Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಿರಂತರ ಸಂಘರ್ಷದ ನಡುವೆ ಮತ್ತೊಂದು ಮೇ...

ನಿರಂತರ ಸಂಘರ್ಷದ ನಡುವೆ ಮತ್ತೊಂದು ಮೇ ದಿನ

ಇಂದು ವಿಶ್ವ ಕಾರ್ಮಿಕರ ದಿನ

ನಾ. ದಿವಾಕರನಾ. ದಿವಾಕರ1 May 2025 10:57 AM IST
share
ನಿರಂತರ ಸಂಘರ್ಷದ ನಡುವೆ ಮತ್ತೊಂದು ಮೇ ದಿನ

ದುಡಿಯುವ ವರ್ಗಗಳ ವರ್ತಮಾನ ಮತ್ತು ಭವಿಷ್ಯವನ್ನು ಸುಸ್ಥಿರ ಹಾದಿಯಲ್ಲಿ ಕೊಂಡೊಯ್ಯುವ ಸಾಂವಿಧಾನಿಕ ಕಾನೂನುಗಳನ್ನು ಮತ್ತಷ್ಟು ರಕ್ಷಣಾತ್ಮಕ ಮಾಡಬೇಕಿರುವುದು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಆದ್ಯತೆ ಮತ್ತು ನೈತಿಕ ಆಯ್ಕೆಯಾಗಬೇಕು. ಏಕೆಂದರೆ ಜಿಡಿಪಿ ಎಂದು ನಿರ್ವಚಿಸಲಾಗುವ ದೇಶದ ಸಂಪತ್ತಿನ ವೃದ್ಧಿಯ ಪ್ರತಿಯೊಂದು ಹಂತದಲ್ಲೂ, ತಳಸಮಾಜವನ್ನು ಪ್ರತಿನಿಧಿಸುವ ಶ್ರಮಜೀವಿಗಳ ಬೆವರು ಮುಖ್ಯ ಪಾತ್ರ ವಹಿಸಿರುತ್ತದೆ. ಆದರೆ ಬಂಡವಾಳಶಾಹಿ ಆರ್ಥಿಕತೆ ಮತ್ತು ಅದರ ಕ್ರೂರ ಸ್ವರೂಪವಾಗಿ ಕಾರ್ಪೊರೇಟ್ ಮಾರುಕಟ್ಟೆಯ ಆರ್ಥಿಕ ನೀತಿಗಳು ಈ ಬೆವರಿನ ದುಡಿಮೆಯನ್ನು ಸಹ ಮಾರುಕಟ್ಟೆಯ ಜಗುಲಿಯಲ್ಲಿ ಬಿಕರಿಗಿರುವ ಒಂದು ಸರಕು ಎಂದೇ ಪರಿಗಣಿಸುವುದರಿಂದ, ಶ್ರಮ ಶಕ್ತಿಯೂ ಸಹ ಮಾರುಕಟ್ಟೆಯ ಅಂಗಳದಲ್ಲೇ ನಿಷ್ಕರ್ಷೆಯಾಗುತ್ತದೆ.

‘ವಿಕಸಿತ ಭಾರತ’ ಆಗುವತ್ತ ಭಾರತ ಸಾಗುತ್ತಿರುವ ಹಾದಿ ಇದು. ಜನಸಂಖ್ಯೆಯ ಶೇ. 1ರಷ್ಟು ಸಿರಿವಂತರು ದೇಶದ ಶೇ.40ರಷ್ಟು ಸಂಪತ್ತನ್ನೂ, ಶೇ.22ರಷ್ಟು ಆದಾಯವನ್ನೂ ಹೊಂದಿರುವ ಈ ಹಾದಿಯಲ್ಲಿ ಭಾರತದ ದುಡಿಮೆಯ ಧ್ವನಿಗಳು ಅರಣ್ಯ ರೋದನವಾಗುತ್ತಿರುವ ಹೊತ್ತಿನಲ್ಲೇ, ಭಾರತದ ಕಾರ್ಮಿಕರು ಮತ್ತೊಂದು ಮೇ ದಿನವನ್ನು ಆಚರಿಸುತ್ತಿದ್ದಾರೆ. ಆಚರಣಾತ್ಮಕ ಎನ್ನಬಹುದಾದರೂ ಅತ್ಯವಶ್ಯವಾದ ರಾಷ್ಟ್ರವ್ಯಾಪಿ ಮುಷ್ಕರವನ್ನು ಮೇ 20ರಂದು ಘೋಷಿಸಲಾಗಿದೆ. ಈ ಸಾರ್ವತ್ರಿಕ ಮುಷ್ಕರ ಭಾರತದ ಸಮಸ್ತ ಕಾರ್ಮಿಕರ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂಬ ವಿಶ್ವಾಸದೊಂದಿಗೆ ಕಾರ್ಮಿಕರು ರಸ್ತೆಗಿಳಿಯಲಿದ್ದಾರೆ. ಆದರೆ ವಾಸ್ತವದಲ್ಲಿ ಈ ‘ಸಮಸ್ತ’ ಎಂಬ ಪದವನ್ನು ಒಡೆದುಕಟ್ಟಿದಾಗ ಅಲ್ಲಿ ಗೋಚರಿಸುವುದು ಈ ದೇಶದ ಸಾಂಸ್ಕೃತಿಕ ರಾಜಕಾರಣ ಮತ್ತು ಆಳ್ವಿಕೆಯ ಮಾದರಿಗಳು ಸೃಷ್ಟಿಸಿ-ಪೋಷಿಸಿಕೊಂಡುಬಂದಿರುವ ವಿಭಜಕ ಬೇಲಿಗಳು.

