ಪ್ರಾಥಮಿಕ ಹಂತದಲ್ಲಿ ದ್ವಿಭಾಷಾ ಶಿಕ್ಷಣ : ಗ್ರಾಮೀಣ ಮಕ್ಕಳ ಪಾಲಿಗೆ ಜಾಗತಿಕ ಸ್ಪರ್ಧೆಯ ಹೆಬ್ಬಾಗಿಲು

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಪ್ರಬಲ ಅಸ್ತ್ರ ಎಂದರೆ ಅದು ಇಂಗ್ಲಿಷ್ ಭಾಷೆ ಎಂದರೆ ತಪ್ಪಾಗಲಾರದು. ರಾಜ್ಯ ಸರಕಾರವು 1 ರಿಂದ 5ನೇ ತರಗತಿಯ ಮಕ್ಕಳಿಗೆ ದ್ವಿಭಾಷಾ ಬೋಧನಾ ಪದ್ಧತಿಯನ್ನು (Bilingual Teaching Method) ಜಾರಿಗೊಳಿಸಲು ಮುಂದಾಗಿರುವುದು ದಶಕಗಳಿಂದ ಬೇರೂರಿರುವ ಅಸಮಾನತೆಯ ಕಂದಕವನ್ನು ಮುಚ್ಚುವ ದಿಟ್ಟ ಹಾಗೂ ಐತಿಹಾಸಿಕ ಹೆಜ್ಜೆಯಾಗಿದೆ. ‘ಇಂಗ್ಲಿಷ್ ಕಲಿತರೆ ಕನ್ನಡ ಸಾಯುತ್ತದೆ’ ಎಂಬ ಅತಿಯಾದ ಭಾವನಾತ್ಮಕತೆಯಿಂದ ಹೊರಬರುವ ಅಗತ್ಯವಿದೆ.
ಶೈಕ್ಷಣಿಕ ಅಸ್ಪಶ್ಯತೆ ಮತ್ತು ವರ್ಗ ತಾರತಮ್ಯದ ನಿವಾರಣೆ
ಇಂದು ನಮ್ಮ ಶೈಕ್ಷಣಿಕ ವ್ಯವಸ್ಥೆ ಸ್ಪಷ್ಟವಾಗಿ ಎರಡು ವರ್ಗಗಳಾಗಿ ಸೀಳಿದೆ. ಆರ್ಥಿಕವಾಗಿ ಸಬಲರಾಗಿರುವ ಹಾಗೂ ನಗರ ಪ್ರದೇಶದ ಮಕ್ಕಳಿಗೆ ಎಲ್ಕೆಜಿ. ಯಿಂದಲೇ ಅತ್ಯುತ್ತಮ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಸಿಗುತ್ತಿದೆ. ಆದರೆ, ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಭಾಗದ, ಬಡ, ರೈತ ಮತ್ತು ಕಾರ್ಮಿಕ ವರ್ಗದ ಮಕ್ಕಳಿಗೆ ಸರಕಾರಿ ಶಾಲೆಗಳೇ ಏಕೈಕ ಆಸರೆ. ಈ ಮಕ್ಕಳು ನಾಳೆ ಜಾಗತಿಕ ಮಟ್ಟದಲ್ಲಿ ಅದೇ ನಗರದ ಮಕ್ಕಳೊಂದಿಗೆ ಸ್ಪರ್ಧಿಸಬೇಕಾದರೆ ಅವರಿಗೆ ಇಂಗ್ಲಿಷ್ ಜ್ಞಾನ ಸಂಪೂರ್ಣವಾಗಿ ಅನಿವಾರ್ಯವಾಗುತ್ತದೆ. ದ್ವಿಭಾಷಾ ಬೋಧನೆಯಿಂದ ಗ್ರಾಮೀಣ ಮಕ್ಕಳಿಗೂ ಆರಂಭದಿಂದಲೇ ಗುಣಮಟ್ಟದ ಇಂಗ್ಲಿಷ್ ಪರಿಚಯವಾಗಿ, ಭಾಷೆಯ ಮೇಲಿನ ಅವರ ಕೀಳರಿಮೆ ಶಾಶ್ವತವಾಗಿ ದೂರವಾಗುತ್ತದೆ. ಜ್ಞಾನದ ಪ್ರಜಾಪ್ರಭುತ್ವೀಕರಣದ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲಾಗಿದೆ.
