ದ.ಕ.: ಪಡಿತರ ಚೀಟಿ ಇ-ಕೆವೈಸಿಗೆ ಅಡ್ಡಿಯಾಗುತ್ತಿರುವ ಸರ್ವರ್ ಸಮಸ್ಯೆ
ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರದಾರರ ಸಾಲು

ಮಂಗಳೂರು : ನಕಲಿ ಫಲಾನುಭವಿಗಳನ್ನು ತಡೆಯುವ ಸಲುವಾಗಿ ರಾಜ್ಯ ಸರಕಾರವು ಸೆ.30ರೊಳಗೆ ಅಂತ್ಯೋದಯ ಮತ್ತು ಬಿಪಿಎಲ್ ರೇಶನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು ಎಂದು ಕಡ್ಡಾಯಗೊಳಿಸಿ ಆದೇಶಿಸಿದ್ದು, ಅದರಂತೆ ಸೆ.1ರಿಂದ ದ.ಕ. ಜಿಲ್ಲೆಯಲ್ಲಿ ಇ-ಕೆವೈಸಿ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಚೀಟಿದಾರರು ಸಾಲುಗಟ್ಟಿ ನಿಂತಿರುವುದು ಕಂಡುಬರುತ್ತಿದೆ.
ಪಡಿತರ ಚೀಟಿಯಲ್ಲಿ ಹೆಸರು ಇರುವ ಎಲ್ಲರೂ ನ್ಯಾಯಬೆಲೆ ಅಂಗಡಿಗೆ ಹೋಗಬೇಕು. ಹಾಗೇ ಪಡಿತರ ಚೀಟಿ, ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಆಧಾರ್ಗೆ ಜೋಡಣೆಗೊಂಡ ಮೊಬೈಲ್ ಸಂಖ್ಯೆ (ಒಟಿಪಿ ಸಂಖ್ಯೆ ಪಡೆಯಲು), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಲ್ಪಿಜಿ ಗ್ಯಾಸ್ ಸಂಪರ್ಕದ ಪುಸ್ತಕವನ್ನು ಕೂಡ ಕೊಂಡು ಹೋಗಬೇಕು. ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸುವ ಉದ್ದೇಶದಿಂದ ತಮ್ಮೆಲ್ಲಾ ಕೆಲಸ ಕಾರ್ಯಬಿಟ್ಟು, ಮಕ್ಕಳು ಶಾಲೆ-ಕಾಲೇಜುಗಳಿಗೆ ರಜೆ ಹಾಕಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿದರೂ ಸರ್ವರ್ ಸಮಸ್ಯೆಯಿಂದ ದಿನವಿಡೀ ಕಾಯುವುದು ಅಥವಾ ಬರಿಗೈಯಲ್ಲಿ ಮರಳುವುದನ್ನು ಕಾಣಬಹುದಾಗಿದೆ.
ಕೆಲವು ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತೆರೆದಿದ್ದರೆ, ಇನ್ನು ಕೆಲವು ಕಡೆ ಅಪರಾಹ್ನ 3ರಿಂದ ಸಂಜೆ 5 ಅಥವಾ 6ರವರೆಗೆ ತೆರೆದಿರುತ್ತದೆ. ಆಯಾ ಪ್ರದೇಶದ ಪಡಿತರ ಚೀಟಿದಾರರು ಆ ಸಮಯಕ್ಕೆ ಹೊಂದಿಸಿಕೊಂಡು ನ್ಯಾಯಬೆಲೆ ಅಂಗಡಿಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಹೀಗೆ ಹೋದರೂ ಕೂಡ ಕ್ಲಪ್ತ ಸಮಯಕ್ಕೆ ಇ-ಕೆವೈಸಿ ಮಾಡಿಸಬಹುದು ಎಂಬ ಭರವಸೆ ಇಲ್ಲ. ಸರ್ವರ್ ಸಮಸ್ಯೆ ಕಾಡಿದರೆ ಬೆಳಗ್ಗಿನಿಂದ ಸಂಜೆಯವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯಬೇಕಿದೆ.
ರಾಜ್ಯ ಸರಕಾರವು ನ್ಯಾಯಬೆಲೆ ಅಂಗಡಿಗಳಲ್ಲೇ ಇ-ಕೆವೈಸಿ ಮಾಡಿಸಲು ಸೂಚಿಸಿದೆ. ಆದರೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಕರ್ನಾಟಕ ವನ್, ಗ್ರಾಮ ಸೇವಾ ಕೇಂದ್ರಗಳಲ್ಲಿ ಇ-ಕೆವೈಸಿ ಮಾಡಿಸಲಾಗುತ್ತದೆ ಮತ್ತು ಪಡಿತರ ಚೀಟಿದಾರರಿಂದ 200-300 ರೂ. ಪಡೆಯಲಾಗುತ್ತದೆ ಎಂಬ ಆರೋಪವಿದೆ. ಸರಕಾರ ಈ ಸೇವಾ ಕೇಂದ್ರಗಳಿಗೆ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸದಿದ್ದರೂ ಹೇಗೆ ಅದನ್ನು ಮಾಡಿಸಲಾಗುತ್ತದೆ ಎಂಬ ಪಡಿತರ ಚೀಟಿದಾರರ ಪ್ರಶ್ನೆಗೆ ಸೇವಾ ಕೇಂದ್ರದವರ ಬಳಿ ಸಮರ್ಪಕ ಉತ್ತರವಿಲ್ಲ.
ಜಿಲ್ಲೆಯಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಸಹಿತ 2,16,436 ಕಾರ್ಡ್ಗಳಿವೆ. 6,62,195 ಫಲಾನುಭವಿಗಳಿದ್ದಾರೆ. ರವಿವಾರದವರೆಗೆ 53,895 ಮಂದಿಯ ಇ-ಕೆವೈಸಿ ಆಗಿದೆ. ಇನ್ನೂ 6,08,300 ಮಂದಿಯ ಇ-ಕೆವೈಸಿ ಮಾಡಿಸಲು ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಪಿಎಲ್ ಚೀಟಿದಾರರಿಗೆ ಇ-ಕೆವೈಸಿ ಇಲ್ಲ :
ಪಡಿತರ ಅಕ್ಕಿಯ ದುರುಪಯೋಗ ತಡೆಗಟ್ಟುವ ಸಲುವಾಗಿ ಬಿಪಿಎಲ್ ಕಾರ್ಡ್ಗಳಿಗೆ ಇ-ಕೆವೈಸಿ ಮಾಡಿಸಲಾಗುತ್ತದೆ. ಹಾಗಾಗಿ ಎಪಿಎಲ್ ಚೀಟಿದಾರರಿಗೆ ಇ-ಕೆವೈಸಿ ಮಾಡಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿಯೇ ಇ-ಕೆವೈಸಿ ಮಾಡಿಸ ಬೇಕು. ಕರ್ನಾಟಕ ವನ್ ಮತ್ತಿತರ ಸೇವಾ ಕೇಂದ್ರಗಳಿಗೆ ಪಡಿತರ ಚೀಟಿ ಇ-ಕೆವೈಸಿಗೆ ಅವಕಾಶ ಕಲ್ಪಿಸಿ ಇಲಾಖೆ ಯಾವುದೇ ಸೂಚನೆ ನೀಡಿಲ್ಲ. ಈ ಸೇವಾ ಕೇಂದ್ರಗಳು ಪಡಿತರ ಇ-ಕೆವೈಸಿ ಮಾಡಿಸುತ್ತಿರುವ ಬಗ್ಗೆ ದೂರುಗಳು ಬಂದರೆ ಕ್ರಮ ಜರುಗಿಸಲಾಗುವುದು. ಸೆ.30ರೊಳಗೆ ಎಲ್ಲರೂ ಇ-ಕೆವೈಸಿ ಮಾಡಿಸಿ ಸಹಕರಿಸಬೇಕು.
