ಜೆಎಸ್ಡಬ್ಲ್ಯು ಸ್ಟೀಲ್ ಸಂಸ್ಥೆಯಿಂದ ಕೋಟ್ಯಂತರ ರೂ. ತೆರಿಗೆ ಬಾಕಿ

ಸಂಡೂರು/ಬಳ್ಳಾರಿ: ದೇಶದ ಪ್ರಮುಖ ಉಕ್ಕು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾದ ಜೆಎಸ್ಡಬ್ಲ್ಯೂ ಸ್ಟೀಲ್ (ಹಳೆಯ ಜಿಂದಾಲ್ ವಿಜಯನಗರ ಸ್ಟೀಲ್) ಇದೀಗ ಮತ್ತೊಮ್ಮೆ ತೆರಿಗೆ ಬಾಕಿ ವಿವಾದದ ಕೇಂದ್ರ ಬಿಂದುವಾಗಿದೆ. ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ, ದೇಶದ ಅಗ್ರ ಉಕ್ಕು ಉತ್ಪಾದನಾ ಕಂಪೆನಿಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿರುವ ಈ ದೈತ್ಯ ಕೈಗಾರಿಕಾ ಸಂಸ್ಥೆ, ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಹಲವು ವರ್ಷಗಳಿಂದ ಆಸ್ತಿ ಹಾಗೂ ಅಭಿವೃದ್ಧಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತೋರಣಗಲ್ಲು, ವಡ್ಡು, ಬನ್ನಿಹಟ್ಟಿ ಸೇರಿದಂತೆ ಸಂಡೂರು ತಾಲೂಕಿನ ಸುತ್ತಮುತ್ತಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿರುವ ಕಂಪೆನಿ ವ್ಯಾಪ್ತಿಯಲ್ಲಿ ಉಕ್ಕು ಕಾರ್ಖಾನೆಗಳು, ಸಿಮೆಂಟ್ ಘಟಕಗಳು, ಪೇಂಟ್ ಉತ್ಪಾದನಾ ಘಟಕಗಳು, ಪವನ ವಿದ್ಯುತ್ ಯೋಜನೆಗಳು, ಆಡಳಿತ ಭವನಗಳು, ವಸತಿ ಸಮುಚ್ಚಯಗಳು ಹಾಗೂ ಅತಿಥಿಗೃಹಗಳು ಸೇರಿದಂತೆ ನೂರಾರು ಬೃಹತ್ ಕಟ್ಟಡಗಳು ನಿರ್ಮಾಣಗೊಂಡಿವೆ. ಕಂಪೆನಿ ವ್ಯಾಪ್ತಿಯಲ್ಲೇ ಪ್ರತ್ಯೇಕ ವಿಮಾನ ನಿಲ್ದಾಣವೂ ಇರುವುದು ಇದರ ವ್ಯಾಪ್ತಿಯ ವಿಸ್ತೀರ್ಣ ಸ್ಪಷ್ಟವಾಗುತ್ತದೆ.
ಜಿಂದಾಲ್ ಆರಂಭದ ಇತಿಹಾಸ1970ರ ದಶಕದಲ್ಲಿ ದೇಶದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ಭಾರೀ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿತ್ತು. ಇದೇ ಅವಧಿಯಲ್ಲಿ ವಿಜಯನಗರ ಪ್ರದೇಶದಲ್ಲಿ ಉಕ್ಕು ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದ ಚರ್ಚೆಗಳು ಆರಂಭವಾಗಿದ್ದವು. ಈ ಭಾಗದ ಖನಿಜ ಸಂಪತ್ತಿನ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿಯೂ ಹೆಚ್ಚಿನ ಗಮನ ಹರಿಸಲಾಗಿತ್ತು.
90ರ ದಶಕದಲ್ಲಿ ವಿಜಯನಗರ ಉಕ್ಕು ಯೋಜನೆಯ ರೂಪದಲ್ಲಿ ಆರಂಭವಾದ ಕೈಗಾರಿಕಾ ಘಟಕ, ನಂತರ ಹಂತ ಹಂತವಾಗಿ ವಿಸ್ತಾರಗೊಂಡು ದೇಶದ ಅತಿ ದೊಡ್ಡ ಉಕ್ಕು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿ ಬೆಳೆಯಿತು. ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸರಕಾರ ಹಾಗೂ ಸ್ಥಳೀಯ ಪ್ರದೇಶಗಳಿಂದ ಪಡೆದುಕೊಂಡ ಕಂಪೆನಿ, ಇಂದಿಗೆ ಲಕ್ಷಾಂತರ ಟನ್ ಉಕ್ಕು ಉತ್ಪಾದಿಸುವ ಮಟ್ಟಕ್ಕೆ ತಲುಪಿದೆ. ನೇರ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸುವ ಮೂಲಕ ಉತ್ತರ ಕರ್ನಾಟಕದ ಕೈಗಾರಿಕಾ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.
ಆದರೆ ಅಭಿವೃದ್ಧಿಗಾಗಿ ತಮ್ಮ ಭೂಮಿ, ನೀರು, ಪರಿಸರ ಹಾಗೂ ಮೂಲಸೌಕರ್ಯಗಳನ್ನು ಸಮರ್ಪಿಸಿದ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಕಂಪೆನಿ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸದೇ ಉಳಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಇಂದಿರಾ ಗಾಂಧಿ ಭೇಟಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಬಳ್ಳಾರಿ ಮತ್ತು ಸಂಡೂರು ಭಾಗದ ಕೈಗಾರಿಕಾ ಹಾಗೂ ಗಣಿ ಸಾಮರ್ಥ್ಯದ ಕುರಿತು ವಿಶೇಷ ಆಸಕ್ತಿ ತೋರಿದ್ದರು ಎಂಬುದು ಹಿರಿಯರ ನೆನಪಿನಲ್ಲಿ ಇನ್ನೂ ಉಳಿದಿದೆ. ವಿಜಯನಗರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಾಧ್ಯತೆಗಳ ಪರಿಶೀಲನೆಗಾಗಿ ಅವರು ಈ ಭಾಗಕ್ಕೆ ಭೇಟಿ ನೀಡಿದ್ದರೆಂಬ ಐತಿಹಾಸಿಕ ಉಲ್ಲೇಖಗಳನ್ನು ಸ್ಥಳೀಯರು ಸ್ಮರಿಸುತ್ತಾರೆ.
ಆ ಸಂದರ್ಭದಲ್ಲಿ ಈ ಭಾಗವನ್ನು ದೇಶದ ಪ್ರಮುಖ ಕೈಗಾರಿಕಾ ವಲಯವನ್ನಾಗಿ ರೂಪಿಸುವ ಕನಸು ವ್ಯಕ್ತವಾಗಿತ್ತು. ನಂತರದ ದಶಕಗಳಲ್ಲಿ ಆ ಕನಸು ಸಾಕಾರಗೊಂಡು, ಗಣಿ ಆಧಾರಿತ ಉಕ್ಕು ಕೈಗಾರಿಕೆಗಳ ಸರಪಳಿ ನಿರ್ಮಾಣವಾಯಿತು. ಇದೇ ನೆಲೆಯಲ್ಲಿ ಬಳಿಕ ಜಿಂದಾಲ್ ಗುಂಪು ತನ್ನ ಉಕ್ಕು ಘಟಕಗಳನ್ನು ಸ್ಥಾಪಿಸಿ ವೇಗವಾಗಿ ವಿಸ್ತರಣೆ ಕಂಡಿತು.
ವಡ್ಡು ಗ್ರಾಪಂಗೆ 2018-19ರಿಂದ 2025-26 ರವರೆಗೆ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿದಿದೆ ಎಂದು ತಿಳಿದುಬಂದಿದ್ದು, ನಿಖರ ಮೊತ್ತದ ದಾಖಲೆ ಸಂಗ್ರಹ ಪ್ರಕ್ರಿಯೆ ಇನ್ನೂ ಮುಂದುವರಿದಿದೆ ಎನ್ನಲಾಗಿದೆ.
ದಾಖಲೆಗಳೇ ಸಲ್ಲಿಸಿಲ್ಲ ಎಂಬ ಆರೋಪ ಕಂಪೆನಿ ವ್ಯಾಪ್ತಿಯ ಹಲವಾರು ಕಟ್ಟಡಗಳು, ಘಟಕಗಳು ಹಾಗೂ ವಿಸ್ತರಣೆಗಳಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಗ್ರಾಪಂಗೆ ಇನ್ನೂ ಸಲ್ಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರ ಪರಿಣಾಮವಾಗಿ ನಿಖರ ಆಸ್ತಿ ಮೌಲ್ಯಮಾಪನ ಹಾಗೂ ತೆರಿಗೆ ನಿರ್ಧಾರ ಪ್ರಕ್ರಿಯೆ ಸಂಕೀರ್ಣಗೊಂಡಿದೆ ಎಂದು ಪಂಚಾಯಿತಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ತೋರಣಗಲ್ಲು, ವಡ್ಡು, ಬನ್ನಿಹಟ್ಟಿ ಹಾಗೂ ಅಂತಾಪುರ ಸೇರಿದಂತೆ ಹಲವು ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಂಪೆನಿಯ ನಿಖರ ಗಡಿ ಗುರುತು ಮಾಡುವ ಕಾರ್ಯವೂ ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ.
