ಕಲಬುರಗಿಯಲ್ಲಿ ವಾಸ್ತವ್ಯ ಹೂಡಿದ್ದ ಮಹಾತ್ಮಾ ಗಾಂಧೀಜಿ | ಕಲಬುರಗಿಯಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಆಗ್ರಹ

ಕಲಬುರಗಿ: ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಲಬುರಗಿ ನಗರಕ್ಕೆ ಆಗಮಿಸಿ ಒಂದು ರಾತ್ರಿ ವಾಸ್ತವ್ಯ ಹೂಡಿದ್ದರು. ಇದು ಸವಿನೆನಪಾಗಿ ಉಳಿದಿದೆ. ಆದರೆ ಇಂದಿಗೂ ಗಾಂಧಿ ಭವನ ನಿರ್ಮಿಸದಿರುವುದು ಶೋಚನೀಯ ಸಂಗತಿ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
1927ರಲ್ಲಿ ಕಲಬುರಗಿಯಲ್ಲಿ ಕೋಮು ಗಲಭೆ ಸಂಭವಿಸಿದ ಹಿನ್ನೆಲೆಯಲ್ಲಿ 1927 ಫೆಬ್ರವರಿ ತಿಂಗಳ ಕೊನೆಯಲ್ಲಿ ಅನಿರೀಕ್ಷಿತವಾಗಿ ಆಮಿಸಿದ ಗಾಂಧೀಜಿ ನೂತನ ವಿದ್ಯಾಲಯದ ಆವರಣದ ಮರದ ಕೇಳಗೆ ಕುಳಿತು ಜನರೊಟ್ಟಿ ಸಮಾಲೋಚನೆ ನಡೆಸಿ, ಸಂದೇಶ ನೀಡಿದ್ದರು. ಶರಣಬಸವೇಶ್ವರರ ದೇವಸ್ಥಾನ ಸೇರಿ ಹಲವು ಸಭೆಗಳಲ್ಲಿ ಭಾಗವಹಿಸಿ ರಾತ್ರಿ ಕಲಬುರಗಿಯಲ್ಲೇ ವಾಸ್ತವ್ಯ ಹೂಡಿ, ಬೆಳಗ್ಗೆ ಎದ್ದು ಮುಂದಿನ ಪ್ರವಾಸಕ್ಕೆ ತೆರಳಿದರು ಎಂದು ಎನ್.ವಿ.ಸಂಸ್ಥೆಯ ಆಡಳಿತ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನೂತನ ವಿದ್ಯಾಲಯ ಕನ್ಯಾ ಶಾಲೆಯ ಆವರಣದ ಮರದ ಕೆಳಗೆ ಗಾಂಧಿ ಕುಂತು ಹೋಗಿರುವ ನೆನಪಿಗಾಗಿ 2 ಅಕ್ಟೋಬರ್ 2023ರಲ್ಲಿ ಎನ್.ವಿ.ಸಂಸ್ಥೆ ಗಾಂಧಿ ಪ್ರತಿಮೆ ಸ್ಥಾಪಿಸಿದೆ.
ಕೆಲವು ವರ್ಷಗಳ ಹಿಂದೆ ಕಲಬುರಗಿ ನಗರದಲ್ಲಿ ಗಾಂಧಿ ಭವನ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿತ್ತು. ಇದಕ್ಕಾಗಿ ಸ್ಥಳ ಸಹ ಗುರುತಿಸಲಾಗಿತು. ಗಾಂಧಿ ಭವನ ನಿರ್ಮಾಣದ ಬೇಡಿಕೆ ಜಿಲ್ಲಾಡಳಿತಕ್ಕೆ ಈ ಹಿಂದೆ ಕಳುಹಿದೆವು ನಮ್ಮಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ ಎಂದು ಸಹಾಯಕ ಆಯುಕ್ತರ ಕಚೇರಿಯ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಜಿಲ್ಲಾಡಳಿತ ಮಟ್ಟದಲ್ಲಿ ಯಾವುದೇ ಪ್ರಸ್ತಾವ, ಬೇಡಿಕೆ, ಮನವಿ ಇಲ್ಲ ಎಂಬುದು ತಿಳಿದುಬಂದಿದೆ.
