ದುರಸ್ತಿ ಇಲ್ಲದೆ ಪಾಳುಬಿದ್ದ ಇಂಡಿ ಕೆಇಬಿ ತಾಂಡಾ ಶಾಲೆ

ಇಂಡಿ: ನಗರದ ವಿಜಯಪುರ ರಸ್ತೆಯಲ್ಲಿರುವ ಸೇವಾಲಾಲ್ ವೃತ್ತದ ಸಮೀಪದ ಕೆಈಬಿ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 105 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಕೂಲಿ ಕಾರ್ಮಿಕರ ಮಕ್ಕಳು, ಬಡತನ ಕುಟುಂಬಗಳಿಗೆ ಸೇರಿದ ಮಕ್ಕಳು, ತಾಂಡಾದ ನಿವಾಸಿಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಗುಣವಾಗಿ ಏಳು ಕೊಠಡಿಗಳಿವೆ. ಅದರಲ್ಲಿ ಎರಡು ಕೊಠಗಳು ಶಿಥಿಲಗೊಂಡು ಸಂಪೂರ್ಣ ಹಾಳಾಗಿವೆ ದುರಸ್ತಿ ಇಲ್ಲದೆ ಪಾಳು ಬಿದ್ದಿವೆ. ಉಳಿದ ಐದು ಕೊಠಡಿಗಳಲ್ಲಿ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಶಿಕ್ಷಣ ತಲುಪುತ್ತಿಲ್ಲ ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಶಾಲಾ ಕೊಠಡಿ ದುರಸ್ತಿ ಮಾಡಬೇಕು ಎಂದು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ ಎಂದು ಪಾಲಕರು ತಮ್ಮ ನೋವು ತೋಡಿಕೊಂಡಿದ್ದಾರೆ.
ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ತಳಮಟ್ಟದಲ್ಲಿ ಒಳ್ಳೆಯ ಶಿಕ್ಷಣ ನೀಡಲಾಗುತ್ತಿಲ್ಲ ಎಂದರೆ ಮಕ್ಕಳ ಮುಂದಿನ ಭವಿಷ್ಯ ಏನಾಗುತ್ತಿದೆ ಎಂಬುದು ಜನಪ್ರತಿನಿಧಿಗಳು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಕೇವಲ ತಮ್ಮ ಮಕ್ಕಳ ಭವಿಷ್ಯ ನೋಡಿದರೆ ಮಾತ್ರ ಸಾಲದು. ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯ ಕೂಡಾ ಅಷ್ಟೆ ಮಹತ್ವದ್ದಾಗಿರುತ್ತದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಪಾಲಕರೊಬ್ಬರು ಹೇಳಿದ್ದಾರೆ.
ಸರಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳಿಗೆ ಹೋಗೋಣವೆಂದರೆ, ಅಲ್ಲಿನ ಶುಲ್ಕ ಭರಿಸಲು ಪಾಲಕರುಶಕ್ತರಲ್ಲ. ಆದರೆ, ಸರಕಾರಿ ಶಾಲೆಯ ಕೊಠಡಿ ಪಾಳು ಬಿದ್ದಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮುತುವರ್ಜಿ ವಹಿಸಿ ಅಧಿಕಾರಿಗಳಿಗೆ ಸೂಚಿಸಿ ಕೊಠಡಿಗಳನ್ನು ಪರಿಶೀಲಿಸಿ, ದುರಸ್ತಿ ಮಾಡಿಸಿ ಮಕ್ಕಳಿಗೆ ಕಲಿಯಲು ಅವಕಾಶ ಕಲ್ಪಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಶಾಸಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಮಳೆ ಬಂದರೆ ಶಾಲಾ ಆವರಣದಲ್ಲಿ ನೀರು ನಿಲ್ಲುತ್ತದೆ. ಅದನ್ನು ಕೂಡಲೆ ಆವರಣದಿಂದ ಆಚೆ ಹೋಗಲು ಅವಕಾಶ ಮಾಡಿಕೊಟ್ಟು, ಮಕ್ಕಳಿಗೆ ಶಾಲೆಗೆ ಪ್ರವೇಶಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ದುರಸ್ತಿಗಾಗಿ ಮಾತ್ರವಲ್ಲದೆ, ಎರಡು ಕೋಣೆಗಳು ಹೊಸದಾಗಿ ನಿರ್ಮಾಣ ಮಾಡಲು ಶಾಸಕರ ಗಮನಕ್ಕೆ ತರಲಾಗಿದೆ. ಶಾಲಾ ಕೊಠಡಿಯ ಮೇಲ್ಛಾವಣಿಯ ಸ್ಟೀಲ್ ಯಾವಾಗ ಬೇಕಾದರೂ ಕುಸಿದು ಬೀಳುವ ಸಾಧ್ಯತೆ ಇದೆ. ಹಾಗಾಗಿ, ಈ ಎರಡು ಕೊಠಡಿಗಳು ಹೊಸದಾಗಿ ನಿರ್ಮಾಣ ಮಾಡಲು ಶಾಸಕರಿಗೆ ಒತ್ತಾಯಿಸಿದ್ದೇವೆ. ಹೊಸದಾಗಿ ನಿರ್ಮಾಣ ಮಾಡಲು ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ. ಸುಮಾರು ಎಂಟು ವರ್ಷಗಳು ಕಳೆದಿವೆ. ಇನ್ನೂ ಅದಕ್ಕೆ ಸಂಬಂಧಿಸಿದ ಯಾವ ಕಾರ್ಯವು ನಡೆಯುತ್ತಿಲ್ಲ.
-ಧರ್ಮು ರಾಠೋಡ, ಕೆಈಬಿ ತಾಂಡಾದ ಮುಖಂಡರು ಇಂಡಿ
ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಸದ್ಯ ಆರು ಜನ ಶಿಕ್ಷಕರಿದ್ದಾರೆ. ಒಂದೇ ಕೊಠಡಿಯಲ್ಲಿ ಜಂಟಿಯಾಗಿ ಎರಡು ತರಗತಿಗಳು ನಡೆಸಲಾಗುತ್ತಿದೆ. ಎರಡು ಕೊಠಡಿಗಳ ಅವಶ್ಯಕತೆ ಇದೆ. ಆದಷ್ಟು ಬೇಗನೆ ಕೊಠಡಿ ನಿರ್ಮಿಸಿ ಕೊಟ್ಟರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಕಾರ್ಯ ಶೀಘ್ರದಲ್ಲೇ ಮಾಡಿದಂತಾಗುತ್ತದೆ.
-ಚಿದಾನಂದ ಬಡಿಗೇರ, ಮುಖ್ಯೋಪಾಧ್ಯಾಯರು, ಕೆಈಬಿ ತಾಂಡಾ ಶಾಲೆ
ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಈ ಕುರಿತು ಸಭೆಯಲ್ಲಿ ನಾನು ಚರ್ಚೆ ಮಾಡಿದ್ದೇನೆ. ಸಂಬಂಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಕಲಿಯಲು ಅನುಕೂಲ ಮಾಡಿ ಕೊಡಲಾಗುವುದು.
-ಎಸ್.ಆರ್.ನಡಗಡ್ಡಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಇಂಡಿ






