3 ವರ್ಷ ಕಳೆದರೂ ಉಪಯೋಗಕ್ಕೆ ಬಾರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ

ದೇವದುರ್ಗ: ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಪಕ್ಕದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆಂದು ಕಟ್ಟಿರುವ ಕಟ್ಟಡ 3ವರ್ಷ ಕಳೆದರೂ ಉಪಯೋಗಕ್ಕೆ ಬಾರದಾಗಿದೆ.
ಕಟ್ಟಡದ ಕಾಮಗಾರಿ ಮುಗಿದರೂ ಸರಕಾರದ ಗುತ್ತಿಗೆ ಸಂಸ್ಥೆಯಾದ ಲ್ಯಾಂಡ್ ಅರ್ಮಿ ಸಂಬಂಧ ಪಟ್ಟ ಇಲಾಖೆಗೆ ಹಸ್ತಾಂತರಿಸಿಲ್ಲ. ಇದಕ್ಕೆ ಕಳಪೆ ಕಾಮಗಾರಿಯೇ ಪ್ರಮುಖ ಕಾರಣವಾಗಿರಬಹುದು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ, ಆಗಲೇ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ನೆಲಹಾಸು ಕಿತ್ತು ಬಂದಿರುವುದು, ಪ್ಲಂಬಿಂಗ್ ಕಿತ್ತು ಹೋಗಿದ್ದು, ಕಬ್ಬಿಣ ತುಕ್ಕು ಹಿಡಿಯುತ್ತಿದೆ, ನೀರಿನ ಟ್ಯಾಂಕ್ ಕಿತ್ತು ಕೆಳಗೆ ಬಿದ್ದಿದ್ದು, ಮಳೆ ನೀರು ಸೋರುತ್ತಿದೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಂತಿದೆ.
ದೇವದುರ್ಗದ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಅವರ ಅವಧಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕಟ್ಟಡದ ಇಂದಿನ ಸ್ಥಿತಿ ಕಂಡು ಸಾರ್ವಜನಿಕರು ಭ್ರಷ್ಟಾಚಾರ ಮತ್ತು ಸರಕಾರದ ಹಣದ ದುರುಪಯೋಗದ ಆರೋಪ ಮಾಡುತ್ತಿದ್ದಾರೆ.
ಇದು ಒಂದೇ ಕಟ್ಟಡದ ಸಮಸ್ಯೆಯಲ್ಲ. ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ ಅವಧಿಯಲ್ಲಿ ಲ್ಯಾಂಡ್ ಆರ್ಮಿ ನಿರ್ಮಿಸಿದ ಅನೇಕ ಕಟ್ಟಡಗಳ ಸ್ಥಿತಿಯೂ ಇದೇ ರೀತಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದ ದೇವದುರ್ಗದಲ್ಲಿ ಸರಕಾರಿ ಕಟ್ಟಡಗಳ ಗುಣಮಟ್ಟ ಕುಸಿದಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ದೇವದುರ್ಗದಲ್ಲಿ ಖಾಸಗಿ ಕಟ್ಟಡದ ಮೇಲ್ಚಾವಣಿ ಕುಸಿದು ಮೂವರು ಮೃತಪಟ್ಟ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಕಳಪೆ ಕಟ್ಟಡ ನಿರ್ಮಾಣಗಳು ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿದ್ದು, ಸರಕಾರ ಮುಂದಿನ ದಿನಗಳಲ್ಲಿ ಗುಣಮಟ್ಟದ ಕಟ್ಟಡಗಳ ನಿರ್ಮಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ನೀಡುತ್ತದೆ. ಆದರೆ ಗುತ್ತಿಗೆದಾರರ ಕಳಪೆ ಕಾಮಗಾರಿಯನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಟೆಂಡರ್ ನೀಡಿದ ಬಳಿಕ ಮೇಲ್ವಿಚಾರಣೆ ಇಲ್ಲದಂತಾಗಿರುವುದರಿಂದಲೇ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲೂಕಿನಲ್ಲಿ ಹಲವು ಶಾಲಾ, ಕಾಲೇಜು, ಶೌಚಾಲಯ ಹಾಗೂ ವಸತಿ ನಿಲಯಗಳ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಲ್ಲಿವೆ ಎಂಬುದು ಎಲ್ಲರ ಗಮನಕ್ಕೂ ಬಂದಿದೆ. ಆದರೂ ಇದನ್ನು ಪ್ರಶ್ನಿಸಲು ಯಾರು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಇತ್ತೀಚೆಗೆ ಇಲ್ಲಿಗೆ ಬಂದಿದ್ದೇನೆ. ಕಟ್ಟಡ ಕಾಮಗಾರಿ ಆಗಿದೆ ಎಂಬುದು ಗಮನದಲ್ಲಿದೆ. ಸದ್ಯ ಹಳೆಯ ಕಟ್ಟಡದಲ್ಲೇ ಕಾಲೇಜು ಮುಂದುವರಿದಿದೆ. ನಮ್ಮ ಇಲಾಖೆಯಿಂದ ಕಟ್ಟಡ ಹಸ್ತಾಂತರ ಮಾಡಿಕೊಳ್ಳಲು ಮೇಲಾಧಿಕಾರಿಗಳಿಂದ ಯಾವುದೇ ರೀತಿಯ ಅನುಮತಿ ಬಂದಿಲ್ಲ.
-ಹಯ್ಯಾಲಪ್ಪ, ಪ್ರಾಂಶುಪಾಲರು
ಸರಕಾರಿ ಪ್ರಥಮ ದರ್ಜೆ ಕಾಲೇಜು, ದೇವದುರ್ಗ
ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷ ಕಳೆದಿದೆ. ಎಲೆಕ್ಟ್ರಿಕಲ್ ಕೆಲಸ ಮಾತ್ರ ಬಾಕಿ ಇದೆ. ಕಟ್ಟಡ ಹಸ್ತಾಂತರ ಮಾಡಿಕೊಳ್ಳಲು ಹೇಳಿದ್ದೇವೆ. ಆದರೆ ಇಲಾಖೆ ನಾಲ್ಕು ಎಕರೆ ಜಾಗದಲ್ಲಿ ಕಟ್ಟಡ ಇರಬೇಕು ಎಂದು ಹೇಳುತ್ತಿದೆ. ಈಗ ನಿರ್ಮಿಸಿರುವ ಕಟ್ಟಡ ಒಂದು ಎಕರೆ ಜಾಗದಲ್ಲಿರುವುದರಿಂದ ಹಸ್ತಾಂತರ ಮಾಡಿಕೊಳ್ಳುತ್ತಿಲ್ಲ.
-ಹನುಮಯ್ಯ
ಲ್ಯಾಂಡ್ ಆರ್ಮಿ ಅಧಿಕಾರಿ, ದೇವದುರ್ಗ






