ಬಾಳೆಬರೆ ಘಾಟಿ ಸಂಪರ್ಕ ಬಂದ್: ಎರಡು ಜಿಲ್ಲೆಗಳಿಗೆ ಸಮಸ್ಯೆ

ಕುಂದಾಪುರ ಕರಾವಳಿಯ ಉಡುಪಿ ಹಾಗೂ ಮಲೆನಾಡಿನ ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುವ ಕೊಂಡಿಯಾಗಿ ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ಬಾಳೆಬರೆ (ಹುಲಿಕಲ್) ಘಾಟಿ ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳನ್ನು ಕರಾವಳಿಯ ಕುಂದಾಪುರ, ಉಡುಪಿ, ಬ್ರಹ್ಮಾವರ ತಾಲೂಕಿನ ಪ್ರಮುಖ ಕೇಂದ್ರಗಳಿಗೆ ಬೆಸೆಯುವ ಸಂಪರ್ಕ ಸೇತುವಾಗಿತ್ತು. ಆದರೆ ಎಪ್ರಿಲ್ 9ರಂದು ಘಾಟಿಯಲ್ಲಿ ಮಾಸ್ತಿಕಟ್ಟೆಯ ಚಂಡಿಕಾಂಬ ದೇವಸ್ಥಾನದ ಬಳಿ ಸಂಭವಿಸಿದ ಭೂಕುಸಿತದ ಬಳಿಕ ಇದೀಗ ಎರಡು ಜಿಲ್ಲೆಗಳ ನಡುವೆ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಉಭಯ ಜಿಲ್ಲೆಗಳ ಜನರು ಪ್ರತಿನಿತ್ಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕುಂದಾಪುರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ-52 ಕುಂದಾಪುರ, ಅಂಪಾರು, ಸಿದ್ಧಾಪುರ, ಹೊಸಂಗಡಿಯ ದಟ್ಟವಾದ ಕಾಡುಗಳ ಮೂಲಕ ಸಾಗಿ ಶಿವಮೊಗ್ಗದ ಪ್ರಮುಖ ಕೇಂದ್ರಗಳಾದ ಮಾಸ್ತಿಕಟ್ಟೆ, ತೀರ್ಥಹಳ್ಳಿ, ನಗರ, ಹೊಸನಗರ ಸಂಪರ್ಕಕ್ಕೆ ಅನುಕೂಲ ಕಲ್ಪಿಸುತ್ತದೆ. ಆ ಭಾಗದ ಜನರು ಸಿದ್ದಾಪುರ-ಉಡುಪಿ, ಕುಂದಾಪುರ ಸಹಿತ ವಿವಿಧ ಉದ್ದೇಶಕ್ಕಾಗಿ ಈ ರಾಜ್ಯ ಹೆದ್ದಾರಿಯನ್ನು ಅವಲಂಬಿಸಿದ್ದರು. ಕಳೆದ ತಿಂಗಳು ಇಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿತದ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಬಳಿಕ ಶಿವಮೊಗ್ಗ, ಉಡುಪಿ ಜಿಲ್ಲಾಡಳಿತ ಈ ಸಂಪರ್ಕ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿ ಬದಲಿ ಮಾರ್ಗವನ್ನು ಸೂಚಿಸಿತ್ತು.