ಉನ್ನತ ಶಿಕ್ಷಣದ ‘ಭಾಷಾ ಆಘಾತ’ದಿಂದ ಮುಕ್ತಿ
ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿ, ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನೋ ಅಥವಾ ಮುಂದೆ ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್ಗಳನ್ನೋ ಆಯ್ಕೆ ಮಾಡಿದಾಗ ಗೊಂದಲಕ್ಕೊಳಗಾಗುವುದು ಸಹಜ. ವಿಷಯ ಜ್ಞಾನ ಎಷ್ಟೇ ಅಗಾಧವಾಗಿದ್ದರೂ, ಕೇವಲ ಇಂಗ್ಲಿಷ್ ಪಾರಿಭಾಷಿಕ ಪದಗಳು ಅರ್ಥವಾಗದೆ ತರಗತಿಯಲ್ಲಿ ಹಿಂದುಳಿಯುವ, ಕೀಳರಿಮೆಯಿಂದ ಖಿನ್ನತೆಗೆ ಒಳಗಾಗುವ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಕಣ್ಣಮುಂದೆ ಇದ್ದಾರೆ. ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನದಂತಹ ವಿಷಯಗಳ ಮೂಲ ಪರಿಕಲ್ಪನೆಗಳನ್ನು ದ್ವಿಭಾಷೆಯಲ್ಲಿ (ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ) ಕಲಿಸುತ್ತಾ ಬಂದರೆ, ವಿದ್ಯಾರ್ಥಿಗಳು ಪದಗಳ ದ್ವಂದ್ವವಿಲ್ಲದೆ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸಬಹುದು.
ಭಾಷಾ ವಿಜ್ಞಾನ ಮತ್ತು ಮಿದುಳಿನ ಅರಿವಿನ ವಿಕಾಸ
ಶೈಕ್ಷಣಿಕ ಮನೋವಿಜ್ಞಾನ ಮತ್ತು ನರವಿಜ್ಞಾನದ ಪ್ರಕಾರ, 6 ರಿಂದ 10 ವರ್ಷದೊಳಗಿನ ಮಕ್ಕಳ ಮಿದುಳು ಹೊಸ ಭಾಷೆಗಳನ್ನು ಅತಿ ವೇಗವಾಗಿ ಮತ್ತು ಸಹಜವಾಗಿ ಗ್ರಹಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿರುತ್ತದೆ. ಮಾತೃಭಾಷೆಯ ಜೊತೆಗೆ ಮತ್ತೊಂದು ಭಾಷೆಯನ್ನು ವ್ಯವಸ್ಥಿತವಾಗಿ ಕಲಿಯುವುದರಿಂದ ಮಕ್ಕಳ ವಿಶ್ಲೇಷಣಾ ಸಾಮರ್ಥ್ಯ, ಸಮಸ್ಯೆ ಬಗೆಹರಿಸುವ ಕೌಶಲ ಮತ್ತು ಬಹುಮುಖಿ ಆಲೋಚನಾ ಕ್ರಮ ವಿಕಸನಗೊಳ್ಳುತ್ತದೆ. ದ್ವಿಭಾಷಾ ಪದ್ಧತಿಯು ಮಾತೃಭಾಷೆಯನ್ನು ಎಂದಿಗೂ ನಾಶ ಮಾಡುವುದಿಲ್ಲ, ಅದು ಮತ್ತೊಂದು ಭಾಷೆಯ ವ್ಯಾಕರಣ ಮತ್ತು ರಚನೆಯನ್ನು ಅರ್ಥೈಸಿಕೊಳ್ಳಲು ಮಾತೃಭಾಷೆಯನ್ನೇ ಒಂದು ಸದೃಢ ಸೇತುವೆಯಾಗಿ ಬಳಸಿಕೊಳ್ಳುತ್ತದೆ.
ಬದಲಾಗುತ್ತಿರುವ ಶಾಲಾ ವಾತಾವರಣ ಮತ್ತು ಸನ್ನದ್ಧತೆ
ಹಿಂದಿನ ಕಾಲದಂತೆ ಈಗ ಸರಕಾರಿ ಶಾಲೆಗಳೆಂದರೆ ಕೇವಲ ಸೋರುತ್ತಿರುವ ಚಾವಣಿ ಅಥವಾ ಸೀಮೆಸುಣ್ಣದ ಬೋರ್ಡ್ಗಳಷ್ಟೇ ಅಲ್ಲ. ಸಮಗ್ರ ಶಿಕ್ಷಾ ಅಭಿಯಾನದಂತಹ ಬೃಹತ್ ಯೋಜನೆಗಳಡಿ ಶೈಕ್ಷಣಿಕ ಗುಣಮಟ್ಟ ಗಣನೀಯವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ಪಿ.ಎಂ.ಶ್ರೀ ಮಾದರಿಯ ಶಾಲೆಗಳು ಇಂದು ಗ್ರಾಮೀಣ ಭಾಗದಲ್ಲಿ ಹೈಟೆಕ್ ಡಿಜಿಟಲ್ ತರಗತಿಗಳು, ಇಂಟರಾಕ್ಟಿವ್ ಪ್ಯಾನೆಲ್ಗಳು ಮತ್ತು ಸುಸಜ್ಜಿತ ಗ್ರಂಥಾಲಯಗಳೊಂದಿಗೆ ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಬೆಳೆಯುತ್ತಿವೆ. ಇಂತಹ ಅತ್ಯಾಧುನಿಕ ಮೂಲಸೌಕರ್ಯಗಳು ಲಭ್ಯವಾಗುತ್ತಿರುವ ಈ ಸಂದರ್ಭದಲ್ಲಿ, ದ್ವಿಭಾಷಾ ಬೋಧನೆಯನ್ನು ಅಳವಡಿಸಿಕೊಳ್ಳಲು ವ್ಯವಸ್ಥೆ ಸಂಪೂರ್ಣವಾಗಿ ಸಜ್ಜಾಗಿದೆ. ಡಿಜಿಟಲ್ ಬೋಧನಾ ಸಾಮಗ್ರಿಗಳ ನೆರವಿನಿಂದ ಶಿಕ್ಷಕರು ಕೂಡ ದ್ವಿಭಾಷಾ ತರಗತಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ.
ಪೋಷಕರ ಆಶಯ ಮತ್ತು ಉದ್ಯೋಗ ಮಾರುಕಟ್ಟೆಯ ವಾಸ್ತವ
ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯಲು ಪ್ರಮುಖ ಕಾರಣ ಪೋಷಕರ ಇಂಗ್ಲಿಷ್ ವ್ಯಾಮೋಹ. ದ್ವಿಭಾಷಾ ಬೋಧನೆಯಿಂದ ಪೋಷಕರಿಗೆ ತಮ್ಮ ಮಕ್ಕಳು ಸ್ಪರ್ಧೆಯಿಂದ ಹಿಂದೆ ಬೀಳುವುದಿಲ್ಲ ಎಂಬ ಭರವಸೆ ಮೂಡುತ್ತದೆ. ಇಂದಿನ ಕಠೋರ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕೇವಲ ಅಂಕಪಟ್ಟಿಗಳು ಮಾತ್ರ ಉದ್ಯೋಗ ತಂದುಕೊಡುವುದಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು, ತಂತ್ರಜ್ಞಾನ ವಲಯಗಳು ಮಾತ್ರವಲ್ಲದೆ, ಸಾಮಾನ್ಯ ಸೇವಾ ವಲಯಗಳಲ್ಲೂ ಅತ್ಯುತ್ತಮ ಸಂವಹನ ಕೌಶಲವನ್ನು ನಿರೀಕ್ಷಿಸಲಾಗುತ್ತದೆ. ನಮ್ಮ ಸರಕಾರಿ ಶಾಲೆಯ ಮಕ್ಕಳು ಕೇವಲ ಕಿರಿಯ ಶ್ರೇಣಿಯ ನೌಕರರಾಗಿಯೋ, ಸೀಮಿತ ವಲಯದ ಉದ್ಯೋಗಿಗಳಾಗಿಯೋ ಉಳಿಯಬಾರದು. ಅವರು ಜಾಗತಿಕ ನಾಯಕರಾಗಿ, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರೆ, ಬಾಲ್ಯದಿಂದಲೇ ಅವರಿಗೆ ಇಂಗ್ಲಿಷ್ನ ಬಲ ತುಂಬುವುದು ಅನಿವಾರ್ಯ.
ಭಾಷೆ ಮತ್ತು ಸಂಸ್ಕೃತಿಯ ಉಳಿವು ನಮ್ಮೆಲ್ಲರ ಆದ್ಯತೆ ಹೌದು. ಆದರೆ ಭಾಷಾಭಿಮಾನದ ಗುತ್ತಿಗೆಯನ್ನು ಬಡವರ, ಶ್ರಮಿಕರ ಮತ್ತು ಗ್ರಾಮೀಣ ಮಕ್ಕಳ ತಲೆಯ ಮೇಲೆ ಕಟ್ಟಿ ಅವರ ಭವಿಷ್ಯವನ್ನು ಕತ್ತಲಲ್ಲಿ ಇಡುವುದು ಎಷ್ಟರಮಟ್ಟಿಗೆ ಸರಿ? ದ್ವಿಭಾಷಾ ಬೋಧನಾ ಪದ್ಧತಿಯು ಕನ್ನಡವನ್ನು ಕೊಲ್ಲುವ ವ್ಯವಸ್ಥೆಯಲ್ಲ, ಇದು ಕನ್ನಡದ ಬೇರುಗಳನ್ನು ಗಟ್ಟಿಯಾಗಿಟ್ಟುಕೊಂಡೇ, ಜಾಗತಿಕ ಆಗುಹೋಗುಗಳನ್ನು ಅರಿಯುವ ವಿಶಾಲವಾದ ರೆಕ್ಕೆಗಳನ್ನು ಮಕ್ಕಳಿಗೆ ನೀಡುವ ಉನ್ನತ ವ್ಯವಸ್ಥೆಯಾಗಿದೆ. ಸಣ್ಣಪುಟ್ಟ ಆಡಳಿತಾತ್ಮಕ ತೊಡಕುಗಳನ್ನು ಭೂತಗನ್ನಡಿಯಿಂದ ನೋಡಿ ಈ ಕ್ರಾಂತಿಕಾರಿ ಹೆಜ್ಜೆಯನ್ನು ವಿರೋಧಿಸುವ ಬದಲು, ಶಿಕ್ಷಕರಿಗೆ ವೃತ್ತಿಪರ ತರಬೇತಿ ನೀಡಿ, ಬೋಧನಾ ವಿಧಾನಗಳನ್ನು ಮತ್ತಷ್ಟು ಸರಳಗೊಳಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸುವುದರಲ್ಲೇ ನಾಡಿನ ಭವಿಷ್ಯ ಅಡಗಿದೆ.






