ಆ.1ರಿಂದ ಮೀನುಗಾರಿಕೆ ಋತು ಆರಂಭ: ಪೂರ್ವ ಸಿದ್ಧತೆ
ಉತ್ತಮ ಮೀನು ಇಳುವರಿಯ ನಿರೀಕ್ಷೆಯಲ್ಲಿ ಮೀನುಗಾರರು

ಮಂಗಳೂರು: ಕರ್ನಾಟ ಕರಾವಳಿಯಲ್ಲಿ ಎರಡು ತಿಂಗಳ ನಿಷೇಧದ ಅವಧಿ ಮುಗಿಸಿ ಮೀನುಗಾರಿಕಾ ದೋಣಿಗಳನ್ನು ಕಡಲಿಗಿಳಿಯಲು ಮೀನುಗಾರರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ನಿಷೇಧಿತ ಅವಧಿಯಲ್ಲಿ ತಮ್ಮ ಊರುಗಳಿಗೆ ಮರಳಿರುವ ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರು ವಾಪಸಾಗುತ್ತಿದ್ದು, ಕರಾವಳಿಯ ದಕ್ಕೆ ಪ್ರದೇಶಗಳಲ್ಲಿ ಟ್ರಾಲ್ ಹಾಗೂ ಪರ್ಸೀನ್ ಬೋಟ್ಗಳನ್ನು ಮೀನುಗಾರಿಕೆಗೆ ಸಿದ್ಧಗೊಳಿಸಲಾಗುತ್ತಿದೆ.
ಕಳೆದ ವರ್ಷ ಹವಾಮಾನ ವೈಪರೀತ್ಯದ ಜೊತೆಗೆ ಫೆಬ್ರವರಿ ತಿಂಗಳನಿಂದಲೇ ಕಾಡಿದ ಬಿಸಿಲಿನ ಝಳದಿಂದಾಗಿ ಮೀನು ಸಂಗ್ರಹದಲ್ಲಿ ತೀವ್ರ ಇಳಿಕೆಯಾಗಿ ಮೀನುಗಾರರು ಕಂಗಾಲಾಗಿದ್ದರು. ಹಾಗಾಗಿ ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯೊಂದಿಗೆ ಮಂಗಳೂರು ಸೇರಿದಂತೆ ದಕ್ಕೆ ಪ್ರದೇಶಗಳಲ್ಲಿ ಮೀನುಗಾರರು ಪೈಂಟಿಂಗ್, ಇಂಜಿನ್ ದುರಸ್ತಿ, ಬಲೆಗಳನ್ನು ಸಿದ್ಧಪಡಿಸುವುದು, ಡೀಸೆಲ್ ಪಡೆಯಲು ಬೇಕಾದ ಪ್ರಕ್ರಿಯೆಗಳು ಸೇರಿದಂತೆ ಬೋಟುಗಳನ್ನು ಕಡಲಿಗಿಳಿಸಲು ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಸದ್ಯ ಕರಾವಳಿಯುದ್ದಕ್ಕೂ ಮಳೆಯಾಗುತ್ತಿದ್ದರೂ ಮೀನುಗಾರಿಕೆಗೆ ಪೂರಕ ವಾತಾವರಣ ಇರುವ ಹಿನ್ನೆಲೆಯಲ್ಲಿ (ಮೀನುಗಾರಿಕಾ ಇಲಾಖೆಯ ಕೊನೆಯ ಕ್ಷಣದ ಸೂಚನೆಯನ್ನು ಹೊರತುಪಡಿಸಿ) ಆಗಸ್ಟ್ 1ರಿಂದ ಟ್ರಾಲ್ ಬೋಟ್ಗಳನ್ನು ಹಾಗೂ ಆ.10ರಿಂದ ಪರ್ಸೀನ್ ಬೋರ್ಟ್ಗಳನ್ನು ಕಡಲಿಗಿಳಿಸಲು ಮೀನುಗಾರರು ಮುಂದಾಗಿದ್ದಾರೆ.
ಯಾಂತ್ರೀಕೃತ ಮೀನುಗಾರಿಕೆಯ ನಿಷೇಧದ ಸಂದರ್ಭ ಕರಾವಳಿಯಲ್ಲಿ ಸಾಂಪ್ರದಾಯಿಕ ದೋಣಿಗಳ ಮೂಲಕ ನಡೆಸಲಾಗುವ ನಾಡದೋಣಿ ಮೀನುಗಾರಿಕೆ ಚುರುಕು ಪಡೆಯುತ್ತದೆ. ಆದರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರಿಕೆಯೂ ಕ್ಷೀಣವಾಗಿದೆ. ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ಮೂಲಕ ಕಳೆದ ಕೆಲ ದಿನಗಳ ಅವಧಿಯಲ್ಲಿ ಕೆಲವೊಂದು ಸಾಂಪ್ರದಾಯಿಕ ದೋಣಿಗಳು ಮೀನುಗಾರಿಕೆಗೆ ನಡೆಸುತ್ತಿದ್ದರೂ, ಅಲ್ಪಸ್ವಲ್ಪ ಮೀನಿನೊಂದಿಗೆ ಮರಳುತ್ತಿವೆ. ಕಳೆದ ವರ್ಷದ ಶೇ. 25ರಷ್ಟು ಪ್ರಮಾಣದಲ್ಲಿಯೂ ಈ ಬಾರಿ ಮೀನು ಸಂಗ್ರಹವಾಗಿಲ್ಲ ಎಂಬುದು ನಾಡದೋಣಿ ಮೀನುಗಾರರ ಅಳಲು.
ಒಟ್ಟು ಮೀನುಗಾರಿಕೆಯೇ ಅತಂತ್ರ ಸ್ಥಿತಿಯಲ್ಲಿದೆ ಎನ್ನುವುದು ಮೀನುಗಾರರ ಅನಿಸಿಕೆ. ಸಾಲ ಮಾಡಿ ದೋಣಿ ಖರೀದಿಸಿ, ಕೂಲಿ ಕಾರ್ಮಿಕರಿಗೆ ವೇತನ ಕೊಟ್ಟು ನಿಗದಿತ ಪ್ರಮಾಣದಲ್ಲಿ ಮೀನು ಲಭ್ಯವಾಗದಿದ್ದರೆ, ಮುಂದಿನ ದಿನಗಳಲ್ಲಿ ಮೀನುಗಾರಿಕೆಯ ಭವಿಷ್ಯ ಹೇಗಿರಬಹುದು ಎನ್ನುವುದು ಮೀನುಗಾರರ ಆತಂಕಕ್ಕೆ ಕಾರಣಾಗಿದೆ.
ಮಾರುಕಟ್ಟೆಯಲ್ಲಿ ಐಸ್ಪ್ಯಾಕ್ಡ್, ಹೊರ ರಾಜ್ಯಗಳ ಮೀನಿನ ಲಗ್ಗೆ: ಮಾರುಕಟ್ಟೆಗಳಲ್ಲಿ ತಾಜಾ ಮೀನಿನ ಕೊರತೆಯ ಜೊತೆಗೆ ಮೀನಿನ ದರವೂ ಕರಾವಳಿಯ ಮೀನು ಪ್ರಿಯರನ್ನು ಕಂಗೆಡಿಸಿದೆ. ಪ್ಯಾಕ್ ಮಾಡಿ ಐಸ್ನಲ್ಲಿ ಇರಿಸಲಾದ ಮೀನಿನ ಜೊತೆಗೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶದ ಮೀನು ಮಾರುಕಟ್ಟೆಗಳಿಗೆ ಲಗ್ಗೆ ಇರಿಸಿವೆ. ತಮಿಳುನಾಡು, ಆಂಧ್ರ ಪ್ರದೇಶ, ಗುಜರಾತ್, ಒಡಿಶಾ ಮೊದಲಾದೆಡೆಯಿಂದ ಮೀನು ಬರುತ್ತಿದ್ದು, ದರವೂ ಏರಿಳಿತವನ್ನು ಕಾಣುತ್ತಿದೆ. ಹೊರ ರಾಜ್ಯಗಳಿಂದ ಬರುವ ಮೀನು ಐಸ್ ಹಾಕಿ ಪೂರೈಕೆಯಾಗುವುದರಿಂದ ಕಡಲ ತಡಿಯ ಮೀನುಪ್ರಿಯರಿಗೆ ತಾಜಾ ಮೀನಿನ ಕೊರತೆ ಕಾಡುತ್ತಿದೆ.
ಇಳುವರಿಯಲ್ಲಿ ಭಾರೀ ಕುಸಿತ: ಕಳೆದ ಮೀನುಗಾರಿಕಾ ಋತು 2024-25ನೇ ಸಾಲಿನಲ್ಲಿ ಆಗಸ್ಟ್ನಿಂದ ಮಾರ್ಚ್ವರೆಗೆ ಮೀನಿನ ಸಂಗ್ರಹದಲ್ಲಿ ಭಾರೀ ಕುಸಿತ ಕಂಡು ಬಂದಿತ್ತು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಿಂದಿನ ಸಾಲಿಗಿಂತ ಉತ್ತಮ ಮೀನುಗಾರಿಕೆಯಾಗಿದ್ದರೂ ಬಳಿಕ ಮೀನುಸಂಗ್ರಹದಲ್ಲಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ದ.ಕ. ಜಿಲ್ಲಾ ಮೀನುಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ ನಿಷೇಧ ಅವಧಿಯ ಎರಡು ತಿಂಗಳ ಮುಂಚಿತವಾಗಿ ಅಂದರೆ 2025ರ ಎಪ್ರಿಲ್ನಲ್ಲಿ 7,100 ಮೆಟ್ರಿಕ್ ಟನ್ ಮೀನು ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ 6,210 ಮೆಟ್ರಿಕ್ ಟನ್. 2024ರ ಆಗಸ್ಟ್ನಲ್ಲಿ 45,050 ಮೆಟ್ರಿಕ್ ಟನ್, ಸೆಪ್ಟಂಬರ್ನಲ್ಲಿ 33,761ಮೆಟ್ರಿಕ್ ಟನ್, ಅಕ್ಟೋಬರ್ನಲ್ಲಿ 28,875ಮೆಟ್ರಿಕ್ ಟನ್, ನವೆಂಬರ್ನಲ್ಲಿ 19,042 ಮೆಟ್ರಿಕ್ ಟನ್, ಡಿಸೆಂಬರ್ನಲ್ಲಿ 6,059 ಮೆಟ್ರಿಕ್ ಟನ್, ಜನವರಿಯಲ್ಲಿ 6,665 ಮೆಟ್ರಿಕ್ ಟನ್, ಫೆಬ್ರವರಿಯಲ್ಲಿ 7,665 ಮೆಟ್ರಿಕ್ ಟನ್ ಕಡಲ ಮೀನುಗಾರಿಕೆಯ ಮೂಲಕ ಸಂಗ್ರಹವಾಗಿತ್ತು.
