ಚಿತ್ತಾಪುರದ ಮುಖ್ಯ ರಸ್ತೆಯ ಬೀದಿ ದೀಪಗಳ ಕಣ್ಣಾಮುಚ್ಚಾಲೆ

ಚಿತ್ತಾಪುರ: ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿಯ ಬಹುತೇಕ ಬೀದಿ ದೀಪಗಳು ಕಳೆದ ಹಲವು ತಿಂಗಳುಗಳಿಂದ ಬೆಳಗುತ್ತಿಲ್ಲ. ಪಾದಚಾರಿಗಳು ಹಾಗೂ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸಲು ಪರದಾಡಬೇಕಿದೆ.
ಈ ರಸ್ತೆಯಲ್ಲಿ ನೂರಾರು ಪ್ರಮುಖ ಅಂಗಡಿ ಮುಂಗಟ್ಟುಗಳಿವೆ. ವಾಣಿಜ್ಯ, ವಹಿವಾಟಿನ ಕೇಂದ್ರವಾಗಿದೆ. ರಾತ್ರಿಯಾಗುತ್ತಿದ್ದಂತೆ ಇಡೀ ಹೆದ್ದಾರಿ ಕತ್ತಲೆಯನ್ನೇ ಹೊದ್ದು, ಸವಾರರಿಗೆ ಭೀತಿ ಹುಟ್ಟಿಸುತ್ತಿದೆ. ವಿದ್ಯುತ್ ದೀಪಗಳು ಬೆಳಗದ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕರು, ರಾತ್ರಿ ವೇಳೆ ಹೆದ್ದಾರಿ ಬಳಿ ಸಂಚರಿಸುವುದು ವಿರಳವಾಗಿದೆ. ಭಾರಿ ಗಾತ್ರದ ವಾಹನಗಳು, ಬಸ್’ಗಳು ಸೇರಿ ಇತರ ವಾಹನಗಳು ಕತ್ತಲೆಯಲ್ಲಿ ಎರಾಬಿರಿಯಾಗಿ ಬಂದು ತಮ್ಮ ಮೈಮೇಲೆ ಹರಿದರೆ ಎಂಬ ಆತಂಕ ಕಾಡುತ್ತಿದೆ.
ಮತ್ತೊಂದೆಡೆ ಕಳೆದ ಹಲವು ತಿಂಗಳುಗಳಿಂದ ಬೀದಿ ದೀಪ ಉರಿಯದಿದ್ದರೂ ಸ್ಥಳೀಯ ಪುರಸಭೆ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ, ಈ ಮಾರ್ಗದಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಿದೆ. ಇದೇ ರಸ್ತೆ ಪಕ್ಕದಲ್ಲಿರುವ ವೆಂಕಟೇಶ್ವರ ಕಾಲೋನಿ, ಆಶ್ರಯ ಕಾಲೋನಿ ಹಾಗೂ ಪಟ್ಟಣದ ಪ್ರಮುಖ ರಸ್ತೆ ಪಕ್ಕದಲ್ಲಿರುವ ಅಂಗಡಿ ಮುಗ್ಗಂಟ್ಟುಗಳಲ್ಲಿ ಕಳ್ಳರು ರಾತ್ರೋ ರಾತ್ರಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆಗಳು ಜರುಗಿವೆ. ಮಹಿಳೆಯರು ಹಾಗೂ ಮಕ್ಕಳು ರಾತ್ರಿ ವೇಳೆ ಈ ರಸ್ತೆಗೆ ಬರಲು ಹೆದರುವಂತಾಗಿದೆ. ಬೀದಿ ದೀಪಗಳು ಉರಿಯದ ಕಾರಣ ಕೆಲವು ದಿನಗಳಿಂದ ಸಂಜೆ 6ರಿಂದ 10ರ ತನಕ ನಡೆಯುವ ವಹಿವಾಟು ಕೂಡ ಸ್ಥಗಿತವಾಗಿದೆ.
