ದ.ಕ. ಜಿಲ್ಲೆಯಲ್ಲಿ ಭತ್ತದ ಕೃಷಿ ಭಾರೀ ಇಳಿಮುಖ
2008-09ರಲ್ಲಿ 32,843 ಎಕರೆಯಿದ್ದ ಭತ್ತದ ಕೃಷಿ 2025ರಲ್ಲಿ 9,750 ಎಕರೆಗೆ ಇಳಿಕೆ

ಉಳ್ಳಾಲ: ಭತ್ತದ ಕೃಷಿಯಲ್ಲಿ ಬಹಳಷ್ಟು ಅಭಿವೃದ್ಧಿ ಸಾಧಿಸಿದ್ದ ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳು ಈಗ ತೀವ್ರ ಹಿನ್ನೆಡೆ ಕಂಡಿದೆ. ಬಹಳಷ್ಟು ಕೃಷಿಕರು ಭತ್ತದ ಕೃಷಿ ಬದಿಗಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ, ಕೆಲವು ಕೃಷಿಕರು ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ. ಇದರಿಂದ ಪ್ರತಿ ಗ್ರಾಮಗಳಲ್ಲಿ ಎಕರೆಗಟ್ಟಲೆ ಭತ್ತದ ಕೃಷಿ ಭೂಮಿ ಹಡಿಲು ಬಿದ್ದಿದೆ. 2000 ಇಸವಿಯವರೆಗೆ ಶೇ.70ರಷ್ಟು ರೈತರು ತನ್ನ ಜೀವನೋಪಾಯಕ್ಕಾಗಿ ಭತ್ತದ ಕೃಷಿಯನ್ನೇ ನೆಚ್ಚಿ ಕೊಂಡಿದ್ದರು.
ಉತ್ತಮ ಶಿಕ್ಷಣ ಪಡೆದ ಕೃಷಿಕರ ಮಕ್ಕಳು ಕೂಡ ಬೇರೆ ಉದ್ಯೋಗ ಕಂಡುಕೊಳ್ಳುವುದು ಬಿಟ್ಟು ಕೃಷಿಯನ್ನೇ ಅವಲಂಭಿಸುತ್ತಿದ್ದರು. ಆ ಸಂದರ್ಭದಲ್ಲಿ ವಿವಿಧ ಬೆಳೆಗಳಿಗೆ ಬೆಲೆಯೇರಿಕೆ ಆದರೂ ಅಕ್ಕಿ ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತಿತ್ತು.
ಎರಡು ದಶಕಗಳಿಂದ ಈ ಬೆಳೆ ಮಾಡುವ ರೈತರ ಸಂಖ್ಯೆ ಇಳಿಕೆ ಆಗಿದೆ. ಇದಕ್ಕೆ ಕಾರಣ ಕೇಳಿದರೆ ಒಂದೆಡೆ ಅಧಿಕ ಖರ್ಚು, ಕಾರ್ಮಿಕರ ಕೊರತೆ ಎಂಬ ಉತ್ತರ ರೈತರಿಂದ ಸಿಗುತ್ತದೆ. ಮೂರು ದಶಕಗಳ ಹಿಂದೆ ನೇಜಿ, ಹೂಳೆತ್ತವುದು, ನಾಟಿ ಮತ್ತಿತರ ಚಟುವಟಿಕೆಗಳಿಗೆ ಕಡಿಮೆ ವೇತನಕ್ಕೆ ಕಾರ್ಮಿಕರು ಬೇಕಾದಷ್ಟು ಸಿಗುತ್ತಿದ್ದರು. ಖರ್ಚು ವೆಚ್ಚ ಕೂಡ ಕಡಿಮೆ ಇತ್ತು. ಪ್ರಸಕ್ತ ಭತ್ತದ ಕೃಷಿಯಲ್ಲಿ ಅನುಭವಿಗಳ ಕೊರತೆ ಇದ್ದು, ಸಮಯಕ್ಕೆ ಸರಿಯಾಗಿ ಟ್ರ್ಯಾಕ್ಟರ್ ಸಿಗುವುದಿಲ್ಲ ಎಂಬುದು ಕೃಷಿಕರ ಕೊರಗು.
