ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಚಿತ್ತಾರಗಳ ವಿಸ್ಮಯ ಲೋಕ
ಚಿತ್ರಕಲಾ ಶಿಕ್ಷಕರ ಕೈಚಳಕ: ಕೊರೋನ ಸಂದರ್ಭದ ರಜೆಯ ಸದ್ಬಳಕೆ

ಬೆಳ್ತಂಗಡಿ: ಇಲ್ಲೊಂದು ಎಲ್ಲರ ಗಮನಸೆಳೆಯುವ ಸರಕಾರಿ ಶಾಲೆಯಿದೆ. ಇಲ್ಲಿ ಗೋಡೆ, ಆವರಣ, ತರಗತಿ ಕೋಣೆಗಳು, ಸಭಾಂಗಣಗಳು ವಿವಿಧ ಬಣ್ಣಗಳಿಂದ, ಕಣ್ಮನ ಸೆಳೆಯುವ ಚಿತ್ತಾರಗಳಿಂದ ಮಕ್ಕಳ ಮನಸ್ಸನ್ನು ಸೂರೆಗೊಳ್ಳುತಿದೆ.
ಇದು ಬೆಳ್ತಂಗಡಿ ತಾಲೂಕಿನಲ್ಲಿರುವ ಗುರುವಾಯನಕೆರೆ ನಮ್ಮೂರ ಸರಕಾರಿ ಪ್ರೌಢಶಾಲೆಯ ಅತ್ಯಾಕರ್ಷಕ ಚಿತ್ರಣಗಳು. ಶಾಲೆಯನ್ನು ಹೀಗೆ ಚಿತ್ತಾರಗಳಿಂದ ಸಿಂಗರಿಸಿ ರಂಗುಗೊಳಿಸಿ ಆಕರ್ಷಕವಾಗಿಸಿದವರು ಈ ಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ ಕೆ. ವಿಟ್ಲ.
ಅವರ ಅದ್ಭುತ ಪ್ರತಿಭೆ ಹಾಗೂ ಪರಿಶ್ರಮ ಮಾದರಿ ಎನಿಸಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಇದೆಲ್ಲ ಅವರಿಗೆ ಸಾಧ್ಯವಾಗಿದೆ. ಕೊರೋನ ಸಂದರ್ಭದಲ್ಲಿ ದೊರೆತ ರಜೆಯನ್ನು ಸದುಪಯೋಗಪಡಿಸಿಕೊಂಡು ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳ ತಂಡ ಈ ಕೆಲಸ ಮಾಡಿರುವುದು ವಿಶೇಷ.
ಆ ಶಾಲೆಯ ದಾರಿಗೆ ಮುಖವಿಟ್ಟು ನಡೆಯುವಾಗ ಅಕ್ಕಪಕ್ಕದಲ್ಲಿ ಹಸಿರು ಗಿಡಮರಗಳು ಕಣ್ತುಂಬಿಕೊಳ್ಳುತ್ತವೆ. ಮುಂದೆ ನಡೆದಾಗ ಕೆಂಪು, ಹಳದಿ, ನೀಲಿ ಮೊದಲಾದ ಸುಂದರ ಬಣ್ಣಗಳಿಂದ ಮೈತುಂಬಿಕೊಂಡಿರುವ ದೊಡ್ಡ ಚಿಟ್ಟೆಯೊಂದು ಕಣ್ಮನ ಸೆಳೆಯುತ್ತದೆ. ಅಲ್ಲಿಂದ ಹೊರಳಿದಾಗ ಭಿತ್ತಿಯ ಮೇಲೆ ನಮ್ಮ ದೇಶದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಚಿತ್ರ ಕಾಣಿಸುತ್ತದೆ. ಅಲ್ಲಿಂದ ಮುಂದೆ ಕಣ್ಣು ಹಾಯಿಸಿದಲ್ಲೆಲ್ಲ ಒಂದಲ್ಲ ಒಂದು ಚಿತ್ರ, ನುಡಿಮುತ್ತು, ಕಲಾಕೃತಿ ನಮ್ಮ ಕಣ್ಣಿಗೆ ಬೀಳುತ್ತಾ ಹೋಗುತ್ತದೆ.
ಎದುರಲ್ಲೇ ಕಾಣುವ ಕಥಕ್ಕಳಿ ವೇಷಧಾರಿಯ ಬೃಹತ್ ಪ್ರತಿಕೃತಿ ಸೂಕ್ಷ್ಮ ಕಲಾ ಕೆಲಸವನ್ನು ಒಳಗೊಂಡಿದ್ದು, ಅತ್ಯಾಕರ್ಷಕವಾಗಿದೆ. ಅದರ ಹತ್ತಿರದಲ್ಲೇ ನೈಸರ್ಗಿಕವಾಗಿ ಇದ್ದ ಆನೆಯ ದೇಹದಾಕಾರವನ್ನು ಹೊಂದಿದ್ದ ದೊಡ್ಡ ಬಂಡೆಗೆ ಒಪ್ಪುವ ಹಾಗೆ ಸುಂದರ ಸೊಂಡಿಲನ್ನು ಸಿದ್ಧಪಡಿಸಿ ಜೋಡಿಸಲಾಗಿದ್ದು ನಿಜವಾದ ಆನೆಯನ್ನು ಕಂಡಂತೆಯೇ ಆಗುತ್ತದೆ. ಆ ಆನೆಯ ಸೊಂಡಿಲಿನಿಂದ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದ್ದು, ಆಕರ್ಷಕವಾಗಿದೆ.