ಪಂಚಾಯಿತಿಗಳಿಗೆ ತೆರಿಗೆ ವಸೂಲಿ ಸವಾಲು ಸಾಮಾನ್ಯ ನಾಗರಿಕರಿಂದ ತೆರಿಗೆ ವಸೂಲಿ ಮಾಡುವ ಸ್ಥಳೀಯ ಸಂಸ್ಥೆಗಳಿಗೆ, ಬಹುರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ದೈತ್ಯ ಕಂಪೆನಿಯಿಂದ ತೆರಿಗೆ ಸಂಗ್ರಹಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಲವು ಬಾರಿ ನೋಟಿಸ್ ನೀಡಿದರೂ ಸಮರ್ಪಕ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
‘ವಿಧಾನಸೌಧಕ್ಕಿಂತ ಕಠಿಣ ಪ್ರವೇಶ’ :
ಕಂಪೆನಿ ವ್ಯಾಪ್ತಿಗೆ ಸರಕಾರಿ ಅಧಿಕಾರಿಗಳಿಗಾಗಲಿ, ಮಾಧ್ಯಮ ಪ್ರತಿನಿಧಿಗಳಿಗಾಗಲಿ ಸುಲಭವಾಗಿ ಪ್ರವೇಶಿಸಲು ಅವಕಾಶ ಸಿಗುವುದಿಲ್ಲ ಎನ್ನುವ ಅಸಮಾಧಾನವೂ ಸ್ಥಳೀಯ ವಲಯದಲ್ಲಿ ವ್ಯಕ್ತವಾಗಿದೆ. ‘ವಿಧಾನಸೌಧ ಪ್ರವೇಶಿಸುವುದಕ್ಕಿಂತ ಜಿಂದಾಲ್ ಒಳಗೆ ಹೋಗುವುದು ಕಷ್ಟ’ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಅಭಿವೃದ್ಧಿಗೆ ಭೂಮಿ ಕೊಟ್ಟ ಗ್ರಾಮಗಳಿಗೆ ತೆರಿಗೆ ಬಾಕಿ ಪ್ರತಿಫಲ :
ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ತಮ್ಮ ಭೂಮಿ, ಸಂಪನ್ಮೂಲಗಳು ಹಾಗೂ ಬದುಕಿನ ಮಾದರಿಯನ್ನೇ ಬದಲಿಸಿಕೊಂಡ ಗ್ರಾಮ ಪಂಚಾಯಿತಿಗಳು ಇಂದು ಮೂಲಭೂತ ಸೌಕರ್ಯಗಳಿಗಾಗಿ ಹಣದ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿದಿರುವುದು ಸ್ಥಳೀಯ ಜನರಲ್ಲಿ ಅಸಮಾಧಾನ ಹೆಚ್ಚಿಸಿದೆ.
ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸ್ಥಳೀಯರು, ಸರಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಬಾಕಿ ತೆರಿಗೆ ವಸೂಲಿ ಮಾಡುವ ಜೊತೆಗೆ ಕಂಪೆನಿಯ ಆಸ್ತಿ ದಾಖಲೆಗಳ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರದ ಆದಾಯಕ್ಕೆ ಸಂಬಂಧಿಸಿದ ತೆರಿಗೆ ಸಂಗ್ರಹ ವಿಷಯದಲ್ಲಿ ಯಾವುದೇ ರೀತಿಯ ಮುಲಾಜು ಅಥವಾ ರಾಜಿಗೆ ಅವಕಾಶ ಇರುವುದಿಲ್ಲ. ಈಗಾಗಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸಂಬಂಧಪಟ್ಟ ಕಂಪೆನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ನೋಟಿಸ್ಗಳನ್ನು ನೀಡಿ, ಕಾನೂನು ಪ್ರಕಾರವೇ ಬಾಕಿ ತೆರಿಗೆ ವಸೂಲಿ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ. ಸರಕಾರಕ್ಕೆ ಬರಬೇಕಾದ ಆದಾಯವನ್ನು ಸಂಗ್ರಹಿಸುವುದು ಆಡಳಿತದ ಜವಾಬ್ದಾರಿಯೂ ಆಗಿದ್ದು, ಈ ವಿಷಯದಲ್ಲಿ ಯಾವುದೇ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ. ಕಾನೂನಾತ್ಮಕವಾಗಿ ತೆರಿಗೆ ಸಂಗ್ರಹ ಮಾಡಿಯೇ ತೀರುತ್ತೇವೆ.
-ನಾಗೇಂದ್ರ ಪ್ರಸಾದ್, ಜಿಲ್ಲಾಧಿಕಾರಿಗಳು, ಬಳ್ಳಾರಿ
ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಸಂಗ್ರಹವಾಗಬೇಕಾದ ತೆರಿಗೆ ಹಣವನ್ನು ಯಾವುದೇ ಸಂಸ್ಥೆಯಾಗಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಕಂಪೆನಿಗೆ ನೋಟಿಸ್ ಜಾರಿ ಮಾಡಲಾಗಿದೆ. ತೆರಿಗೆ ಪಾವತಿಗೆ ಅವಕಾಶ ನೀಡಿದರೂ ಇದುವರೆಗೂ ಸಮರ್ಪಕ ಪ್ರತಿಕ್ರಿಯೆ ಅಥವಾ ಬಾಕಿ ತೆರಿಗೆ ಪಾವತಿ ಆಗದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ತಾಲೂಕು ಪಂಚಾಯಿತಿ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಮೂಲಕ ಮತ್ತೊಮ್ಮೆ ನೋಟಿಸ್ ಜಾರಿ ಮಾಡುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ವ್ಯಾಪ್ತಿಯಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
-ಮಡಗಿನ ಬಸಪ್ಪ , ಇಒ, ಸಂಡೂರು






