ಅಗರಖೇಡಕ್ಕೆ ಇಲ್ಲ ಒಂದೇ ಒಂದು ಸರಕಾರಿ ಪ್ರೌಢಶಾಲೆ!

ಇಂಡಿ: ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅಗರಖೇಡ ಗ್ರಾಮದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದ್ದರೂ ಒಂದೇ ಒಂದು ಸರಕಾರಿ ಪ್ರೌಢಶಾಲೆ ಇಲ್ಲದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರೌಢಶಾಲೆಗಳ ಕೊರತೆ ಎದುರಾಗಿದ್ದು, ಸದ್ಯ ಕೇವಲ ಒಂದು ಅನುದಾನಿತ ‘ಶ್ರೀ ಶಂಕರಲಿಂಗ ಪ್ರೌಢಶಾಲೆ’ ಮಾತ್ರ ಕಾರ್ಯನಿರ್ವಹಿಸುತ್ತಿದೆ.
ಪ್ರತಿ ವರ್ಷ ಸರಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆ, ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗಂಗಲಿಂಗ ಹಿರಿಯ ಪ್ರಾಥಮಿಕ ಶಾಲೆಗಳಿಂದ ಸುಮಾರು 120ರಿಂದ 150 ವಿದ್ಯಾರ್ಥಿಗಳು 7ನೇ ತರಗತಿ ಪೂರ್ಣಗೊಳಿಸುತ್ತಿದ್ದಾರೆ. ಆದರೆ 8ನೇ ತರಗತಿ ಪ್ರವೇಶಕ್ಕೆ ಗ್ರಾಮದಲ್ಲಿರುವ ಏಕೈಕ ಅನುದಾನಿತ ಶಾಲೆಯಲ್ಲಿ ಸುಮಾರು 95ರಿಂದ 100 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗುತ್ತಿದೆ. ಉಳಿದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಬಗ್ಗೆ ಆತಂಕ ವ್ಯಕ್ತವಾಗಿದೆ.
ಗ್ರಾಮದಿಂದ ತಾಪಂ, ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಸದಸ್ಯರು, ಗ್ರಾಪಂ. ಅಧ್ಯಕ್ಷರು ಸೇರಿದಂತೆ ಹಲವರು ರಾಜಕೀಯ ಕ್ಷೇತ್ರದಲ್ಲಿ ಸ್ಥಾನ ಪಡೆದಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಕೊಡುಗೆ ದೊರೆತಿಲ್ಲ. ಅದೇ ವೇಳೆ, ಇರುವ ಶಾಲಾ ವಠಾರದ ಸಮೀಪ ಜೂಜು, ಮಟ್ಕಾ ಮೊದಲಾದ ಅಕ್ರಮಗಳೂ ನಡೆಯುತ್ತಿದೆ, ಕ್ರಮ ಕೈಗೊಳ್ಳಬೇಕಾದ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕೂತಿವೆ ಎಂಬ ಆರೋಪ ಕೂಡಾ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪಕ್ಕದ ಸಣ್ಣ ಗ್ರಾಮವಾದ ಗುಬ್ಬೇವಾಡ ಸೇರಿದಂತೆ ಹಿರೇಮಸಳಿ, ತೆಗ್ಗಳ್ಳಿ, ಲಾಳಸಂಗಿ, ಸಂಗೋಗಿ ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಉನ್ನತೀಕರಿಸಲಾಗಿದೆ. ಆದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ಅಗರಖೇಡ ಗ್ರಾಮ ಈ ಸೌಲಭ್ಯದಿಂದ ವಂಚಿತವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಹಾಗೂ ಸಾಹಿತಿ ಶ್ರೀರಂಗರು ಜನಿಸಿದ ನೆಲವಾದ ಅಗರಖೇಡಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕಿದೆ. ಶ್ರೀರಂಗರ ಹೆಸರಿನಲ್ಲಿ ಪ್ರಾಥಮಿಕ ಶಾಲೆ ನಡೆಯುತ್ತಿದ್ದು, ಗ್ರಾಮದ ಶೈಕ್ಷಣಿಕ ಪರಂಪರೆಯನ್ನು ಉಳಿಸಲು ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಅಗತ್ಯವಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಾಲೂಕಿನ ಹಲವು ಗ್ರಾಮಗಳಲ್ಲಿ ಶಾಲೆಗಳ ಉನ್ನತೀಕರಣ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳ ಮಂಜೂರಿಗೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಅದೇ ರೀತಿ ಅಗರಖೇಡ ಗ್ರಾಮಕ್ಕೂ ಸರಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಮಂಜೂರು ಮಾಡಬೇಕು ಎಂಬುದು ಸ್ಥಳೀಯ ಪಾಲಕರ ಒತ್ತಾಯವಾಗಿದೆ.
ಇಂಡಿ ತಾಲೂಕಿನಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಮೂರು ಸರಕಾರಿ ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿರುವುದು ಉತ್ತಮ ಬೆಳವಣಿಗೆ. ಅಗರಖೇಡ ಗ್ರಾಮಸ್ಥರಿಂದ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ಪ್ರಸ್ತಾವ ಬಂದರೆ ಮುಂದಿನ ದಿನಗಳಲ್ಲಿ ಮಂಜೂರಿಗಾಗಿ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು.
-ಎಸ್.ಆರ್. ನಡುಗಡ್ಡಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಇಂಡಿ
ಅಕ್ಕಪಕ್ಕದ ಗ್ರಾಮಗಳಿಗೆ ಹೋಲಿಸಿದರೆ ನಮ್ಮ ಗ್ರಾಮದಲ್ಲಿ ಶಿಕ್ಷಣ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿಲ್ಲ. ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಅವರಿಗೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಅಗತ್ಯವಿದೆ. ಈ ಕುರಿತು ಶಾಸಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗುವುದು. ಗ್ರಾಮಸ್ಥರೊಂದಿಗೆ ಸೇರಿ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತೇವೆ.
-ವಿಠ್ಠಲಗೌಡ ಕೆ. ಪಾಟೀಲ,
ಮಾಜಿ ಅಧ್ಯಕ್ಷ, ಗ್ರಾಪಂ ಅಗರಖೇಡ