ಮೇ ದಿನ ಮತ್ತು ದುಡಿಮೆಯ ಶಕ್ತಿ

1886ರಲ್ಲಿ ಹೇ ಮಾರ್ಕೆಟ್ ಚೌಕದಲ್ಲಿ ನಡೆದ ಕಾರ್ಮಿಕ ಹೋರಾಟ ಮತ್ತು ನರಮೇಧದಲ್ಲಿ ಬಲಿಯಾದ ಶ್ರಮಿಕರ ನೆನಪಿನಲ್ಲಿ ಆಚರಿಸಲಾಗುವ ಮೇ ದಿನ, ಕೇವಲ ಇತಿಹಾಸವನ್ನು ನೆನಪಿಸುವ ದಿನ ಆಗಕೂಡದು. ಬದಲಾಗಿ, ಈ 14 ದಶಕಗಳಲ್ಲಿ ಬದಲಾಗಿರುವ ಜಗತ್ತು, ವಿಶ್ವದ ಭೌಗೋಳಿಕ ಪಲ್ಲಟಗಳು, ರೂಪಾಂತರಗೊಂಡಿರುವ ವ್ಯಾಪಾರ-ವಾಣಿಜ್ಯ ಪ್ರಪಂಚ ಹಾಗೂ ನವ ಉದಾರವಾದ-ಡಿಜಿಟಲ್ ಆರ್ಥಿಕತೆಯಲ್ಲಿ ಪಡೆದುಕೊಂಡಿರುವ ಹೊಸ ರೂಪ, ಈ ಬೆಳವಣಿಗೆಗಳಲ್ಲಿ ಗುರುತಿಸಬಹುದಾದ ವ್ಯತ್ಯಯಗಳನ್ನು ಹಾಗೂ ಅದರಿಂದ ಬಾಧಿತರಾಗುತ್ತಲೇ ಇರುವ ಕೋಟ್ಯಂತರ ಶ್ರಮಜೀವಿಗಳ ವರ್ತಮಾನದ ಬದುಕನ್ನು, ಇಣುಕಿ ನೋಡುವ ಒಂದು ಸಂದರ್ಭ ವಾಗಬೇಕು. ಇಲ್ಲಿ ನಮಗೆ ರಾಚುವ ವಾಸ್ತವಗಳು ನಮ್ಮನ್ನು ಸೈದ್ಧಾಂತಿಕ ಗೋಡೆಗಳಿಂದಾಚೆ ಯೋಚಿಸುವಂತೆ ಮಾಡಬೇಕು.

ಡಿಜಿಟಲ್ ಭಾರತ ಹೊರನೋಟಕ್ಕೆ ಎಷ್ಟೇ ಆಕರ್ಷಕವಾಗಿ ಕಂಡರೂ, ಭಾರತದ ನಗರಗಳು ಎಷ್ಟೇ ಆಧುನಿಕತೆಯತ್ತ ಸಾಗುತ್ತಿದ್ದರೂ, ದಶಪಥ-ಅಷ್ಟಪಥ-ಮೆಟ್ರೋ-ಮೇಲ್ಸೇತುವೆಗಳು ಎಷ್ಟೇ ರಂಜನೀಯವಾಗಿ ಕಂಡರೂ, ಈ ನವ ಆರ್ಥಿಕತೆಯ ನಿರ್ಮಾಣದ ಹಿಂದೆ ಒಂದು ಬೃಹತ್ ಜನಸಂಖ್ಯೆ ನಾಳೆಗಳನ್ನು ಎದುರುನೋಡುತ್ತಲೇ ನಿತ್ಯ ಬದುಕನ್ನು ಸವೆಸುತ್ತಿರುವ ವಾಸ್ತವವನ್ನು ಗುರುತಿಸಬಹುದು. ಈ ವಾಸ್ತವಗಳ ನಡುವೆ ದೇಶದ 30.59 ಕೋಟಿ ಗಿಗ್ ಕಾರ್ಮಿಕರು (ಕರ್ನಾಟಕದಲ್ಲಿ 2 ಲಕ್ಷ) , 10.29 ಲಕ್ಷ ಆಶಾ ಕಾರ್ಯಕರ್ತೆಯರು, 13.48 ಲಕ್ಷ ಅಂಗನವಾಡಿ ಕಾರ್ಮಿಕರು, 10.23 ಲಕ್ಷ ಸಹಾಯಕರು ತಮ್ಮ ಸುಸ್ಥಿರ ಭವಿಷ್ಯದ ಭರವಸೆಯೇ ಇಲ್ಲದೆ ದೇಶದ ಆರ್ಥಿಕತೆಗೆ ಬೆವರು ಸುರಿಸುತ್ತಿದ್ದಾರೆ. ಸ್ವಿಗ್ಗಿ, ರೊಮೊಟೊ, ಉಬರ್, ಓಲಾ ಮೊದಲಾದ ಸೇವಾ ವಲಯಗಳಲ್ಲಿ, ಅಮೆಝಾನ್, ಫ್ಲಿಪ್ ಕಾರ್ಟ್ ಮುಂತಾದ ಮಾರುಕಟ್ಟೆ ಸರಕುಗಳ ವಿತರಕರಾಗಿ ದುಡಿಯುತ್ತಿರುವುದನ್ನು ಗುರುತಿಸಬಹುದು.

