ಪಕ್ಷಿಪ್ರಿಯರ ನೆಚ್ಚಿನ ತಾಣವಾದ ಹೊಸಕೋಟೆ ಕೆರೆ

ಹೊಸಕೋಟೆ: ‘ಹೊಸಕೋಟೆ ಕೆರೆ’ಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಪ್ರಮುಖ ಕೆರೆಯಾಗಿದೆ. ಇದು ಪಕ್ಷಿ ಪ್ರಿಯರ ನೆಚ್ಚಿನ ತಾಣವಾಗಿದೆ. ಈ ಕೆರೆಯು ಸುಮಾರು 808 ಎಕರೆ ವಿಸ್ತೀರ್ಣ ಹೊಂದಿದೆ.
ಕೆರೆಯ ವಿಸ್ತೀರ್ಣ ಮತ್ತು ಉತ್ತಮ ಪರಿಸರದಿಂದಾಗಿ ಕೊಕ್ಕರೆಗಳಂತಹ ಸ್ಥಳೀಯ ಪಕ್ಷಿಗಳು ಮಾತ್ರವಲ್ಲದೆ ಯುರೋಪಿಯನ್ ದೇಶಗಳಲ್ಲಿ ಕಂಡುಬರುವ ಫ್ಲೆಮಿಂಗೊಗಳು ಸಹ ವಲಸೆ ಬಂದು ಒಂದು ಅಥವಾ ಎರಡು ತಿಂಗಳು ಇಲ್ಲಿಯೇ ಇದ್ದು ಹಿಂತಿರುಗುತ್ತವೆ.
ದಕ್ಷಿಣ ಪಿನಾಕಿನಿ ನದಿಯೆಂದೇ ಹೆಸರಾಗಿರುವ ದೊಡ್ಡ ಅಮಾನಿಕೆರೆ ದಂಡೆಯಲ್ಲಿ ಪಕ್ಷಿಪ್ರಿಯರ ದಂಡು ದಿನೇ ದಿನೇ ಹೆಚ್ಚುತ್ತಿವೆೆ. ಪಕ್ಷಿಗಳ ಕಲರವ ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಪಕ್ಷಿ ಪ್ರಿಯರಿಂದ ಕೆರೆ ಅಂಗಳ ತುಂಬಿ ತುಳುಕುತ್ತಿದೆ.
ವಾರಾಂತದಲ್ಲಿ ಪಕ್ಷಿ ಪ್ರಿಯರು ಮುಗಿಬೀಳುವುದು ಸಾಮಾನ್ಯವಾಗಿದೆ. ಪಕ್ಷಿಗಳ ತರಹೇವಾರಿ ಫೋಟೊ ತೆಗೆಯಲು ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ ಮೈಮರೆಯುತ್ತಿದ್ದಾರೆ. ನಗರದ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಅಮಾನಿ ದೊಡ್ಡಕೆರೆಯಲ್ಲಿ ರವಿವಾರ ಬಂತೆಂದರೆ ಪಕ್ಷಿ ವೀಕ್ಷಣೆಗೆ ಜನಸಾಗರವೇ ಹರಿದುಬಂದಿದ್ದೇ ಇದಕ್ಕೆ ಸಾಕ್ಷಿ.
ನಗರ, ಗ್ರಾಮಾಂತರ ಪ್ರದೇಶ ಹಾಗೂ ದೂರದ ಊರುಗಳಿಂದ ವೀಕ್ಷಣೆಗೆ ಪಕ್ಷಿ ಪ್ರಿಯರು ಮುಂಜಾನೆಯೇ ಕೆರೆ ಅಂಗಳದಲ್ಲಿ ಬೀಡುಬಿಡುತ್ತಾರೆ. ಈ ದೃಶ್ಯ ಯಾವುದೋ ಜಾತ್ರೆ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.