ಬೀದಿ ದೀಪಗಳೇ ಬೆಳಗದಿರುವುದರಿಂದ ಹೆದ್ದಾರಿಯಲ್ಲಿರುವ ವಿದ್ಯುತ್ ಕಂಬಗಳು ಸದ್ಯ, ಬೆದರುಗೊಂಬೆಗಳಾಗಿ ಕಾಣುತ್ತಿವೆ. ಬಹುತೇಕ ದೀಪಗಳು ದುರಸ್ತಿಗೆ ಬಂದಿವೆ. ಕೆಲವು ಬೀದಿ ದೀಪಗಳ ಕಂಬಗಳು ಯಾವಾಗ ಬೀಳುತ್ತವೆಯೋ ಎನ್ನುವ ಭಯ ಶುರುವಾಗಿದೆ. ರಾತ್ರಿ ವೇಳೆ ಕಣ್ಣುಹಾಯಿಸಿದಷ್ಟು ದೂರ ಬರೀ ಕತ್ತಲೆ ಕಾಣುತ್ತಿದೆ. ಇನ್ನೂ ಕೆಲವು ಬೀದಿ ದೀಪಗಳು ಉರಿದರೂ ರಸ್ತೆಗೆ ಬೀಳುವುದೇ ಇಲ್ಲ. ಬೀದಿ ದೀಪಗಳ ನಿರ್ವಹಣೆಗೆ ಪುರಸಭೆಯಿಂದ ಮಾಸಿಕ ಸಾವಿರಾರು ರೂ. ಖರ್ಚುಮಾಡಲಾಗುತ್ತಿದೆ. ಆದರೆ ನಿರ್ವಹಣೆಗೆ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಬೀದಿ ದೀಪಗಳ ನಿರ್ವಹಣೆ ಗುತ್ತಿಗೆ ಪಡೆದ ಗುತ್ತಿಗೆದಾರರೂ ಕೂಡ ಹಲವು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಗಣೇಶ ನಗರದವರೆಗೆ ಹಾಗೂ ಲಾಡ್ಜೀಂಗ್ ಕ್ರಾಸ್’ಯಿಂದ ಕೋರ್ಟ್ ರಸ್ತೆವರೆಗೆ, ಲಾಡ್ಜೀಂಗ್ ಕ್ರಾಸ್’ಯಿಂದ ರೈಲ್ವೆ ನಿಲ್ದಾಣ, ನಾಗಾವಿ ವೃತ್ತ, ಜನತಾ ವೃತ್ತ, ಚಿತ್ತಾವಲಿ ವೃತ್ತ, ಭುವನೇಶ್ವರಿ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದಂತ್ತಾಗಿದೆ. ಕೆಲವು ಕಡೆಗಳಲ್ಲಿ ವಿದ್ಯುತ್ ದೀಪಗಳು ಬೆಳಗಿದರೆ ಇನ್ನೂ ಕೆಲವು ಕಡೆಗಳಲ್ಲಿ ದೀಪಗಳು ಬೆಳಗುವುದೇ ಇಲ್ಲ. ಇಲ್ಲಿನ ಬಸ್ ನಿಲ್ದಾಣಕ್ಕೆ ತಡರಾತ್ರಿ ಆಗಮಿಸುವ ಜನರು ಕತ್ತಲಿನ ಮಾರ್ಗದಲ್ಲಿ ಸಂಚರಿಸಿ, ಮನೆ ತಲುಪಲು ಹರಸಾಹಸ ಪಡಬೇಕಾಗಿದೆ.
ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಬೀದಿ ದೀಪಗಳು ಉರಿಯದೇ ಇರುವುದು ಒಂದೆಡೆಯಾದರೆ, ಬೀದಿ ನಾಯಿಗಳ ಹಾವಳಿಯೂ ಹೆಚ್ಚಿದೆ. ಕತ್ತಲೆಯಲ್ಲಿ ಹಾದುಹೋಗುವಾಗ ಪಾದಚಾರಿಗಳು ಹಾಗೂ ಬೈಕ್ ಸವಾರರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವುದು ಸಾಮಾನ್ಯವಾಗಿದೆ.
ಕೆಲವರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದ ಘಟನೆಗಳೂ ಇತ್ತೀಚೆಗೆ ನಡೆದಿವೆ. ಇಷ್ಟೆಲ್ಲ ಆದರೂ ಪುರಸಭೆ ಆಡಳಿತ ಮಾತ್ರ ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಮುಂದಾಗಿಲ್ಲ ಎಂಬುದು ಸ್ಥಳೀಯರ ಅಳಲಾಗಿದೆ.
ಪುರಸಭೆಯ ನಿರ್ಲಕ್ಷ್ಯದಿಂದ ಪಟ್ಟಣದ ಪ್ರಮುಖ ರಸ್ತೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಕತ್ತಲಾಗುತ್ತಿದ್ದಂತೆ ಪಟ್ಟಣದ ಜನತೆ ಮನೆ ಸೇರುವಂತಾಗಿದೆ. ಯಾರಾದರೂ ದೊಡ್ಡ ದೊಡ್ಡ ರಾಜಕಾರಣಿಗಳು ಪಟ್ಟಣಕ್ಕೆ ಬರ್ತಾ ಇದ್ದಾರೆ ಅಂದ್ರೇ ಆವಾಗ ಮಾತ್ರ ವಿದ್ಯುತ್ ದೀಪಗಳನ್ನು ರೀಪೇರಿ ಮಾಡುತ್ತಾರೆ. ಉಳಿದ ದಿನಗಳಲ್ಲಿ ಕತ್ತಲೇಯೇ ಭಾಗ್ಯ ಎನ್ನುವಂತಾಗಿದೆ.
- ಜಾವೀದ್ ಪಟೇಲ್, ಸ್ಥಳೀಯ ನಿವಾಸಿ
ಪಟ್ಟಣದಲ್ಲಿ ಅಗತ್ಯವಿರುವೆಡೆ ಬೀದಿ ದೀಪಗಳಲ್ಲಿ ವಿದ್ಯುತ್ ಅಳವಡಿಸಲು ಈಗಾಗಲೇ ಸಂಬಂಧ ಪಟ್ಟ ಜೆಇ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಭಾರತಿ ಸಿ. ದಂಡೋತಿ, ಮುಖ್ಯಾಧಿಕಾರಿ ಚಿತ್ತಾಪುರ ಪುರಸಭೆ