ಅದರಾಚೆ ಮಳೆ ಕೊಯ್ಲಿಗೆಂದು ನಿರ್ಮಿಸಲಾದ ನೀರು ಸಂಗ್ರಾಹಕಕ್ಕೆ ಚಂದದ ಯಕ್ಷಗಾನದ ಮುಖವನ್ನು ಅಳವಡಿಸಿ ಸೌಂದರ್ಯ ಪ್ರಜ್ಞೆ ಮೆರೆದಿದ್ಧಾರೆ. ಈ ಕಡೆ ಒಂದು ಗೋಡೆಯ ಮೇಲೆ ಒಂದೇ ನೋಟಕ್ಕೆ ಗೊತ್ತಾಗದ, ಕಣ್ಣಿಟ್ಟು ನೋಡಿದರಷ್ಟೇ ಯಾರೆಂದು ತಿಳಿಯುವ, ಡಾ.ಶಿವರಾಮ ಕಾರಂತರ ಮುಖದ ಚಿತ್ರ ನಮ್ಮ ಬುದ್ಧಿಗೆ ಕೆಲಸ ಕೊಡುತ್ತದೆ. ಇನ್ನೊಂದು ಗೋಡೆಯ ಮೇಲೆ ಪಾಟಿಚೀಲ ಧರಿಸಿ ಸಾಗರದಿಂದ ಆಗಸದೆಡೆಗೆ ಮೆಟ್ಟಿಲೇರಿ ನಡೆಯುತ್ತಿರುವ ಬಾಲಕಿಯ ಚಿತ್ರ ನೋಡುಗರ ಮನಸ್ಸನ್ನು ಸೆಳೆಯುತ್ತದೆ.
ವಿದ್ಯೆಯ ಹಂಬಲದಲ್ಲಿ ಕನಸುಗಳ ಮೂಟೆ ಹೊತ್ತು ಎತ್ತರೆತ್ತರಕ್ಕೆ ಏರಿ ಹೋಗುತ್ತಿರುವ ಬಾಲಕಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಕಲ್ಪನೆ ನಿಜಕ್ಕೂ ಸುಂದರ ಅನಿಸದಿರದು. ಶಾಲೆಯ ಪ್ರತೀ ಗೋಡೆಯಲ್ಲೂ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಚಿತ್ರ ಚಿತ್ತಾರಗಳು ನುಡಿಮುತ್ತುಗಳು ತುಂಬಿವೆ. ಗೋಡೆಯೊಂದರ ಮೇಲೆ ಕಾಣುವ ಜಿಂಕೆಗಳು ಹಾಗೂ ಮರಗಳ ಚಿತ್ರ ಮನಮೋಹಕ. ಶಾಲಾ ಸಭಾಂಗಣವನ್ನು ಹೊಕ್ಕರೆ ಅದ್ಭುತ ಅನುಭವವೊಂದರ ಗುಂಗಿನಲ್ಲಿ ಬೀಳುತ್ತೇವೆ.
ಇಡೀ ಸಭಾಂಗಣವನ್ನು ಅಕ್ವೇರಿಯಂ ಎಂಬಂತೆ ಕಲ್ಪಿಸಿಕೊಂಡು ಮೂಡಿಸಲಾಗಿರುವ ವಿವಿಧ ಜಲಚರಗಳ ಜೊತೆ ನಾವೂ ಒಂದಾಗಿ ಬಿಡುತ್ತೇವೆ. ಸಭಾಂಗಣದ ಛಾವಣಿಯನ್ನು ಕೂಡ ಆಕಾಶವೆಂಬ ಕಲ್ಪನೆಯಲ್ಲಿ ವಿವಿಧ ಚಿತ್ತಾರಗಳಿಂದ ಸಿಂಗರಿಸಲಾಗಿದೆ. ಡಾಲ್ಫಿನ್ಮೇಲೆ ಕೂತ ಮಕ್ಕಳ ಚಿತ್ರವು ಮನಸ್ಸಿಗೆ ಮುದ ನೀಡುತ್ತದೆ. ಇನ್ನೊಂದು ಕಡೆ ಬುದ್ಧಗುರುವಿನ ಪ್ರಶಾಂತ ಮುಖ ದೈವಿಕ ಅನುಭೂತಿಯನ್ನು ನೀಡುತ್ತದೆ. ಕನಸು ಕಲ್ಪನೆಗಳಲ್ಲಿ ಮೈಮರೆಯುವ ಮಕ್ಕಳ ಮನಸ್ಸಿಗೆ ಈ ಶಾಲೆಯ ಪ್ರತೀ ಗೋಡೆಯಲ್ಲೂ ಕಾಣುವ ಬಣ್ಣದ ಚಿತ್ತಾರಗಳು ಹೊಸ ಲೋಕವನ್ನೇ ತೆರೆದಿಡುತ್ತವೆ. ಶಿಕ್ಷಕರು ಹಾಗೂ ಮಕ್ಕಳ ಕೈಚಳಕದಿಂದ ತಯಾರಾದ ಹಲವಾರು ಸುಂದರ ಕಲಾಕೃತಿಗಳನ್ನು ಒಪ್ಪವಾಗಿ ಜೋಡಿಸಿಟ್ಟಿರುವ ಡ್ರಾಯಿಂಗ್ರೂಂ ಕೂಡ ಈ ಶಾಲೆಯಲ್ಲಿ ಇದೆ.