ಗಾಂಧಿ ಭವನ ನಿರ್ಮಾಣಕ್ಕೆ ಆಗ್ರಹ: ಭಾರತದ ಬೇರೆ ಬೇರೆ ಕಡೆಗಳೇಲ್ಲ ಗಾಂಧಿ ಭವನಗಳು ಇವೆ. ಕಲಬುರಗಿ ಬೌದ್ಧ, ಬಸವ, ಅಂಬೇಡ್ಕರ್ ಹಾಗೂ ಸೂಫಿ ಪರಂಪರೆಯ ನಾಡು. ಗಾಂಧಿ ಭವನ ನಿರ್ಮಾಣದಿಂದ ಜಾತಿ, ಮತ, ಭಾಷೆಗಳ ಗಡಿಗಳ ಮೀರಿ ಮಾನವೀಯತೆಯ ವೇದಿಕೆಯಿಂದ ಜನರ ನಡುವೆ ಸಂವಾದ ಹುಟ್ಟುಹಾಕುವ ಕೇಂದ್ರವಾಗುತ್ತದೆ. ನಮ್ಮ ಮಕ್ಕಳಿಗೆ ಗಾಂಧಿ ಜೀವನದ ಕಥೆಗಳು, ವಿದ್ಯಾರ್ಥಿಗಳಿಗೆ ಸತ್ಯಾಗ್ರಹದ ಅಧ್ಯಯನ, ಗ್ರಾಮೀಣ ಯುವಕರಿಗೆ ಖಾದಿ-ಕೈಗಾರಿಕೆ ತರಬೇತಿ ಮತ್ತು ಸತ್ಯ, ಶಾಂತಿ, ಸಹಿಷ್ಣುತೆ, ಸ್ವಾವಲಂಬನೆ ಚಿಂತನೆ, ಅಹಿಂಸಾತ್ಮಕ ಅನುಭವ, ಗಾಂಧಿ ತತ್ವ, ಸಿದ್ಧಾಂತಗಳ ಪಾಠ ಮತ್ತು ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸುವ ಚಿಂತನೆ ಹೆಚ್ಚುತ್ತದೆ. ಇದಕ್ಕಾಗಿ ಸರಕಾರ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳು ಕೈ ಜೋಡಿಸುವ ಅಗತ್ಯವಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ವಿಕ್ರಮ್ ವಿಸಾಜಿ ಇಂಗಿತ ವ್ಯಕ್ತಪಡಿಸಿದ್ದಾರೆ.
ಮಹಾತ್ಮಾ ಗಾಂಧಿ ಎಲ್ಲರಿಗೂ ಬೇಕು. ಅದಕ್ಕಾಗಿ ಕಲಬುರಗಿ ನಗರದಲ್ಲಿ ತುರ್ತಾಗಿ ಗಾಂಧಿ ಭವನ ನಿರ್ಮಾಣ ಆಗಬೇಕು. ವಿಚಾರ ಸಂಕೀರ್ಣ, ಗ್ರಂಥಾಲಯ, ಚಿತ್ರಕಲಾ ಪ್ರದರ್ಶನ ಸಹಿತ ಎಲ್ಲ ರೀತಿಯ ಸೌಕರ್ಯಗಳು ಹೊಂದಿರುವ ಸುಸಜ್ಜಿತವಾದ ಗಾಂಧಿ ಭವನ ಜಿಲ್ಲೆಯಲ್ಲಿ ನಿರ್ಮಿಸಬೇಕು.
-ಪ್ರೊ.ಆರ್.ಕೆ.ಹುಡಗಿ, ಹಿರಿಯ ಸಾಹಿತಿ ಕಲಬುರಗಿ
12 ವರ್ಷಗಳ ಹಿಂದೆ ಎಚ್.ಕೆ.ಇ ಸೊಸೈಟಿಯಿಂದ ಗಾಂಧಿ ಭವನದ ಕಟ್ಟಡಕ್ಕಾಗಿ ಚರ್ಚೆನಡೆದಿತ್ತು. ಸಂಸ್ಥೆಗೆ ಪ್ರಸ್ತಾವ ಸಲ್ಲಿಸದ ಕಾರಣಕ್ಕೆ ಅದನ್ನು ಕೈಬಿಡಲಾಯಿತು.
-ಶಶೀಲ್ ಜಿ.ನಮೋಶಿ, ಎಚ್.ಕೆ.ಇ ಸೊಸೈಟಿ, ವಿಧಾನ ಪರಿಷತ್ ಸದಸ್ಯ
ಕಲಬುರಗಿಯಲ್ಲಿ ಗಾಂಧಿ ಭವನ ನಿರ್ಮಿಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಬೇಡಿಕೆ, ಪ್ರಸ್ತಾವ ಬಂದರೆ ಈ ಬಗ್ಗೆ ಚರ್ಚಿಸುವೆ.
- ಡಾ.ಅಜಯ ಸಿಂಗ್, ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಲಬುರಗಿ
ಗಾಂಧಿ ಭವನ ನಿರ್ಮಿಸುವ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಹಿಂದೆ ಸ್ಥಳ ಗುರುತಿಸಿರುವ ಬಗ್ಗೆ ಗೊತ್ತಿಲ್ಲ. ತಹಶೀಲ್ದಾರರ ಮೂಲಕ ಮಾಹಿತಿ ಪಡೆಯಲಾಗುವುದು.
-ರಾಯಪ್ಪಹುಣಸಗಿ, ಅಪರ ಜಿಲ್ಲಾಧಿಕಾರಿ







