ಹನಿ ನೀರಿಗೂ ಪರದಾಡುವ ಗೆದ್ದಲಮರಿ ಗ್ರಾಮಸ್ಥರು

ಹುಣಸಗಿ: ಸುಮಾರು 40 ವರ್ಷಗಳಾದರೂ ನಾವು ದಲಿತರು ಎನ್ನುವ ಕಾರಣಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯಾರೂ ಮುಂದೆ ಬಂದಿಲ್ಲ. ಒಂದು ಕಿ.ಮೀ. ದೂರದಲ್ಲಿರುವ ಒಂದೇ ಬೋರವೆಲ್ನಿಂದ ಅಶುದ್ಧ ನೀರು ತಂದು ಕುಡಿಯುತ್ತಿರುವುದಾಗಿ ತಾಲೂಕಿನ ಗೆದ್ದಲಮರಿ ಗ್ರಾಮದ ದಲಿತ ಮಹಿಳೆಯರು ಹಾಗೂ ಪುರುಷರು ಖಾಲಿ ಕೊಡಗಳ ಪ್ರದರ್ಶನದ ಮೂಲಕ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳು ವಾಸಿಸುತ್ತಿದ್ದು, ನೀರಿನ ಮೂಲವಿದ್ದರೂ ಕುಡಿಯುವ ನೀರಿನ ಹಾಹಾಕಾರ ತಪ್ಪುತ್ತಿಲ್ಲ ಎಂದು ಹೇಳಿದರು. ಗ್ರಾಪಂ ಆಡಳಿತದಿಂದ ಹಿಡಿದು ಶಾಸಕರು, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದ್ದರೂ ದಲಿತ ಓಣಿಯತ್ತ ಯಾರೂ ಗಮನ ಹರಿಸಿಲ್ಲ ಎಂದು ತಮ್ಮ ದುರವಸ್ಥೆಯನ್ನು ವಿವರಿಸಿದರು.
ಒಂದೇ ಬೋರವೆಲ್ ಮೇಲೆ ನೂರಾರು ಕುಟುಂಬಗಳು ಅವಲಂಬಿತ: ನೂರಾರು ಕುಟುಂಬಗಳಿಗೆ ಒಂದೇ ಬೋರ್ವೆಲ್ ಇರುವುದರಿಂದ ಎಲ್ಲಾ ಕುಟುಂಬದವರು ದೂರ ಹೋಗಿ ನೀರು ತರಬೇಕಾಗಿದೆ.
ಕುಡಿಯುವ ನೀರು ಸಹ ಅಶುದ್ಧವಾಗಿದೆ. ಜನರು ಹಾಗೂ ಜಾನುವಾರುಗಳು ಇದೇ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ನಮ್ಮ ಸ್ಥಿತಿ ದೇವರಿಗೇ ಗೊತ್ತು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಭರವಸೆಯಲ್ಲೇ ಕಾಲಹರಣ: ಸರಕಾರದಿಂದ ಎಸ್ಸಿ ಹಾಗೂ ಎಸ್ಟಿ ಸಮುದಾಯಗಳಿಗೆ ಮೂಲಸೌಕರ್ಯಕಲ್ಪಿಸಲು ಅನುದಾನ ಬರುತ್ತಿದ್ದರೂ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಓಣಿಯಲ್ಲಿ ರಸ್ತೆ ಹಾಗೂ ಚರಂಡಿ ಇಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. ಇಂಥದರಲ್ಲೆ ಜೀವಿಸುತ್ತಿದ್ದೇವೆ ಎಂದು ಆರೋಪಿಸಿದರು.
40 ವರ್ಷಗಳಿಂದ ಸಮಸ್ಯೆಯನ್ನು ಸಹಿಸಿಕೊಂಡಿದ್ದೇವೆ. ಇನ್ನು ಮುಂದೆ ಸಹನೆ ಪರೀಕ್ಷಿಸಿದರೆ ಗ್ರಾಪಂ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬ ಸಮೇತ ಜಾನುವಾರುಗಳೊಂದಿಗೆ ಹಂತ ಹಂತವಾಗಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾನಪ್ಪ ಕಟ್ಟಿಮನಿ, ಬಸಪ್ಪ, ಕೆಂಚಪ್ಪ, ಹಣಮಪ್ಪ, ಸೋಮಪ್ಪ, ಯಮನಪ್ಪ, ಮರೆಪ್ಪ ಅನುಮೇಶ, ಚಂದಪ್ಪ ಮಲ್ಲಪ್ಪ, ನಾಗಪ್ಪ, ಯಲ್ಲಮ್ಮ, ರುದ್ರಮ್ಮ, ಗದ್ದೆಮ್ಮ, ಹುಲಗಮ್ಮ, ಮಂಜಮ್ಮ, ಶಶಿಕಲಾ, ಶಾಂತಮ್ಮ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದರು.