2021-22ರ ಸಮೀಕ್ಷೆಯ ಪ್ರಕಾರ ದೇಶದಲ್ಲಿ 44 ಕೋಟಿ ಅಸಂಘಟಿತ ವಲಯಕ್ಕೆ ಸೇರಿದ ಕಾರ್ಮಿಕರಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 5.6 ಕೋಟಿ ಜನರು ಕೃಷಿ ವಲಯಕ್ಕೆ ಮರಳಿದ್ದು, ಕೃಷಿ ಕ್ಷೇತ್ರವನ್ನೇ ಅವಲಂಬಿಸಿರುವವರ ಸಂಖ್ಯೆ 15.8 ಕೋಟಿಯಷ್ಟಿದೆ. ಇವರ ಪೈಕಿ ಬಹುಪಾಲು ಕೃಷಿಕರು ತುಂಡುಭೂಮಿ ಉಳ್ಳವರಾಗಿದ್ದು, ಭೂರಹಿತರೂ ಅಪಾರ ಸಂಖ್ಯೆಯಲ್ಲಿದ್ದಾರೆ. ಈ ಎರಡೂ ವರ್ಗಗಳ ಕೃಷಿಕರು ವರ್ಷದ ಕನಿಷ್ಠ ಆರು ತಿಂಗಳು ನಗರಗಳಲ್ಲಿ ನಿರ್ಮಾಣ ಕಾರ್ಯಗಳಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರ ಪಡೆಯಲ್ಲಿ ಕಾಣುತ್ತಾರೆ. ನವಭಾರತದ ಆರ್ಥಿಕತೆಯಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ.

ಕಾರ್ಮಿಕ ನೀತಿಗಳ ಪಲ್ಲಟಗಳು

ಈವರೆಗೂ ಕೇಂದ್ರದಲ್ಲಾಗಲೀ, ರಾಜ್ಯಗಳಲ್ಲಾಗಲೀ ವಲಸೆ ಕಾರ್ಮಿಕರಿಗಾಗಿ ಒಂದು ಸಾಂವಿಧಾನಿಕ ಕಾನೂನು-ನೀತಿಯನ್ನು ಅಧಿಕೃತವಾಗಿ ರೂಪಿಸದೆ ಇರುವುದು ಆಳುವ ವರ್ಗಗಳ ನಿರ್ಲಕ್ಷ್ಯದ ಸಂಕೇತವಾಗಿದೆ.

ಒಂದೆಡೆ ಕೇಂದ್ರ ಸರಕಾರ ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಿದ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದ್ದರೆ, ಮತ್ತೊಂದೆಡೆ ಸಂಘಟಿತ ಕಾರ್ಮಿಕರ ಬಹುಮುಖ್ಯ ಆಧಾರವಾಗಿದ್ದ ಸಾರ್ವಜನಿಕ ಉದ್ದಿಮೆಗಳು ಮತ್ತು ಸರಕಾರಿ ನೌಕರಿಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಹೊಸ ಕಾರ್ಮಿಕ ಸಂಹಿತೆಗಳು ಸಂಘಟನೆಯ ಹಕ್ಕುಗಳನ್ನೇ ಮೊಟಕುಗೊಳಿಸಿದ್ದು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾರ್ಮಿಕರ ರಕ್ಷಣೆಗಾಗಿಯೇ ರೂಪಿಸಲಾಗಿದ್ದ ಹಲವು ಕಾಯ್ದೆಗಳನ್ನು ಅಪ್ರಸ್ತುತಗೊಳಿಸಲಾಗಿದೆ. ಅತಿ ಹೆಚ್ಚು ಶ್ರಮಿಕರನ್ನೊಳಗೊಂಡ ಗಾರ್ಮೆಂಟ್ ಮತ್ತಿತರ ಉದ್ಯಮಗಳ ಕಾರ್ಮಿಕರು ಯಾವುದೇ ನಿರ್ದಿಷ್ಟ ಸಿದ್ಧಾಂತಗಳಿಗೆ ಬದ್ಧರಾಗದೆ ತಮ್ಮ ವೇತನ ಮತ್ತಿತರ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಪ್ರಬಲವಾಗುತ್ತಿರುವ ಕಾರ್ಪೊರೇಟ್ ಮಾರುಕಟ್ಟೆಯ ಬಂಡವಾಳಿಗರ ಹಿಡಿತ, ಕಾರ್ಮಿಕರ ಉಸಿರುಗಟ್ಟಿಸುತ್ತಿರುವುದು ವಿಶಾಲ ಸಮಾಜದ ಗಮನಕ್ಕೆ ಬರುತ್ತಿಲ್ಲ ಎನ್ನುವುದು ವಾಸ್ತವ.

ಕಾರ್ಮಿಕ ದಿನ-ಆಚರಣೆಯ ನಡುವೆ

ಈ ಸಿಕ್ಕುಗಳ, ಸವಾಲುಗಳ ನಡುವೆಯೇ ಭಾರತದ ದುಡಿಯುವ ವರ್ಗ ಮತ್ತೊಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸುತ್ತಿದೆ. ಅಧಿಕೃತವಾಗಿ ಸಂಯೋಜಿತವಾಗಿರುವ ಎಡಪಂಥೀಯ ಮತ್ತಿತರ ಕಾರ್ಮಿಕ ಸಂಘಟನೆಗಳು ತಮ್ಮ ಸೈದ್ಧಾಂತಿಕ ಭಿನ್ನಮತ, ಸಂಘಟನಾತ್ಮಕ ಪೈಪೋಟಿ ಮತ್ತು ತಾತ್ವಿಕ ವ್ಯತ್ಯಯಗಳ ಹೊರತಾಗಿಯೂ ಜಂಟಿ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ, ದೇಶದ ದುಡಿಯುವ ವರ್ಗಗಳಿಗೆ ಧ್ವನಿಯಾಗುತ್ತಿರುವುದು ಮತ್ತು ಸರಕಾರಕ್ಕೆ ಕಾರ್ಮಿಕರ ಬೇಡಿಕೆಗಳನ್ನು ತಲುಪಿಸುತ್ತಿರುವುದು ಸಕಾರಾತ್ಮಕವಾದ ಬೆಳವಣಿಗೆ. ಆದರೆ ಈ ಬೃಹತ್ ಶ್ರಮಿಕ ಪಡೆಯ ನಡುವೆಯೇ ಕಳೆದ ಆರೇಳು ದಶಕಗಳ ಫಲಾನುಭವಿಗಳೆಂದು ಗುರುತಿಸಬಹುದಾದ ಬಿಳಿ ಕಾಲರಿನ, ಮೇಲ್ಪದರದ ಕಾರ್ಮಿಕರು ಮತ್ತು ಸಂಘಟನೆಗಳು, ಶ್ರಮಮಾರುಕಟ್ಟೆಯಲ್ಲಿ ತಳಪಾಯದಲ್ಲಿರುವ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಶ್ರಮಿಕರ ನೋವು, ಸಂಕಟ ಮತ್ತು ಸವಾಲುಗಳಿಗೆ ಮುಕ್ತವಾಗಿ ಸ್ಪಂದಿಸದೆ ಇರುವುದನ್ನು ವಸ್ತುನಿಷ್ಠವಾಗಿ ಪರಾಮರ್ಶಿಸಬೇಕಿದೆ.

