ಒಳಮೀಸಲಾತಿಯಿಲ್ಲದೆ ಉದ್ಯೋಗ ಭರ್ತಿ ಮಾಡುವುದು ಅನ್ಯಾಯ, ಖಂಡನೀಯ

ಒಳಮೀಸಲಾತಿಯನ್ನು ವಿರೋಧಿಸುವುದು ಅಥವಾ ಪರೋಕ್ಷವಾಗಿ ಅದು ಜಾರಿಯಾಗದಂತೆ ನೋಡಿಕೊಳ್ಳುವುದು ಮೀಸಲಾತಿಯನ್ನೇ ವಿರೋಧಿಸುವ ಹಿಂದುತ್ವವಾದಿ ರಾಜಕಾರಣವನ್ನೇ ಗಟ್ಟಿಗೊಳಿಸುತ್ತದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಹೊಸ ಉದ್ಯೋಗ ನೇಮಕಾತಿಯನ್ನು 2022 ರ ಮೀಸಲಾತಿ ಮತ್ತು ರೋಸ್ಟರ್ ನಂತೆ ಮಾಡುವುದಾಗಿ ಘೋಷಿಸಿ ಕರ್ನಾಟಕವನ್ನು ಒಳಮೀಸಲಾತಿ ಪೂರ್ವ ಕಾಲಕ್ಕೆ ಹಿಂದಕ್ಕೇಕೆ ತಳ್ಳಿದೆ. ಇದು ಸಾಮಾಜಿಕ ನ್ಯಾಯಕ್ಕೆ ಮಹಾ ಹಿನ್ನೆಡೆಯುಂಟು ಮಾಡಿ ದಮನಿತರಲ್ಲೇ ಅತ್ಯಂತ ದಮನಿತ ಸಮುದಾಯಗಳಿಗೆ ದ್ರೋಹ ಬಗೆದಿದೆ.
ಈ ಅನ್ಯಾಯಕ್ಕೆ ಪ್ರಮುಖವಾಗಿ ಕಾಂಗ್ರೆಸ್ ಸರ್ಕಾರದ ಅವಕಾಶವಾದಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳೇ ಕಾರಣ.
ಕಾಂಗ್ರೆಸ್ಸಿನ ಪಟ್ಟಭದ್ರ ಅವಕಾಶವಾದ
ಒಂದೇ ದಿನ ಒಳಮೀಸಲಾತಿ ಕಾನೂನು ಜಾರಿ ಮಾಡಿ ಮತ್ತೊಂದೆಡೆ ನ್ಯಾಯಾಲಯದ ಕಡೆ ಬೊಟ್ಟು ತೋರಿಸಿ ಸದ್ಯದ ನೇಮಕಾತಿಯಲ್ಲಿ ಒಳಮೀಸಲಾತಿಯ ಬಗ್ಗೆ ಮೌನ ವಹಿಸಿರುವುದು ಸಾಮಾಜಿಕ ನ್ಯಾಯಕ್ಕೆ ಮಾಡಿರುವ ಮಹಾದ್ರೋಹ. ಈ ಮೂಲಕ ಕಾಂಗ್ರೆಸ್ ಸರ್ಕಾರ ಮೀಸಲಾತಿ ವಿರೋಧಿ ಬ್ರಾಹ್ಮಣವಾದಿ ಸಂಘಿಗಳ ರಾಜಕೀಯವನ್ನೇ ಗಟ್ಟಿಗೊಳಿಸುತ್ತಿದೆ.