ದಶಕಗಳ ಹಿಂದೆ ನಂದಿಬೆಟ್ಟದ ತಪ್ಪಲಲ್ಲಿ ದಕ್ಷಿಣ ಪಿನಾಕಿನಿ ನದಿ ಹುಟ್ಟಿ ದೇವನಹಳ್ಳಿ ಹೊಸಕೋಟೆ ಮೂಲಕ ತಮಿಳುನಾಡಿಗೆ ಹರಿಯುತ್ತಿತ್ತು. (1985ರಲ್ಲಿ ಕೊನೆಯ ಬಾರಿಗೆ ಕೆರೆ ತುಂಬಿತ್ತು ಎನ್ನಲಾಗಿದೆ. ಆ ಸಂದರ್ಭದಲ್ಲಿ ದೊಡ್ಡ ಅಮಾನಿಕೆರೆಯಲ್ಲಿ ಹೊಸಕೋಟೆ ಸೇರಿ ಸುತ್ತಮುತ್ತಲ ಗ್ರಾಮದ ಜನರು ತೆಪ್ಪೋತ್ಸವ ಹಾಗೂ ದೀಪೋತ್ಸವ ನೆರವೇರಿಸಿದ್ದರು ಎನ್ನಲಾಗಿದೆ.) ಇತ್ತೀಚಿಗೆ ಬರಗಾಲದಿಂದ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಶೇಖರಣೆಯಾಗಿ ಕೆರೆ ಬತ್ತಿದಂತಿದೆ.
ಕೆಲವು ವರ್ಷಗಳ ಹಿಂದೆ ಎಲೆ ಮಲ್ಲಪ್ಪ ಕೆರೆಯಿಂದ ಏತ ನೀರಾವರಿ ಯೋಜನೆ ಮೂಲಕ ದೊಡ್ಡ ಅಮಾನಿ ಕೆರೆಗೆ ನೀರು ಹಾಯಿಸುವ ಯೋಜನೆ ಶುರುವಾದ ಬಳಿಕ ಈ ಕೆರೆಯಲ್ಲಿ ಮತ್ತೆ ನೀರಿನ ನೆಲೆ ಕಾಣಿಸಿಕೊಂಡಿತು. ಪರಿಣಾಮ ಮೀನುಗಾರಿಕೆಗೂ ಶುಕ್ರದೆಸೆ ಆರಂಭವಾಯಿತು. ಇದರಿಂದಾಗಿ ವಿದೇಶಿ ಪಕ್ಷಿಗಳು ಸಂತಾನೋತ್ಪತಿಗಾಗಿ ಈ ಭಾಗಕ್ಕೆ ದೌಡಾಯಿಸತೊಡಗಿದವು. 230ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ವಾತಾವರಣಕ್ಕೆ ಅನುಗುಣವಾಗಿ ಬರುತ್ತಿವೆ.
ವಾರಾಂತ್ಯದ ಪಿಕ್ನಿಕ್ ಸ್ಪಾಟ್: ಕಳೆಗುಂದಿದ್ದ ದೊಡ್ಡ ಅಮಾನಿಕೆರೆಗೀಗ ಜೀವಕಳೆ ಮರುಕಳಿಸಿದೆ. ಇದು ವಾರಾಂತ್ಯದ ಪಿಕ್ನಿಕ್ ಸ್ಪಾಟ್ ಆಗಿದೆ. ಕೆರೆ ನೀರಿನಲ್ಲಿ ವಿಹರಿಸುತ್ತಿರುವ ಪಕ್ಷಿಗಳನ್ನು ಕಣುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಸರಕಾರ ಮತ್ತಷ್ಟು ಕಾಳಜಿವಹಿಸಿ ಕೆರೆ ಅಭಿವೃದ್ಧಿಪಡಿಸಿದರೆ ಇದಕ್ಕೆ ಐತಿಹಾಸಿಕ ಮಹತ್ವ ದೊರೆಯಲಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಪಕ್ಷಿಪ್ರಿಯರು ಸರಕಾರಕ್ಕೆ ಜನಪ್ರತಿನಿಧಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
230ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು
ಹೊಸಕೋಟೆ ಕೆರೆಯಲ್ಲಿ ಸದ್ಯ 230ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇಲ್ಲಿ ಕಂಡುಬರುತ್ತಿವೆ. 2020ರಲ್ಲಿ ಮೊದಲ ಬಾರಿಗೆ ರಾಜಹಂಸ ಪಕ್ಷಿಗಳು ಠಿಕಾಣಿ ಹೂಡಿದ್ದವು. ಇದರಿಂದ ಈ ಭಾಗದಲ್ಲಿ ಪಕ್ಷಿ ಪ್ರಿಯರ ದಂಡೇ ಹಂಸಗಳನ್ನು ವೀಕ್ಷಿಸುತ್ತಿತ್ತು. ಈಗಲೂ ವಾರಾಂತ್ಯದಲ್ಲಿ ನೂರಾರು ಪಕ್ಷಿ ಪ್ರಿಯರು ಪಕ್ಷಿಗಳ ಪೋಟೊ ಕ್ಲಿಕ್ಕಿಸಲು ಬೆಳಗ್ಗೆ 6ರಿಂದಲೇ ಇಲ್ಲಿಗೆ ಬರುತ್ತಾರೆ.
ಸಂತಾನೋತ್ಪತ್ತಿಗೆ ಆಗಮನ
ಬೆಂಗಳೂರು ಗ್ರಾಮಾಂತರದಲ್ಲಿ ಯಾವುದೇ ಪಕ್ಷಿಧಾಮಗಳಿಲ್ಲ, ಆದರೆ ಇಲ್ಲಿನ ಕೆರೆಗಳಿಗೆ ಚಳಿಗಾಲದಲ್ಲಿ ವಿದೇಶಿ ಹಕ್ಕಿಗಳು ಬರುತ್ತವೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಕೆರೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸ್ವಚ್ಛತೆಗೂ ಹೆಚ್ಚಿನ ಒತ್ತು ನೀಡಬೇಕು. ಗುಜರಾತ್ನಲ್ಲಿ ಗೋಚರಿಸುತ್ತಿದ್ದ ರಾಜಹಂಸ ಪಕ್ಷಿಗಳು ಇದೀಗ ಸ್ಥಳ ಬದಲಾಯಿಸಿ ಸಂತಾನೋತ್ಪತ್ತಿಗಾಗಿ ಸೂಕ್ತ ಜಾಗದ ಹುಡುಕಾಟ ನಡೆಸಿವೆ. ಶಾಂತಾ ವಾತಾವರಣ ಅರಸಿಕೊಂಡು ವಲಸೆ ಹೋಗುವುದು ಸಾಮಾನ್ಯ ಎಂದು ಪಕ್ಷಿ ತಜ್ಞರು ತಿಳಿಸಿದ್ದಾರೆ.
ಕಾಡು ಬೆಕ್ಕಿನಂತಹ ಮಾಂಸಹಾರಿ ಪ್ರಾಣಿಗಳು ಈ ಪ್ರದೇಶದಲ್ಲಿವೆ ಎಂದರೆ ಅವುಗಳಿಗೆ ಸಾಕಷ್ಟು ಆಹಾರ ದೊರೆಯುತ್ತಿರುವುದರ ಸೂಚನೆ ಇದಾಗಿದೆ. ಜತೆಗೆ ಆ ಪ್ರಾಣಿಗಳ ವಾಸಕ್ಕೆ ಯೋಗ್ಯ ಪ್ರದೇಶ ಇದು ಎಂದು ಹೇಳಬಹುದು. ಇಂತಹ ಪ್ರದೇಶವನ್ನು ಅಭಿವೃದ್ಧಿಪಡಿಸುವುದರಿಂದ ಸಾಕಷ್ಟು ಅನುಕೂಲಗಳಾಗುತ್ತವೆ.
-ಮಂಜು ಹೊಸಕೋಟೆ, ಪರಿಸರ ಪ್ರೇಮಿ