ಡಿಜಿಟಲ್ ಯುಗದಲ್ಲಿ ಇಡೀ ಔದ್ಯಮಿಕ/ಔದ್ಯೋಗಿಕ ಕ್ಷೇತ್ರವನ್ನು ಆಕ್ರಮಿಸಿರುವ ಬಂಡವಾಳಶಾಹಿ ವ್ಯವಸ್ಥೆ ರಾಜಕೀಯದಲ್ಲಿ ಬಹುತೇಕವಾಗಿ ಪ್ರಶ್ನಾತೀತವಾಗಿರುವ ಸಂದರ್ಭದಲ್ಲಿ ಮೇ ದಿನದ ಆಚರಣೆಯನ್ನು ಭಿನ್ನ ಆಯಾಮಗಳಲ್ಲಿ ಪರಾಮರ್ಶಿಸಬೇಕಿದೆ. ಇಲ್ಲಿ ಎದ್ದು ಕಾಣುವ ಕೊರತೆ ಎಂದರೆ, ಶ್ರಮಿಕ ವರ್ಗಗಳನ್ನು, ವಿಶೇಷವಾಗಿ ಉತ್ಪಾದನೆಯ ಪ್ರಕ್ರಿಯೆಯಲ್ಲಿ ತಮ್ಮ ಬೆವರು ಮತ್ತು ಶ್ರಮವನ್ನು ಹೊರತುಪಡಿಸಿ ಮತ್ತಾವುದೇ ಹಕ್ಕುಗಳನ್ನು ಪಡೆಯಲು ಸಾಧ್ಯವಾಗದ ಒಂದು ಬೃಹತ್ ಸಂಖ್ಯೆಯ ಶ್ರಮಜೀವಿ ವರ್ಗವನ್ನು ಒಂದುಗೂಡಿಸುವಲ್ಲಿ ವಿಫಲವಾಗಿರುವುದು. ಡಿಜಿಟಲ್ ಆರ್ಥಿಕತೆ ಮತ್ತು ಜಾಗತಿಕ ಬಂಡವಾಳಶಾಹಿಯು ರೂಪಾಂತರಗೊಂಡು ಇಂದು, 1990ರಲ್ಲಿ ಅವಸಾನ ಹೊಂದಿದ ಔದ್ಯೋಗಿಕ ಬಂಡವಾಳಶಾಹಿಯ ಸ್ಥಾನವನ್ನು ಭಿನ್ನ ನೆಲೆಯಲ್ಲಿ ಆವರಿಸಿಕೊಂಡಿದೆ.

ಆಧುನಿಕ ವಿದ್ಯುನ್ಮಾನ ಸಂವಹನ ಮಾಧ್ಯಮಗಳು ಇಡೀ ಶ್ರಮಜೀವಿ ವರ್ಗವನ್ನು ಸಮ್ಮೋಹನಗೊಳಿಸುವ ಮೂಲಕ, ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಬಲಗೊಳ್ಳುತ್ತಿರುವ ಬಲಪಂಥೀಯ ಅಧಿಕಾರ ರಾಜಕಾರಣ ಮತ್ತು ವಿಶೇಷವಾಗಿ ಭಾರತದ ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸುತ್ತಿರುವ ಮತೀಯವಾದ-ಏಕಾಧಿಪತ್ಯದ ನೆಲೆಗಳಲ್ಲಿ, ಸಕ್ರಿಯ ಕಾಲಾಳುಗಳನ್ನಾಗಿ ಪರಿವರ್ತಿಸುತ್ತಿರುವುದನ್ನು ಮೇ ದಿನದ ಸಂದರ್ಭದಲ್ಲಿ ಗಂಭೀರ ಚರ್ಚೆಗೊಳಪಡಿಸಬೇಕಿದೆ. ಭಾರತದ ಕಾರ್ಮಿಕ ಸಂಘಟನೆಗಳ ಇತಿಹಾಸವನ್ನೊಮ್ಮೆ ಇಣುಕಿ ನೋಡಿದಾಗ, ಶ್ರಮಿಕ ವರ್ಗ ಎನ್ನುವ ವಿಶಾಲ ಹಂದರದಲ್ಲಿ, ಈ ಶ್ರಮಿಕರ ಕುಟುಂಬಗಳನ್ನು ಒಳಗೊಳ್ಳದೆ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಅಂದರೆ ಸೈದ್ಧಾಂತಿಕ ನೆಲೆಯಲ್ಲಿ ಕಾರ್ಮಿಕರನ್ನು ಪ್ರಜಾಸತ್ತಾತ್ಮಕ ಹಾದಿಯಲ್ಲಿ, ಮಾರ್ಕ್ಸ್‌ವಾದಿ ಚಿಂತನೆಗಳ ಮೂಲಕ ಒಂದು ಶಕ್ತಿಯನ್ನಾಗಿ ರೂಪಿಸಿದ್ದರೂ, ಈ ಕಾರ್ಮಿಕರ ಕುಟುಂಬ ಸದಸ್ಯರನ್ನು, ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸುವ ಪ್ರಯತ್ನಗಳು ನಡೆಯದೆ ಇರುವುದು, ಇಡೀ ಕಾರ್ಮಿಕ ಚಳವಳಿಯ ವೈಫಲ್ಯವಾಗಿಯೇ ಕಾಣಬೇಕಿದೆ.

