ಇಳಿಕೆಯ ಹಾದಿಯಲ್ಲೇ ಸಾಗಿದ ಕೊರಗ ಜನಸಂಖ್ಯೆ

ಮಂಗಳೂರು : ಜನಸಂಖ್ಯೆ ಏರುಗತಿ ಯಲ್ಲಿ ಸಾಗುವುದು ಸ್ವಾಭಾವಿಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದೆ. ಆದರೆ, ಕರಾವಳಿಯ ಮೂಲ ನಿವಾಸಿಗಳು, ನಾಡಿನಾದ್ಯಂತ ಪೂಜಿಸ ಲ್ಪಡುವ ಕೊರಗಜ್ಜ(ಕೊರಗ ತನಿಯ)ನ ವಂಶ ವಾಹಿನಿಯ ಕೊರಗ ಸಮುದಾಯದ ಜನಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿರುವುದು ಸರಕಾರಿ ಅಂಕಿಅಂಶಗಳಿಂದಲೇ ಬಹಿರಂಗವಾಗುತ್ತಿದೆ.
ಕೇಂದ್ರ ಸರಕಾರದ ಬುಡಕಟ್ಟು ಸಚಿವಾಲಯದ ನಿರ್ದೇಶನದ ಮೇರೆಗೆ ಕರ್ನಾಟಕದ ದುರ್ಬಲ ಬುಡಕಟ್ಟು ಗುಂಪು(ಪಿವಿಟಿಜಿಎಸ್) ಎಂದು ಗುರು ತಿಸಲಾಗಿರುವ ಕೊರಗ ಹಾಗೂ ಜೇನು ಕುರುಬ ಸಮುದಾಯಗಳ ಸಮೀಕ್ಷೆ ಇತ್ತೀಚೆಗೆ ನಡೆಸಲಾಗಿದೆ. ಈ ಸಮೀಕ್ಷೆಯ ಪ್ರಕಾರ ದ.ಕ. ಜಿಲ್ಲೆಯಲ್ಲಿ 1,118 ಕೊರಗ ಕುಟುಂಬಗಳು ಹಾಗೂ 4,290 ಜನಸಂಖ್ಯೆಯನ್ನು ಗುರುತಿಸಲಾಗಿದೆ.
2011ರ ಜನಸಂಖ್ಯೆಯ ಆಧಾರದಲ್ಲಿ ದ.ಕ. ಜಿಲ್ಲೆಯಲ್ಲಿ 4,858 ಮಂದಿ ಕೊರಗ ಸಮುದಾಯ ದವರಿದ್ದರು. 2023-24ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಜನ್ಮನ್ ಕಾರ್ಯಕ್ರಮದ ನಿಮಿತ್ತ ದೇಶದಲ್ಲಿನ ಪಿವಿಟಿಜಿ ಸಮುದಾಯಗಳ ಸಾಮಾ ಜಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಡೆದ ಸಮೀಕ್ಷೆಯ ಪ್ರಕಾರ ಅಂದಾಜು 4,500 ಕೊರಗ ಜನಸಂಖ್ಯೆಯನ್ನು ಗುರುತಿಸಲಾಗಿತ್ತು. ಕಳೆದೆರಡು ವರ್ಷಗಳಿಂದೀಚೆಗೆ ಮತ್ತಷ್ಟು ಈ ಜನಸಂಖ್ಯೆ ಇಳಿಕೆಯಾಗಿದೆ ಎನ್ನಲಾಗುತ್ತಿದೆ. ಸಮುದಾಯದಲ್ಲಿ ಜನನ ಪ್ರಮಾಣ ಈ ಅವಧಿಯಲ್ಲಿ ಶೇ.2ರಷ್ಟಿದ್ದರೆ, ಮರಣ ಶೇ.6ರಷ್ಟಿದೆ ಎನ್ನಲಾಗಿದೆ. ಸಮುದಾಯದ ಮುಖಂಡರ ಮಾಹಿತಿಯ ಪ್ರಕಾರವೇ ಕಳೆದ ಆರು ತಿಂಗಳ ಅವಧಿಯಲ್ಲಿ ಡಿಸೆಂಬರ್ನಿಂದೀಚೆಗೆ ಕೊರಗ ಸಮುದಾಯದ ಸುಮಾರು 15ರಿಂದ 20 ಮಂದಿ ಸಾವಿಗೀಡಾಗಿದ್ದಾರೆ.
ಸಮಗ್ರ ಅಧ್ಯಯನದ ಅಗತ್ಯವಿದೆ
ಆರೋಗ್ಯದ ಬಗೆಗಿನ ನಿರ್ಲಕ್ಷ್ಯ ಹೆಚ್ಚುತ್ತಿರುವ ಸಾವಿನ ಪ್ರಕರಣಗಳಿಗೆ ಕಾರಣ ಎಂದು ಹೇಳಲಾ ಗುತ್ತಿದೆಯಾದರೂ, ನಿಖರವಾದ ಕಾರಣ ತಿಳಿ ಯುತ್ತಿಲ್ಲ. ಸಮುದಾಯದ ಜನ ಯಾವುದೇ ಕಾಯಿಲೆಗೊಳಗಾದರೆ ಕೊನೆ ಹಂತದವರೆಗೆ ಆಸ್ಪತ್ರೆಗೆ ಹೋಗಲು ಅಂಜಿಕೆ ಪಡುವ ಕಾರಣವೂ ಆಕಸ್ಮಿಕ ಸಾವುಗಳಿಗೆ ಕಾರಣ ಇರಬಹುದು ಎನ್ನುತ್ತಾರೆ ಸಮು ದಾಯದ ಮುಖಂಡರು.
ನಮ್ಮದು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಮುದಾಯ. ಹಾಗಾಗಿ ವಂಶ ವಾಹಿನಿ, ಅಪೌಷ್ಟಿಕತೆ ಸಮಸ್ಯೆ ಸೇರಿದಂತೆ ಸಾಮಾ ಜಿಕವಾಗಿ ಸಮುದಾಯದ ಜನಸಂಖ್ಯೆ ಕ್ಷೀಣಿಸು ತ್ತಿರುವ ಬಗ್ಗೆ ತಜ್ಞರಿಂದ ಸಮಗ್ರ ಅಧ್ಯಯನ ನಡೆದರೆ ಉತ್ತಮ ಎನ್ನುತ್ತಾರೆ ಕೊರಗ ಸಮುದಾ ಯದ ಜಿಲ್ಲಾ ಮುಖಂಡ ಸುಂದರ ಕೊರಗ.
ಮಹಿಳೆಯರ ಸಂಖ್ಯೆ ಅಧಿಕ
ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಲಾದ ಕೊರಗ ಸಮುದಾಯ ಸಮೀಕ್ಷೆ ಪ್ರಕಾರ ಇರುವ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಅಧಿಕವಿದೆ. 4,290ರಲ್ಲಿ 2,242 ಮಹಿಳೆಯರು. ಪಿವಿಟಿಜಿ ಗುಂಪುಗಳಿಗೆ ರಾಜ್ಯ ಸರಕಾರದಿಂದ ನೀಡುವ ಆಹಾರ ಕಿಟ್ನ ಪ್ರಕಾರ ಫೆಬ್ರವರಿ ತಿಂಗಳವರೆಗೆ 1,215 ಕೊರಗ ಕುಟುಂಬಗಳಿದ್ದವು. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಕೆಲ ಕುಟುಂಬಗಳ ಮಾಹಿತಿ ಲಭ್ಯವಾಗಿಲ್ಲ. ಅಂತಹ ಕುಟುಂಬಗಳಿಂದ ದಾಖಲೆಗಳು ಲಭ್ಯವಿದ್ದಲ್ಲಿ ಪಡೆಯುವ ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಐಟಿಡಿಪಿ ಅಧಿಕಾರಿಗಳು.
ಮೂಲನಿವಾಸಿಗಳಾಗಿದ್ದರೂ ಶತಶತಮಾನಗಳ ಹಿಂದಿನಿಂದ ಶೋಷಣೆಗೆ ಒಳಗಾಗಿ, ಸಾಮಾಜಿಕ ವಾಗಿ ಅಸ್ಪಶ್ಯತೆಯ ಭಯದಲ್ಲೇ ಬದುಕಿರುವ ಕೊರಗ ಸಮುದಾಯದ ಜನರಲ್ಲಿ ಇನ್ನೂ ಮಾನಸಿಕ ತುಮುಲ, ಭಯವಿದೆ. ಬಹುಶಃ ಅದು ರಕ್ತಗತವಾಗಿ ಬಂದಿರುವ ಕಾರಣ ಕರಾವಳಿಯ ಅಲ್ಲಲ್ಲಿ ಅವ್ಯವಸ್ಥಿತವಾಗಿ ಹಂಚಿಕೊಂಡಿರುವ ಸಮುದಾ ಯದ ಜನರನ್ನು ಸಾಮುದಾಯಿಕವಾಗಿ ಒಂದೆಡೆ ಸೇರಿಸಿ ಭೂಮಿಯ ಹಕ್ಕನ್ನು ಒದಗಿಸಬೇಕಾಗಿದೆ. ಇದಕ್ಕಾಗಿ ನಾವು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ ಎನ್ನುವ ಕೊರಗ ಮುಖಂಡರು, ದ.ಕ. ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಸಮುದಾಯದ 100 ಕುಟುಂಬಗಳನ್ನು ಒಂದು ಕಡೆ ನೆಲೆ ನಿಲ್ಲುವಂತೆ ಮಾಡಲು ಕನಿಷ್ಠ 500 ಎಕರೆ ಭೂಮಿ ಮೀಸಲಿಡಬೇಕು ಎನ್ನುತ್ತಾರೆ.
ಆ ಪ್ರದೇಶದಲ್ಲಿ ಅವರಿಗೆ ಅಗತ್ಯವಾದ ಶಾಲೆ, ಕಾಲೇಜು, ಆಸ್ಪತ್ರೆ, ಆಟದ ಮೈದಾನ, ಸ್ಮಶಾನ, ಕುಲಕಸುಬಿಗೆ ಪೂರಕವಾದ ವಾತಾವರಣ, ಕೃಷಿಗೆ ಅವಕಾಶ ಸಿಗುವಂತಾಗಬೇಕು. ಅಲ್ಲಿ ಸಮು ದಾಯದ ಸಾಂಸ್ಕೃತಿಕ ಬದುಕಿನ ಅನಾವರಣ, ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ನೋಡು ವಂತಾಗಬೇಕು. ಈ ಕಾರ್ಯ ಸರಕಾರದಿಂದ ಹಂತ ಹಂತವಾಗಿ ನಡೆದರೆ ಸಮುದಾಯವನ್ನು ಸಾಮಾ ಜಿಕವಾಗಿ ಮೇಲೆತ್ತಲು ಸಾಧ್ಯವಾಗಲಿದೆ ಎನ್ನುವುದು ಕೊರಗ ಮುಖಂಡರ ಬೇಡಿಕೆ.
ಐಟಿಡಿಪಿ ಇಲಾಖೆಯಿಂದ ಕೆಲ ಸಮಯದ ಹಿಂದೆಯಷ್ಟೇ ನಡೆದ ಕೊರಗ ಸಮುದಾಯದ ಸಮೀಕ್ಷೆಯ ವೇಳೆ ಜನಸಂಖ್ಯೆ ಮತ್ತಷ್ಟು ಇಳಿಕೆಯಾಗಿರುವುದು ಸ್ಪಷ್ಟವಾಗಿದೆ. ಪೌಷ್ಟಿಕ ಆಹಾರ, ಆರೋಗ್ಯ ಸೇತುವಿನಂತಹ ಕಾರ್ಯಕ್ರಮಗಳು ಸಮುದಾಯಕ್ಕೆ ಪೂರಕವಾಗಿವೆ. ಆದರೆ ಜಿಲ್ಲೆಯ ವಿವಿಧ ಕಡೆ ಹಂಚಿ ಹೋಗಿರುವ ಒಂಟಿ ಮನೆಗಳಾಗಿರುವ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಭೂಮಿ ಹಕ್ಕಿನೊಂದಿಗೆ ಸಕಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಮಟ್ಟದ ಸಭೆಯಲ್ಲೂ ಆಗ್ರಹಿಸಲಾಗಿದೆ.
-ಸುಂದರ ಕೊರಗ,
ಅಧ್ಯಕ್ಷರು, ದ.ಕ. ಜಿಲ್ಲಾ ಕೊರಗ ಸಂಘ
ಪೌಷ್ಟಿಕ ಆಹಾರವನ್ನು ಸರಕಾರ ನೀಡುತ್ತಿದೆ. ಅದರಿಂದ ಸಾಕಷ್ಟು ಪ್ರಯೋಜನ ಆಗಿದೆ. ಆದರೆ ಇತ್ತೀಚೆಗೆ ಮಕ್ಕಳ ಶಿಬಿರವೊಂದನ್ನು ನಡೆಸಿದ ಸಂದರ್ಭ ಚಿಕ್ಕಮಕ್ಕಳಲ್ಲಿ ಹಿಮೋಗ್ಲೋಬಿನ್ ಅಂಶದ ಕೊರತೆ ಇರುವುದು ಕಂಡುಬಂದಿದೆ. ಸಮುದಾಯವನ್ನು ಬಹುವಾಗಿ ಕಾಡುತ್ತಿದ್ದ ಟಿಬಿಯಂತಹ ಕಾಯಿಲೆಗಳು ಕಡಿಮೆಯಾಗಿದ್ದರೂ ಕ್ಯಾನ್ಸರ್ನಂತಹ ಕಾಯಿಲೆಗಳು ಕಾಡಲಾರಂಭಿಸಿವೆ. ಹಾಗಾಗಿ ಕ್ಷೀಣಿಸುತ್ತಿರುವ ಜನಸಂಖ್ಯೆ ಬಗ್ಗೆ ತಜ್ಞರಿಂದ ಸಮಗ್ರ ಅಧ್ಯಯನದ ಅಗತ್ಯವಿದೆ.
-ಡಾ.ಸಬಿತಾ ಗುಂಡ್ಮಿ
ಸಹಾಯಕ ಪ್ರಾಧ್ಯಾಪಕಿ
ಮಂಗಳೂರು ವಿವಿ






