ವಿಜಯಪುರ: ಸರಕಾರಿ ವೆಚ್ಚದಲ್ಲಿ ‘ಭೂತ ಬಂಗಲೆ’ ನಿರ್ಮಾಣ

ವಿಜಯಪುರ: ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು... ಅಸ್ಥಿಪಂಜರದಂತೆ ನಿಂತಿರುವ ನೂರಾರು ಮನೆಗಳು... ಹಗಲಲ್ಲೇ ಮೈ ಜುಂ ಎನಿಸುವ ದಟ್ಟ ಮುಳ್ಳುಕಂಟಿಗಳು... ರಾತ್ರಿಯಾಗುತ್ತಿದ್ದಂತೆ ಇಡೀ ಬಡಾವಣೆಯನ್ನು ಆವರಿಸಿಕೊಳ್ಳುವ ಕಗ್ಗತ್ತಲು...
ಇದು ಯಾವುದೋ ಹಾರರ್ ಸಿನೆಮಾದ ದೃಶ್ಯವಲ್ಲ! ಸ್ವಂತ ಸೂರಿನ ಕನಸು ಹೊತ್ತು ಜನರು ಹೂಡಿಕೆ ಮಾಡಿದ ಹಣ, ಅಧಿಕಾರಿಗಳ ನಿರ್ಲಕ್ಷ್ಯದ ಬೆಂಕಿಗೆ ಆಹುತಿಯಾಗಿರುವ ಕಟು ವಾಸ್ತವ. ವಿಜಯಪುರದ ಬೆಂಗಳೂರು ರಸ್ತೆಗೆ ಹೊಂದಿಕೊಂಡಿರುವ ಕರ್ನಾಟಕ ಗೃಹ ಮಂಡಳಿ ಬಡಾವಣೆ ಇಂದು ಸಾರ್ವಜನಿಕರ ಆಸೆಯ ಗೋರಿಯಾಗಿ, ಮುಕ್ತ ಅಡ್ಡೆಯಾಗಿ ಮಾರ್ಪಟ್ಟಿದೆ!
15 ವರ್ಷಗಳ ಮಹಾ ಮೋಸ: ಕಣ್ಮುಚ್ಚಿ ಕುಳಿತ ಆಡಳಿತ!
2009-10ರಲ್ಲಿ ಅಂದಿನ ವಸತಿ ಸಚಿವ ವಿ.ಸೋಮಣ್ಣ ಅವರು ಸುಮಾರು 260 ಎಕರೆ ವಿಸ್ತೀರ್ಣದ ಈ ‘ಕಸಬಾ-2’ ಬಡಾವಣೆಯಲ್ಲಿ ನಿವೇಶನ ಹಾಗೂ ಮನೆಗಳ ಹಂಚಿಕೆಗೆ ಅದ್ಧೂರಿಯಾಗಿ ಚಾಲನೆ ನೀಡಿದ್ದರು. ಆದರೆ, ದಶಕದ ಮುಕ್ಕಾಲು ಭಾಗ ಅಂದರೆ 15 ವರ್ಷ ಉರುಳಿದರೂ ಇಲ್ಲಿ ಜನವಸತಿ ಮಾತ್ರ ಶೂನ್ಯ!. ಹಗಲು ಹೊತ್ತಿನಲ್ಲೇ ಈ ಬಡಾವಣೆಯ ಒಳಗೆ ಹೆಜ್ಜೆ ಇಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ರಾತ್ರಿ ವೇಳೆ ಇಲ್ಲಿ ಸಂಚರಿಸುವುದು ಸಾಹಸಿಗರ ‘ಅಡ್ವೆಂಚರ್ ಟ್ರಿಪ್’ನಂತಾಗಿದೆ.
ಇಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಮನೆಗಳ ಕಿಟಕಿ, ಬಾಗಿಲುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಮನೆಗಳು ಶಿಥಿಲಾವಸ್ಥೆ ತಲುಪಿ ಕುಸಿಯುವ ಹಂತದಲ್ಲಿವೆ. ರಸ್ತೆ ಬದಿಯ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಹೈ-ವೋಲ್ಟೇಜ್ ವೈರ್ಗಳು ನೆಲಕ್ಕೆ ಜೋತು ಬಿದ್ದಿವೆ. ಬೀದಿ ದೀಪಗಳ ವ್ಯವಸ್ಥೆಯೇ ಇಲ್ಲದ ಕಾರಣ, ರಾತ್ರಿಯಾಗುತ್ತಿದ್ದಂತೆ ಇಡೀ ಬಡಾವಣೆ ಕಳ್ಳರ, ಜೂಜುಕೋರರ ಹಾಗೂ ಅನೈತಿಕ ಚಟುವಟಿಕೆಗಳ ಸುರಕ್ಷಿತ ತಾಣವಾಗಿ ರೂಪಾಂತರಗೊಳ್ಳುತ್ತಿದೆ.