ಸಂಘಟಿತ ಹೋರಾಟದ ಕೊರಗು

ಹಾಗಾಗಿಯೇ ಇಂದಿಗೂ ಸಂಘಟಿತ ಕಾರ್ಮಿಕ ಸಂಘಟನೆಗಳಲ್ಲಿ ಕಾಣಲಾಗುವ ಕೊರಗು ಮತ್ತು ಕೇಳಿಬರುವ ಧ್ವನಿಯಲ್ಲಿ ‘‘ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೆಂಬಾವುಟ ಹಿಡಿಯುತ್ತಾರೆ, ಆದರೆ ಚುನಾವಣೆಗಳಲ್ಲಿ ಕೇಸರಿಯತ್ತ ವಾಲುತ್ತಾರೆ’’ ಎಂಬ ಹತಾಶೆಯ ಮಾತುಗಳು ಪ್ರಧಾನವಾಗಿರುತ್ತವೆ. ಅಂದರೆ ಕಾರ್ಮಿಕರ ಔದ್ಯೋಗಿಕ ಹಕ್ಕುಗಳಿಗಾಗಿ ಮತ್ತು ಉತ್ತಮ ವೇತನ-ಭತ್ತೆ-ಸೌಲಭ್ಯಗಳಿಗೆ ಹೋರಾಡುತ್ತಲೇ, ಈ ಶ್ರಮಿಕರ ಕುಟುಂಬದಲ್ಲಿ ಎದುರಾಗಬಹುದಾದ ನಿರುದ್ಯೋಗ, ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ ಮತ್ತಿತರ ಸಾಮಾಜಿಕ ಸಮಸ್ಯೆಗಳತ್ತ ಕಾರ್ಮಿಕ ಚಳವಳಿ ಗಮನಹರಿಸದೆ ಇರುವುದು ಢಾಳಾಗಿ ಕಾಣುತ್ತದೆ. ಹಾಗಾಗಿಯೇ ತಳಮಟ್ಟದಿಂದ ಮೇಲ್ಪದರದವರೆಗಿನ ಶ್ರಮಿಕರಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಮತ್ತು ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಚಳವಳಿಗಳು ವಿಫಲವಾಗಿವೆ.

ಈ ವಾದ ಚರ್ಚಾಸ್ಪದವಾಗಿ ಕಾಣಬಹುದಾದರೂ, ವರ್ತಮಾನ ಭಾರತ ಎದುರಿಸುತ್ತಿರುವ ಮತೀಯ ರಾಜಕಾರಣ, ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಎಲ್ಲ ವರ್ಗಗಳಲ್ಲೂ ಆವರಿಸುತ್ತಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳು ನಮ್ಮನ್ನು ಈ ಚರ್ಚೆಯೆಡೆಗೆ ಕೊಂಡೊಯ್ಯಬೇಕಿದೆ. 1950ರಲ್ಲಿ ಒಂದು ಪ್ರಜಾಸತ್ತಾತ್ಮಕ ಗಣತಂತ್ರವಾಗಿ ರೂಪುಗೊಂಡ ಭಾರತ ಇಂದು ಸಾಮಾಜಿಕವಾಗಿ ಹಲವು ಒಳಬಿರುಕುಗಳನ್ನು ಕಾಣುತ್ತಿದೆ. ರಾಜಕೀಯವಾಗಿ ದುರ್ಬಲವಾಗಿರುವ ಎಡಪಕ್ಷಗಳು ಇದನ್ನು ಆತ್ಮಾವಲೋಕನದ ನೆಲೆಯಲ್ಲಿ ಪರಾಮರ್ಶೆ ಮಾಡಬೇಕಿದೆ. ನಗರೀಕರಣದ ಪ್ರಕ್ರಿಯೆ ಚುರುಕಾಗುತ್ತಿರುವಂತೆಲ್ಲಾ, ಡಿಜಿಟಲ್ ಯುಗದ ಕಾರ್ಪೊರೇಟ್ ಮಾರುಕಟ್ಟೆಯ ಪ್ಲಾಟ್‌ಫಾರ್ಮ್‌ಗಳು ಈ ದೇಶದ ಶೇ. 40ರಷ್ಟಿರುವ ಯುವ ಸಂಕುಲವನ್ನು ಸಮ್ಮೋಹನಗೊಳಿಸಿರುವ ಅಪಾಯವನ್ನೂ ಇಲ್ಲಿ ಗಮನಿಸಬೇಕಿದೆ.

