ಮುದ್ದೇಬಿಹಾಳ: 22 ತಾಂಡಾಗಳಲ್ಲಿ ಸಾಮಾಜಿಕ ಕ್ರಾಂತಿ

ಮುದ್ದೇಬಿಹಾಳ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಮುದ್ದೇಬಿಹಾಳ ತಾಲೂಕಿನ 22 ತಾಂಡಾಗಳು ಐತಿಹಾಸಿಕ ನಿರ್ಧಾರಕೈಗೊಂಡಿದ್ದು, ಇನ್ಮುಂದೆ ವರದಕ್ಷಿಣೆ ನೀಡುವುದು ಮತ್ತು ಪಡೆಯುವುದು ಎರಡನ್ನೂ ಅಪರಾಧವೆಂದು ಪರಿಗಣಿಸಲು ತೀರ್ಮಾನಿಸಿವೆ.
ಇದರ ಜೊತೆಗೆ ಮದುವೆಗಳಲ್ಲಿ ಕಾರು, ಬೈಕ್ ಸೇರಿದಂತೆ ದುಬಾರಿ ಉಡುಗೊರೆಗಳು, ಡಿಜೆ ಸೌಂಡ್, ಮದ್ಯಪಾನ ಹಾಗೂ ದುಂದುವೆಚ್ಚದ ಆಚರಣೆಗಳಿಗೂ ಸಂಪೂರ್ಣ ನಿಷೇಧ ಹೇರಲಾಗಿದೆ.
ಸಭೆಯಲ್ಲಿ ಮಾತನಾಡಿದ ಮುಖಂಡರು, ವರದಕ್ಷಿಣೆ ಮತ್ತು ಆಡಂಬರದ ಮದುವೆಗಳಿಂದ ಅನೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಈ ಅನಿಷ್ಟ ಪದ್ಧತಿಗೆ ಕೊನೆ ಹಾಡಲು ಸಮಾಜದ ಎಲ್ಲ ವರ್ಗಗಳ ಒಗ್ಗಟ್ಟಿನಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮದುವೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ಆ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣ, ಸ್ವಾವಲಂಬನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಬಳಸಬೇಕು ಎಂಬ ಸಂದೇಶವನ್ನು ಸಭೆಯಲ್ಲಿ ನೀಡಲಾಯಿತು. ಸರಳ ವಿವಾಹಗಳಿಗೆ ಉತ್ತೇಜನ ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಮಹಾಪಂಚಾಯತ್ನ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲನೆಗೆ ವಿಫಲರಾದ ತಾಂಡಾ ಮುಖಂಡರ ಮೇಲೆಯೂ ರೂ.1 ಲಕ್ಷದವರೆಗೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
22 ತಾಂಡಾಗಳ ಒಗ್ಗಟ್ಟಿನ ಈ ತೀರ್ಮಾನವು ಕೇವಲ ಬಂಜಾರ ಸಮಾಜಕ್ಕೆ ಮಾತ್ರವಲ್ಲ, ಇತರೆ ಸಮುದಾಯಗಳಿಗೂ ಮಾದರಿಯಾಗಿದೆ. ಸಮುದಾಯದ ಮಟ್ಟದಲ್ಲಿ ವರದಕ್ಷಿಣೆ ವಿರೋಧಿ ಚಳವಳಿಗೆ ಬಲ ತುಂಬುವ ಈ ಕ್ರಮದಿಂದ ಅನೇಕ ಕುಟುಂಬಗಳು ಆರ್ಥಿಕ ಹೊರೆಯಿಂದ ಮುಕ್ತವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಮುದ್ದೇಬಿಹಾಳ ತಾಲೂಕಿನ ಈ ನಿರ್ಧಾರ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಪರಿವರ್ತನೆಯತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಎಆಯ್ಬಿಎಸ್ಎಸ್ ಯುವ ಘಟಕದ ತಾಲೂಕು ಅಧ್ಯಕ್ಷ ಡಾ.