ನಮ್ಮ ಸೈಟ್ ಎಲ್ಲಿದೆ ಅಂತ ಹುಡುಕಲು 4 ದಿನ ಬೇಕು!
ಸೈಟ್ ಸಿಕ್ಕ ಖುಷಿಯಲ್ಲಿ ಇಲ್ಲಿಗೆ ಬಂದರೆ, ಅದು ಎಲ್ಲಿದೆ ಅಂತ ಹುಡುಕಲು ನಾಲ್ಕು ದಿನ ಬೇಕಾಯಿತು! ಹಗಲಲ್ಲೇ ಒಳಗೆ ಹೋಗಲು ಭಯವಾಗುತ್ತದೆ. ಕತ್ತಲಾದರೆ ಮುಗಿಯಿತು. ಬೀದಿ ದೀಪಗಳಿಲ್ಲ, ನೀರಿಲ್ಲ, ರಸ್ತೆಯೂ ಇಲ್ಲ ಎಂಬುದು ಸಾರ್ವಜನಿಕರ ಆಕ್ರೋಶ.
ಕೆಎಚ್ಬಿ-ಪಾಲಿಕೆ ನಡುವೆ ಜಟಾಪಟಿ!
ಈ ಇಡೀ ಅವ್ಯವಸ್ಥೆಗೆ ಕಾರಣ ಇಲಾಖೆಗಳ ನಡುವಿನ ಸಮನ್ವಯದ ಕೊರತೆ. ಕಸಬಾ-2 ಬಡಾವಣೆಯ ನಿರ್ವಹಣೆಯನ್ನು ಗೃಹ ಮಂಡಳಿಯಿಂದ ಪಾಲಿಕೆಗೆ ಹಸ್ತಾಂತರಿಸಲಾಗಿದೆಯಾದರೂ, ಸಮಸ್ಯೆ ಬಂದಾಗ ಇಬ್ಬರೂ ಕೈತೊಳೆದುಕೊಳ್ಳುತ್ತಿದ್ದಾರೆ.
ಇಲ್ಲಿನ ಭೀಕರತೆಗೆ ಸಾಕ್ಷಿ ಎನ್ನುವಂತೆ, ಇದೇ ಬಡಾವಣೆಯಲ್ಲಿ ಸೈಟ್ ಪಡೆದಿದ್ದ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯೊಬ್ಬರು ಮೂಲಸೌಕರ್ಯಕ್ಕಾಗಿ ಪತ್ರ ಬರೆದು ಬರೆದು ಬೇಸತ್ತು, ಕೊನೆಗೆ ಯಾವುದೇ ಸ್ಪಂದನೆ ಸಿಗದೆ ವರ್ಗಾವಣೆಯಾಗಿ ಹೋಗಿದ್ದಾರೆ. ಒಬ್ಬ ಉನ್ನತಾಧಿಕಾರಿಯ ಅಳಲನ್ನೇ ಕೇಳದ ವ್ಯವಸ್ಥೆ, ಇನ್ನು ಸಾಮಾನ್ಯ ಜನರನ್ನು ರಕ್ಷಿಸುತ್ತದೆ ಎನ್ನುವ ಮಾತು ಸಾರ್ವಜನಿಕರಲ್ಲಿ ಕೇಳಿಬರುತ್ತದೆ.
ಗೃಹ ಮಂಡಳಿ 5 ಕೋಟಿರೂ. ಕೊಟ್ಟಿದ್ದೇವೆ ಎನ್ನುತ್ತದೆ. ಪಾಲಿಕೆ ತಾಂತ್ರಿಕ ನೆಪ ಒಡ್ಡುತ್ತದೆ. ಇವರಿಬ್ಬರ ಆಟದಲ್ಲಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಮಾತ್ರ ಸದ್ದಿಲ್ಲದೆ ಮಣ್ಣು ಪಾಲಾಗುತ್ತಿದೆ. ಜಿಲ್ಲಾಡಳಿತ ಮತ್ತು ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ, ಈ ಭೂತ ಬಂಗಲೆಗೆ ಕಾಯಕಲ್ಪ ನೀಡದಿದ್ದರೆ, ಈ ಬಡಾವಣೆ ವಿಜಯಪುರದ ಇತಿಹಾಸದಲ್ಲೇ ಅತ್ಯಂತ ದೊಡ್ಡ ‘ಸರಕಾರಿ ವೈಫಲ್ಯ’ದ ಸಂಕೇತವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.