ಇಲ್ಲಿ ನಮಗೆ ದೇಶದ ಜನಸಂಖ್ಯೆಯಲ್ಲಿ ಶೇ. 30ರಷ್ಟಿರುವ ಮಿಲೇನಿಯಂ ಮಕ್ಕಳು ಅಂದರೆ 20-25ರ ವಯೋಮಾನದ ಯುವ ಸಂಕುಲ ಬಹುಮುಖ್ಯವಾಗಿ ಕಾಣಬೇಕಿದೆ. ಈ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆ ಮತ್ತು ಭವಿಷ್ಯದ ಅಭದ್ರತೆ, 2047ರಲ್ಲಿ ‘ವಿಕಸಿತ ಭಾರತ’ ಆಗಲಿರುವ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇತ್ತೀಚೆಗೆ ರಾಜಸ್ಥಾನ ಸರಕಾರ 53,749 ನಾಲ್ಕನೇ ದರ್ಜೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 24.76 ಲಕ್ಷ ಜನರು ಅರ್ಜಿ ಹಾಕಿರುವುದು, ಅವರ ಪೈಕಿ ಪಿಎಚ್.ಡಿ. ಮಾಡಿರುವವರು, ಉನ್ನತ ಪದವೀಧರರು ಇರುವುದು ಭವಿಷ್ಯದ ಭಾರತ ಎದುರಿಸಲಿರುವ ಅಪಾಯದ ಕರೆಗಂಟೆಯಾಗಿ ಕಾಣಬೇಕಲ್ಲವೇ? ಇದು ಇನ್ನೂ ಜಟಿಲ ಪ್ರಶ್ನೆಯಾಗಲು ಕಾರಣವೇನೆಂದರೆ, ಈ ಮಿಲೇನಿಯಂ ಸಮೂಹ ಸಂಪೂರ್ಣವಾಗಿ ವಿಘಟಿತವಾಗಿದ್ದು, ಜಾತಿ, ಮತ, ಧರ್ಮಗಳ ಚೌಕಟ್ಟುಗಳಲ್ಲಿ ಭ್ರಮಾಧೀನ ಸ್ಥಿತಿಯಲ್ಲಿದೆ.

ರಾಜಕೀಯ ಪ್ರಜ್ಞೆಯ ಹುಡುಕಾಟದಲ್ಲಿ

ಇದು ಶ್ರಮಜೀವಿ ವರ್ಗದ ರಾಜಕೀಕರಣದ ಹಾದಿಯಲ್ಲಿ ಸಂಘಟಿತ ಕಾರ್ಮಿಕ ಚಳವಳಿಗಳ ಮುಂದಿರುವ ಬಹುದೊಡ್ಡ ಸವಾಲು ಎನಿಸುವುದಿಲ್ಲವೇ? ಹಾಗೆನಿಸುವುದೇ ಆದರೆ ಇದಕ್ಕೆ ಪರಿಹಾರವೇನು? ಕೇವಲ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಾ ನಡೆಯುವುದೇ ಅಥವಾ ಇನ್ನೂ ಉದ್ಯೋಗ ಮಾರುಕಟ್ಟೆಯಲ್ಲಿ ಉಳಿದಿರುವ ಸಂಘಟಿತ ಕಾರ್ಮಿಕರ ಉತ್ತಮ ಭವಿಷ್ಯಕ್ಕಾಗಿ ಸರಕಾರವನ್ನು ಒತ್ತಾಯಿಸುತ್ತಾ ಕಾಲ ಕಳೆಯುವುದೇ? ಒಂದು ನೆಲೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನೇ ಪ್ರತಿನಿಧಿಸುವ ಎಲ್ಲ ಸರಕಾರಗಳೂ, ಈ ಬೇಡಿಕೆಗಳಿಗೆ ಸಮ್ಮತಿಸಿಬಿಡುತ್ತವೆ ಅಥವಾ ಗ್ಯಾರಂಟಿ ಯೋಜನೆಗಳಂತಹ ಕಲ್ಯಾಣ ಕಾರ್ಯಕ್ರಮಗಳನ್ನೇ ಸಮ ಸಮಾಜ-ಸಮಾಜವಾದದ ಅಂತಿಮ ಘಟ್ಟ ಎಂದು ವಾದಿಸುತ್ತಾ ಇಡೀ ಸಮಾಜವನ್ನು ಭ್ರಮಾಧೀನಗೊಳಿಸುತ್ತವೆ. ಆದರೆ ನಿತ್ಯ ಬದುಕಿನ ತಾತ್ಕಾಲಿಕ ಸಮಸ್ಯೆಗಳಿಗೆ ನೀಡುವ ಈ ಶಮನಕಾರಿ ಚಿಕಿತ್ಸೆ, ಭವಿಷ್ಯದ ಸಮಾಜಕ್ಕೆ ಒಂದು ಸುಭದ್ರ, ಸುರಕ್ಷಿತ, ಆರೋಗ್ಯಕರ ಅಡಿಪಾಯವನ್ನು ನಿರ್ಮಿಸಲು ಸಾಧ್ಯವೇ?

