ಹದಗೆಟ್ಟ ಬೆಲ್ದಾಳ್-ಚಿಂತಾಕಿ ರಸ್ತೆ: ಅಪಾಯದ ಭೀತಿಯಲ್ಲೇ ಪ್ರಯಾಣ

ಔರಾದ್: ಬೆಲ್ದಾಳ್ ಗ್ರಾಮದಿಂದ ಚಿಂತಾಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರ ದುಸ್ತರವಾಗಿದೆ. ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ಬಿದ್ದಿರುವುದರಿಂದ ಪ್ರಯಾಣಿಕರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ.
ಔರಾದ್ ತಾಲೂಕಿನ ಬೆಲ್ದಾಳ್ ಗ್ರಾಮದಿಂದ ಚಿಂತಾಕಿ ಗ್ರಾಮಕ್ಕೆ ಸಾಗುವ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸಾರಿಗೆ ಇಲಾಖೆಯ ಬಸ್ಸುಗಳು ಸೇರಿದಂತೆ ನೂರಾರು ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದರೆ ರಸ್ತೆ ದುಸ್ಥಿತಿಯಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ತುಂಬಿಕೊಂಡಿದೆ ಮಾತ್ರವಲ್ಲ, ರಸ್ತೆ ಬದಿಯಲ್ಲಿ ಜಾಲಿಗಿಡಗಳು ಬೆಳೆದಿರುವುದರಿಂದ ತಿರುವಿನಲ್ಲಿ ಎದುರುಬರುವ ವಾಹನಗಳು ಕಾಣಿಸದೇ ಅಪಘಾತದ ಭೀತಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ಹದಗೆಟ್ಟ ಪರಿಣಾಮ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಿಕ್ಷಣ ಸಂಸ್ಥೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಕೇವಲ ನಾಲ್ಕು ಕಿಲೋಮೀಟರ್ ರಸ್ತೆ ಕ್ರಮಿಸಲು ಸುಮಾರು ಅರ್ಧ ಗಂಟೆ ಸಮಯ ವ್ಯಯವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ರಸ್ತೆಯಲ್ಲಿ ಬೈಕ್ ಸವಾರರ ಸಂಚಾರ ಮತ್ತಷ್ಟು ಅಪಾಯಕಾರಿಯಾಗಿದೆ. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಯಾವ ಕ್ಷಣದಲ್ಲಾದರೂ ಬೈಕ್ ನಿಯಂತ್ರಣ ತಪ್ಪುವ ಭೀತಿ ಎದುರಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ರಸ್ತೆ ದುಸ್ಥಿತಿಯಿಂದ ಅಪಘಾತ ಸಂಭವಿಸಿದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೋದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ರಸ್ತೆ ಹಾಳಾಗಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದಿದ್ದೇವೆ. ರಸ್ತೆ ಅಭಿವೃದ್ಧಿಗೆ ಸುಮಾರು 10 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜು ಪತ್ರ ಸಲ್ಲಿಸಲಾಗಿದೆ. ಈ ವರ್ಷ ಮಂಜೂರಾತಿ ದೊರೆಯುವ ನಿರೀಕ್ಷೆಯಿದೆ.
-ಕಿರಣ್ ಅವಲಕೊಂಡೆ,
ಎಇಇ, ಲೋಕೋಪಯೋಗಿ ಇಲಾಖೆ
ಬೆಲ್ದಾಳ್ ಗ್ರಾಮದಿಂದ ಚಿಂತಾಕಿಗೆ ಪ್ರಯಾಣಿಸಲು ಬಹಳ ಕಷ್ಟವಾಗುತ್ತಿದೆ. ಚಿಂತಾಕಿ ಹೋಬಳಿ ಕೇಂದ್ರವಾಗಿದ್ದು, ಅನಾರೋಗ್ಯದ ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಲು ಹಾಗೂ ಗ್ರಾಮ ಪಂಚಾಯಿತಿಗೆ ಕೆಲಸದ ನಿಮಿತ್ತ ತೆರಳಲು ತೊಂದರೆಯಾಗುತ್ತಿದೆ. ನಾಲ್ಕು ಕಿಲೋಮೀಟರ್ ದೂರಕ್ಕೆ ಬೇರೆ ಮಾರ್ಗವಾಗಿ ಎಂಟು ಕಿಲೋಮೀಟರ್ ಸುತ್ತಿ ಹೋಗಬೇಕಾಗಿದೆ. ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
- ಮೋಗಲಪ್ಪಾ ಮೇತ್ರೆ,
ಬೆಲ್ದಾಳ್ ಗ್ರಾಮದ ನಿವಾಸಿ
ಗಡಿ ಭಾಗದಲ್ಲಿ ಸಮರ್ಪಕ ರಸ್ತೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗುತ್ತಿಲ್ಲ. ಶಾಲೆ-ಕಾಲೇಜುಗಳಿಗೆ ಹೋಗುವುದಕ್ಕೂ ತಡವಾಗುತ್ತಿದೆ. ಇದರಿಂದ ಕೆಲ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು.
- ಕಿರಣ್ ಅವಲಕೊಂಡೆ,
ಚಿಂತಾಕಿ ಗ್ರಾಮಸ್ಥ