ಕಡಲ ಮೀನುಗಾರಿಕೆ ಸಂಗ್ರಹದಲ್ಲಿ 2023-24ನೇ ಸಾಲಿಗೆ ಹೋಲಿಸಿದರೆ 2024-25ನೆ ಸಾಲಿನಲ್ಲಿ ಸಾಕಷ್ಟು ಇಳಿಕೆಯಾಗಿರುವ ಬಗ್ಗೆ ಕಳೆದ ಎಪ್ರಿಲ್ 5ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾವವಾಗಿತ್ತು. ದ.ಕ. ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಕಡಲ ಮೀನುಗಾರಿಕೆಯಲ್ಲಿ ಒಟ್ಟು 2.39 ಲಕ್ಷ ಟನ್ ಮೀನು ಸಂಗ್ರಹವಾಗಿದ್ದರೆ, 2024-25ನೆ ಆರ್ಥಿಕ ವರ್ಷದಲ್ಲಿ 1.72 ಲಕ್ಷ ಟನ್ ಸಂಗ್ರಹವಾಗಿತ್ತು. ಮೀನುಗಾರಿಕೆಗೆ ಏಕರೂಪದ ನೀತಿ ಜಾರಿಯಾಗಬೇಕೆಂಬ ಮೀನುಗಾರರ ಆಗ್ರಹವಿರುವುದಾಗಿ ಇಲಾಖೆಯ ಜಂಟಿ ನಿರ್ದೇಶಕ ಸಿದ್ಧಯ್ಯ ಸಚಿವರ ಗಮನ ಸೆಳೆದಿದ್ದರು.
ಯಾಂತ್ರೀಕೃತ ಮೀನುಗಾರಿಕೆ ಆ.1ರಿಂದ ಆರಂಭಗೊಳ್ಳಲಿದ್ದು, ಮೀನುಗಾರರ ಡೀಸೆಲ್ ಪಾಸ್ ಪುಸ್ತಕಗಳ ನವೀಕರಣ ಕಾರ್ಯ ನಡೆಯುತ್ತಿದೆ. ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸಿ ಕೊಂಡು ಮೀನುಗಾರರು ಯಾಂತ್ರೀಕೃತ ದೋಣಿಗಳನ್ನು ಕಡಲಿಗಿಳಿಸಲಿದ್ದಾರೆ.
-ದಿಲೀಪ್ ಕುಮಾರ್, ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ
ಆ.1ರಿಂದ ಟ್ರಾಲ್ ಮೀನುಗಾರಿಕಾ ದೋಣಿಗಳು ಕಡಲಿಗಿಳಿಯಲು ಸಿದ್ಧತೆ ನಡೆಸುತ್ತಿವೆ. ಆ.10ರಿಂದ ಪರ್ಸೀನ್ ಬೋಟುಗಳು ಕಡಲಿಗಿಳಿಯಲಿವೆ. ಸದ್ಯ ಮಳೆ ಅಷ್ಟೇನು ಇಲ್ಲವಾಗಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿ ಹೇಗಿರಲಿದೆ ಎಂದು ಹೇಳಲಾಗದು. ಜು.30ರಂದು ಡೀಸೆಲ್ ಪೂರೈಕೆ ಮಾಡುವಂತೆ ಇಲಾಖೆಯನ್ನು ಕೋರಲಾಗಿದೆ. ಕಳೆದ ಋತುವಿನಲ್ಲೂ ಹವಾಮಾನ ವೈಪರೀತ್ಯ ಹಾಗೂ ಬಿಸಿಲ ಬೇಗೆಯಿಂದ ಮೀನಿನ ಸಂಗ್ರಹ ಉತ್ತಮವಾಗಿರಲಿಲ್ಲ. ಹಾಗಾಗಿ ಮೀನುಗಾರರು ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಈ ಬಾರಿ ಉತ್ತಮ ಮೀನು ಸಂಗ್ರಹದ ನಿರೀಕ್ಷೆಯೊಂದಿಗೆ ಸಿದ್ಧತೆಗಳು ನಡೆಯುತ್ತಿವೆ.
-ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ, ಮೀನುಗಾರ ಮುಖಂಡರು







