ಅಫಜಲಪುರ: ಬಸ್ ತಂಗುದಾಣಕ್ಕಾಗಿ ಪ್ರಯಾಣಿಕರ ಆಗ್ರಹ

ಅಫಜಲಪುರ: ಪಟ್ಟಣದ ಪ್ರಮುಖ ಕೇಂದ್ರವಾಗಿರುವ ಬಸವೇಶ್ವರ ವೃತ್ತದಲ್ಲಿ ಬಸ್ ನಿಲ್ದಾಣ ಅಥವಾ ಶೆಲ್ಟರ್ ಇಲ್ಲದ ಕಾರಣ ಸಾರ್ವಜನಿಕರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಈ ದಿನಗಳಲ್ಲಿ ನೆರಳಿಲ್ಲದೆ ನಿಂತು ಬಸ್ ಕಾಯಬೇಕಾದ ಪರಿಸ್ಥಿತಿ ಪ್ರಯಾಣಿಕರನ್ನು ಹೈರಾಣಗೊಳಿಸಿದೆ.
ಈ ವೃತ್ತದ ಮೂಲಕ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಗ್ರಾಮೀಣ ಭಾಗದ ಜನರು ಸಂಚರಿಸುತ್ತಾರೆ. ಆದರೆ ಸಮರ್ಪಕ ಬಸ್ ನಿಲ್ದಾಣದ ಕೊರತೆಯಿಂದಾಗಿ ರಸ್ತೆ ಬದಿಯಲ್ಲೇ ನಿಂತು ಬಸ್ ಕಾಯುವುದು ಅನಿವಾರ್ಯವಾಗಿದೆ.
ಬಿಸಿಲಿನ ತಾಪವಷ್ಟೇ ಅಲ್ಲದೆ ಮಳೆಯ ಸಮಯದಲ್ಲೂ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನೊಂದೆಡೆ, ಬಸ್ಗಳು ರಸ್ತೆ ಮಧ್ಯದಲ್ಲೇ ನಿಲ್ಲುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳ ಸಂಭವವೂ ಹೆಚ್ಚುತ್ತಿದೆ ಎಂಬ ಆತಂಕ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪುಸ್ತಕ ಚೀಲ ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕಾದರೆ, ಹಿರಿಯರು ನೆರಳಿಲ್ಲದೆ ತಾಸುಗಟ್ಟಲೆ ಕಾಯಬೇಕಾಗಿರುವುದು ಕಷ್ಟಕರವಾಗಿದೆ.
ಸಾರ್ವಜನಿಕರು ಹಲವು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ.
ಬಸವೇಶ್ವರ ವೃತ್ತವು ಪ್ರಮುಖ ಜಂಕ್ಷನ್ ಆಗಿರುವುದರಿಂದ ಇಲ್ಲಿ ಶೀಘ್ರದಲ್ಲೇ ಬಸ್ ಶೆಲ್ಟರ್ ನಿರ್ಮಿಸಿ ಕುಳಿತುಕೊಳ್ಳಲು ಆಸನಗಳು, ಮಳೆ-ಬಿಸಿಲಿನಿಂದ ರಕ್ಷಿಸುವ ಮೇಲ್ಛಾವಣಿ ಹಾಗೂ ರಾತ್ರಿ ಬೆಳಕು ವ್ಯವಸ್ಥೆ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಸವೇಶ್ವರ ವೃತ್ತದಿಂದ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಜನರು ಸಂಚರಿಸುತ್ತಾರೆ. ಶೆಲ್ಟರ್ ಇಲ್ಲದ ಕಾರಣ ಬಿಸಿಲು-ಮಳೆಯಲ್ಲಿ ತಾಸುಗಟ್ಟಲೆ ನಿಲ್ಲಬೇಕಾಗಿದೆ. ತಕ್ಷಣ ಮಿನಿ ಬಸ್ ಶೆಲ್ಟರ್ ನಿರ್ಮಿಸಬೇಕು.
-ಭರತ ಚಿಕ್ಕಳಗಿ, ಸ್ಥಳೀಯ
ಬಹಳ ಹಿಂದೆಯೇ ಇಲ್ಲಿ ಶೆಲ್ಟರ್ ನಿರ್ಮಾಣವಾಗಬೇಕಾಗಿತ್ತು. ನಿರ್ಲಕ್ಷ್ಯದಿಂದ ವಿಳಂಬವಾಗಿದೆ. ಬಿಸಿಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.
-ಶ್ರೀಕಾಂತ ದಿವಾಣಜಿ
ತಾಲೂಕಾಧ್ಯಕ್ಷರು ಕರವೇ ಅಫಜಲಪುರ
ಬಸ್ ಶೆಲ್ಟರ್ ನಿರ್ಮಾಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕುರಿತು ಶಾಸಕ ಎಂ.ವೈ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗಿದೆ.
-ಎ.ವಿ.ಬೋವಿ, ರಸ್ತೆ ಸಾರಿಗೆ
ಘಟಕ ವ್ಯವಸ್ಥಾಪಕರು ಅಫಜಲಪುರ
ಸಾರ್ವಜನಿಕರ ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಬಸ್ ಶೆಲ್ಟರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
-ಅರುಣಕುಮಾರ ಪಾಟೀಲ, ಅಧ್ಯಕ್ಷರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ







