ಅನೈತಿಕ ಚಟುವಟಿಕೆಗಳ ತಾಣವಾದ ಡಾ.ಜಗಜೀವನರಾಮ್ ಭವನ: ಗ್ರಾಮಸ್ಥರ ಆರೋಪ

ಶಿಡ್ಲಘಟ್ಟ : ತಾಲೂಕಿನ ಜಂಗಮಕೋಟೆ ಹೋಬಳಿಯ ಕುಂಬಿಗಾನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಭೀರನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿ 10 ವರ್ಷಗಳಾದರೂ ಡಾ.ಬಾಬು ಜಗಜೀವನರಾನ್ ಭವನವನ್ನು ಉದ್ಘಾಟನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
2015-16ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಿರುವ ಸಮುದಾಯ ಭವನವನ್ನು ಉದ್ಘಾಟನೆ ಮಾಡಿಲ್ಲ. ಸಮರ್ಪಕವಾಗಿ ನಿರ್ವಹಣೆಯನ್ನೂಮಾಡಿಲ್ಲ. ಪ್ರಸ್ತುತ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಗ್ರಾಮಸ್ಥರು ಆರೋ ಪಿಸಿದ್ದಾರೆ.
ಈ ಭವನಕ್ಕೆ ಅಳವಡಿಸಿದ್ದ ಬಾಗಿಲು, ಮುರಿದು ಬಿದ್ದು, ಗೆದ್ದಲು ತಿನ್ನುತ್ತಿದೆ. ಕಟ್ಟಡದ ಹೊರಗೆ ಮತ್ತು ಒಳಗೆ ಮದ್ಯದ ಬಾಟಲಿಗಳು ಬಿದ್ದಿವೆ. ರಾತ್ರಿಯ ವೇಳೆ ಭವನದ ಒಳಗೆ ದುಷ್ಕರ್ಮಿಗಳು, ಮದ್ಯಪಾನ ಮಾಡಿ ಹೋಗುತ್ತಾರೆ. ಬಾಟಲಿಗಳನ್ನು ಒಡೆದು ಹಾಕುತ್ತಿದ್ದಾರೆ. ಸರಕಾರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ, ಭವನಗಳನ್ನು ನಿರ್ಮಾಣ ಮಾಡಿದರೂ ಇದು ಜನರಿಗೆ ಉಪಯೋಗವಾಗುತ್ತಿಲ್ಲ. ಭವನದ ಕಟ್ಟಡಕ್ಕೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಕಲ್ಪಿಸಿ, ಬಣ್ಣ ಹೊಡೆಸಿ ಶೀಘ್ರವೇ ಉದ್ಘಾಟನೆ ಮಾಡಿದರೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವುದಕ್ಕೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರಒತ್ತಾಯವಾಗಿದೆ.
ಮಾದಿಗ ದಂಡೋರ ತಾಲೂಕು ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ಡಾ.ಬಾಬು ಜಗಜೀವನ ರಾಮ್ ನಿರ್ಮಾಣವಾಗಿ 10 ವರ್ಷಗಳು ಕಳೆದರೂ ಇದುವರೆಗೂ ಉಪಯೋಗಕ್ಕೆ ಬಂದಿಲ್ಲ. ಈ ಕಟ್ಟಡದ ಜೊತೆಯಲ್ಲಿ ನಿರ್ಮಾಣವಾಗಿರುವ ಎಲ್ಲ ಭವನಗಳು ಉಪಯೋಗವಾಗುತ್ತಿವೆ. ಇಲ್ಲಿನ ಭವನಕ್ಕೆ ಒಂದು ಬಾಗಿಲು ಇಡಬೇಕು, ಶೌಚಾಲಯ ಕಟ್ಟಿಸಬೇಕು. ಕೊಳಾಯಿ ಅಳವಡಿಸಬೇಕು. ಭವನಕ್ಕೆ ಮೇಜು, ಕುರ್ಚಿಗಳು, ಕೊಡಬೇಕು, ಸುಣ್ಣ, ಬಣ್ಣ ಮಾಡಿಸಬೇಕು, ಕಾಂಪೌಂಡ್ ನಿರ್ಮಾಣ ಮಾಡಿ ಶೀಘ್ರವೇ ಲೋಕಾರ್ಪಣೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಡಾ.ಬಾಬು ಜಗಜೀವನರಾಮ್ ಭವನ ನಮಗೆ ಹಸ್ತಾಂತರವಾಗಿಲ್ಲ. ಆದರೂ, ನಾವು ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದೇವೆ. ಸ್ವಚ್ಛತೆಯನ್ನೂ ಮಾಡಿಸುತ್ತಿದ್ದೇವೆ. ಭವನದ ಸುತ್ತಲೂ ಗಿಡಗಳನ್ನು ನೆಡಲು ಯೋಜನೆ ರೂಪಿಸಿದ್ದೆವು. ಆದರೆ, ಸ್ಥಳೀಯರು, ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಭವನ ಕಟ್ಟಡವನ್ನು ಪರಿಶೀಲನೆ ನಡೆಸಿ, ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ.
-ಪ್ರಶಾಂತ್, ಪಿಡಿಒ, ಕುಂಬಿಗಾನಹಳ್ಳಿ ಗ್ರಾಪಂ
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಕುಂಬಿಗಾನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಭೀರನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾದ ಡಾ.ಬಾಬು ಜಗಜೀವನರಾಮ್ ಭವನವನ್ನು ಸುಸ್ಥಿತಿಯಲ್ಲಿ ಅಲ್ಲಿನ ಗ್ರಾಮ ಪಂಚಾಯತ್ಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ನಮ್ಮಲ್ಲಿ ದಾಖಲೆಯಿದೆ. ಹಸ್ತಾಂತರ ಮಾಡಿಕೊಂಡ ನಂತರ ನಿರ್ವಹಣೆಯನ್ನು ಮಾಡಬೇಕಾಗಿರುವ ಅಲ್ಲಿನ ಗ್ರಾಮ ಪಂಚಾಯತ್ನ ಜವಾಬ್ದಾರಿಯಾಗಿರುತ್ತದೆ. ಅವರು ನಿರ್ವಹಣೆ ಮಾಡಲಿಲ್ಲವಾದರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಈ ಬಗ್ಗೆ ದೂರು ಕೊಡುತ್ತೇವೆ.
-ತೇಜಾನಂದರೆಡ್ಡಿ, ಉಪನಿರ್ದೇಶಕ, ಚಿಕ್ಕಬಳ್ಳಾಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ







