ನಿಡಗುಂದಿ: ಕಾರ ಹುಣ್ಣಿಮೆ ಸಂಭ್ರಮಕ್ಕೆ ‘ಬರ’ದ ಬರೆ!

ನಿಡಗುಂದಿ: ತಾಲೂಕಿನಲ್ಲಿ ರೈತರ ಹಬ್ಬ ಎಂದೇ ಪ್ರಸಿದ್ಧವಾಗಿರುವ ಕಾರ ಹುಣ್ಣಿಮೆ ಆಚರಣೆಗೆ ಗ್ರಾಮೀಣ ಭಾಗದಲ್ಲಿ ಸಿದ್ಧತೆ ನಡೆಯುತ್ತಿದ್ದರೂ, ಈ ಬಾರಿ ರೈತರಲ್ಲಿ ಹಿಂದಿನಂತಹ ಸಂಭ್ರಮ ಕಾಣಿಸುತ್ತಿಲ್ಲ. ಪ್ರತಿವರ್ಷ ಈ ವೇಳೆಗೆ ಉತ್ತಮ ಮಳೆಯಾಗಿ ಬಿತ್ತನೆ ಕಾರ್ಯ ಆರಂಭವಾಗುತ್ತಿತ್ತು. ಆದರೆ ಈ ವರ್ಷ ಮಳೆ ಕೊರತೆಯಿಂದ ಬಹುತೇಕ ಕಡೆಗಳಲ್ಲಿ ಬಿತ್ತನೆ ಕಾರ್ಯವೂ ಆರಂಭವಾಗಿಲ್ಲ.
ಕಾರ ಹುಣ್ಣಿಮೆ ಅಂಗವಾಗಿ ರೈತರು ಸಂಪ್ರದಾಯದಂತೆ ಎತ್ತುಗಳನ್ನು ಅಲಂಕರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗೊಂಡೆ, ಗೆಜ್ಜೆ, ಕೊಮ್ಮಣಸು, ಹಣೆಕಟ್ಟು, ಗಂಟೆಸರ, ಹಗ್ಗ ಸೇರಿದಂತೆ ವಿವಿಧ ಶೃಂಗಾರ ಸಾಮಗ್ರಿಗಳ ಖರೀದಿ ನಡೆಯುತ್ತಿದೆ. ಆದರೆ ರೈತರ ಮುಖದಲ್ಲಿ ಹಬ್ಬದ ಖುಷಿಗಿಂತ ಮಳೆ ಬಾರದಿರುವ ಚಿಂತೆ ಹೆಚ್ಚಾಗಿ ಕಾಣಿಸುತ್ತಿದೆ.
ರೈತರು ಸಂಪ್ರದಾಯ ಕೈಬಿಡದೆ ಎತ್ತುಗಳಿಗೆ ಸಿಂಗಾರ ಮಾಡುತ್ತಿದ್ದರೂ, ಮನಸ್ಸಿನಲ್ಲಿ ಆತಂಕವಿದೆ. ಮಳೆ ಇಲ್ಲದ ಕಾರಣ ಹೊಲಗಳಲ್ಲಿ ಚಟುವಟಿಕೆ ಕಡಿಮೆಯಾಗಿದ್ದು, ಬಿತ್ತನೆ ವಿಳಂಬವಾಗಿದೆ.
ಕೃಷಿಯನ್ನೇ ನಂಬಿರುವ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಾರ ಹುಣ್ಣಿಮೆ ದಿನ ಜಾನುವಾರುಗಳಿಗೆ ಗೊಟ್ಟ ಹಾಕುವುದು, ಎತ್ತುಗಳಿಗೆ ಬಣ್ಣ ಬಳಿದು ಸಿಂಗಾರ ಮಾಡುವುದು, ಗ್ರಾಮಗಳಲ್ಲಿ ಕರಿ ಹರಿಯುವ ಸಂಪ್ರದಾಯ ನಡೆಸುವುದು ಎಂದಿನಂತೆ ನಡೆಯಲಿದೆ. ಆದರೆ ಈ ಬಾರಿ ಆಚರಣೆಯನಡುವೆ ಮಳೆ ಬರಲಿ, ಕೃಷಿ ಚೇತರಿಸಲಿ ಎಂಬ ಪ್ರಾರ್ಥನೆ ಹೆಚ್ಚು ಕೇಳಿಬರುತ್ತಿದೆ.
ಕಾರ ಹುಣ್ಣಿಮೆ ಮರುದಿನ ನಡೆಯುವ ಸಸಿ ಆಡುವಿಕೆ, ಸಾಮೂಹಿಕ ಊಟ ಹಾಗೂ ಗ್ರಾಮೀಣ ಸಂಪ್ರದಾಯಗಳೂ ನಡೆಯಲಿದ್ದು, ಉತ್ತಮ ಮಳೆ ಸುರಿದು ಬೆಳೆ ಚೆನ್ನಾಗಿರಲಿ ಎಂದು ರೈತರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಈ ವರ್ಷ ಮಳೆ ಕೊರತೆಯಿಂದ ನಿಡಗುಂದಿ ತಾಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ರೈತರಲ್ಲಿ ಹಬ್ಬದ ಸಂಭ್ರಮಕ್ಕಿಂತ ನಿರೀಕ್ಷೆ ಮತ್ತು ಕಳವಳವೇ ಹೆಚ್ಚಾಗಿದೆ.
ಕಾರ ಹುಣ್ಣಿಮೆ ಹಬ್ಬದ ವ್ಯಾಪಾರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಎತ್ತು, ಜಾನುವಾರು ಮತ್ತು ಕರುಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವ ಪರಿಣಾಮ ಅಲಂಕಾರ ಸಾಮಗ್ರಿಗಳ ಬೇಡಿಕೆಯೂ ಕಡಿಮೆಯಾಗಿದೆ. ಈ ವರ್ಷ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ವ್ಯಾಪಾರವೂ ನೆಲಕಚ್ಚಿದೆ.
-ಸೈಯದ್ ನದಾಫ್
ವ್ಯಾಪಾರಿ, ಬಾದಾಮಿ
ಮಳೆ ಬಂದರೆ ಹಬ್ಬಕ್ಕೆ ಉತ್ಸಾಹ ಇರುತ್ತದೆ. ಆದರೆ ಈ ಬಾರಿ ಮಳೆಯಿಲ್ಲದ ಕಾರಣ ಹಬ್ಬದ ಸಂಭ್ರಮವೂ ಕಡಿಮೆಯಾಗಿದೆ. ಬಿತ್ತನೆಗಾಗಿ ಸಾಲ-ಸೂಲಾ ಮಾಡಿ ಬೀಜ ಖರೀದಿಸಿ ಭೂಮಿ ತಾಯಿಗೆ ಅರ್ಪಿಸಲು ಸಿದ್ಧವಾಗಿದ್ದೇವೆ. ಸಂಪ್ರದಾಯದಂತೆ ಈ ವರ್ಷವೂ ಬಸವಣ್ಣನಿಗೆ ಪೂಜೆ ಸಲ್ಲಿಸಿ, ಉತ್ತಮ ಮಳೆ ನೀಡಿ ಕೃಷಿ ಉಳಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ.
-ಸೈಬಣ್ಣ ಅಂಗಡಿ, ಮಜರೆಕೊಪ್ಪ ರೈತ