ಭತ್ತದ ಕೃಷಿಕರಿಗೆ ಸರಕಾರದಿಂದ ಸಮರ್ಪಕ ಸವಲತ್ತು ಇಲ್ಲ. ಕೃಷಿ ಹಾನಿಯಾದರೆ ಪರಿಹಾರ ಸಿಗುವುದಿಲ್ಲ. ಹೀಗಿದ್ದರೂ ಬೆರಳೆಣಿಕೆಯಷ್ಟು ರೈತರು ಈಗಲೂ ಭತ್ತ ಬೆಳೆಯುವುದನ್ನು ಉಳಿಸಿಕೊಂಡಿದ್ದಾರೆ. ಗ್ರಾಮಗಳಲ್ಲಿ ಭತ್ತದ ಕೃಷಿ ಬೆಳೆಯುವ ಒಂದಿಬ್ಬರು ರೈತರು ಮಾತ್ರ ಕಾಣಸಿಗುತ್ತಾರೆ. ಉಳ್ಳಾಲ ತಾಲೂಕು ವ್ಯಾಪ್ತಿಯ ಕಿನ್ಯ, ಮಂಜನಾಡಿ, ಅಂಬ್ಲಮೊಗರು, ಮುನ್ನೂರು, ಹರೇಕಳ, ಪಾವೂರು, ಕೊಣಾಜೆ ಸಹಿತ ಹಲವು ಗ್ರಾಮಗಳಲ್ಲಿ ದೊಡ್ಡ ಮಟ್ಟನ ಭತ್ತದ ಕೃಷಿ ಈಗ ಉಳಿದುಕೊಂಡಿಲ್ಲ.
ಅಡಿಕೆ ದರ ಏರಿಕೆ ಕಂಡ ಹಿನ್ನೆಲೆಯಲ್ಲಿ ಬಹಳಷ್ಟು ಗದ್ದೆಗಳಲ್ಲಿ ಅಡಿಕೆ ಕೃಷಿ ಬೆಳೆಸಲಾಗುತ್ತಿದೆ. ಕೆಲವು ಗದ್ದೆಗಳಲ್ಲಿ ಮನೆ ನಿರ್ಮಾಣ ಆಗಿದ್ದರೆ, ಹಲವು ಎಕರೆ ಗದ್ದೆ ರಿಯಲ್ ಎಸ್ಟೇಟ್ನವರ ಪಾಲಾಗಿದೆ. ಪ್ರಸಕ್ತ ಕಾಲದಲ್ಲಿ ಆಂಗ್ಲ ಶಿಕ್ಷಣ ಜೊತೆಗೆ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಪಡೆದ ರೈತರ ಮಕ್ಕಳು ಕೃಷಿಗೆ ಒತ್ತು ನೀಡದೆ, ಉದ್ಯೋಗ ಪಡೆದು ಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಬಹಳಷ್ಟು ಕಡೆ ಕೃಷಿ ಚಟುವಟಿಕೆ ಹಿನ್ನ್ನೆಡೆ ಆಗಿದೆ.
2008-09ರಲ್ಲಿ ದ.ಕ. ಜಿಲ್ಲೆಯಲ್ಲಿ 32,843 ಎಕರೆ ಭೂಮಿಯಲ್ಲಿ ಭತ್ತದ ಕೃಷಿ ನಡದಿತ್ತು. ಅತೀ ಹೆಚ್ಚು ಮಂಗಳೂರು ತಾಲೂಕಿನಲ್ಲಿ 11,720 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ನಡೆಯುತ್ತಿದ್ದರೆ, ಅತೀ ಕಡಿಮೆ ಸುಳ್ಯದಲ್ಲಿ 485 ಎಕರೆ ಭೂಮಿಯಲ್ಲಿ ಭತ್ತದ ಕೃಷಿ ಇದ್ದವು. ಆದರೆ 2025ರಲ್ಲಿ ದ.ಕ. ಜಿಲ್ಲೆಯಲ್ಲಿ ಭತ್ತದ ಕೃಷಿ ಕೇವಲ 9,750 ಎಕರೆ ಭೂಮಿಗೆ ಸೀಮಿತಗೊಂಡಿದೆ. ಈ ಪೈಕಿ ಮಂಗಳೂರು ತಾಲೂಕಿನಲ್ಲಿ 1,540 ಎಕರೆ ಭತ್ತದ ಕೃಷಿ ಇದ್ದರೆ, ಸುಳ್ಯದಲ್ಲಿ 250 ಎಕರೆಗೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ 23,093 ಎಕರೆ ಭೂಮಿ ಭತ್ತದ ಕೃಷಿಯಿಂದ ಮುಕ್ತ ಗೊಂಡಿದ್ದರೆ, ಮಂಗಳೂರಿನಲ್ಲಿ 10,180 ಎಕರೆ ಭೂಮಿ ಭತ್ತದ ಕೃಷಿಯಿಂದ ಮುಕ್ತಗೊಂಡಿದೆ.
ವರ್ಷಕ್ಕೆ ಮೂರು ಅವಧಿಯಲ್ಲಿ ಬೆಳೆ ತೆಗೆಯಲು ಕೃಷಿಕರಿಗೆ ಅವಕಾಶ ಇದ್ದರೂ ಎರಡು ಅವಧಿ ಬೆಳೆ ಮಾತ್ರ ಬೆಳೆಸುತ್ತಾರೆ. ಮೂರನೇ ಅವಧಿಗೆ ನೀರಿನ ಸಮಸ್ಯೆ ಎದುರಾಗುವುದರಿಂದ ಭತ್ತದ ಕೃಷಿ ಮಾಡುವವರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿ 2000 ಇಸವಿಯಲ್ಲಿ 10 ರೂ. ಇದ್ದ ಅಕ್ಕಿ ದರ ಈಗ 50 ರೂ. ದಾಟಿದೆ.
