ಈ ವರ್ಷವೂ ಅಡಿಕೆ ಇಳುವರಿ ಕುಸಿಯುವ ಸಾಧ್ಯತೆ

ಮಂಗಳೂರು : ಕಳೆದ ವರ್ಷ ಅತಿಯಾದ ಬಿಸಿಲು, ರೋಗ, ಮತ್ತಿತರ ಕಾರಣದಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಡಿಕೆಯ ಇಳುವರಿ ಕಡಿಮೆಯಾಗಿತ್ತು. ಈ ವರ್ಷವೂ ಅದೇ ಪರಿಸ್ಥಿತಿ ಎದುರಾಗಿದ್ದು, ಅಡಿಕೆ ಬೆಳೆ ಇಳುವರಿ ಕಡಿಮೆಯಾಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ಬೇಸಿಗೆಯ ಬಿಸಿಲು, ನೀರಿನ ಕೊರತೆ, ರೋಗದ ಕಾರಣ ದಿಂದಾಗಿ ಅಡಿಕೆಯ ಇಳುವರಿ ಕಡಿಮೆಯಾಗುವ ಸಂಭವವಿದೆ. ಮುಂಗಾರು ಪ್ರವೇಶವಾಗಿದ್ದು, ಮಳೆಗಾಲದಲ್ಲಿ ಅಡಿಕೆಗೆ ರೋಗ ಜಾಸ್ತಿಯಾದರೆ ಇಳುವರಿ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ.
ಒಣಗಿದ ಹಿಂಗಾರ :
ಅಕಾಲಿಕವಾಗಿ ಸುರಿದ ಮಳೆ ಮತ್ತು ಅತಿಯಾದ ಬಿಸಿಲಿನಿಂದಾಗಿ ಅಡಿಕೆ ಮರಗಳಲ್ಲಿ ಅರಳಿ ನಿಂತಿದ್ದ ಹಿಂಗಾರ ಕೊಳೆ ರೋಗಕ್ಕೆ ತುತ್ತಾಗಿದೆ. ಹಿಂಗಾರ ಒಣಗಿ ಉದುರತೊಡಗಿದೆ. ಅನೇಕ ಅಡಿಕೆ ತೋಟಗಳಲ್ಲಿವ ಅರಳಿದ ಹಿಂಗಾರಗಳು ಬಿಸಿಲಿನಿಂದಾಗಿ ಕರಟಿ ಹೋಗಿವೆೆ. ರೋಗ ಬಾಧಿತ ಮರಗಳಲ್ಲಿ ಎಳೆಕಾಯಿ ಅಡಿಕೆ ಉದುರುತ್ತಿದೆ ಎನ್ನುತ್ತಾರೆ ಬೆಳೆಗಾರರು.
ಕಾರ್ಮಿಕರ ಕೊರತೆ :
ಅಡಿಕೆ ಮರಕ್ಕೆ ಔಷಧಿ ಸಿಂಪಡಿಸಲು ಕೆಲವು ಕಡೆಗಳಲ್ಲಿ ಕಾರ್ಮಿಕರ ಕೊರತೆ ಇದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಸಕಾಲದಲ್ಲಿ ಔಷಧಿ ಸಿಂಪಡಣೆ ಸಾಧ್ಯವಾಗಿಲ್ಲ. ಕೃಷಿಯಲ್ಲಿ ಅತ್ಯಂತ ಪರಿಣಾಮಕಾರಿ ಬಳಸಲ್ಪಡುವ ಸಾವಯವ ಶಿಲೀಂಧ್ರ ನಾಶಕ ಮತ್ತು ಬ್ಯಾಕ್ಟೀರಿಯಾ ನಾಶಕವಾಗಿರುವ ಬೋರ್ಡೊ ಮಿಶ್ರಣ ತಯಾರಿಸಲು ಸುಣ್ಣದೊಂದಿಗೆ ಬಳಸಲ್ಪಡುವ ಮೈಲುತುತ್ತು ಇದೀಗ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಕ್ಯಾಂಪ್ಕೊ ಸಂಸ್ಥೆ ನೀಡುತ್ತಿದೆ.