-ಹೇಮಲತಾ, ಉಪನಿರ್ದೇಶಕಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ- ದ.ಕ.ಜಿಲ್ಲೆ
ಜಿಲ್ಲೆಯ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಇದೆ. ಇದರಿಂದ ಸಕಾಲಕ್ಕೆ ಇ-ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಕಡೆ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಚೀಟಿದಾರರು ಬೆಳಗ್ಗಿನಿಂದ ಸಂಜೆಯವರೆಗೆ ಸಾಲುಗಟ್ಟಿ ನಿಂತಿರುತ್ತಾರೆ. ಸರ್ವರ್ ಸಮಸ್ಯೆಗೆ ಪರಿಹಾರ ಸಿಕ್ಕರೆ ಇ-ಕೆವೈಸಿ ಪ್ರಕ್ರಿಯೆ ಸುಲಭವಾಗಲಿದೆ. ಸೆ.15ರ ಬಳಿಕ ಪಡಿತರ ಅಕ್ಕಿ ವಿತರಿಸಬೇಕಾಗುತ್ತದೆ. ಸರ್ವರ್ ಸಮಸ್ಯೆಯಿಂದ ಅಕ್ಕಿ ವಿತರಣೆ ಮತ್ತು ಇ-ಕೆವೈಸಿ ಪ್ರಕ್ರಿಯೆಯನ್ನು ಏಕಕಾಲದಲ್ಲಿ ಮಾಡಿಸಲು ಕಷ್ಟವಾಗಬಹುದು. ಹಾಗಾಗಿ ಸೆ.15ರೊಳಗೆ ಇ-ಕೆವೈಸಿ ಮಾಡಿಸುವುದು ಅನಿವಾರ್ಯವಾಗಿದೆ. ಸಮಯದ ಮಿತಿಯಿಲ್ಲದೆ ನಾವು ಇ-ಕೆವೈಸಿ ಮಾಡಿಸುತ್ತಿದ್ದೇವೆ. ಅದಕ್ಕಾಗಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ.
-ಫೈರೋಝ್ ಡಿ.ಎಂ. ಉಳ್ಳಾಲ, ಸಂಚಾಲಕರು, ದ.ಕ. ಜಿಲ್ಲಾ ಪಡಿತರ, ವಿತರಕರ ಸಂಘ
ಕೆವೈಸಿಗೆ ಅಗತ್ಯ ದಾಖಲೆಗಳು :
► ಪಡಿತರ ಚೀಟಿ
► ಎಲ್ಲ ಸದಸ್ಯರ ಆಧಾರ್ ಕಾರ್ಡ್
► ಆಧಾರ್ ಲಿಂಕ್ ಆಗಿರುವ ಮೊಬೈಲ್
► ಜಾತಿ ಪ್ರಮಾಣ ಪತ್ರ
► ಎಲ್ಪಿಜಿ ಗ್ಯಾಸ್ ಸಂಪರ್ಕದ ಪುಸ್ತಕ
ನ್ಯಾಯಬೆಲೆ ಅಂಗಡಿಗಳಲ್ಲಿಮಾತ್ರ ಇ-ಕೆವೈಸಿ ಮಾಡಿಸಬೇಕು ಎಂದು ಸರಕಾರ ಹೇಳುತ್ತಿದೆ. ಆದರೆ ಕೆಲವು ‘ಕರ್ನಾಟಕ ವನ್’ ಕೇಂದ್ರಗಳಲ್ಲಿ ಪಡಿತರ ಚೀಟಿ ಇ-ಕೆವೈಸಿ ಸಾಧ್ಯವಾಗುತ್ತಿದೆ. ಇಂತಹ ಕೇಂದ್ರಗಳಲ್ಲಿ ನಾಲ್ಕು ಮಂದಿಯ ಇ-ಕೆವೈಸಿ ಮಾಡಿಸಲು 500 ರೂ. ಕೇಳುತ್ತಾರೆ. ಈ ಬಗ್ಗೆ ವಿವರಿಸಿದರೆ ‘ನಿಮಗೆ ಹೊಸ ಪಡಿತರ ಚೀಟಿ ಸಿಗಲಿದ್ದು, ಅದಕ್ಕೆ 300 ರೂ. ಪಾವತಿಸಬೇಕಿದೆ. ಉಳಿದಂತೆ ನಮ್ಮ ಶುಲ್ಕ’ ಎಂದು ಹೇಳುತ್ತಾರೆ. ನಮ್ಮಂತಹ ಜನಸಾಮಾನ್ಯರು ನ್ಯಾಯಬೆಲೆ ಅಂಗಡಿಗಳ ಎದುರು ದಿನವಿಡೀ ನಿಂತು ಬಸವಳಿದರೂ ‘ಸರ್ವರ್ ಬ್ಯುಸಿ’ ಕಾರಣಕ್ಕೆ ಇ-ಕೆವೈಸಿ ಸಾಧ್ಯವಾಗುತ್ತಿಲ್ಲ. ಆದರೆ ಹಣವಿದ್ದವರಿಗೆ ‘ಕರ್ನಾಟಕ ವನ್’ನಲ್ಲಿ ಕೆಲವೇ ಕ್ಷಣಗಳಲ್ಲಿ ಇದು ಸಾಧ್ಯವಾಗುತ್ತದೆ. ಇದ್ಯಾವ ನ್ಯಾಯ?.
-ಲೋಕೇಶ್, ವಿಟ್ಲ






