ಕೊಡಗಿನ ಪ್ರಥಮ ರಾಷ್ಟ್ರಮಟ್ಟದ ಫುಟ್ಬಾಲ್ ತೀರ್ಪುಗಾರನಾಗಿ ಧೀರಜ್ ರೈ

ಮಡಿಕೇರಿ: ಕ್ರೀಡಾ ತವರೂರು ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಸಿದ್ದಾಪುರದ 26 ವರ್ಷದ ಯುವಕ ಧೀರಜ್ ರೈ ಶ್ರೀನಿವಾಸ್ ಆಯ್ಕೆಯಾಗುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರ ಪರೀಕ್ಷೆಗೆ ಅರ್ಹತೆ ಪಡೆದ ಬಳಿಕ ಸತತ ಮೂರು ವರ್ಷಗಳ ಕಠಿಣ ಪರಿಶ್ರಮದಿಂದ ಧೀರಜ್ ರೈ ಶ್ರೀನಿವಾಸ್ ರಾಷ್ಟ್ರ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ತನ್ನ 19ನೇ ವಷದಿಂದ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಧೀರಜ್ ರೈ ಕಳೆದ ಏಳು ವರ್ಷಗಳಿಂದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಮಾನ್ಯವಾಗಿ ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲೇ ಅತೀ ಹೆಚ್ಚು ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಮತ್ತು ಧಾರವಾಡ ಜಿಲ್ಲೆಯ ಇಬ್ಬರು ರಾಷ್ಟ್ರ ಮಟ್ಟದ ಅಸಿಸ್ಟೆಂಟ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದರು. ಆದರೆ ಬೆಂಗಳೂರು ಜಿಲ್ಲೆಯ ನಂತರ ಮೊಟ್ಟ ಮೊದಲ ಫುಟ್ಬಾಲ್ ರೆಫ್ರಿ ಎಂಬ ಹೆಗ್ಗಳಿಕೆ ಕೊಡಗಿನ ಧೀರಜ್ ರೈ ಶ್ರೀನಿವಾಸ್ ಪಾತ್ರರಾಗಿದ್ದಾರೆ.
ಧೀರಜ್ ರೈ ಅವರು 2019ರಿಂದಲೇ ರಾಜ್ಯ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ. ಅದಲ್ಲದೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಡರ್ 17 ಐ-ಲೀಗ್, ಜೈಪುರದಲ್ಲಿ ನಡೆದ ಖೇಲೋ ಇಂಡಿಯಾ, ಯೂನಿವರ್ಸಿಟಿ ಪಂದ್ಯಾವಳಿ ಹಾಗೆಯೇ ರಾಜ್ಯ ಫುಟ್ಬಾಲ್ ಸಂಸ್ಥೆಯ ಮಹಿಳೆಯರ ಸೂಪರ್ ಡಿವಿಷನ್, ಸಿ ಡಿವಿಷನ್, ಬೇಬಿ ಲೀಗ್ ಸೇರಿ ಹಲವು ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿ ಸಣ್ಣ ಪ್ರಾಯದಲ್ಲೇ ಉತ್ತಮ ತೀರ್ಪುಗಾರ ಎಂಬ ಹೆಸರುಗಳಿಸಿದ್ದಾರೆ.
ಪ್ರತೀ ವರ್ಷ ಫುಟ್ಬಾಲ್ ಆಟದ ನಿಯಮಗಳಲ್ಲಿ ಬದಲಾವಣೆ ಮಾಡುವ ಫಿಫಾ ನಿಯಮಗಳ ಬಗ್ಗೆ ಅರಿವು ಹೊಂದಿರುವ ಧೀರಜ್ ರೈ, ಇಂದಿನ ಯುವ ತೀರ್ಪುಗಾರರಿಗೆ ಮಾದರಿಯಾಗಿದ್ದಾರೆ.
ಫುಟ್ಬಾಲ್ ರೆಫ್ರಿಗೂ ಸೈ, ಆಟಕ್ಕೂ ಸೈ: ಧೀರಜ್ ರೈ ಕೇವಲ ಫುಟ್ಬಾಲ್ ರೆಫ್ರಿಗೆ ಮಾತ್ರ ಸೀಮಿತಗೊಂಡವರಲ್ಲ. ಉತ್ತಮ ಫುಟ್ಬಾಲ್ ಪಟು. ನಾಲ್ಕು ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಫುಟ್ಬಾಲ್ ತಂಡವನ್ನು ಧೀರಜ್ ರೈ ಪ್ರತಿನಿಧಿಸಿದ್ದಾರೆ. ಒಂದು ಬಾರಿ ಮಂಗಳೂರು ವಿಶ್ವ ವಿದ್ಯಾನಿಲಯದ ಫುಟ್ಬಾಲ್ ನಾಯಕ ಸ್ಥಾನವನ್ನೂ ವಹಿಸಿಕೊಂಡಿದ್ದರು.