ಸಂತೋಷ ನಾಯಕ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಲಮಾಣಿ, ತಾಲೂಕು ಅಧ್ಯಕ್ಷ ಬಹಾದ್ದೂರ ರಾಠೋಡ, ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ, ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಲಮಾಣಿ, ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ನಾನಪ್ಪ ನಾಯಕ, ಗ್ರಾಪಂ ಮಾಜಿ ಸದಸ್ಯ ಥಾವರಪ್ಪ ಜಾಧವ, ಅಶೋಕ ರಾಠೋಡ (ನೇಬಗೇರಿ), ನಿವೃತ್ತ ಆರ್ಟಿಒ ಅಧಿಕಾರಿ ಜಯರಾಮ ನಾಯಕ, ಹಣಮಂತ ಚವ್ಹಾಣ, ಸಂತೋಷ ಚವ್ಹಾಣ, ರಾಮು ನಾಯಕ, ಸತೀಶ ಚವ್ಹಾಣ,
ಕೃಷ್ಣಾ ಚವ್ಹಾಣ, ದಿಲೀಪ ರಾಠೋಡ, ಲಕ್ಷ್ಮಣ ರಾಠೋಡ, ಚಂದ್ರಶೇಖರ ರಾಠೋಡ, ಚಂದ್ರಶೇಖರ ನಾಯ್ಕ, ವಾಲು ನಾಯಕ, ರವಿ ಚವ್ಹಾಣ, ಪಾಂಡು ಚವ್ಹಾಣ, ಹೋಬಾ ನಾಯಕ, ಶ್ರೀಕಾಂತ ನಾಯಕ, ಮಿಥುನ ಚವ್ಹಾಣ, ಜಗದೀಶ ನಾಯ್ಕ, ಖೂಬಪ್ಪ ಚವ್ಹಾಣ, ಬಸವರಾಜ ಚಿಂತಾಮಣಿ, ಏಕನಾಥ ಸೀತಿಮನಿ, ಸಚೀನ ಚವ್ಹಾಣ, ಎಚ್.ಬಿ.ಲಮಾಣಿ ಸೇರಿದಂತೆ ಅನೇಕ ಪ್ರಮುಖರ ಸಮ್ಮುಖದಲ್ಲಿ ನಡೆದ ಬಂಜಾರ ಸಮಾಜ ಮಹಾಪಂಚಾಯತ್ನಲ್ಲಿ ಸಾವಿರಾರು ಸಮಾಜ ಬಾಂಧವರ ಸಮ್ಮುಖದಲ್ಲಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಮುಖ ನಿಯಮಗಳು
<ವರದಕ್ಷಿಣೆ ರೂಪದಲ್ಲಿ ನಗದು ನೀಡುವುದು ಅಥವಾ ಪಡೆಯುವುದು ಸಂಪೂರ್ಣ ನಿಷೇಧ.
<ಕಾರು, ಬೈಕ್ ಸೇರಿದಂತೆ ದುಬಾರಿ ಉಡುಗೊರೆಗಳಿಗೆ ನಿರ್ಬಂಧ.
<ಮದುವೆಗಳಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಕೆ ನಿಷೇಧ.
<ಮದ್ಯದ ವ್ಯವಸ್ಥೆ ಹಾಗೂ ಮದ್ಯಪಾನಕ್ಕೆ ಅವಕಾಶವಿಲ್ಲ.
<ಹಲವು ದಿನಗಳ ಕಾರ್ಯಕ್ರಮಗಳಿಗೆ ಕಡಿವಾಣ; ಒಂದೇ ದಿನದಲ್ಲಿ ಸರಳ ವಿವಾಹ.
<ಮದುವೆ ವೆಚ್ಚವನ್ನು ವಧು ಮತ್ತು ವರರ ಕುಟುಂಬಗಳು ಸಮಾನವಾಗಿ ಭರಿಸಬೇಕು.
<ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಹೆಚ್ಚಿನ ಆದ್ಯತೆ.
<ನಿಯಮ ಉಲ್ಲಂಘಿಸಿದರೆ ರೂ.1 ಲಕ್ಷದವರೆಗೆ ದಂಡ.






