ವಿಜಯಪುರ ಜಾನುವಾರು ಮಾರುಕಟ್ಟೆಯಲ್ಲಿ ಸಂಭ್ರಮ

ವಿಜಯಪುರ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ಬಕ್ರೀದ್ಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರವಿವಾರದಂದು ಮಾರುಕಟ್ಟೆಗೆ ಗ್ರಾಹಕರು ಹಾಗೂ ವ್ಯಾಪಾರಸ್ಥರ ದಂಡೇ ಹರಿದುಬಂತು.
ನಗರದ ಎಪಿಎಂಸಿ ಮೇಕೆ, ಕುರಿ ಮತ್ತು ದನದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಅತ್ಯಂತ ಜೋರಾಗಿ ನಡೆದಿದೆ. ಈ ಬಾರಿಯ ಮಾರುಕಟ್ಟೆಯ ಪ್ರಮುಖ ಆಕರ್ಷಣೆಯೆಂದರೆ ರಾಜಸ್ಥಾನ ಮೂಲದ ಶಿರೋಯಾ, ಬಿಟಲ್ ಹಾಗೂ ಜವಾರಿ ತಳಿಯ ಮೇಕೆ. ಈ ತಳಿಯ ಮೇಕೆಗೆ ಭಾರೀ ಬೇಡಿಕೆ ಕಂಡುಬಂದಿದ್ದು, ಬರೋಬ್ಬರಿ 1.20 ಲಕ್ಷಕ್ಕೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮೇಕೆಗಳು 35 ಸಾವಿರದಿಂದ 1.20 ಲಕ್ಷ ರೂ.ಗಳವರೆಗೆ ಮಾರಾಟವಾಗುತ್ತಿವೆ. ಅದರಲ್ಲೂ ಒಂದು ವರ್ಷದ ಉತ್ತಮ ಮೇಕೆಗಳಿಗೆ 40 ಸಾವಿರದಿಂದ 1 ಲಕ್ಷ ರೂ.ಗಳವರೆಗೆ ವ್ಯಾಪಾರಸ್ಥರು ಬೇಡಿಕೆ ಇಡುತ್ತಿದ್ದಾರೆ.
ಮಾರುಕಟ್ಟೆಗೆ ಕೇವಲ ಸ್ಥಳೀಯ ತಳಿಗಳು ಮಾತ್ರವಲ್ಲದೆ ಹೊರರಾಜ್ಯ ಹಾಗೂ ಹೊರಜಿಲ್ಲೆಗಳ ವಿಭಿನ್ನ ತಳಿಗಳು ಲಗ್ಗೆ ಇಟ್ಟಿವೆ. ಮಹಾರಾಷ್ಟ್ರದ ಉಸ್ಮಾನಾಬಾದಿ, ರಾಜಸ್ಥಾನದ ಶಿರೋಯಾ, ಜಮ್ನಾವಾರಿ, ಮಲಬಾರಿ, ಬಾರ್ಬರಿ ಹಾಗೂ ಸ್ಥಳೀಯ ಜವಾರಿ ತಳಿಗಳು ಮಾರುಕಟ್ಟೆಯಲ್ಲಿ ಕಂಡುಬಂದಿವೆ.
ಬಂಟೂರು ಕುರಿ (ಟಗರು),ಯಲಗ ತಳಿ, ಬೋಯರ್, ಬೀಟಲ್ ಹಾಗೂ ಜವಾರಿ ಟಗರುಗಳು. ಇವುಗಳು 20 ಸಾವಿರ ದಿಂದ 40 ಸಾವಿರದವರೆಗೆ ಮಾರಾಟವಾಗುತ್ತಿವೆ. ಜವಾರಿ ಮೇಕೆ ತಳಿಗಳು 25 ಸಾವಿರದಿಂದ 40 ಸಾವಿರ ದರದಲ್ಲಿ ಮಾರಾಟವಾಗುತ್ತಿವೆ.
ಅಂತರ್ರಾಜ್ಯ ವ್ಯಾಪಾರಸ್ಥರ ಆಗಮನ?
ವಿಜಯಪುರದ ಈ ಮಾರುಕಟೆಗೆ ಕೇವಲ ಸ್ಥಳೀಯರಷ್ಟೇ ಅಲ್ಲದೆ, ರಾಯಬಾಗ, ಅಥಣಿ, ಚಿಕ್ಕೋಡಿ, ಜಮಖಂಡಿ, ಮುಧೋಳ, ಮಂಡ್ಯ, ಮದ್ದೂರು ಹಾಗೇ ಸೋಲಾಪುರ, ಪುಣೆ,ಮುಂಬೈ, ಕೊಲ್ಲಾಪುರ, ಹೈದರಾಬಾದ್, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿವಿಧ ಮೂಲೆಗಳಿಂದಲೂ ವ್ಯಾಪಾರಸ್ಥರು ಆಗಮಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದ ಭಾರಿ ವಹಿವಾಟು ನಡೆದಿದ್ದು, ಮೇಕೆ-ಕುರಿಗಳನ್ನು ಸಾಕಿ ತಂದಿದ್ದ ರೈತರ ಹಾಗೂ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ತೀವ್ರ ಬಿಸಿಲು, ನೀರಿನ ಅಭಾವ ಮತ್ತು ಮೇವಿನ ಕೊರತೆಯಿಂದ ಕಂಗಾಲಾಗಿದ್ದ ವಿಜಯಪುರ ಜಿಲ್ಲೆಯ ಜಾನು ವಾರು ಸಾಕಣೆದಾರರು ಹಾಗೂ ರೈತರಿಗೆ ಈ ಹಬ್ಬದ ಸೀಸನ್ ದೊಡ್ಡ ಆಸರೆಯಾಗಿದೆ. ಕಷ್ಟಪಟ್ಟು ಸಾಕಿದ ಜೀವಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರ ಕೈಯಲ್ಲಿ ಹಣ ಹರಿದಾಡುವಂತಾಗಿದ್ದು, ಗ್ರಾಮೀಣ ಆರ್ಥಿಕತೆಗೆ ಚೇತರಿಕೆ ನೀಡಿದೆ. ಮಹಾರಾಷ್ಟ್ರದ ಗಡಿ ಭಾಗದ ವ್ಯಾಪಾರಿಗಳು ಸಹ ಇಲ್ಲಿಗೆ ಲಾರಿಗಳಲ್ಲಿ ಜಾನುವಾರುಗಳನ್ನು ತಂದು ವ್ಯಾಪಾರ ನಡೆಸುತ್ತಿದ್ದಾರೆ.
ಈ ವರ್ಷ ಬಕ್ರೀದ್ ಹಬ್ಬದ ನಿಮಿತ್ತ ಹೋತದ (ಗಂಡು ಮೇಕೆ) ವ್ಯಾಪಾರ ತುಂಬಾ ಚೆನ್ನಾಗಿದೆ. ನಾವು ರಾಯಭಾಗ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಂದ ಹೋತಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಒಂದು ಹೋತಕ್ಕೆ 5 ಸಾವಿರದಿಂದ 9 ಸಾವಿರದವರೆಗೆ ಲಾಭ ಅಥವಾ ಉಳಿತಾಯವಾಗುತ್ತಿದೆ.
-ಮೈಬುಬ್ ಕಲಾದಗಿ ಕುರಿ-ಮೇಕೆ ವ್ಯಾಪಾರಸ್ಥರು, ತಿಗಣಿಬಿದರಿ
ನಾನು 80 ಸಾವಿರ ರೂ. ನೀಡಿ ಹೋತವನ್ನು ಖರೀದಿಸಿದ್ದೇನೆ. ಇದೇ ವಾರದಲ್ಲಿ ಬಕ್ರೀದ್ ಹಬ್ಬ ಇರುವುದರಿಂದ ರವಿವಾರದ ಮಾರುಕಟ್ಟೆಗೆ ಖರೀದಿಸಲು ಜನರ ಹಿಂಡೇ ಬಂದಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆಗಳು ಸ್ವಲ್ಪ ಹೆಚ್ಚಾಗಿವೆ.
-ಅಬ್ಬಾಸ್ ಬಿ. ಖರೀದಿದಾರ ವಿಜಯಪುರ ನಿವಾಸಿ
ದೊಡ್ಡ ಜಾನುವಾರು ಮಾರುಕಟ್ಟೆ
ಜಂಟಿಯಾಗಿ (ಹಲವಾರು ಜನರು ಸೇರಿ) ಕುರ್ಬಾನಿ ನೀಡಲು ದೊಡ್ಡ ಜಾನುವಾರುಗಳನ್ನು ಖರೀದಿಸುವ ಸಂಪ್ರದಾಯ ಇರುವುದರಿಂದ ದನಗಳ ಮಾರುಕಟ್ಟೆಯಲ್ಲಿ ಭಾರೀ ಜನದಟ್ಟಣೆ ಕಂಡುಬರುತ್ತಿದೆ. ಕೃಷ್ಣಾತೀರ ಹಾಗೂ ಸ್ಥಳೀಯ ಕಿಲಾರಿ ತಳಿಯ ದಷ್ಟಪುಷ್ಟ ಹೋರಿಗಳಿಗೆ ಈ ಬಾರಿ ಭಾರೀ ಬೇಡಿಕೆ ಬಂದಿದೆ. ಇವುಗಳ ಬಿಳಿ ಬಣ್ಣ, ಗಾಂಭೀರ್ಯದ ನಡಿಗೆ ಹಾಗೂ ಬಲಿಷ್ಠ ದೇಹ ಗ್ರಾಹಕರನ್ನು ಸೆಳೆಯುತ್ತಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯ ದನಗಳ ಬೆಲೆ 25,000 ರಿಂದ 60,000 ರೂ.ವರೆಗಿದೆ.
ಮೂಲಸೌಕರ್ಯದ ಕೊರತೆ :
ಹಬ್ಬದ ನಿಮಿತ್ತ ತಾತ್ಕಾಲಿಕವಾಗಿ ತೆರೆಯಲಾದ ಪ್ರಮುಖ ಮಾರುಕಟ್ಟೆಗಳಲ್ಲಿ ತೀವ್ರ ಜನದಟ್ಟಣೆ ಇದೆ. ಆದರೆ, ಜಾನುವಾರುಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಸೂಕ್ತ ನೈರ್ಮಲ್ಯದ ಕೊರತೆಯಿದೆ ಎಂದು ರೈತರು ಮತ್ತು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.