ಈ ಪ್ರಶ್ನೆ ಎಡಪಂಥೀಯ ಕಾರ್ಮಿಕ ಸಂಘಟನೆಗಳನ್ನು ಕಾಡಲೇಬೇಕಲ್ಲವೇ? ಸಂಘಟಿತ-ಅಸಂಘಟಿತ ಅಸಂಖ್ಯಾತ ಶ್ರಮಜೀವಿಗಳ ಭವಿಷ್ಯದ ಹಾದಿಗಳು ಹಸನಾಗಬೇಕಾದರೆ, ಈ ಶ್ರಮಜಗತ್ತಿನಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಬೇಕು. ಈ ಪ್ರಜ್ಞೆ ಮತ್ತು ಅರಿವಿನ ಹಾದಿಯಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಬಹುತ್ವ ಮತ್ತು ಸಾಂವಿಧಾನಿಕ ನೈತಿಕತೆಯ ಮೌಲ್ಯಗಳ ಬೀಜಗಳನ್ನು ಬಿತ್ತಬೇಕು. ಇದರೊಂದಿಗೆ ಜಾತಿದ್ವೇಷ, ಮತದ್ವೇಷ, ಧರ್ಮದ್ವೇಷ ಮತ್ತು ಸ್ತ್ರೀ ದ್ವೇಷದ ಕಳೆಗಳನ್ನು ಕಿತ್ತೊಗೆಯಬೇಕು. ನವ ಭಾರತ ಮತ್ತೊಮ್ಮೆ ಮಧ್ಯಕಾಲೀನತೆಗೆ ಜಾರದ ಹಾಗೆ ನಂಬಿಕೆ ಶ್ರದ್ಧಾಚರಣೆಗಳ ನೆಪದಲ್ಲಿ ಪ್ರಾಚೀನ ಮೌಲ್ಯಗಳ ಕೂಪಕ್ಕೆ ಬೀಳದ ಹಾಗೆ, ಈ ಹಾದಿಯ ಹಾಸುಗಲ್ಲುಗಳನ್ನು ವಿಸ್ತರಿಸಬೇಕಿದೆ.

ದಲಿತ ರಾಜಕಾರಣವನ್ನೂ ಒಳಗೊಂಡಂತೆ ಎಲ್ಲ ಬಂಡವಾಳಿಗ (ಬೂರ್ಷ್ವಾ) ರಾಜಕೀಯ ಪಕ್ಷಗಳೂ ನವ ಉದಾರವಾದ ಮತ್ತು ಕಾರ್ಪೊರೇಟ್ ಮಾರುಕಟ್ಟೆಯನ್ನು ಅಪ್ಪಿಕೊಂಡಿರುವಾಗ, ತಳಸಮುದಾಯಗಳನ್ನು ಪ್ರತಿನಿಧಿಸುವ, ಸಮಾಜವಾದಿ ಮುಖವಾಡದ, ರಾಜಕೀಯ ಪಕ್ಷಗಳೂ ಬಲಪಂಥೀಯ ರಾಜಕಾರಣದತ್ತ ವಾಲುತ್ತಿರುವಾಗ, ಈ ಹಾಸುಗಲ್ಲುಗಳನ್ನು ಜೋಡಿಸುವ ಜವಾಬ್ದಾರಿ ಎಡಪಕ್ಷಗಳ ಮೇಲಿದೆ. ಈ ಹೊಣೆಗಾರಿಕೆ ಯನ್ನು ನೈತಿಕತೆಯ ನೆಲೆಯಲ್ಲಿ ನಿಭಾಯಿಸಲು ಎಡಪಕ್ಷಗಳ ಐಕ್ಯತೆ ಅತ್ಯವಶ್ಯವಾಗಿದೆ. ದುರದೃಷ್ಟವಶಾತ್ ಈ ಕೂಗು ಎಡಪಕ್ಷಗಳಿಗೆ ಕೇಳಿಸುತ್ತಲೇ ಇದ್ದರೂ, ಸೈದ್ಧಾಂತಿಕ ಅಸ್ಮಿತೆಗಳ ಗೋಡೆಗಳು ನಡುವೆ ಗಟ್ಟಿಯಾಗುತ್ತಿವೆ. ಎಡಪಕ್ಷಗಳಲ್ಲಿರಬಹುದಾದ ಬಹುಸಂಖ್ಯಾವಾದ, ಮಡಿವಂತಿಕೆ, ತಾತ್ವಿಕ ಹಟಮಾರಿ ಧೋರಣೆಗಳನ್ನು ಕೊನೆಗಾಣಿಸಿ, ಈ ಗೋಡೆಗಳನ್ನು ಕೆಡವುವುದು ದುಡಿಯವ ವರ್ಗಗಳ ಆದ್ಯತೆ ಯಾಗಬೇಕಿದೆ. ಅಂದರೆ ಈ ಶ್ರಮಿಕ ವರ್ಗಗಳನ್ನು ಪ್ರತಿನಿಧಿಸುವ ಕಾರ್ಮಿಕ ಸಂಘಟನೆಗಳು ಈ ಜವಾಬ್ದಾರಿಯನ್ನು ಹೊರಬೇಕಿದೆ.

share
ನಾ. ದಿವಾಕರ
ನಾ. ದಿವಾಕರ
Next Story
X