ಕೊಟ್ಟೂರು: ಜನರ ದಾಹ ತೀರಿಸಲು ಹಮಾಲಿಯ ‘ಭಗೀರಥ ಪ್ರಯತ್ನ’

ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಅರವಟ್ಟಗೆ ನಿರ್ಮಿಸಿದ ಹಮಾಲಿ ಕಾರ್ಮಿಕನೊಬ್ಬ ಮಾನವೀಯ ಸೇವಾ ಕಾರ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಅಕ್ಷರ ದಾಸೋಹ ಪದ್ಮಭೂಷಣ ಡಾ. ಶಿವಕುಮಾರ ಮಹಾಸ್ವಾಮಿ ಹಾಗೂ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಈ ಸೇವಾ ಕಾರ್ಯ ಕೈಗೊಳ್ಳಲಾಗಿದೆ.
ಪಟ್ಟಣದಲ್ಲಿ ಬಸ್ ನಿಲ್ದಾಣದ ಬಳಿ ಕುಡಿಯುವ ನೀರಿನ ಯಾವುದೇ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ, ಹಮಾಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿರುವ ಆರ್. ಪ್ರಕಾಶ್ ಎಂಬ ಯುವಕ ಸ್ವಂತ ವೆಚ್ಚದಲ್ಲಿ ಅರವಟ್ಟಗೆ ನಿರ್ಮಿಸಿ ಸಾರ್ವಜನಿಕರ ದಾಹ ತೀರಿಸುವ ಕೆಲಸಕ್ಕೆ ಮುಂದಾಗಿರುವುದು ವಿಶೇಷವಾಗಿದೆ. ‘ಆಧುನಿಕ ಭಗೀರಥ’ನಂತೆ ಕಾಣಿಸಿಕೊಂಡಿರುವ ಪ್ರಕಾಶ್ ಅವರ ಈ ಸೇವಾ ಮನೋಭಾವಕ್ಕೆ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿ ದಿನ 70ರಿಂದ 80 ಕ್ಯಾನ್ ನೀರನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದ್ದು, ತನ್ನ ದೈನಂದಿನ ಆದಾಯದಲ್ಲೇ ಈ ಸೇವೆಯನ್ನು ಮುಂದುವರಿಸುತ್ತಿರುವುದು ಗಮನಾರ್ಹವಾಗಿದೆ.
ಇತ್ತೀಚೆಗೆ ಹೆಚ್ಚುತ್ತಿರುವ ತಾಪಮಾನ ಮತ್ತು ತೀವ್ರ ಬಿಸಿಲಿನ ಹಿನ್ನೆಲೆ, ಪಟ್ಟಣದ ಮೂಲಕ ಸಂಚರಿಸುವ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಅಗತ್ಯ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿಯೇ ಈ ಅರವಟ್ಟಗೆ ವ್ಯವಸ್ಥೆ ಜನರಿಗೆ ತಕ್ಷಣದ ನೆರವಾಗುತ್ತಿದ್ದು, ದಾಹ ನೀಗಿಸುವ ಪ್ರಮುಖ ಕೇಂದ್ರವಾಗಿ ಪರಿಣಮಿಸಿದೆ. ಬಿಸಿಲಿನ ತಾಪದಿಂದ ಬಳಲುತ್ತಿರುವ ಜನತೆಗೆ ಇದು ಶಾಶ್ವತ ಪರಿಹಾರವಲ್ಲದಿದ್ದರೂ, ತುರ್ತು ಅವಶ್ಯಕತೆಗೆ ಮಹತ್ವದ ನೆರವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಕಾಶ್ ತನ್ನ ದೈನಂದಿನ ದುಡಿಮೆಯಿಂದಲೇ ನೀರಿಗಾಗಿ, ಖರ್ಚು ಮಾಡುತ್ತಿರುವುದರಿಂದ ದಾನಿಗಳು, ಜನಪ್ರತಿನಿಧಿಗಳು ಈ ಕಡೆಗೆ ಗಮನ ಹರಿಸಿದರೆ, ಪ್ರಕಾಶ್ ಅವರ ಆರ್ಥಿಕ ಹೊರೆಯೂ ಕಡಿಮೆಯಾಗಬಹುದು.
ನಾನು ಹಮಾಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ನನಗೆ ದಿನಕ್ಕೆ 1000 ದಿಂದ1500 ರೂ.ಹಣ ಸಂಪಾದನೆ ಇದೆ. ನಾನು ಡಾ.ಪುನಿತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಸಾರ್ವಜನಿಕರ ನೀರಿನ ದಾಹವನ್ನು ಇಂಗಿಸುವ ಮೂಲಕ ಸಮಾಜಕ್ಕಾಗಿ ನನ್ನ ಕೈಲಾದ ಅಳಿಲು ಸೇವೆ ಮಾಡುತ್ತಿರುವೆ. ದಿನಕ್ಕೆ 70 ರಿಂದ 80 ಕ್ಯಾನು ನೀರು ಬೇಕಾಗುತ್ತಿದೆ.
-ಆರ್.ಪ್ರಕಾಶ್, ಅಪ್ಪು ಅಭಿಮಾನಿ