ಭತ್ತದ ಕೃಷಿಕರಿಗೆ ಸರಕಾರ ನಿರೀಕ್ಷಿತ ಪ್ರೋತ್ಸಾಹ ನೀಡುತ್ತಿಲ್ಲ, ರೈತರ ಬೇಡಿಕೆ ಈಡೇರಿಸುತ್ತಿಲ್ಲ, ಬೆಳೆ ಹಾನಿಗೆ ಪರಿಹಾರ ನೀಡುವುದು ಕಡಿಮೆ, ರಸಗೊಬ್ಬರದ ದರ ದುಬಾರಿ ಎಂಬುದು ಕೂಡ ಭತ್ತದ ಬೆಳೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ.
ಭತ್ತದ ಮೂರು ಅವಧಿ ಬೆಳೆ ತೆಗೆಯಲು ಅವಕಾಶ ವಿದ್ದರೂ ಎರಡು ಅವಧಿ ಬೆಳೆ ತೆಗೆಯುತ್ತೇನೆ. ನಮ್ಮ ಖರ್ಚಿಗೆ ಸಾಕಾಗುತ್ತದೆ ಅಷ್ಟೇ. ಈ ಕೃಷಿ ಹಾಳಾದರೆ ಪರಿಹಾರ ಕೊಡುವವರು ಇಲ್ಲ. ಹಾಳಾಗದಂತೆ ನಾವೇ ನೋಡಿಕೊಳ್ಳಬೇಕು. ಟ್ರ್ಯಾಕ್ಟರ್ ಮೂಲಕವೇ ಗದ್ದೆಯ ಹೂಳೆತ್ತುವುದು ಮತ್ತು ಕೊಯ್ಲು ಮಾಡುವುದರಿಂದ ಖರ್ಚು ಜಾಸ್ತಿ ಆಗುತ್ತಿದೆ.
-ಅಚ್ಯುತ ಗಟ್ಟಿ ಕೊಣಾಜೆ, ಭತ್ತದ ಕೃಷಿಕ
ನಮ್ಮದು ಭತ್ತದ ಕೃಷಿಕರ ಕುಟುಂಬ. ನಾನದನ್ನು ಉಳಿಸಿ ಕೊಂಡು ಬಂದಿದ್ದೇನೆ. ಒಂದು ಎಕರೆ ಭೂಮಿಯಲ್ಲಿ 9 ಕ್ವಿಂಟಾಲ್ ಭತ್ತ ಬೆಲೆಯಬಹುದು. 5,000 ಸೂಡಿ ಬೈಹುಲ್ಲು ಸಿಗುತ್ತದೆ. ಸೂಡಿಗೆ ಎಂಟು ರೂ. ಬೆಲೆ ಇದೆ. ಭತ್ತಕ್ಕೆ ಕೆ.ಜಿ.ಗೆ 34 ರೂ. ದರವಿದೆ. ಅಕ್ಕಿ ಉತ್ಪಾದನೆಗೆ ಖರ್ಚು ಜಾಸ್ತಿ ಆಗುವುದರಿಂದ ಭತ್ತವನ್ನೇ ಮಾರಾಟ ಮಾಡಲಾಗುತ್ತಿದೆ. ಒಂದು ಎಕರೆ ಭೂಮಿಯಲ್ಲಿ 75,000 ರೂ. ಆದಾಯ ಪಡೆಯಬಹುದು. ಹಾಗಂತ ಭತ್ತದ ಲಾಭದಾಯಕ ಅನ್ನುವಂತಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಾಶವಾದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ.
-ಹರೀಶ್ ಬಟ್ಯಡ್ಕ, ಭತ್ತದ ಕೃಷಿಕ
ಭತ್ತದ ಉತ್ಪಾದನಾ ವೆಚ್ಚ ಅಧಿಕ, ನಿರ್ವಹಣೆ ಕಷ್ಟಕರ. ಈ ಬೆಳೆಯಲ್ಲಿ ದೊಡ್ಡ ಲಾಭವಿಲ್ಲ. 20 ವರ್ಷಗಳ ಹಿಂದೆ ಕಡಿಮೆ ವೇತನಕ್ಕೆ ಕಾರ್ಮಿಕರು ಸಿಗುತ್ತಿದ್ದರು. ಸಮರ್ಪಕ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಈ ಕಾರಣದಿಂದ ಭತ್ತದ ಬೆಳೆ ಕೈಬಿಟ್ಟು ಅಡಿಕೆ ಕೃಷಿ ಆರಂಭಿಸಿದ್ದೇನೆ.
-ಮುಸ್ತಫ ಹರೇಕಳ, ತಾಪಂ ಮಾಜಿ ಸದಸ್ಯ