ಹಾಗೆ ನೋಡಿದರೆ ಪ್ರಾರಂಭದಿಂದಲೂ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯ ಬಗ್ಗೆ ಬದ್ಧತೆಯನ್ನೇ ತೋರಿಸಿಲ್ಲ. ನಾಗಮೋಹನ್ ದಾಸ್ ವರದಿಯಲ್ಲಿ ಇದ್ದಿರಬಹುದಾದ ಕೆಲವು ಗೊಂದಲಗಳನ್ನು ಸರಿಪಡಿಸಿ ಸಾರದಲ್ಲೇ ಜಾರಿ ಮಾಡುವ ಬದಲು, ನಾಗಮೋಹನ್ ದಾಸ್ ವರದಿಯ ಸಾರವನ್ನೇ ತಿರಸ್ಕರಿಸಿ 6:6:5 ಸೂತ್ರದ ಕಾನೂನು ಮಾಡಿತು. ಆ ಮೂಲಕ ಅತ್ಯಂತ ಹಿಂದುಳಿದ ದಲಿತ ಅಲೆಮಾರಿ ಸಮುದಾಯಗಳಿಗೆ ಇನ್ನಿಲ್ಲದ ಅನ್ಯಾಯವನ್ನು ಮಾಡಿತು. ಕೋರ್ಟಿನಲ್ಲಿ ದಲಿತ ಅಲೆಮಾರಿಗಳು ಗ್ರೂಪ್ ಸಿ ಯಲ್ಲಿರುವ ಸೃಶ್ಯ ಪರಿಶಿಷ್ಟ ಜಾತಿಗಳಷ್ಟೇ ಮುಂದುವರೆದಿದ್ದಾರೆಂದು ವಾದಿಸಿತು. ಈ ಅನ್ಯಾಯದ ಕಾರಣಕ್ಕಾಗಿಯೇ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಒಳಮೀಸಲಾತಿ ವಿಷಯ ಕೋರ್ಟಿನ ಮೆಟ್ಟಿಲೇರುವಂತಾಯಿತು.
ಈಗ ಕೋರ್ಟನ್ನು ನೆಪವಾಗಿ ತೋರಿಸಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯಿಲ್ಲದ ನೇಮಕಾತಿಯನ್ನು ಮಾಡಹೊರಟಿದೆ. ಕಾಂಗ್ರೆಸ್ ಸರ್ಕಾರದ ಈ ಅನ್ಯಾಯವನ್ನು ಸಾಮಾಜಿಕ ನ್ಯಾಯಕ್ಕೆ ಬದ್ಧರಾದ ಎಲ್ಲರೂ ಒಕ್ಕೊರಲಿಂದ ತಡೆಗಟ್ಟಬೇಕಿದೆ.
ಬಿಜೆಪಿಯ ಮನುವಾದಿ ಕುತಂತ್ರ
ಮತ್ತೊಂದೆಡೆ ವಿರೋಧಿ ಬಿಜೆಪಿ ಪಕ್ಷ ಅಲೆಮಾರಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಹುಸಿ ಕಣ್ಣೀರು ಹಾಕುತ್ತಾ ಬಂದರೂ, ವಿಧಾನಸಭೆಯಲ್ಲಿ ಮಾತ್ರ ಈ ಅನ್ಯಾಯದ ಕಾನೂನು ಜಾರಿಯಾಗಲು ಕಾಂಗ್ರೆಸ್ ಸರ್ಕಾರಕ್ಕೆ ಸಹಕರಿಸಿತು. ಅಷ್ಟು ಮಾತ್ರವಲ್ಲದೆ ರೋಸ್ಟರ್ ಸೂತ್ರದಲ್ಲಿ ಇರಬಹುದಾದ ತಪ್ಪು ಗ್ರಹಿಕೆ/ಗೊಂದಲಗಳಿಗೆ ನ್ಯಾಯಸಮ್ಮತ ಪರಿಹಾರ ಹುಡುಕದೆ ಅಸ್ಪರ್ಶ್ಯ ಸಮುದಾಯದ ನಡುವೆ ಶಾಶ್ವತ ಒಡಕುಂಟು ಮಾಡುವ ಹುನ್ನಾರಗಳಿಗೆ ಮುಂದಾಗಿದೆ. ಈ ಒಡಕನ್ನೇ ಹಿಗ್ಗಿಸುತ್ತಾ ತನ್ನ ತತ್ ಕ್ಷಣದ ರಾಜಕೀಯ ಲಾಭಕ್ಕೂ, ಮತ್ತು ದೀರ್ಘಕಾಲೀನ ಬ್ರಾಹ್ಮಣವಾದಿ ಹಿಂದುತ್ವ ರಾಜಕೀಯಕ್ಕೂ ಬಳಸಿಕೊಳ್ಳುತ್ತಿದೆ.
ಹಾಗೆ ನೋಡಿದರೆ 2022 ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಮೀಸಲಾತಿಯನ್ನು ಶೇ. 50ರಿಂದ ಶೇ.56 ಕ್ಕೆ ಏರಿಸುವ ಕಾನೂನು ಮಾಡಿದರೂ ಅದಕ್ಕೆ ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನೂ ಅನುಸರಿಸಲಿಲ್ಲ.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ಶೇ. 56 ಮೀಸಲಾತಿಯನ್ನು ಒಂಭತ್ತನೇ ಷೆಡ್ಯೂಲಿಗೆ ಸೇರಿಸಿ ಶೇ. 56 ರ ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸುವ ಆ ಮೂಲಕ ನ್ಯಾಯಂಗ ವಿಚಕ್ಷಣೆಯಿಂದ ಈ ಕಾನೂನನ್ನು ಹೊರಗಿಡಲು ಬೇಕಾದ ಸಂಸದರ ಸಂಖ್ಯಾ ಬಲವಿದ್ದರೂ ಕೇಂದ್ರದ ಬಿಜೆಪಿ ಸರ್ಕಾರವಾಗಲೀ, ರಾಜ್ಯದ ಬಿಜೆಪಿಯಾಗಲೀ ಅದರ ಬಗ್ಗೆ ಮುತುವರ್ಜಿ ವಹಿಸಲಿಲ್ಲ.
ಅದರ ಬದಲಿಗೆ ಮೇಲ್ಜಾತಿ ಮಧ್ಯಮ ವರ್ಗಕ್ಕೆ ಶೇ. 10 ರಷ್ಟು EWS ಮೀಸಲಾತಿ ಕೊಡಿಸಲು ಮಾತ್ರ ಬ್ರಾಹ್ಮಣವಾದಿ ಬಿಜೆಪಿ ಇನ್ನಿಲ್ಲದ ಮುತುವರ್ಜಿ ವಹಿಸಿತು.
ಹೀಗಾಗಿ ಇಂದು ಹೈಕೋರ್ಟು ಶೇ. 56 ಮೀಸಲಾತಿಗೆ ತಡೆಯೊಡ್ಡುವುದಕ್ಕೆ ಪ್ರಧಾನ ಹೊಣೆಗಾರಿಕೆ ಹೊರಬೇಕಾಗಿರುವುದು ಬಿಜೆಪಿಯೇ. ಈಗ ಅದನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರ ಕೂಡ ಒಳಮೀಸಲಾತಿಯನ್ನು ನೆನೆಗುದಿಗೆ ತಳ್ಳುವ ಅನ್ಯಾಯ ಮಾಡುತ್ತಿದೆ.
ಸಾಮಾಜಿಕ ನ್ಯಾಯವೆಂದರೆ ಅತ್ಯಂತ ವಂಚಿತರಿಗೆ ಮೊದಲ ಆದ್ಯತೆಯೇ ಅಲ್ಲವೇ?
ಹಂಚುಣ್ಣುವುದು, ಅತ್ಯಂತ ವಂಚಿತರಿಗೆ ಮೊದಲ ಆದ್ಯತೆಯ ಮೇರೆಗೆ ಅವಕಾಶ ಹಾಗೂ ಸಂಪನ್ಮೂಲಗಳನ್ನು ಒದಗಿಸುವುದೇ ಸಾಮಾಜಿಕ ನ್ಯಾಯ .
ಈ ಪ್ರಕ್ರಿಯೆಯಲ್ಲಿ ಈಗಾಗಲೇ ಹೆಚ್ಚು ಪಡೆಯುತ್ತಿರುವವರು ಮೊದಲಿಗಿಂತ ಕಡಿಮೆ ಪಡೆಯುವುದು , ಈವರೆಗೆ ಕಡಿಮೆ ಪಡೆಯುತ್ತಿದ್ದವರು ಹೆಚ್ಚು ಪಡೆಯುವುದು ಸಹಜ ಸಾಮಾಜಿಕ ನ್ಯಾಯ ಪ್ರಕ್ರಿಯೆ.
ಅದರ ಬದಲಿಗೆ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದೆಂದರೆ ಈವರೆಗೆ ನಡೆಯುತ್ತಾ ಬಂದ ಸಾಮಾಜಿಕ ಅನ್ಯಾಯದ ಮುಂದುವರಿಕೆಯ ಸಮರ್ಥನೆಯಾಗುತ್ತದೆ. ಅರ್ಥಾತ್ ಬ್ರಾಹ್ಮಣವಾದ ಸಮರ್ಥನೆಯೇ ಆಗಿಬಿಡುತ್ತದೆ.
