ಸಂಘ ಪರಿವಾರಕ್ಕೆ ಭಾರತವೆಂದರೆ ಮೇಲು-ಕೀಳಿನ ಬ್ರಾಹ್ಮಣ್ಯ

ಸಾಂದರ್ಭಿಕ ಚಿತ್ರ (PTI)
ಸಂಘ ಪರಿವಾರಕ್ಕೆ ಭಾರತವೆಂದರೆ ಮೇಲು-ಕೀಳಿನ ಬ್ರಾಹ್ಮಣ್ಯ. ಅದು ಉಳಿಯಬೇಕೆಂದರೆ ಜಾತಿ ಉಳಿಯಬೇಕು. ಆದ್ದರಿಂದಲೇ ಅವರು ಜಾತಿ ವಿನಾಶವೆಂದರೆ ಭಾರತ ವಿನಾಶವೆಂದು ಪ್ರತಿಪಾದಿಸುತ್ತಾರೆ ಹಾಗೂ ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹಲವಾರು ಕುತರ್ಕಗಳನ್ನು ಮುಂದಿಡುತ್ತಾರೆ.
ಜಾತಿ, ಜಾತಿ ವಿನಾಶದ ಕುರಿತು ಆರೆಸ್ಸೆಸ್ ನಾಯಕರ ಕೆಲವು ಹೇಳಿಕೆಗಳನ್ನು ಗಮನಿಸಿ :
"ನಮ್ಮ ದೇಶದ ಈಶಾನ್ಯ ಹಾಗೂ ವಾಯುವ್ಯ ಭಾಗಗಳು ಬಹಳ ಸುಲಭವಾಗಿ ಮುಸ್ಲಿಮರ ದಾಳಿಗೆ ತುತ್ತಾಗಲು ಕಾರಣವೇ ಅಲ್ಲಿನ ಸಮಾಜ ವ್ಯವಸ್ಥೆ. ಬುದ್ಧನ ಚಿಂತನೆಗಳ ದುಷ್ಪರಿಣಾಮಕ್ಕೆ ಒಳಗಾಗಿ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದರಿಂದ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಶತಮಾನಗಳ ಕಾಲ ಮುಸ್ಲಿಮರ ನೇರ ಅಧಿಪತ್ಯ ಹಾಗೂ ದಾಳಿಗೆ ಆಹುತಿಯಾಗಿದ್ದರೂ, ದಿಲ್ಲಿ ಪ್ರಾಂತ್ಯಗಳು ಪ್ರಧಾನವಾಗಿ ಹಿಂದುವಾಗಿಯೇ ಉಳಿದುಕೊಂಡವು. ಅದಕ್ಕೆ ಪ್ರಧಾನ ಕಾರಣ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದ ಜಾತಿ ವ್ಯವಸ್ಥೆ ಎನ್ನುವುದನ್ನು ನಾವು ಮರೆಯಬಾರದು”
-(ಗೋಲ್ವಾಲ್ಕರ್, RSS and Democracy (Delhi: Sampradayikta Virodhi Committee, nd) - ಆನಂದ್ ತೇಲ್ತುಂಬ್ಡೆ ಯವರು ಸಂಪಾದಿಸಿರುವ HINDUTVA AND DALITS ಗ್ರಂಥದಲ್ಲಿ ಉಲ್ಲೇಖಿತ)
"ಈ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ... ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ, ಕನಿಷ್ಠ ಸಾವಿರ ವರ್ಷಗಳ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ”
-(ಗೋಲ್ವಾಲ್ಕರ್, ಆರ್ಗನೈಸರ್ , ಆರೆಸ್ಸೆಸ್ ನ ಮುಖಪತ್ರಿಕೆ, 26 ಜನವರಿ 1962)
"ಈ ಆಧುನಿಕ ಯುಗದಲ್ಲಿ ಪದೇಪದೇ ಸಮಾನತೆಯ ಮಾತುಗಳನ್ನಾಡುತ್ತೇವೆ. ಆದರೆ ಈ ಸಮಾನತೆಯ ಕಲ್ಪನೆಯನ್ನು ಅತ್ಯಂತ ಎಚ್ಚರದಿಂದ ಬಳಸಬೇಕು. ಪ್ರಾಯೋಗಿಕವಾಗಿ ಮತ್ತು ವಾಸ್ತವ ದೃಷ್ಟಿಕೋನದಿಂದ ನೋಡುವುದಾದರೆ ಯಾವ ಇಬ್ಬರು ಮನುಷ್ಯರು ಸಮಾನರಲ್ಲ. ಪ್ರ॒ತಿಯೊಬ್ಬ ಮನುಷ್ಯರಿಗೂ ಅವರದೇ ಅದ ವಿಶಿಷ್ಟ ಗುಣಲಕ್ಷಣಗಳಿರುತ್ತವೆ. ಮತ್ತು ಪ್ರತಿಯೊಬ್ಬರಿಗೂ ಅವರ ಆಸ್ಥೆ ಮತ್ತು ಗುಣಮಟ್ಟ, ಸಾಮರ್ಥ್ಯಗಳಿಗೆ ತಕ್ಕಂತೆ ಕರ್ತವ್ಯಗಳಿರುತ್ತವೆ ಮತ್ತು ಅವೆಲ್ಲಕ್ಕೂ ಸಮಾನ ಘನತೆಯಿರುತ್ತದೆ. ಇದನ್ನೇ ಸ್ವಧರ್ಮ ಎಂದು ಕರೆಯಲಾಗುತ್ತದೆ. ಸ್ವಧರ್ಮವನ್ನು ಅನುಸರಿಸುವುದೆಂದರೆ ದೇವರನ್ನು ಅನುಸರಿಸಿದಂತೆ. ಆದ್ದರಿಂದ ಪ್ರತಿಯೊಬ್ಬರೂ ಯಾವುದೇ ಸಂಘರ್ಷಕ್ಕೆ ಕಾರಣವಿಲ್ಲದಂತೆ ಸ್ವಧರ್ಮವನ್ನು ಆಚರಿಸುವುದು ಉತ್ತಮ ಸಮಾಜಕ್ಕೆ ಕಾರಣವಾಗುತ್ತದೆ”
-ದೀನದಯಾಳ ಉಪಾಧ್ಯ, (upadhya , P. Bhishikar, Pandit Deendayal Upadhyaya: Ideology and Perception—Concept of the Rashtra, vol. 5)
"ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು, ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು, ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ"
-(ಆರ್ಗನೈಸರ್ , ಆರೆಸ್ಸೆಸ್ ನ ಮುಖ ಪತ್ರಿಕೆ, 1949ರ ನವಂಬರ್ 30 )
ಆರೆಸ್ಸೆಸ್ ನ 100 ವರ್ಷಗಳ ಇತಿಹಾಸದಲ್ಲಿ ಸವರ್ಣಿಯ ಹಿಂದೂಗಳು ದಲಿತರ ಮೇಲೆ ಮಾಡಿದ ದಾಳಿಯ ವಿರುದ್ಧ ಒಂದು ಹೇಳಿಕೆಯನ್ನೂ ನೀಡಿಲ್ಲ. ಬದಲಾಗಿ ದಲಿತರ ಮೇಲಿನ ದಾಳಿಗಳಲ್ಲಿ ಅವರ ನಾಯಕರು ನೇರವಾಗಿ ಭಾಗವಹಿಸಿರುವ ಉದಾಹರಣೆಗಳು ನೂರಲ್ಲ.. ನೂರಾರು!
ಮೀಸಲಾತಿ ವಿರೋಧಿ ಚಳವಳಿಗಳಲ್ಲಿ, ಜಾತಿ ಗಣತಿ ವಿರೋಧದಲ್ಲಿ ಈಗಲೂ ಆರೆಸ್ಸೆಸ್ ನ ಅಂಗಸಂಸ್ಥೆಗಳು ಮುಂಚೂಣಿ ಯಲ್ಲಿರುತ್ತವೆ. ಕಳೆದ ನೂರು ವರ್ಷಗಳಲ್ಲಿ ಆರೆಸ್ಸೆಸ್ ಅಂತರ್ಜಾತಿ ವಿವಾಹ ಪ್ರತಿಪಾದಿಸಿದ, ಮಾಡಿಸಿದ ಉದಾಹರಣೆಗಳಿಲ್ಲ.
ಆದ್ದರಿಂದಲೇ... ಆರೆಸ್ಸೆಸ್ ಎಂದರೆ ಬ್ರಾಹ್ಮಣ್ಯ -ನವ ಪೇಶ್ವಾಯಿ, ಆರೆಸ್ಸೆಸ್ ಎಂದರೆ ಪಿತೃ ಪ್ರಾಧಾನ್ಯ, ಆರೆಸ್ಸೆಸ್ ಎಂದರೆ ಜಾತಿ ವ್ಯವಸ್ಥೆ, ಆರೆಸ್ಸೆಸ್ ಎಂದರೆ ಅಂಬೇಡ್ಕರ್ ದ್ವೇಷಿ, ಆರೆಸ್ಸೆಸ್ ಎಂದರೆ ಬುದ್ಧದ್ರೋಹಿ, ಬಸವದ್ರೋಹಿ, ಆರೆಸ್ಸೆಸ್ ಎಂದರೆ ಸಂವಿಧಾನ ದ್ರೋಹಿ.
ಆದ್ದರಿಂದಲೇ.. ಆರೆಸ್ಸೆಸ್ ಕುತಂತ್ರಗಳನ್ನು ಸೋಲಿಸೋಣ, ಬುದ್ಧ-ಬಸವ-ಅಂಬೇಡ್ಕರ್ ರ ಭಾರತ ಕಟ್ಟೋಣ.
-ಶಿವಸುಂದರ್







