ಮೇಘಾಲಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ | 27 ಕಾರ್ಮಿಕರ ಸಾವಿಗೆ ಕಾರಣವಾದ rat-hole ಗಣಿಗಾರಿಕೆ; ಏನದು?

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಜನವರಿ 5, ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಸಾವಿಗೀಡಾದ ಕಾರ್ಮಿಕರ ಸಂಖ್ಯೆ 27ಕ್ಕೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿಯ ಮಾಲೀಕರು ಎಂದು ಗುರುತಿಸಿರುವ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 100 ಅಡಿ ಆಳದಲ್ಲಿರುವ ಕಿರಿದಾದ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಪತ್ತೆ ಹಚ್ಚಲು ಗಣಿಯಲ್ಲಿ ರಕ್ಷಣಾ ತಂಡ ಶನಿವಾರವೂ ಕಾರ್ಯಾಚರಣೆಯನ್ನು ಮುಂದುವರೆಸಿದೆ.
Rat-hole ಗಣಿಗಾರಿಕೆ (ಇಲಿ-ರಂಧ್ರ ಗಣಿಗಾರಿಕೆ)ಯನ್ನು ಎನ್ಜಿಟಿ ಮತ್ತು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ಮೇಘಾಲಯದಲ್ಲಿ ಇದು ಇನ್ನೂ ವ್ಯಾಪಕವಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ವಿಶೇಷ ರಕ್ಷಣಾ ತಂಡಗಳು ಕಾರ್ಯಾಚರಣೆ ವೇಳೆ ಎದುರಿಸುತ್ತಿರುವ ಸವಾಲುಗಳು ಇಲಿ-ರಂಧ್ರ ಗಣಿಗಳಲ್ಲಿ ಗಣಿಗಾರರು ಕೆಲಸ ಮಾಡುವ ಅಪಾಯಕಾರಿ ಪರಿಸ್ಥಿತಿಗಳನ್ನು ಬಯಲು ಮಾಡಿವೆ.
ಗಣಿಯಲ್ಲಿ ಲಂಬವಾದ ಗುಂಡಿಯಿದ್ದು, ಅದು 100 ಅಡಿಗಿಂತ ಹೆಚ್ಚು ಆಳವಿದೆ. ಈ ಮಧ್ಯದ ಗುಂಡಿಯ ಕೆಳಭಾಗದಲ್ಲಿ ಮೂರು ಕಿರಿದಾದ ಸುರಂಗಗಳು ಅಥವಾ ಇಲಿ-ರಂಧ್ರಗಳು ಕವಲೊಡೆಯುತ್ತವೆ. ಕಲ್ಲಿದ್ದಲು ಹೊರತೆಗೆದುಕೊಳ್ಳಲು ಗಣಿಗಾರರು ಈ ಸುರಂಗಗಳನ್ನು ಪ್ರವೇಶಿಸುತ್ತಾರೆ. ಇದರೊಳಗೆ ಇನ್ನೂ ಹೆಚ್ಚಿನ ಕಾರ್ಮಿಕರು ಸಿಲುಕಿಕೊಂಡಿದ್ದಾರೆಯೇ ಎಂದು ಹುಡುಕಲು ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸ್ಥಳದಲ್ಲಿರುವ ಎನ್ಡಿಆರ್ಎಫ್ ತಂಡದ ಭಾಗವಾಗಿರುವ ಇನ್ಸ್ಪೆಕ್ಟರ್ ಅನುರಾಗ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸರಿಸುಮಾರು 50 ಅಡಿ ಆಳದಲ್ಲಿ ನೀರು ತೊಟ್ಟಿಕ್ಕುತ್ತಿದ್ದು, ಇದರಿಂದ ಮಣ್ಣು ಕೆಳಗೆ ಬೀಳಲು ಕಾರಣವಾಗುತ್ತಿದೆ. ಗುಂಡಿಯ ಕೆಳಭಾಗದಲ್ಲಿ 100 ಅಡಿ ಆಳದಲ್ಲಿ ಮೂರು ಇಲಿ-ರಂಧ್ರಗಳಿವೆ. ಇವುಗಳಲ್ಲಿ ಒಂದರೊಳಗೆ ನೀರಿದ್ದು, ನಾವು ಒಳಗೆ ಹೋದಂತೆ ಅದು ಹೆಚ್ಚಾಗುತ್ತದೆ. ಅದಕ್ಕಾಗಿಯೇ ನಮ್ಮ ತಂಡವು ಅದರೊಳಗೆ ಹೋಗಿ ಹುಡುಕಲು ಸಾಧ್ಯವಾಗುತ್ತಿಲ್ಲ. ನಾವು 25 ಅಡಿ ದೂರದವರೆಗೆ ಇತರ ಎರಡು ಇಲಿ-ರಂಧ್ರಗಳಿಗೆ ಹೋಗಿದ್ದೇವೆ. ಅಲ್ಲಿ ಯಾವುದೇ ಶವಗಳು ಕಂಡುಬಂದಿಲ್ಲ. ಆದರೆ ಈ ಎರಡೂ ಸುರಂಗಗಳಿಂದ ವಿಭಿನ್ನ ದಿಕ್ಕುಗಳಲ್ಲಿ ಕವಲೊಡೆಯುವ ಅನೇಕ ಇಲಿ-ರಂಧ್ರಗಳಿವೆ. ಇಲಿ-ರಂಧ್ರಗಳು ಕೇವಲ 2 ಅಡಿ ಎತ್ತರ ಮತ್ತು 3 ಅಡಿ ಅಗಲವಿದ್ದು, ಅವುಗಳಲ್ಲಿ ಮುಂದೆ ಸಾಗಬೇಕಾದರೆ ತೆವಳಬೇಕು ಎಂದು ಸಿಂಗ್ ಹೇಳಿದ್ದಾರೆ ಎಂದು Indian express ವರದಿ ಮಾಡಿದೆ.
ಈ ಗಣಿ ಪ್ರದೇಶವು ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿದೆ. ರಸ್ತೆ ಸಂಪರ್ಕದ ಕೊರತೆಯಿಂದಾಗಿ ಅಲ್ಲಿ ತಲುಪಲು ರಸ್ತೆಯಲ್ಲಿ ಸುಮಾರು ಮೂರು ಗಂಟೆಗಳು ಬೇಕಾಗುತ್ತದೆ. ನಾಲ್ಕು ಚಕ್ರ ವಾಹನಗಳು ಮಾತ್ರ ಸಂಚರಿಸಬಹುದಾದ ಭೂಪ್ರದೇಶ ಇದಾಗಿದೆ.
ಘಟನೆಯ ನಂತರ, ಪೂರ್ವ ಜೈಂಟಿಯಾ ಹಿಲ್ಸ್ ಪೊಲೀಸರು ನರಹತ್ಯೆ, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಉಲ್ಲಂಘನೆ ಸೇರಿದಂತೆ ಆರೋಪಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ನಿರ್ಲಕ್ಷ್ಯ
ಪೂರ್ವ ಜೈಂಟಿಯಾ ಹಿಲ್ಸ್ನಲ್ಲಿ ವ್ಯಾಪಕವಾದ ಅಕ್ರಮ ಗಣಿಗಾರಿಕೆ ಪದೇಪದೇ ನಡೆಯುತ್ತಿದೆ. ಉಚ್ಚ ನ್ಯಾಯಾಲಯವನ್ನು ಹೊರತುಪಡಿಸಿ ರಾಜ್ಯದಲ್ಲಿ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಪಿ. ಕಟಕಿ ಹೇಳಿದ್ದಾರೆ. 2022ರಿಂದ ರಾಜ್ಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯನ್ನು ಮೇಲ್ವಿಚಾರಣೆ ಮಾಡಲು ಮೇಘಾಲಯ ಹೈಕೋರ್ಟ್ನಿಂದ ಏಕವ್ಯಕ್ತಿ ಸಮಿತಿಯಾಗಿ ನೇಮಕಗೊಂಡವರು ಅವರು.
ಗುರುವಾರವೇ ಇದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 9ರಂದು ಜಿಲ್ಲಾ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಸಮನ್ಸ್ ಜಾರಿ ಮಾಡಿತು. ತೆಗೆದುಕೊಂಡ ಕ್ರಮಗಳ ವಿವರ ಹಾಗೂ ಯಾಕೆ ಮುಂದುವರಿಯಲು ಅವಕಾಶ ನೀಡಲಾಗಿದೆ ಎಂಬುದಕ್ಕೆ ಕಾರಣಗಳನ್ನು ಒದಗಿಸುವಂತೆ ಹೈಕೋರ್ಟ್ ಕೇಳಿದೆ.
ಪೂರ್ವ ಜೈಂಟಿಯಾ ಬೆಟ್ಟಗಳು ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯಿಂದ ಹೆಚ್ಚು ಪರಿಣಾಮ ಬೀರುವ ಜಿಲ್ಲೆಯಾಗಿದ್ದು, ಅಲ್ಲಿ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ಜನವರಿ 17ರಂದು ಸಲ್ಲಿಸಲಾದ ನ್ಯಾಯಮೂರ್ತಿ ಕಟಕಿ ಸಮಿತಿಯ ವರದಿ ಹೇಳಿದೆ. ಒಂದು ತಿಂಗಳ ಹಿಂದೆ, ಜನವರಿ 14ರಂದು ಥಾಂಗ್ಕ್ಸೊ ಪ್ರದೇಶದಲ್ಲಿ ಮತ್ತೊಂದು ಅಕ್ರಮ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆಯನ್ನು ಸಮಿತಿಯು ವರದಿ ಮಾಡಿತ್ತು.
ಇದೇ ವಿಷಯದ ಕುರಿತು ಸಮಿತಿಯ ನೇತೃತ್ವ ವಹಿಸಲು 2019ರಲ್ಲಿ ಎನ್ಜಿಟಿಯಿಂದ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಕಟಕಿ, ಆ ಸಮಯದಲ್ಲಿ ಪೂರ್ವ ಜೈಂಟಿಯಾ ಬೆಟ್ಟಗಳಲ್ಲಿ ಮಾತ್ರ 22,000ಕ್ಕೂ ಹೆಚ್ಚು ಅಕ್ರಮ ಕಲ್ಲಿದ್ದಲು ಗಣಿಗಳಿದ್ದವು ಎಂದು ಹೇಳಿದ್ದಾರೆ. ಮೇಘಾಲಯದಾದ್ಯಂತ ಅಕ್ರಮ ಗಣಿಗಳ ಒಟ್ಟು ಸಂಖ್ಯೆ 25,000ಕ್ಕಿಂತ ಹೆಚ್ಚು ಇದೆ ಎಂದೂ ಅವರು ತಿಳಿಸಿದ್ದಾರೆ. ಇದು ನಿರಂತರವಾಗಿ ಮುಂದುವರಿದರೂ ಗಂಭೀರ ಕ್ರಮದ ಕೊರತೆ ಇದೆ. ಈಗ ನಡೆದಿರುವುದು ದೊಡ್ಡ ಘಟನೆ. ಆದರೆ ಹಲವು ಸಣ್ಣ ಘಟನೆಗಳು ನಡೆದಿದ್ದು ಇನ್ನೂ ಹಲವು ಗಮನಕ್ಕೆ ಬಾರದೇ ಉಳಿದಿರುವ ಸಾಧ್ಯತೆಯಿದೆ ಎಂದಿದ್ದಾರೆ.
2018ರಲ್ಲಿ ಕ್ಸಾನ್ನಲ್ಲಿ ನಡೆದ ಘಟನೆಯಲ್ಲಿ 15 ಗಣಿಗಾರರು ಇಲಿ-ರಂಧ್ರ ಗಣಿಯಲ್ಲಿ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾಗಿದ್ದರು. ಉಂಪ್ಲೆಂಗ್ ನಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಐವರು ಕಾರ್ಮಿಕರು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದರು.
ಇಲಿ-ರಂಧ್ರ ಗಣಿಗಾರಿಕೆ ಎಂದರೇನು?
ಇಲಿ-ರಂಧ್ರ ಗಣಿಗಾರಿಕೆಯು ಕಲ್ಲಿದ್ದಲು ಹೊರತೆಗೆಯುವ ಒಂದು ವಿಧಾನ. ಇದು ಸಾಮಾನ್ಯವಾಗಿ ಮೂರರಿಂದ ನಾಲ್ಕು ಅಡಿಗಳಿಗಿಂತ ಹೆಚ್ಚು ಅಗಲವಿಲ್ಲದ, ಬಹಳ ಸಣ್ಣ ಲಂಬ ಹೊಂಡಗಳನ್ನು ಅಗೆಯುವುದನ್ನು ಒಳಗೊಂಡಿರುತ್ತದೆ. ಗಣಿ ಕಾರ್ಮಿಕರು ಕಲ್ಲಿದ್ದಲಿನ ಪದರ ತಲುಪಿದ ಕೂಡಲೇ ಅಲ್ಲಿಂದ ಕಲ್ಲಿದ್ದಲನ್ನು ತೆಗೆಯಲು ಅಡ್ಡ ಸುರಂಗಗಳನ್ನು ಅಗೆಯುತ್ತಾರೆ. ಮೇಘಾಲಯದಲ್ಲಿ ಸಾಮಾನ್ಯವಾಗಿ ಕಲ್ಲಿದ್ದಲಿನ ಪದರ ಮೇಲ್ಮೈಗೆ ಹತ್ತಿರವಾಗಿಯೇ ಇರುತ್ತದೆ.
ಒಬ್ಬ ವ್ಯಕ್ತಿ ಮಾತ್ರ ಒಳಗೆ ಹೋಗಬಹುದಾದ ಕಿರಿದಾದ ಸುರಂಗಗಳನ್ನು ಸಾಮಾನ್ಯವಾಗಿ “ಇಲಿ-ರಂಧ್ರಗಳು” ಎಂದು ಕರೆಯಲಾಗುತ್ತದೆ. ಈ ಬಾವಿಗಳಿಂದ ಹೊರತೆಗೆಯಲಾದ ಕಲ್ಲಿದ್ದಲನ್ನು ಗಣಿಯ ಮುಂಭಾಗದಲ್ಲಿ ಸುರಿಯಲಾಗುತ್ತದೆ. ನಂತರ ರಸ್ತೆಯ ಮೂಲಕ ಸಾಗಿಸಲಾಗುತ್ತದೆ.
ಯಾವುದೇ ಯಂತ್ರದ ಸಹಾಯವಿಲ್ಲದೆ ಕೈಯಿಂದ ಬಳಸುವ ಉಪಕರಣಗಳೊಂದಿಗೆ ಕಾರ್ಮಿಕರು ಗಣಿಗಳನ್ನು ಪ್ರವೇಶಿಸುತ್ತಾರೆ. ಈ ವಿಧಾನವು ಶ್ರಮದಾಯಕ ಮತ್ತು ಹೆಚ್ಚು ಅಪಾಯಕಾರಿಯಾಗಿದೆ. ಆದರೆ ತೆಳುವಾದ ಕಲ್ಲಿದ್ದಲು ಪದರಗಳು ದೊಡ್ಡ ಪ್ರಮಾಣದ ಯಾಂತ್ರಿಕೃತ ಗಣಿಗಾರಿಕೆಯನ್ನು ಆರ್ಥಿಕವಾಗಿ ಕಷ್ಟಕರವಾಗಿಸುವುದರಿಂದ ಮೇಘಾಲಯದಲ್ಲಿ ಈ ವಿಧಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಸುರಂಗಗಳ ಕಿರಿದಾಗಿರುವುದರಿಂದ ಅಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಅವರು ದೈಹಿಕವಾಗಿ ಚಿಕ್ಕ ಗಾತ್ರದವರಾಗಿರುವುದರಿಂದ ಈ ಇಲಿ-ರಂಧ್ರಗಳಲ್ಲಿ ತೆವಳಲು ಸುಲಭವಾಗುತ್ತದೆ. ಸೀಮಿತ ಜೀವನೋಪಾಯದ ಆಯ್ಕೆಗಳನ್ನು ಹೊಂದಿರುವ ರಾಜ್ಯದಲ್ಲಿ ಕುಟುಂಬಗಳು ಈ ಕೆಲಸವನ್ನು ಬಹಳ ಹಿಂದಿನಿಂದಲೂ ಅವಲಂಬಿಸಿವೆ. ಅಂತಹ ಗಣಿಗಳಲ್ಲಿ ಕೆಲಸ ಮಾಡಲು ಅಪ್ರಾಪ್ತ ವಯಸ್ಕರು ತಮ್ಮ ವಯಸ್ಸನ್ನು ತಪ್ಪಾಗಿ ನಮೂದಿಸಿ ಸೇರಿಕೊಳ್ಳುತ್ತಾರೆ.
ಇಲಿ-ರಂಧ್ರ ಗಣಿಗಾರಿಕೆಯನ್ನು ನಿಷೇಧಿಸಿದ್ದೇಕೆ?
ತೀವ್ರ ಪರಿಸರ ಹಾನಿ, ಅಂತರ್ಜಲ ಮಾಲಿನ್ಯ ಮತ್ತು ಮಾನವ ಜೀವಕ್ಕೆ ಗಂಭೀರ ಅಪಾಯಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014ರಲ್ಲಿ ಮೇಘಾಲಯದಲ್ಲಿ ಇಲಿ-ರಂಧ್ರ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಇತರ ಅವೈಜ್ಞಾನಿಕ ಗಣಿಗಾರಿಕೆ ಪದ್ಧತಿಗಳ ಮೇಲೆ ನಿಷೇಧ ಹೇರಿತು. ಅಕ್ರಮ ವಿಧಾನಗಳ ಮೂಲಕ ಹೊರತೆಗೆಯಲಾದ ಕಲ್ಲಿದ್ದಲಿನ ಸಾಗಣೆಯನ್ನೂ ನ್ಯಾಯಮಂಡಳಿಯು ನಿರ್ಬಂಧಿಸಿತು.
ನಿಷೇಧದ ಹೊರತಾಗಿಯೂ ರಾಜ್ಯದ ಹಲವು ಭಾಗಗಳಲ್ಲಿ ಈ ಪದ್ಧತಿ ಮುಂದುವರೆದಿದೆ. ವರ್ಷಗಳಲ್ಲಿ ಹಲವಾರು ಗಂಭೀರ ಅಪಘಾತಗಳು ವರದಿಯಾಗಿವೆ. ಆಗಾಗ್ಗೆ ಕಿರಿದಾದ ಸುರಂಗಗಳೊಳಗೆ ಪ್ರವಾಹ ಅಥವಾ ಉಸಿರುಗಟ್ಟುವಿಕೆಯಿಂದ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.
2018 ಡಿಸೆಂಬರ್ನಲ್ಲಿ ಪೂರ್ವ ಜೈಂಟಿಯಾ ಬೆಟ್ಟಗಳಲ್ಲಿ ಪ್ರವಾಹಕ್ಕೆ ಸಿಲುಕಿದ ಇಲಿ-ರಂಧ್ರ ಗಣಿಯೊಳಗೆ 15 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ರಕ್ಷಣಾ ಕಾರ್ಯಾಚರಣೆಗಳು ಎರಡು ತಿಂಗಳಿಗಿಂತ ಹೆಚ್ಚು ಕಾಲ ನಡೆದರೂ ಕೇವಲ ಎರಡು ಶವಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. 2021ರಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಐದು ಕಾರ್ಮಿಕರು ಪ್ರವಾಹಕ್ಕೆ ಸಿಲುಕಿದ ಗಣಿಯಲ್ಲಿ ಸಿಲುಕಿಕೊಂಡರು. ಒಂದು ತಿಂಗಳ ನಂತರ ರಕ್ಷಣಾ ಪ್ರಯತ್ನಗಳನ್ನು ನಿಲ್ಲಿಸುವ ಮೊದಲು ಮೂರು ಶವಗಳು ಪತ್ತೆಯಾದವು.
ಇಲಿ-ರಂಧ್ರ ಗಣಿಗಾರಿಕೆಯಿಂದ ಉಂಟಾಗುವ ಪರಿಸರ ಹಾನಿಯಲ್ಲಿ ಆಮ್ಲ ಗಣಿ ಒಳಚರಂಡಿ, ನದಿಗಳು ಮತ್ತು ಕೃಷಿಭೂಮಿಯ ಮಾಲಿನ್ಯ, ಭೂಮಿಯ ಅಗೆಯುವಿಕೆ ಸೇರಿವೆ.
ಮೇಘಾಲಯದಲ್ಲಿ ಗಣಿಗಾರಿಕೆ ಆದಾಯದ ಪ್ರಮುಖ ಮೂಲವಾಗಿದ್ದು, ಈ ನಿಷೇಧವು ರಾಜಕೀಯ ಹಾಗೂ ಆರ್ಥಿಕವಾಗಿ ವಿವಾದಾಸ್ಪದವಾಗಿದೆ. ಪ್ರದೇಶದ ಭೂವಿಜ್ಞಾನಕ್ಕೆ ಸೂಕ್ತವಾದ ಕಾರ್ಯಸಾಧ್ಯ ಪರ್ಯಾಯ ಗಣಿಗಾರಿಕೆ ವಿಧಾನವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿದೆ. 2022ರಲ್ಲಿ ಮೇಘಾಲಯ ಹೈಕೋರ್ಟ್ ನೇಮಿಸಿದ ಸಮಿತಿಯು ಕಾನೂನು ನಿರ್ಬಂಧಗಳ ಹೊರತಾಗಿಯೂ ಹಲವೆಡೆ ಇಲಿ-ರಂಧ್ರ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಕಂಡುಹಿಡಿದಿದೆ.
ನ್ಯಾಯಮಂಡಳಿ ವಿಧಿಸಿದ ನಿಷೇಧವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಪರಿಸರ ಸಂರಕ್ಷಣೆ ಜೊತೆಗೆ ವೈಜ್ಞಾನಿಕ ಮತ್ತು ನಿಯಂತ್ರಿತ ಕಾರ್ಯವಿಧಾನಗಳ ಅಡಿಯಲ್ಲಿ ಮಾತ್ರ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಿದೆ.