ದ.ಕ. ಜಿಲ್ಲೆಯಲ್ಲೇ ಮಾದರಿ ಸರಕಾರಿ ಶಾಲೆ
1978ರಲ್ಲಿ ಪ್ರಾರಂಭವಾಗಿರುವ ಈ ಶಾಲೆ 45 ವರ್ಷಗಳನ್ನು ಪೂರೈಸಿದ್ದು ಸುವರ್ಣ ಸಂಭ್ರಮವನ್ನು ಎದುರು ನೋಡುತ್ತಿದೆ. ಈ ಶಾಲೆಯಲ್ಲಿ 315 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಎಂಟು ಶಿಕ್ಷಕರ ತಂಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ.
ಎಸೆಸೆಲ್ಸಿಯಲ್ಲಿ ನಿರಂತರ ಎಂಟು ವರ್ಷಗಳ ಕಾಲ ಶೇ.100 ಫಲಿತಾಂಶ ತರುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡು ಬಂದ ದಾಖಲೆಯನ್ನು ಹೊತ್ತ ಶಾಲೆಯಿದು. ವ್ಯವಸ್ಥಿತ ತರಗತಿ ಕೋಣೆಗಳು, ಸ್ಮಾರ್ಟ್ ಕ್ಲಾಸ್ಗಳು, ಇ ಕ್ಲಾಸ್ಗಳು, ಅಟಲ್ ಟಿಂಕರಿಂಗ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯ, ಅತ್ಯುತ್ತಮ ಆಟದ ಮೈದಾನ, ಪ್ರತೀ ತರಗತಿ ಕೋಣೆಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ನಿರಂತರ ವಿದ್ಯುತ್ ಪೂರೈಕೆಗಾಗಿ ಇನ್ವರ್ಟರ್ ಅಳವಡಿಕೆ ಮೊದಲಾದ ಹಲವಾರು ವಿಶೇಷ ಸೌಲಭ್ಯಗಳನ್ನು ಮಕ್ಕಳು ಅನುಭವಿಸುತ್ತಿದ್ದಾರೆ.
ಇಲ್ಲಿನ ಹಳೆ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ವ್ಯಾಪಾರಿಗಳಿದ್ದಾರೆ. ಐಎಎಸ್ ಅಧಿಕಾರಿಗಳಿದ್ಧಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿದ್ದಾರೆ. ಮಕ್ಕಳನ್ನು ತಿದ್ದಿ ತೀಡಿ ನಾಗರಿಕರನ್ನಾಗಿಸಿ ಸಮಾಜಕ್ಕೆ ನೀಡುತ್ತಿರುವ ಈ ಶಾಲೆ ಧನ್ಯತಾಭಾವದಿಂದ ಬೀಗುತ್ತಿದೆ. ಸಮುದಾಯದ ಸಹಭಾಗಿತ್ವವೂ ಉತ್ತಮವಾಗಿದೆ. ಈ ಶಾಲೆಯು ಈ ಊರಿನ ದೊಡ್ಡ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ.
ಶಾಲೆಯ ಕಲಾಕೃತಿಗಳು ಹಾಗೂ ಚಿತ್ರಗಳಿಗೆ ಕೊರೋನ ಲಾಕ್ಡೌನ್ ಸಂದರ್ಭದಲ್ಲಿ ನಾವು ಚಾಲನೆ ನೀಡಿದ್ದು, ನನ್ನ ಜೊತೆ ಈ ಶಾಲೆಯ ಹಳೆ ವಿದ್ಯಾರ್ಥಿಗಳೂ ಸೇರಿಕೊಂಡಿದ್ದರು. ಇಲ್ಲಿ ಕಲಾಕೃತಿ ಹಾಗೂ ಚಿತ್ರಗಳನ್ನು ಶಾಲಾ ಮಕ್ಕಳಿಗೆ ಇಷ್ಟ ಆಗುವ ರೀತಿಯಲ್ಲಿ ರಚಿಸಲಾಗಿದೆ. ಇದನ್ನೆಲ್ಲ ನೋಡಿಕೊಂಡು ವಿದ್ಯಾರ್ಥಿಗಳು ತುಂಬಾ ಖುಷಿ ಪಡುತ್ತಿದ್ದಾರೆ.
-ವಿಶ್ವನಾಥ್ ಕೆ.ವಿಟ್ಲ, ಕಲಾ ಶಿಕ್ಷಕರು







