ದೇವದುರ್ಗ: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಇಲ್ಲವೇ?

ದೇವದುರ್ಗ: ರಾಯಚೂರಿನ ಅಕ್ರಮ ಮರಳು ದಂಧೆ ಗಲಾಟೆ ರಾಜ್ಯಮಟ್ಟದಲ್ಲಿ ಗಮನ ಸೆಳೆದ ಬೆನ್ನಲ್ಲೇ, ಕಡಿಮೆಯಾಗಿದ್ದ ಅಕ್ರಮ ಮರಳು ಸಾಗಾಟ ಇದೀಗ ಮತ್ತೆ ತೀವ್ರಗೊಂಡಿದೆ.
ದೇವದುರ್ಗ ತಾಲೂಕಿನಲ್ಲಿ ಕೆಲವು ರಾಜಕೀಯ ಸಂಪರ್ಕ ಇರುವ ಪುಢಾರಿಗಳು, ಹಾಗೂ ಪೊಲೀಸರಿಗೆ ಹಫ್ತಾ ನೀಡುವ ಟಿಪ್ಪರ್ ಮಾಲಕರಿಗೆ ಆರಾಮವಾಗಿ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಟ್ರ್ಯಾಕ್ಟರ್ಗಳಲ್ಲಿ ಮರಳುಗಾರಿಕೆ ಮಾಡಬೇಕಿದ್ದರೂ, ‘ಕೆಲವು ನಿರ್ದಿಷ್ಟ ಪೊಲೀಸ್ ಸಿಬ್ಬಂದಿ’ಗೆ ಮಾಮೂಲು ಕೊಡಬೇಕಿದೆ ಎಂದು ಇಲ್ಲಿನ ಟ್ರ್ಯಾಕ್ಟರ್ ಮಾಲಕರು ಮಾತನಾಡುತ್ತಿದ್ದಾರೆ. ಅಲ್ಲದೆ, ಪೊಲೀಸ್ ಸಿಬ್ಬಂದಿಗೆ ಮಾಮೂಲು ನೀಡಬೇಕಿರುವುದರಿಂದ 1500 ರೂ.ಗಳಿದ್ದ ಒಂದು ಟ್ರ್ಯಾಕ್ಟರ್ ಮರಳು ಬೆಲೆ ಇದೀಗ 5 ಸಾವಿರದವರೆಗೂ, ಕೆಲವು ಕಡೆಗಳಲ್ಲಿ 7 ಸಾವಿರದವರೆಗೂ ಹೆಚ್ಚಿಸಲಾಗಿದೆ ಎಂದು ಮನೆ ಕಟ್ಟಲು ಮರಳು ಖರೀದಿಸಿ ಮಾಡಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಮರಳು ಸಾಗಣೆಗೆ ಟೆಂಡರ್ ಪ್ರಕ್ರಿಯೆ ಮುಗಿದು ಏಳು ತಿಂಗಳು ಕಳೆದರೂ ಸಕ್ರಮ ಸಾಗಾಟಕ್ಕೆ ಅಧಿಕೃತ ಚಾಲನೆ ದೊರೆಯದ ಕಾರಣ, ಸಾರ್ವಜನಿಕರು ಅಕ್ರಮ ಮರಳು ಸಾಗಾಟಗಾರರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ತಾಲೂಕಿನಲ್ಲಿ ಸೃಷ್ಟಿಯಾಗಿದೆ.
ಟೆಂಡರ್ ಪಡೆದವರಲ್ಲಿ ಕೆಲವು ‘ಅಧಿಕಾರಸ್ಥರು’ ಹಫ್ತಾ ಕೇಳುತ್ತಿರುವುದಾಗಿಯೂ, ಅಧಿಕೃತವಾಗಿ ಟೆಂಡರ್ ಪಡೆದ ಮೇಲೆ ‘ಹಪ್ತಾ’ ಏನಕ್ಕೆ ನೀಡಬೇಕೆಂದು ಟೆಂಡರ್ ಪಡೆದವರು ನಿರಾಕರಿಸಿದ್ದರಿಂದ ಟೆಂಡರ್ ಪಡೆದರೂ ಮರಳುಗಾರಿಕೆಗೆ ಅನುಮತಿ ದೊರೆತಿಲ್ಲ ಎಂಬ ಗಾಳಿಮಾತುಗಳು ನದಿ ಕಿನಾರೆಯಲ್ಲಿ ಕೇಳಿ ಬರುತ್ತಿದೆ.
ಈ ನಡುವೆ, ಕೆಲವು ಅಕ್ರಮ ಮರಳು ಸಾಗಾಟಗಾರರನ್ನು ಹಿಡಿಯಲು ಪೊಲೀಸರು ಮದ್ಯರಾತ್ರಿ ಬೆನ್ನತ್ತುವ ವೇಳೆ ಹೊಲಗಳಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ರೈತರು ದೂರಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದ ಇಲ್ಲಿನ ಬಡ ಜನತೆ ಕಂಗಾಲಾಗಿದ್ದು, ನಿಯಬದ್ಧವಾಗಿ ಮರಳುಗಾರಿಕೆ ನಡೆಸಿ, ಸಾಮಾನ್ಯ ಜನರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ.
ಮುಖ್ಯಾಂಶಗಳು :
► ಮರಳು ಸಾಗಣೆಗೆ ಟೆಂಡರ್ ಪ್ರಕ್ರಿಯೆ ಮುಗಿದು 7 ತಿಂಗಳು ಕಳೆದರೂ ಅನುಮತಿ ಸಿಗದೆ ಅಕ್ರಮ ಸಾಗಾಟ ಹೆಚ್ಚಳ
► ಕೆಲ ಪೊಲೀಸ್ ಸಿಬ್ಬಂದಿ ಪಿಐ ಹೆಸರು ಹೇಳಿ ಕೊಂಡು ಮರಳು ಟ್ರ್ಯಾಕ್ಟರ್ ಮಾಲಕರಿಗೆ ಕಿರುಕುಳ ನೀಡುತ್ತಿರುವ ಆರೋಪ
► ಬಡ ಕುಟುಂಬಗಳಿಗೆ ಮನೆ ಕಟ್ಟಲು ಮರಳು ಸಿಗದೆ ಸಂಕಷ್ಟ
ಮರಳು ಕೊರತೆಯಿಂದ ಬಡವರಿಗೆ ತೊಂದರೆ :
ತಾಲೂಕಿನಲ್ಲಿ ಇರುವ ಖನಿಜ ಸಂಪತ್ತಾದ ಮರಳು ಸ್ಥಳೀಯರಿಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೆ ಕಟ್ಟಲು ಬಡ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಒಂದು ಟಿಪ್ಪರ್ ಮರಳಿಗೆ 50 ಸಾವಿರ ರೂ. ವರೆಗೆ ಕೇಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸ್ಥಳೀಯರಿಗೆ ಮರಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಯೋಜನೆ ಸದಸ್ಯ ರಾಮಣ್ಣ ನಾಯಕ್ ಒತ್ತಾಯಿಸಿದ್ದಾರೆ.