ದಿನಕ್ಕೆ 2 ಬಾರಿ ಬಸ್: ಪರ್ಮಿಟ್ ಇರುವ ಖಾಸಗಿ ಬಸ್ಗಳು ಉಡುಪಿಯಿಂದ ಸಿದ್ಧಾಪುರ ಮಾರ್ಗವಾಗಿ ಮಾಸ್ತಿಕಟ್ಟೆ ಹಾಗೂ ಶಿವಮೊಗ್ಗ ಜಿಲ್ಲೆ ಕಡೆಯಿಂದ ಸಾಗರ-ತೀರ್ಥಹಳ್ಳಿ, ಮಾಸ್ತಿಕಟ್ಟೆ ತನಕ ಜನರಿಗೆ ಅಗತ್ಯವಿರುವ (ಬೆಳಗ್ಗೆ-ಮಧ್ಯಾಹ್ನ-ಸಂಜೆ) ಸಮಯಾ ನುಸಾರ ಎರಡು ಜಿಲ್ಲೆಗಳಿಗೆ ಮಾಸ್ತಿಕಟ್ಟೆಯನ್ನು ಕೇಂದ್ರೀಕರಿಸಿಕೊಂಡು ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಮಸ್ಯೆಗಳು ಹಲವು: ಬಾಳೆಬರೆ ಘಾಟಿ ರಸ್ತೆ ಕರಾವಳಿ-ಮಲೆನಾಡು ಭಾಗದ ಜನರ ಜೀವನಾಡಿ. ನಿರಂತರವಾದ ಘಾಟಿಸಮಸ್ಯೆಯಿಂದ ಈಗ ಆರೋಗ್ಯ, ಶೈಕ್ಷಣಿಕ, ವ್ಯವಹಾರಿಕ, ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಉಡುಪಿ, ಮಣಿಪಾಲ ಸಹಿತ ಕುಂದಾಪುರ ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ನಿರಂತರವಾಗಿ ಚಿಕಿತ್ಸೆ, ವೈದ್ಯರ ಭೇಟಿಗಾಗಿ ಬಂದು ಹೋಗುವರ ಸಮಸ್ಯೆ ಹೇಳತೀರದಾಗಿದೆ. ಮಾಸ್ತಿಕಟ್ಟೆ ಸಮೀಪದ ಭಾಗದಿಂದ ಕುಂದಾಪುರ ತಾಲೂಕಿನ ಹೊಸಂಗಡಿ, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿ, ಕುಂದಾಪುರ ಭಾಗಕ್ಕೆ ತೆರಳುವ 150ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಅವರ ಶೈಕ್ಷಣಿಕ ಬದುಕು ಡೋಲಾಯಮಾನವಾಗಿದೆ.
ಇನ್ನು ರೈತರ ಗೋಳು ಇನ್ನೊಂದು ಬಗೆಯದು. ಕೃಷಿ-ತೋಟಗಾರಿಕೆ ಬೆಳೆಗಳ ಕ್ರಯ-ವಿಕ್ರಯಕ್ಕೆ, ಬ್ಯಾಂಕ್ ಮೊದಲಾದ ಕೆಲಸ ಕಾರ್ಯಗಳಿಗೆ ಬಂದು-ಹೋಗುವವರಿಗೂ ಸಮಸ್ಯೆಯಾಗುತ್ತಿದೆ. ಅದಲ್ಲದೆ ಉಭಯ ಭಾಗದ ಜನರು ತಮ್ಮ ಸಮೀಪದಲ್ಲೇ ಇರುವ ಮಾಸ್ತಿಕಟ್ಟೆ ಪ್ರಸಿದ್ಧ ಚಂಡಿಕಾಂಬ ದೇವಸ್ಥಾನ, ಕಮಲಶಿಲೆ, ಹೊಸಂಗಡಿ ಕೆರೆಕಟ್ಟೆ ಚರ್ಚ್ ಸಹಿತ ವಿವಿಧ ಧಾರ್ಮಿಕ ಶ್ರದ್ಧಾಕೇಂದ್ರಗಳ ಭೇಟಿಗೆ ಬರಲು ತೊಂದರೆ ಅನುಭವಿಸುವಂತಾಗಿದೆ.
