ಅಪಾಯಮಟ್ಟದಲ್ಲಿ ಹರಿಯುತ್ತಿರುವ ಭೀಮಾ ನದಿ: 70ಕ್ಕೂ ಹೆಚ್ಚು ಗ್ರಾಮಗಳಿಗೆ ನುಗ್ಗಿದ ನೀರು

ಕಲಬುರಗಿ : ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ 3.45 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳ ಅನೇಕ ಹಳ್ಳಿಗಳು ಜಲಾವೃತಗೊಂಡಿವೆ.
ಕಲಬುರಗಿ ಜಿಲ್ಲಾದ್ಯಂತ ಕೆಲವು ದಿನಗಳಿಂದ ಮಳೆಯ ಆರ್ಭಟ ಮುಂದುವರಿದಿದ್ದು, ಇದರ ನಡುವೆಯೇ ಭೀಮಾ ನದಿ ಉಕ್ಕಿ ಅಪಾಯಮಟ್ಟಕ್ಕೆ ಹರಿಯುತ್ತಿದೆ. ನದಿ ತೀರದ ಹಲವು ಗ್ರಾಮಗಳಲ್ಲಿ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಜನರು ಆಶ್ರಯಕ್ಕಾಗಿ ಸರಕಾರದತ್ತ ಮುಖ ಮಾಡಿ ಕಾದು ಕುಳಿತ್ತಿದ್ದಾರೆ.
ಸೆ.27 ಮತ್ತು 28ರಂದು ಜಿಲ್ಲೆಗೆ ಆರೆಂಜ್ ಅಲರ್ಟ್ ಮತ್ತು ಭೀಮಾ ನದಿ ಮೇಲ್ಮೈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಮುಂಜಾಗ್ರತವಾಗಿ ಜಿಲ್ಲೆಯಲ್ಲಿ ಶಾಲೆಗಳಿಗೆ ಜಿಲ್ಲಾಧಿಕಾರಿಯವರು ಎರಡು ದಿನ ರಜೆ ಘೋಷಿಸಿದ್ದಾರೆ.
ನದಿ ತೀರದ 70ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ :
► ಅಫಜಲಪುರ ತಾಲೂಕಿನ ಮಣ್ಣೂರ, ದೇವಲ ಗಾಣಗಾಪುರ, ಕಲ್ಲೂರ, ತೆಲ್ಲುಣಗಿ, ದಿಕ್ಸಂಗಾ (ಕೆ), ಸೊನ್ನ, ಬಂಕಲಗಾ, ಉಡಚಣ, ಶಿವಪುರ, ಹೊಳೆ ಭಾಸಗಿ.
► ಕಾಳಗಿ-ಚಿತ್ತಾಪುರ ತಾಲೂಕಿನ ಗುಂಡಗುರ್ತಿ, ಹಳೆ ಹೆಬ್ಬಾಳ, ಮಲಘಾಣ, ಕಣಸೂರ, ಮುತ್ತಾಗ.
► ಜೇವರ್ಗಿ ತಾಲೂಕಿನ ಹರವಾಳ, ಕೂಡಿ, ಕೋಳಕೂರ, ಮಠದರವಾಡ, ಕಟ್ಟಿಸಂಗಾವಿ, ಯನಗುಂಟಿ, ಮದರಿ, ನರಿಬೋಳ, ಕೊನಹಿಪ್ಪರಗಾ, ಮಲ್ಲಾ, ಹೊನ್ನಾಳ, ಹೋತಿನಮಡು, ಸರಡಗಿ, ನದಿ ಸಿನ್ನೂರ್.
► ಕಲಬುರಗಿ ತಾಲೂಕಿನ ಫಿರೋಝಾಬಾದ್, ಹಾಗರಗುಂಡಗಿ.
► ಶಹಾಬಾದ್ ತಾಲ್ಲೂಕಿನ ಹೊನಗುಂಟಾ, ಗೋಳಾ(ಕೆ), ಹಳ್ಳಿ ಸೇರಿದಂತೆ 70 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ.