ಕ್ಯಾಂಪ್ಕೊದಲ್ಲಿ ರೈತರು ಕ್ಯಾಂಪ್ಕೊಗೆ ನೀಡಿದ ಅಡಿಕೆಯನ್ನಾಧರಿಸಿ ಮೈಲುತುತ್ತು ವಿತರಿಸಲಾಗುತ್ತದೆ. 50 ಕೆ.ಜಿ. ಅಡಿಕೆ ಕೊಟ್ಟವರಿಗೆ 1 ಕೆ.ಜಿ. ಮೈಲುತುತ್ತು ರಿಯಾಯಿತಿ ದರದಲ್ಲಿ ಲಭ್ಯ. ಹಿಂದಿನ ವರ್ಷ ಒಂದು ಕ್ವಿಂಟಾಲ್ ಅಡಿಕೆ ಕೊಟ್ಟವರಿಗೆ 1 ಕೆ.ಜಿ. ಮೈಲು ತುತ್ತು ನೀಡಲಾಗಿತ್ತು ಎಂದು ಕ್ಯಾಂಪ್ಕೊ ಸಂಸ್ಥೆಯ ಮೂಲಗಳು ತಿಳಿಸಿವೆ.
ಮಳೆಯ ಅನಿಶ್ಚಿತತೆ :
ಈ ಬಾರಿ ಮಳೆ ಬೇಗ ಆಗಮಿಸಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಿದೆ. ಮುಂಗಾರುಪೂರ್ವ ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಕೆಲವು ಪ್ರದೇಶಗಳಲ್ಲಿ ನಾಲ್ಕೈದು ಬಾರಿ ಮಳೆಯಾಗಿದೆ. ಹಲವಡೆ ಕೆರೆ, ಬಾವಿ, ಕೊಳವೆಬಾವಿ, ಹೊಳೆಗಳಲ್ಲಿ ನೀರು ಬತ್ತಿ ಹೋಗಿದೆ. ಇದರಿಂದಾಗಿ ಅಡಿಕೆ ಮರಗಳು ನೀರಿಲ್ಲದೆ ಸೊರಗಿವೆ.
ಕಾಡುಪ್ರಾಣಿಗಳ ಹಾವಳಿ :
ತೋಟಗಳಿಗೆ ಲಗ್ಗೆ ಇಡುವ ಕಾಡುಹಂದಿಗಳು ಸಣ್ಣ ಅಡಿಕೆ ಸಸಿಗಳನ್ನು ಧ್ವಂಸಗೈಯುತ್ತಿವೆ. ಇದರಿಂದ ಅಡಿಕೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ದೊಡ್ಡ ಮರಗಳ ಬುಡಕ್ಕೆ ಹಾಕುವ ಗೊಬ್ಬರಗಳನ್ನು ಅವುಗಳಿಗೆ ದಕ್ಕದಂತೆ ಮಾಡುತ್ತಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಫಲವತ್ತತೆ ಕೊರತೆ :
ಅತಿಯಾದ ಶಾಖ, ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯ ಕಾರಣದಿಂದಾಗಿ ಮಣ್ಣಿನ ಫಲವತ್ತತೆ ಕಮ್ಮಿಯಾಗಿದೆ. ಇದರಿಂದಾಗಿ ಅಡಿಕೆ ಮರಗಳ ರೋಗನಿರೋಧಕ ಶಕ್ತಿ ಕುಗ್ಗಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಅಡಿಕೆ ಧಾರಣೆ ಸ್ಥಿರ :
ಹೊಸ ಅಡಿಕೆಗೆ ಕೆ.ಜಿಗೆ ರೂ.450ರಿಂದ 460 ರೂ. ಇದೆ. ಸದ್ಯ ಬೆಲೆ ಏರಿಕೆ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ವೇಳೆ ಧಾರಣೆ 500 ರೂ.ಗಳ ಗಡಿ ದಾಟಿದರೆ ಹೊರದೇಶಗಳಿಂದ ಕಳಪೆ ಅಡಿಕೆ ಅಕ್ರಮವಾಗಿ ಹರಿದು ಬರುವ ಸಾಧ್ಯತೆ ಇರುತ್ತದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.
ಬಿಸಿಲಿನಿಂದಾಗಿ ವಾತಾವರಣ ಬಿಸಿಯಾದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗೆ ಹಾನಿಯಾಗಿದೆ. ಈ ಬಾರಿ ಮಳೆಗಾಲ ಹೇಗಿರುತ್ತದೆ ಎನ್ನುವುದು ಗೊತ್ತಾಗಿಲ್ಲ. ಜಾಸ್ತಿ ಮಳೆ ಬಂದರೆ, ರೋಗ ಜಾಸ್ತಿಯಾದರೆ ಅಡಿಕೆ ಇಳುವರಿ ಕಡಿಮೆಯಾಗಬಹುದು.
-ಎಸ್.ಆರ್.ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಪ್ಕೊ ಮಂಗಳೂರು