ಇದ್ದಕ್ಕಿರುವ ಏಕೈಕ ಪರಿಹಾರ ನ್ಯಾಯದ ಪಾಲನ್ನು ನಿರಾಕರಿಸುವುದಲ್ಲ.ಪಾಲಿನ ಪ್ರಮಾಣವನ್ನು ಹೆಚ್ಚಿಸಲು ಒಟ್ಟಾಗಿ ಹೋರಾಡುವುದು. ಅರ್ಥಾತ್
-ಶೇ. 50 ರ ಅವೈಜ್ಞಾನಿಕ ಮೇಲ್ಮಿತಿಯನ್ನು ಕಿತ್ತುಹಾಕಲು,
-ಸರ್ಕಾರಿ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಲು
-ಸರ್ಕಾರಿ ಉದ್ಯೋಗಗಳ ಖಾಸಗೀಕರಣ, ಗುತ್ತಿಗೆಕರಣವನ್ನು ತಡೆಯಲು,
-ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಲು ನಿರ್ಬಂಧಿಸುವ FRBM ಕಾಯಿದೆ ರದ್ದು ಪಡಿಸಲು
ಹಾಗೂ
-ದೇಶದ ಸಂಪನ್ಮೂಲಗಳನ್ನು ಸಾಮಾಜಿಕ ನ್ಯಾಯದ ಹಂಚಿಕೆ ಮಾಡಲು.
ಎಲ್ಲಾ ಎಸ್ಸಿ , ಎಸ್ಟಿ, ಒಬಿಸಿ ಮತ್ತು ಬಡವರು ಒಟ್ಟಾಗಿ ಹೋರಾಡುವ ಅಗತ್ಯವಿದೆ.
ಆದರೆ ಆಳುವ ಸರ್ಕಾರಗಳು ಬಿಜೆಪಿ ಮತ್ತು ಕಾಂಗ್ರೆಸ್ ಗಳೆರದೂ , ನಿರುದ್ಯೋಗಿಗಳಲ್ಲಿ ಮೀಸಲಾತಿ ವಿರೋಧಿ ಆಕ್ರೋಶ ತುಂಬಲು, ಅಥವಾ ದಮನಿತರನ್ನೇ ಒಡೆದಾಳಲು, ಹಿಂದುತ್ವವಾದಿ ಬಿಜೆಪಿಯಾದರೆ ಕೋಮುವಾದಿ ವಿಷ ತುಂಬಿ ಮನುವಾದಿ ಸಾಮಾಜಿಕ ವ್ಯವಸ್ಥೆಯನ್ನು ಮರೆಮಾಚಲು ಪ್ರಯತ್ನಿಸುತ್ತದೆ.
ಆದ್ದರಿಂದ ದಮನಿತರೆಲ್ಲರೂ ಒಗ್ಗಟ್ಟಾಗಿ:
ಒಳಮೀಸಲಾತಿಯಿಲ್ಲದೆ ನೇಮಕಾತಿ ಕೂಡದೆಂದು ಕಾಂಗ್ರೆಸ್ಪ ಸರ್ಕಾರದ ವಿರುದ್ಧ ಪಕ್ಷಾತೀತವಾಗಿ ಹೋರಾಡಬೇಕಿದೆ.. ವೈಜ್ಞಾನಿಕ ಒಳಮೀಸಲನ್ನು ಜಾರಿ ಮಾಡಲು ಆಗ್ರಹಿಸಬೇಕಿದೆ.
ಶೇ. 56 ರ ಮೀಸಲಾತಿಯನ್ನು ಶೆಡ್ಯೂಲ್ ಒಂಭತ್ತಕ್ಕೆ ಕೂಡಲೇ ಸೇರಿಸಲು ಕರ್ನಾಟಕದ ಸಂಸದರು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಹೆಚ್ಚು ಸಂಖ್ಯಾ ಬಲ ಹೊಂದಿರುವ ಆಡಳಿತ ರೂಢ ಬಿಜೆಪಿಯ ಬೇಜವಾಬ್ದಾರಿಯನ್ನು ವಿರೋಧಿಸಬೇಕಿದೆ.
ಹಾಗೆಯೇ ಒಳಮೀಸಲಲ್ಲಿ ಹಾಗೂ SCSP ಯಲ್ಲಿ ದಲಿತ ಅಲೆಮಾರಿಗಳಿಗೆ ಪ್ರತ್ಯೇಕ ಶೇ. 1 ಮೀಸಲು ನಿಗದಿ ಮಾಡಲು ಎಲ್ಲಾ ದಮನಿತರು ಹೋರಾಡಬೇಕಿದೆ.
-ಶಿವಸುಂದರ್






