆಂಟ್ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ನಿರ್ಬಂಧವನ್ನು ಹಿಂದೆಗೆದುಕೊಳ್ಳಲು ಅನುವು ಮಾಡಿಕೊಡಲು ಆ ಬಗ್ಗೆ ಮಾಹಿತಿಯನ್ನು ನೀಡುವಂತೆ ಪತ್ರದಲ್ಲಿ ಸೂಚಿಸಲಾಗಿತ್ತು ಎಂದು ಹೇಳಿಕೆಯು ತಿಳಿಸಿದೆ.
ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಈ ಅಸಾಂವಿಧಾನಿಕ ದಾಳಿಯನ್ನು ಪ್ರಶ್ನಿಸುವ ಹಕ್ಕನ್ನು ಸಂಪೂರ್ಣವಾಗಿ ಕಾಯ್ದಿರಿಸಿಕೊಂಡು ‘ದಿ ವೈರ್’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರು ಸದ್ರಿ ಸುದ್ದಿವರದಿ/ವೆಬ್ಪುಟವನ್ನು ಸಾರ್ವಜನಿಕ ವೀಕ್ಷಣೆಯಿಂದ ತೆಗೆದುಹಾಕಲಾಗಿದೆ ಎಂದು ತಡರಾತ್ರಿ ಎಂಐಬಿಗೆ ಮಾಹಿತಿ ನೀಡಿದ್ದರು ಎಂದು ಹೇಳಿಕೆಯು ತಿಳಿಸಿದೆ.
‘ಆಕ್ಷೇಪಿತ ಸುದ್ದಿಯನ್ನು ದಿ ವೈರ್ ಮೇ 8ರಂದು ಪ್ರಕಟಿಸಿತ್ತು ಮತ್ತು ಅದು ಪ್ರಕಟಿಸಿದ್ದ ಮಾಹಿತಿಯು ಕನಿಷ್ಠ 12 ಗಂಟೆಗಳ ಮೊದಲೇ ಸಿಎನ್ಎನ್ ಜಾಲತಾಣದಲ್ಲಿ ಭಾರತದಲ್ಲಿ ವ್ಯಾಪಕವಾಗಿ ಲಭ್ಯವಿತ್ತು. ಸರಕಾರವು ನಮ್ಮ ವರದಿಯನ್ನು ಅಳಿಸಲು ಏಕೆ ಬಯಸಿದೆ ಮತ್ತು ಸುದ್ದಿ ಪ್ರಕಟಣೆಯ ಸುಮಾರು 24 ಗಂಟೆಗಳ ಬಳಿಕ ಅದನ್ನು ತುರ್ತು ವಿಷಯವನ್ನಾಗಿ ಏಕೆ ಪರಿಗಣಿಸಿತ್ತು ಎನ್ನುವುದು ನನಗೆ ಇನ್ನೂ ಅರ್ಥವಾಗಿಲ್ಲ. ನಮಗೆ ಯಾವುದೇ ನೋಟಿಸ್ ನೀಡದೆ ನಮ್ಮ ಸಂಪೂರ್ಣ ವೆಬ್ಸೈಟ್ನ್ನು ನಿರ್ಬಂಧಿಸಲಾಗಿದೆ ’ಎಂದು ವರದರಾಜನ್ ಎಂಐಬಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ದಿ ವೈರ್’ಮೇಲಿನ ನಿರ್ಬಂಧವನ್ನು ತೆಗೆಸುವುದು ನಮ್ಮ ಆದ್ಯತೆಯಾಗಿರುವುವದರಿಂದ ಭಾರತದ ಸಂವಿಧಾನದ ಅಡಿ ಸೂಕ್ತ ಪರಿಹಾರಗಳನ್ನು ಕೋರುವ ನಮ್ಮ ಹಕ್ಕುಗಳನ್ನು ಕಾಯ್ದಿರಿಸಿಕೊಂಡು ಈ ಅನ್ಯಾಯದ ಬೇಡಿಕೆಗೆ ಮಣಿಯುವುದು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ವರದರಾಜನ್ ಪತ್ರದಲ್ಲಿ ತಿಳಿಸಿದ್ದಾರೆ.
ಸಿಎನ್ಎನ್ನ ಮೂಲ ವರದಿ ಮತ್ತು ಅದರ ಕಂಟೆಂಟ್ಗಳ ಇತರ ಎಲ್ಲ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಭಾರತದಲ್ಲಿ ಸಂಪೂರ್ಣವಾಗಿ ಲಭ್ಯವಿವೆ ಮತ್ತು ‘ದಿ ವೈರ್’ ರೀತಿಯಲ್ಲಿ ಈ ಸುದ್ದಿ ವೇದಿಕೆಗಳ ವೆಬ್ಸೈಟ್ನ್ನು ನಿರ್ಬಂಧಿಸಲಾಗಿಲ್ಲ ಎನ್ನುವುದನ್ನು ವರದರಾಜನ್ ತನ್ನ ಪತ್ರದಲ್ಲಿ ಎತ್ತಿ ತೋರಿಸಿದ್ದಾರೆ.
ಭಾರತ ಮತ್ತು ಜಗತ್ತಿನಾದ್ಯಂತ ತನ್ನೆಲ್ಲ ಓದುಗರಿಗೆ ಸ್ಪಷ್ಟ,ನಿಖರ ಮತ್ತು ಪ್ರಮುಖ ಸುದ್ದಿಗಳು, ಮಾಹಿತಿ ಮತ್ತು ವಿಶ್ಲೇಷಣೆಯನ್ನು ಒದಗಿಸುವ ತನ್ನ ಕರ್ತವ್ಯವನ್ನು ಪಾಲಿಸಲು ‘ದಿ ವೈರ್’ ಬದ್ಧವಾಗಿದೆ ಎಂದೂ ಹೇಳಿಕೆಯು ತಿಳಿಸಿದೆ.