ಮಳೆ-ಗಾಳಿಗೆ ರಸ್ತೆಯ ಮದ್ಯೆ ಬೀಳುತ್ತಿರುವ ಬೃಹತ್ ಮರಗಳು ಬಸ್ ಸಂಚಾರಕ್ಕೆ ತೊಡಕಾಗುತ್ತಿದೆ. ಅರಣ್ಯ ಇಲಾಖೆ ವ್ಯಾಪ್ತಿಯು ಮಾಸ್ತಿಕಟ್ಟೆ ಮೇಲೆಯೂ ವಿಸ್ತರಿಸುವ ಕಾರಣ ಅಲ್ಲಿನ ಅಧಿಕಾರಿ ಸಿಬ್ಬಂದಿ ಗಸ್ತು ಮೊದಲಾದ ಕಾರ್ಯಕ್ಕೆ ಎರಡೆರಡು ಬೈಕ್ ಅವಲಂಬಿಸುತ್ತಿದ್ದು ಹರಸಾಹಸದ ನಡುವೆಯೂ ಮರಗಳ ತೆರವು, ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜೂ.10ರೊಳಗೆ ಬಸ್, ಲಘು ವಾಹನ ಓಡಾಟಕ್ಕೆ ಕ್ರಮ ಕುಂದಾಪುರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಬಾಳೆಬರೆ ಘಾಟಿಯ ಹೇರ್ಫಿನ್ ತಿರುವಿನಲ್ಲಿ 30 ಮೀಟರ್ ತಡೆಗೋಡೆ ಕಾಮಗಾರಿ, ರಸ್ತೆ ಅಗಲೀಕರಣ ಕಾಮಗಾರಿಯು ಅಪೆಂಡಿಕ್ಸ್-ಇ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಯಿಂದ 4.35 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ.
‘ಈ ಮಳೆಗಾಲದೊಳಗೆ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟ. ಜೂ.10ರೊಳಗೆ ಕ್ರಿಟಿಕಲ್ ಪಾಯಿಂಟ್ ತನಕದ ತಡೆಗೋಡೆ ಪೂರ್ಣಗೊಳಿಸಿ ಜೆಲ್ಲಿ ರಸ್ತೆಯನ್ನು ನಿರ್ಮಿಸಿ ಬಸ್ ಹಾಗೂ ಲಘು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಹೊಸನಗರದ ಎಇಇ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಘಾಟಿ ರಸ್ತೆ ಕುಸಿದ ಪರಿಣಾಮ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ ಕಾಮಗಾರಿ ತ್ವರಿತಗತಿಯಲ್ಲಿ ನಡೆದಿರಲಿಲ್ಲ. ಈನಡುವೆ ಎಪ್ರಿಲ್ನಲ್ಲಿ ನಡೆದ ದುರಂತದ ಬಳಿಕ ಸಂಪೂರ್ಣ ಘಾಟಿ ಬಂದ್ ಮಾಡಿದ್ದು ನಮ್ಮ ಬದುಕು ದುಸ್ತರವಾಗಿದೆ. ಕೂಡಲೇ ಈ ಅವ್ಯವಸ್ಥೆ ಸರಿಪಡಿಸುವಂತೆ ಲೋಕೋಪ ಯೋಗಿ ಇಲಾಖೆ ಸಚಿವರು ಬಂದಾಗ ಮನವಿ ಮಾಡಿದ್ದೇವೆ. ಮಳೆಗಾಲದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಇಲ್ಲಿನ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು.
-ಗುರುಮೂರ್ತಿ, ಸಾಮಾಜಿಕ ಕಾರ್ಯಕರ್ತ, ನಿಡಗೋಡು ನಿವಾಸಿ
ಶಾಲೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ. ಮಾಸ್ತಿಕಟ್ಟೆಯಿಂದ ಸಿದ್ದಾಪುರ-ಹೊಸಂಗಡಿ ಹಾಗೂ ವಿವಿದೆಡೆ ತೆರಳುವ ಮಕ್ಕಳು ನಿತ್ಯ ಹೋಗಿಬರಲು ಸಮಸ್ಯೆಯಾಗುತ್ತಿದೆ. ಘಾಟಿ ಕೆಳಗಿನ ವಿದ್ಯಾಸಂಸ್ಥೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿದ ನಮ್ಮಂತ ಪೋಷಕರಿಗೆ ಆತಂಕ ಎದುರಾಗಿದೆ. ಕೂಡಲೇ ಸರಕಾರ, ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮ ವಹಿಸಬೇಕು.
-ಸುಕೀರ್ತಿ, ಮಾಸ್ತಿಕಟ್ಟೆ ನಿವಾಸಿ