ಮೂಲತಃ ಪಾಲಿಬೆಟ್ಟ ನಿವಾಸಿ ದಿ.ಶ್ರೀನಿವಾಸ್ ಹಾಗೂ ದೇವಕಿ(ದುಗ್ಗು) ಅವರ ಎರಡನೇ ಪುತ್ರನಾಗಿರುವ ಧೀರಜ್ ರೈ ಪ್ರೌಢ ಶಾಲೆ ಮತ್ತು ಕಾಲೇಜು ಮಟ್ಟದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಧೀರಜ್ ರೈ ಅವರು ತನ್ನ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಮೂಲಕ ಕೊಡಗು ಜಿಲ್ಲೆಯ ಪ್ರಥಮ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಇತರ ಕ್ರೀಡಾ ತೀರ್ಪುಗಾರರಂತೆ ಫುಟ್ಬಾಲ್ ತೀರ್ಪುಗಾರಿಕೆಯಲ್ಲಿ ರಾಷ್ಟ್ರ ಮಟ್ಟದ ಫುಟ್ಬಾಲ್ ರೆಫ್ರಿಯಾಗಿ ಆಗುವುದು ಕಠಿಣ ಹಾದಿ. ಫಿಫಾ ನಿಯಮಗಳಿಗೆ ಬದ್ಧರಾಗಿ ತೀರ್ಪುಗಾರಿಕೆ ನೀಡಿದರೆ ಮಾತ್ರ ರಾಷ್ಟ್ರ ಮಟ್ಟದ ತೀರ್ಪುಗಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ. ಧೀರಜ್ ರೈ ಎಲ್ಲರಿಗೂ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಫಿಫಾ ರೆಫ್ರಿಯಾಗಿ ಆಯ್ಕೆಯಾಗಲಿ ಎಂದು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಪರವಾಗಿ ಹಾರೈಸುತ್ತಿದ್ದೇನೆ.
-ಪಿ.ಎ.ನಾಗೇಶ್(ಈಶ್ವರ್), ಕಾರ್ಯದರ್ಶಿ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್
2019ರಿಂದ ನಾನು ಫುಟ್ಬಾಲ್ ತೀರ್ಪುಗಾರಿಕೆಗೆ ಆರಂಭಿಸಿದ್ದೆ. ಡಿವೈಇಎಸ್ ಫುಟ್ಬಾಲ್ ಕೋಚ್ ಹಾಗೂ ನನ್ನ ಕೋಚ್ ಕೂಡ ಆಗಿದ್ದ ಕೃಷ್ಣ ಅವರು ನನಗೆ ಫುಟ್ಬಾಲ್ ರೆಫ್ರಿ ಬಗ್ಗೆ ಹೇಳಿಕೊಟ್ಟಿದ್ದರು.ಅಲ್ಲಿಂದೀಚೆಗೆ ನನಗೆ ರೆಫ್ರಿ ಬಗ್ಗೆ ಆಸಕ್ತಿ ಮೂಡಿತ್ತು. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ತೀರ್ಪುಗಾರ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದೆ. ಇದೀಗ ಬೆಂಗಳೂರು ಜಿಲ್ಲೆ ಹೊರತುಪಡಿಸಿ ರಾಜ್ಯದ ಪ್ರಥಮ ಮುಖ್ಯ ಫುಟ್ಬಾಲ್ ರೆಫ್ರಿಯಾಗಿ ಆಯ್ಕೆಯಾಗಿದ್ದೇನೆ. ಕೊಡಗಿನಲ್ಲಿ ಅಶ್ವಥ್ ಸರ್ ಅವರ ಸಹಕಾರದಿಂದ ಫುಟ್ಬಾಲ್ ತೀರ್ಪುಗಾರಿಕೆ ಆರಂಭಿಸಿದ್ದೆ. ಕೊಡಗು ಫುಟ್ಬಾಲ್ ಅಸೋಸಿಯೇಷನ್ ಸರ್ವ ಪದಾಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ನನ್ನ ಕುಟುಂಬಸ್ಥರು, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ಸಮಿತಿ, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ದರ್ಶನ್ ಸುಕುಮಾರ್, ಇಸ್ಮಾಯಿಲ್ ಕಂಡಕರೆ ಸೇರಿ ಎಲ್ಲರ ಬೆಂಬಲದಿಂದ ನಾನು ರಾಷ್ಟ್ರಮಟ್ಟದ ಫುಟ್ಬಾಲ್ ತೀರ್ಪುಗಾರನಾಗಿ ಆಯ್ಕೆಯಾಗಲು ಸಾಧ್ಯವಾಯಿತು.
-ಧೀರಜ್ ರೈ ಶ್ರೀನಿವಾಸ್, ರಾಷ್ಟ್ರ ಮಟ್ಟದ ಫುಟ್ಬಾಲ್ ತೀರ್ಪುಗಾರ