ಅಪಾರ ಪ್ರಮಾಣದ ಬೆಳೆ ಹಾನಿ :
ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ತೊಗರಿ, ಕಬ್ಬು, ಹತ್ತಿ ಬೆಳೆ ಸೇರಿದಂತೆ ವಾಣಿಜ್ಯ ಬೆಳೆಗಳು ನೀರುಪಾಲಾಗಿವೆ. ಇದರಿಂದ ಸಾವಿರಾರು ರೈತರು ತಮ್ಮ ಭೂಮಿ, ಬೆಳೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಕೆಲವರ ಹೊಲಗಳು ಕೊಚ್ಚಿಕೊಂಡು ಹೋದರೆ ಇನ್ನೂ ಕೆಲವು ರೈತರ ಸಂಪೂರ್ಣ ಬೆಳೆಗಳು ಜಲಾವೃತಗೊಂಡಿವೆ. ಸರಕಾರ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ :
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿಯಯಲ್ಲಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ರಸ್ತೆ ಸೇತುವೆಯಲ್ಲಿ ಅಪಾಯ ಮಟ್ಟದ ಭೀಮಾ ನದಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಬೀದರ್ - ಬೆಂಗಳೂರು - ಶ್ರೀರಂಗಪಟ್ಟಣಕ್ಕೆ ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಲಾರಿ, ಕ್ಯಾಂಟರ್, ಟ್ರಕ್, ಬಸ್, ಸೇರಿದಂತೆ ಇನ್ನಿತರ ದೊಡ್ಡ ಪ್ರಮಾಣದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಕಾರು, ಆಟೊ, ಸಣ್ಣ ಪ್ರಮಾಣದ ಗುಡ್ಸ್ ವಾಹನಗಳು ಸೇರಿದಂತೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಸ್ವಲ್ಪ ನೀರು ಹರಿದರೆ ಈ ಸೇತುವೆ ಸಂಪೂರ್ಣ ಜಲಾವೃತಗೊಳ್ಳಲಿದೆ.
ಕಲಬುರಗಿ ಜಿಲ್ಲೆಯಾದ್ಯಂತ ಪ್ರವಾಹದ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಪ್ರವಾಹ ಪೀಡಿತ ಪ್ರದೇಶದಲ್ಲಿ ಅಧಿಕಾರಿ-ಸಿಬ್ಬಂದಿಯ ಜೊತೆಗೆ ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್., ಪೊಲೀಸ್, ಅಗ್ನಿ ಶಾಮಕ ತಂಡಗಳನ್ನು ನಿಯೋಜಿಸಲಾಗಿದೆ.
-ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ
ಈಗಾಗಲೇ 68ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಈಗಾಗಲೇ 41 ಕಾಳಜಿ ಕೇಂದ್ರ ಸ್ಥಾಪಿಸಿ ಸತ್ರಸ್ತರನ್ನು ಆರೈಕೆ ಮಾಡಲಾಗುತ್ತಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರು ಆತಂಕ ಪಡಬಾರದು. ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕು.
-ಬಿ.ಫೌಝಿಯಾ ತರನ್ನುಮ್, ಜಿಲ್ಲಾಧಿಕಾರಿ, ಕಲಬುರಗಿ
ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಬೆಳೆ ನಷ್ಟವಾದ ರೈತರಿಗೆ ದಿಕ್ಕು ತೊಚದಂತೆ ಆಗಿದೆ. ಸರಕಾರ ರೈತರ ಬಾಕಿ 315 ಕೋಟಿ ರೂ.ವಿಮೆ ಹಣ ಬಿಡುಗಡೆ ಮಾಡಬೇಕು, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಈ ಪ್ರದೇಶವನ್ನು ಹಸಿ ಬರಗಾಲ ಎಂದು ಘೋಷಣೆ ಮಾಡಬೇಕು.
-ಶರಣಬಸಪ್ಪ ಮಮಶೆಟ್ಟಿ, ರೈತ ಮುಖಂಡ
41 ಕಾಳಜಿ ಕೇಂದ್ರಗಳ ಸ್ಥಾಪನೆ :
ಭೀಮಾ ನದಿಯ ಪ್ರವಾಹಕ್ಕೆ ತುತ್ತಾದ ಗ್ರಾಮಗಳಲ್ಲಿ ಇದುವರೆಗೆ 41 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 2,234 ಪುರುಷರು, 1,647 ಮಹಿಳೆಯರು, 894 ಮಕ್ಕಳು ಸೇರಿದಂತೆ 4,715 ಜನ ಕಾಳಜಿ ಕೆಂದ್ರದಲ್ಲಿ ಸಂತ್ರಸ್ತರಿಗೆ ಆಶ್ರಯ ನೀಡಿದ್ದು, ಇವರಿಗೆ ಊಟೋಪಚಾರ, ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ, ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.







