ಬಿಜೆಪಿ ಶಾಸಕನ ಪುತ್ರನಿಂದ ಅಕ್ರಮ ಗಣಿಗಾರಿಕೆ : ಆರೋಪ

ಕಲಬುರಗಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಬಿಜೆಪಿಯ ರಾಜ್ಯ ಕಾರ್ಯದರ್ಶಿ ಬಸವರಾಜ ಮತ್ತಿಮಡು ಅವರ ಪುತ್ರರಾಗಿರುವ ಆಕಾಶ ಮತ್ತಿಮಡು ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಸರಕಾರಿ ಅಧಿಕಾರಿಗಳ ಖಾಸಗಿ ದೂರಿನನ್ವಯ ಇಲ್ಲಿನ ಸಿವಿಲ್ ಜಡ್ಜ್ ಮತ್ತು 5ನೆಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ ಇದುವರೆಗೂ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗದೇ ಕಳ್ಳಾಟ ನಡೆಸುತ್ತಿರುವುದು ಬಹಿರಂಗವಾಗಿದೆ.
ಕಲಬುರಗಿ ತಾಲೂಕಿನ ಕೆರೂರು ಗ್ರಾಮದ ಸರ್ವೇ ನಂ.55ರಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಪುತ್ರ ಆಕಾಶ್ ಮತ್ತಿಮಡು ಸೇರಿದಂತೆ ಇತರ ಮೂವರು ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಡ ಕಲ್ಲು ಗಣಿಗಾರಿಕೆ ಮಾಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಂದ ಅಥವಾ ಸರಕಾರದಿಂದ ಲೈಸೆನ್ಸ್ ಅಥವಾ ಅನುಮತಿ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಲ್ಲದೆ ಸಾಗಣೆ ಕೂಡ ಮಾಡಿದ್ದಾರೆ. ಇದು ಎಂಎಂಆರ್ಡಿ 1957ರ ಆ್ಯಕ್ಟ್ 4(1), 4(1)ಎ ಮತ್ತು 21 ಹಾಗೂ ಕೆ.ಎಂ.ಎಂ.ಸಿ.ಆರ್ 1994 ರ ನಿಯಮ 3, 42, 43 ಮತ್ತು 44 ರ ಪ್ರಕಾರ ನೇರ ಉಲ್ಲಂಘನೆಯಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಬಯಲಿಗೆ ಬಂದಿದ್ದು ಹೇಗೆ? :
ಸಾಮಾಜಿಕ ಕಾರ್ಯಕರ್ತ ರಾಮ ಬಿ. ರಾಠೋಡ್ ಎಂಬವರು ಕಲಬುರಗಿ ತಾಲೂಕಿನ ಕೆರೂರು ಗ್ರಾಮದ ಸರ್ವೇ ನಂ.55/4, 55/2 ಹಾಗೂ 55/8 ಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆಂದು ದೂರು ನೀಡಿದ ಮೇರೆಗೆ 2025ರ ಫೆಬ್ರವರಿ 19ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ನಿರೀಕ್ಷಕರು ಜಂಟಿಯಾಗಿ ಸಮೀಕ್ಷೆ ನಡೆಸಿದ್ದಾರೆ. ಆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಅಕ್ರಮವಾಗಿ ಗಣಿಗಾರಿಕೆ ಮಾಡಿರುವುದನ್ನು ಒಪ್ಪಿಕೊಂಡು ಪಂಚನಾಮೆ ಮಾಡಿಕೊಂಡಿದ್ದಾರೆ. ಬಳಿಕ ಜಮೀನುಗಳ ಬಗ್ಗೆ ಪರಿಶೀಲಿಸಿದಾಗ ಬಿಜೆಪಿ ಶಾಸಕನ ಪುತ್ರ ಆಕಾಶ್ ಮತ್ತಿಮಡು, ಅತೀಕ್ ಪಾಶಾ, ಸಿದ್ಧಲಿಂಗ ಅಂಬರೀಶ್ ಹಾಗೂ ಜಯರಾಮ್ ಗೋಪು ಎಂಬವರು ಅವುಗಳ ಮಾಲಕರೆಂದು ಗೊತ್ತಾಗಿದೆ. ಬಳಿಕ ಪರವಾನಿಗೆ ಪಡೆದಿರುವ ಬಗ್ಗೆ ದಾಖಲೆ ಒದಗಿಸುವಂತೆ ಸಂಬಂಧಪಟ್ಟ ಜಮೀನಿನ ಮಾಲಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದ್ಯಾವುದಕ್ಕೂ ಉತ್ತರ ಕೊಡದಿರುವುದನ್ನು ಗಮನಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಯ ಭೂ ವಿಜ್ಞಾನಿಗಳು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.
ವಿಚಾರಣೆಗೆ ಹಾಜರಾಗದ ಆಕಾಶ ಮತ್ತಿಮಡು ಗ್ಯಾಂಗ್ :
ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ 2025ರ ಮಾರ್ಚ್ 15ರಂದು ಇಲ್ಲಿನ ಸಿವಿಲ್ ಜಡ್ಜ್ ಮತ್ತು 5ನೆಯ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪಿಸಿ ನಂ.250/2025 ಪ್ರಕರಣ ನೋಂದಣಿಯಾಗಿದೆ. ಸದ್ಯ ಪ್ರಕರಣವು ಸಮನ್ಸ್ ಹಂತದಲ್ಲಿದ್ದು, ನೋಟಿಸ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಸಮನ್ಸ್ ಜಾರಿ ಮಾಡಿದ್ದರೂ ಇದುವರೆಗೂ ಆರೋಪಿಗಳಾದ ಆಕಾಶ ಮತ್ತಿಮಡು ಮತ್ತು ಗ್ಯಾಂಗ್ ಕೋರ್ಟ್ಗೆ ಹಾಜರಾಗದೆ ಕಳ್ಳಾಟ ನಡೆಸುತ್ತಿದೆ. ಇದರ ನಡುವೆಯೇ ಕೋರ್ಟ್ ತನ್ನ ಮುಂದಿನ ವಿಚಾರಣೆಯನ್ನು ಜುಲೈ 2ರಂದು ನಿಗದಿಪಡಿಸಿದೆ.
ವಿಚಾರಣೆ ಹಂತದಲ್ಲೇ ಜಮೀನು ವರ್ಗಾವಣೆ :
ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಶಾಸಕ ಬಸವರಾಜ ಮತ್ತಿಮಡು ಅವರು ತಮ್ಮ ಪುತ್ರನ ಹೆಸರಿನಲ್ಲಿರುವ ಜಾಗವನ್ನು ಬೇರೆಯವರಿಗೆ ವರ್ಗಾಯಿಸಿ ಆತನನ್ನು ರಕ್ಷಿಸಲು ಸರ್ಕಸ್ ಮಾಡಿದ್ದಾರೆ. ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದಾಗ ಆಕಾಶ ಮತ್ತಿಮಡು ಹೆಸರಿನಲ್ಲಿದ್ದ ಜಮೀನು ಬೇರೆಯವರಿಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ನೋಂದಣಾಧಿಕಾರಿಗಳು ಕಾನೂನು ಬಾಹಿರವಾಗಿ ಪ್ರೋತ್ಸಾಹ ನೀಡಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಶಾಸಕರು ಹೀಗೆ ಅನೇಕ ಕಡೆಗಳಲ್ಲಿ ಅವ್ಯವಹಾರದ ಪ್ರಕರಣಗಳಲ್ಲಿ ಇದ್ದಾರೆ. ಅವರ ವಿರುದ್ಧ ತನಿಖೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಮ ರಾಠೋಡ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದ ಆಕಾಶ ಮತ್ತಿಮಡು ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈಗ ನಾವೇನು ಹೇಳಲು ಬರುವುದಿಲ್ಲ. ಕೋರ್ಟ್ ಏನು ಆದೇಶ ನೀಡುತ್ತದೆಯೋ ಅದರ ಮೇರೆಗೆ ಕಾನೂನು ಕ್ರಮ ಜರುಗಿಸಲಿದ್ದೇವೆ.
-ಸೋಮಶೇಖರ್ ಎಂ, ಉಪನಿರ್ದೇಶಕರು, ಗಣಿ ಭೂವಿಜ್ಞಾನ ಇಲಾಖೆ
ಸ್ಟೀಲ್ ಬಸು 30ಕೋಟಿ ಮನೆಯ ಒಡೆಯ
ಸ್ಟೀಲ್ ಬಸು ಎಂದೇ ಖ್ಯಾತರಾಗಿದ್ದ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಕೆಲವು ವರ್ಷಗಳ ಹಿಂದಷ್ಟೇ ಕಬ್ಬಿಣದ ಮಾರಾಟದಲ್ಲಿ ತೊಡಗಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನದಲ್ಲಿ ಎರಡು ಅವಧಿ ಪೂರೈಸಿಲ್ಲ, ಆದರೂ ಅಕ್ರಮ ಗಳಿಕೆಯಿಂದಾಗಿ ಕಲಬುರಗಿ ನಗರದ ಓಂ ನಗರದಲ್ಲಿ 30 ಕೋಟಿ ರೂ. ವೆಚ್ಚದ ಮನೆ ನಿರ್ಮಾಣ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕು. ಮಗನ ಹೆಸರಿನಲ್ಲೂ ಗಣಿಗಾರಿಕೆ ನಡೆಸುವ ಶಾಸಕನನ್ನು ಜೈಲಿಗಟ್ಟಬೇಕು.
-ರಾಮ ಬಿ. ರಾಠೋಡ್, ದೂರುದಾರ, ಸಾಮಾಜಿಕ ಕಾರ್ಯಕರ್ತ






