ಲಾಠಿ ಹಿಡಿಯಬೇಕಿದ್ದ ಕೈಯಲ್ಲಿ ಪುಸ್ತಕ: ಮಾಜಿ ಪೊಲೀಸ್ ಈಗ ಕೊಡಗಿನ ಬೆಸ್ಟ್ ಟೀಚರ್

ಮಡಿಕೇರಿ: ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಖಾಕಿ ತೊಟ್ಟಿದ್ದ ವ್ಯಕ್ತಿ ಇಂದು ಸರಕಾರಿ ಶಾಲೆಯ ಮಕ್ಕಳ ಪಾಲಿನ ಹೀರೋ ಆಗಿದ್ದಾರೆ. ಅವರೇ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನೇರುಗಳಲೆಯ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್. ರತ್ನಕುಮಾರ್. ಇವರಿಗೆ 2026-27ನೇ ಸಾಲಿನ ಕೊಡಗು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯೂ ದೊರಕಿದೆ.
ಪೊಲೀಸ್ ಹುದ್ದೆಯನ್ನು ಅಲಂಕರಿಸಿದ್ದರೂ ಮಕ್ಕಳ ಮೇಲಿನ ಅಪಾರ ಪ್ರೀತಿ, ಕ್ರೀಡೆಯ ಮೇಲಿನ ಆಸಕ್ತಿಯಿಂದ ಅವರು ಶಿಕ್ಷಕ ವೃತ್ತಿ ಆಯ್ದುಕೊಂಡರು. ಪೊಲೀಸ್ ಶಿಸ್ತು, ದಕ್ಷತೆ, ಸಂಘಟನಾ ಚತುರತೆಯನ್ನೇ ಅವರು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಿದರು.
2008ರಿಂದ ನೇರುಗಳಲೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು 9 ಬಾರಿ ಶೇ.100 ಫಲಿತಾಂಶ ನೀಡಿದ್ದಾರೆ. 2010ರಿಂದ 2015ರವರೆಗೆ ಸಮಾಜ ವಿಜ್ಞಾನ ವಿಷಯವನ್ನು ಬೋಧಿಸಿ ಆ ವಿಷಯದಲ್ಲೂ ಉತ್ತಮ ಫಲಿತಾಂಶ ನೀಡಿ ವಿದ್ಯಾರ್ಥಿಗಳ ಮನ ಗೆದ್ದಿದ್ದಾರೆ. 2012ರಲ್ಲಿ ಮುಖ್ಯಶಿಕ್ಷಕರ ಜವಾಬ್ದಾರಿ ತೆಗೆದುಕೊಂಡು ರಾತ್ರಿ ತರಗತಿ ನಡೆಸಿ ಶಾಲೆ ಹಿಂದೆಂದೂ ಪಡೆಯದ ಫಲಿತಾಂಶ ತಂದು ಗ್ರಾಮ ಪಂಚಾಯತ್ ಅಧ್ಯಕ್ಷರಿಂದ 25,000 ರೂ. ಬಹುಮಾನ ಪಡೆದಿದ್ದು ಇವರ ಸಾಧನೆಯ ಮೊದಲ ಹೆಜ್ಜೆ.
ಪೊಲೀಸ್ ಕ್ರೀಡಾ ಚೈತನ್ಯದಿಂದ ಐದು ಮಕ್ಕಳು ರಾಜ್ಯಮಟ್ಟಕ್ಕೆ: ಪೊಲೀಸ್ ಇಲಾಖೆಯಿಂದ ಬಂದ ಕ್ರೀಡಾ ಶಿಸ್ತಿನಿಂದಲೇ ಲಾಂಗ್ ಜಂಪ್, ಹೈಜಂಪ್, ಟ್ರಿಬಲ್ ಜಂಪ್, ಶಾಟ್ಪುಟ್ ಕ್ರೀಡೆಗಳಲ್ಲಿ 5 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿಸಿದ್ದಾರೆ. ದೈಹಿಕ ಶಿಕ್ಷಕರಿಲ್ಲದಾಗ ಬಾಲ್ ಬ್ಯಾಡ್ಮಿಂಟನ್ನಲ್ಲಿ ಬಾಲಕ-ಬಾಲಕಿಯರನ್ನು ಜಿಲ್ಲಾ ಮಟ್ಟಕ್ಕೆ ಕರೆದೊಯ್ದಿದ್ದಾರೆ. ಸ್ವತಃ ರಾಜ್ಯಮಟ್ಟದ ಕ್ರಿಕೆಟ್ ಆಟಗಾರರಾಗಿರುವುದರಿಂದ ಸೋಮವಾರಪೇಟೆ ಹಾಗೂ ಕುಶಾಲನಗರದ 8 ಇಲಾಖೆಗಳ ನೌಕರರಿಗೆ ಕ್ರಿಕೆಟ್ ಪಂದ್ಯಾಕೂಟ ಏರ್ಪಡಿಸಿದ್ದಾರೆ. ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರತಿವರ್ಷ ಕೊಡಗು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2023ರಲ್ಲಿ ನೇರುಗಳಲೆಯಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಊರವರ ಸಹಕಾರದಿಂದ ಅದ್ದೂರಿಯಾಗಿ ಆಯೋಜಿಸಿದ್ದಾರೆ.
2016ರಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಶಾಲೆಗೆ ವರ್ಲಿ ಕಲೆ ಮಾಡಿಸಿ ಇಡೀ ಶಾಲೆಯನ್ನು ಸೌಂದರ್ಯೀಕರಣಗೊಳಿಸಿದ್ದಾರೆ. ಬರವಣಿಗೆಯ ಮೇಲೆ ಅಪಾರ ಪ್ರೀತಿ ಇರುವ ಇವರು ಶಾಲೆಯ ಗೋಡೆಯ ಸೂಕ್ತಿಗಳು, ಸಭಾ ಮಂಟಪದ ಬೋರ್ಡ್ ಅನ್ನು ತಾವೇ ಬರೆದಿದ್ದಾರೆ. 2018ರಲ್ಲಿ ದಶಮಾನೋತ್ಸವವನ್ನು ಊರವರ ಸಹಕಾರದಿಂದ ಮಾಡಿ 60,000 ರೂ. ಸಂಗ್ರಹಿಸಿ ಉದ್ಯಾನ ನಿರ್ಮಿಸಿದ್ದಾರೆ. ಅದೇ ವರ್ಷ ‘ಹಿರಿಯ ವಿದ್ಯಾರ್ಥಿಗಳ ಬಳಗ’ ಎನ್ನುವ ಸಂಘ ರಚಿಸಿ ಟಿ.ವಿ., ರೇಡಿಯೊ, ಪೈಂಟ್, ವೈಫೈ, ವಿದ್ಯುತ್ ಕಂಬ ಸ್ಥಳಾಂತರ, ವೈರಿಂಗ್, ಉಚಿತ ಸಮವಸ್ತ್ರ ಪಡೆದಿದ್ದಾರೆ.
ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಭೀತಿ ಎದುರಾದಾಗ ಮನೆ ಮನೆಗೆ ಹೋಗಿ ಪ್ರಮುಖರನ್ನು ಭೇಟಿ ಮಾಡಿ ಸಭೆ ನಡೆಸಿ ‘ಅಂಕುರಂ’ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ಅನ್ನು ನೋಂದಣಿ ಮಾಡಿಸಿ, ಸಂಚಾಲಕರಾಗಿ 20 ಲಕ್ಷ ರೂ. ವೆಚ್ಚದಲ್ಲಿ 5 ಶಿಥಿಲಗೊಂಡ ಕೊಠಡಿಗಳನ್ನು ನವೀಕರಿಸಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಿದರು. ಇಡೀ ಕೊಡಗು ಜಿಲ್ಲೆಯಲ್ಲೇ ಸರಕಾರಿ ಶಾಲೆಗೆ ಶಾಲಾ ವಾಹನ ಖರೀದಿಸಿದ ಮೊದಲ ಶಾಲೆ ಎಂಬ ಕೀರ್ತಿ ತಂದುಕೊಟ್ಟರು. ಅಲ್ಲದೆ, ವಾಹನಕ್ಕೆ 20,000 ರೂ. ದೇಣಿಗೆ ನೀಡಿದ್ದಾರೆ.
ಈ ಸಾಲಿನಲ್ಲಿ ದಾನಿ ಗಿರೀಶ್ ಮಲ್ಲಪ್ಪ ಅವರಿಂದ 5 ಲಕ್ಷ ರೂ. ಪಡೆದು ವಿದ್ಯಾರ್ಥಿಗಳಿಗೆAI ಶಿಕ್ಷಣವನ್ನು ನೀಡುತ್ತಿದ್ದಾರೆ. ಪ್ರತಿವರ್ಷ ಟ್ರ್ಯಾಕ್ ಸೂಟ್, ಉಚಿತ ನೋಟ್ ಪುಸ್ತಕ, ಚಟುವಟಿಕಾ ಪುಸ್ತಕ ಕೊಡಿಸುತ್ತಿದ್ದಾರೆ. ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಕ್ಕೆ ಎಸ್ಡಿಎಂಸಿ, ಊರವರ ಒಪ್ಪಿಗೆ ಪಡೆದು ಇಲಾಖೆಗೆ ಕಳುಹಿಸಿದ್ದಾರೆ. ಲಾಂಗ್ವೇಜ್ ಲ್ಯಾಬ್, ಸ್ವಾಗತ ಕಮಾನು, ನನ್ನ ಪ್ರೀತಿಯ ಸರಕಾರಿ ಶಾಲೆ ಲೈಟಿಂಗ್ ಬೋರ್ಡ್, ಭೋಜನ ಕುಟೀರ ಮಾಡಲು ಯೋಜನೆ ಸಿದ್ಧಪಡಿಸಿದ್ದಾರೆ. ಮಣಿಪಾಲ್ ಎಜುಕೇಷನ್ ಸೊಸೈಟಿ ಸಿಎಸ್ಆರ್ ಫಂಡ್ಗಾಗಿ ಶ್ರಮಿಸುತ್ತಿದ್ದಾರೆ.
ತಾನು ಕಲಿತ ಕೊಣನೂರಿನ ಸರಕಾರಿ ಪ್ರಾಥಮಿಕ ಶಾಲೆಯ ದುಸ್ಥಿತಿ ಕಂಡು 5 ಸ್ನೇಹಿತರೊಂದಿಗೆ ಸೇರಿ 2017ರಲ್ಲಿ ಹಿರಿಯ ವಿದ್ಯಾರ್ಥಿಗಳ ವೇದಿಕೆಯನ್ನು ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದರು. ಅಲ್ಲದೆ, ಕಾರ್ಯದರ್ಶಿಯಾಗಿ ಬೆಂಗಳೂರು, ಮೈಸೂರು, ಹಾಸನ, ಕೊಡಗು ಸೇರಿದಂತೆ ರಾಜ್ಯಾದ್ಯಂತ, ದೇಶ-ವಿದೇಶದಲ್ಲಿರುವ ಹಿರಿಯ ವಿದ್ಯಾರ್ಥಿಗಳನ್ನು ವಾಟ್ಸ್ಆ್ಯಪ್, ಫೇಸ್ಬುಕ್ ಮೂಲಕ ಸಂಘಕ್ಕೆ ಸೇರಿಸಿ 60 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ನವೀಕರಣ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಉದ್ಯಾನವನ, ಶಾರದಾ ಪ್ರತಿಮೆ, ಕುಡಿಯುವ ನೀರು, ಹೈಟೆಕ್ ಶೌಚಾಲಯ ಸೇರಿದಂತೆ 9 ಅಜೆಂಡಾಗಳನ್ನು ಪೂರೈಸಿದ್ದರು.
2024ರಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಶತಮಾನೋತ್ಸವ ಮಾಡಿ 100 ಶಿಕ್ಷಕರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿ ಶಿಕ್ಷಕರ ಜಾತ್ರೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಪದ್ಮಶ್ರೀ ಹರೇಕಳ ಹಾಜಬ್ಬ ಅವರು ವಿಶೇಷ ಅತಿಥಿಯಾಗಿ ಬಂದಿದ್ದರು. ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಾಟ್ಸ್ಆ್ಯಪ್ ಸಂದೇಶಕ್ಕೆ ಸ್ಪಂದಿಸಿ ಸಂಜೆ 5 ಗಂಟೆಗೆ ಶಾಲೆಗೆ ಬಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಘಟನೆಯನ್ನು ನಾನೆಂದೂ ಮರೆಯಲಾರೆ. ತಮ್ಮ ಸಂಬಳದಿಂದ ಚೇರ್, ಟ್ರ್ಯಾಕ್ ಸೂಟ್ ಅನ್ನು ತಮ್ಮ ತಾಯಿಯಿಂದ ಕೊಡಿಸಿದ್ದು ಬದುಕಿನ ಸಂತಸ ಎನ್ನುತ್ತಾರೆ ರತ್ನಕುಮಾರ್.






