ಕುಕನೂರು | ಸಂಚಾರಿ ನ್ಯಾಯಾಲಯಕ್ಕೆ ತೆರೆ

ಕುಕನೂರು : ತಾಲೂಕಿನ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಉಚ್ಚ ನ್ಯಾಯಾಲಯವು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ನ್ಯಾಯಾಲಯ (ಸರ್ಕ್ಯೂಟ್ ಕೋರ್ಟ್) ವ್ಯವಸ್ಥೆಯನ್ನು ಸ್ಥಗಿತಗೊಳಿಸಿ, ಖಾಯಂ ನ್ಯಾಯಾಲಯ ಸ್ಥಾಪನೆಗೆ ಆದೇಶ ಹೊರಡಿಸಿದೆ.
ಆದೇಶದ ಅನ್ವಯ, ಇನ್ಮುಂದೆ ಕುಕನೂರಿನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಹಾಗೂ ನ್ಯಾಯಾಂಗ ದಂಡಾಧಿಕಾರಿ ಪ್ರಥಮ ದರ್ಜೆ (ಜೆಎಂಎಫ್ಸಿ) ನ್ಯಾಯಾಲಯಗಳ ದೈನಂದಿನ ನಿಯಮಿತ ಕಲಾಪಗಳು ನಡೆಯಲಿವೆ ಎಂದು ನ್ಯಾಯಾಂಗ ವಲಯದ ಮೂಲಗಳು ತಿಳಿಸಿವೆ. ಇದರೊಂದಿಗೆ ತಾಲೂಕಿನ ಜನತೆಗೆ ನ್ಯಾಯಾಂಗ ಸೇವೆಗಳು ಸ್ಥಳೀಯ ಮಟ್ಟದಲ್ಲೇ ನಿರಂತರವಾಗಿ ಲಭ್ಯವಾಗಲಿದ್ದು, ನ್ಯಾಯದ ಸಿಗುವುದು ಇನ್ನಷ್ಟು ಸುಗಮವಾಗಲಿದೆ.
ಇದುವರೆಗೆ ಸಂಚಾರಿ ನ್ಯಾಯಾಲಯವು ವಾರದಲ್ಲಿ ಮಂಗಳವಾರ ಮತ್ತು ಬುಧವಾರ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ದಾವೆಗಳು ಹಾಗೂ ಅಪರಾಧ ಪ್ರಕರಣಗಳ ವಿಚಾರಣೆಯಲ್ಲಿ ನಿರಂತರ ವಿಳಂಬ ಉಂಟಾಗುತ್ತಿತ್ತು. ಪ್ರಕರಣಗಳು ತಿಂಗಳುಗಟ್ಟಲೆ ಮುಂದೂಡಿಕೆಯಾಗುತ್ತಿದ್ದು, ಕಕ್ಷಿದಾರರು ಅನಿಶ್ಚಿತತೆ ಹಾಗೂ ತೊಂದರೆ ಎದುರಿಸುತ್ತಿದ್ದರು. ‘ವಿಚಾರಣೆಯ ವಿಳಂಬವೇ ನ್ಯಾಯ ನಿರಾಕರಣೆ’ ಎಂಬ ನ್ಯಾಯ ತತ್ತ್ವವನ್ನು ಪರಿಗಣಿಸಿದ ಉಚ್ಚ ನ್ಯಾಯಾಲಯವು ಈ ಸ್ಥಿತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಖಾಯಂ ನ್ಯಾಯಾಲಯ ಸ್ಥಾಪನೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಸಂಚಾರಿ ನ್ಯಾಯಾಲಯದ ನ್ಯಾಯಾಧಿಕಾರ ವ್ಯಾಪ್ತಿಯಲ್ಲಿದ್ದ ಎಲ್ಲಾ ಬಾಕಿ ಹಾಗೂ ಪ್ರಚಲಿತ ಪ್ರಕರಣಗಳನ್ನು ಖಾಯಂ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಅಧಿಕೃತ ಆದೇಶ ಪ್ರತಿಗಾಗಿ ನಿರೀಕ್ಷಿಸಲಾಗಿದೆ.
ಈ ನಿರ್ಧಾರಕ್ಕೆ ಸ್ಥಳೀಯ ಕಾನೂನು ವಲಯದಿಂದ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಸಂಚಾರಿ ನ್ಯಾಯಾಲಯದ ಅನಿಶ್ಚಿತತೆಗೆ ತೆರೆ ಬಿದ್ದಿದ್ದು, ನ್ಯಾಯಾಂಗ ಪ್ರಕ್ರಿಯೆಗಳಿಗೆ ಸ್ಥಿರತೆ ಸಿಗಲಿರುವುದರಿಂದ ಕಕ್ಷಿದಾರರಿಗೆ ಸಕಾಲದಲ್ಲಿ ನ್ಯಾಯ ದೊರೆಯುವ ಭರವಸೆ ಮೂಡಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಕುಕನೂರಿನ ನ್ಯಾಯಾಂಗ ಇತಿಹಾಸದಲ್ಲಿ ಇದು ಮಹತ್ವದ ಮೈಲುಗಲ್ಲು. ಸಂಚಾರಿ ನ್ಯಾಯಾಲಯದ ಅನಿಶ್ಚಿತತೆಗೆ ಅಂತ್ಯವಾಗಿದ್ದು, ಖಾಯಂ ನ್ಯಾಯಾಲಯದ ಸ್ಥಾಪನೆಯಿಂದ ನ್ಯಾಯ ವಿತರಣಾ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಬಾಸ್ ಎಸ್. ಹೊಂಬಾಳ ತಿಳಿಸಿದ್ದಾರೆ.
ಸಾಮಾನ್ಯ ಜನರಿಂದಲೂ ಈ ಕ್ರಮಕ್ಕೆ ಹರ್ಷವ್ಯಕ್ತವಾಗಿದ್ದು, ನ್ಯಾಯಾಲಯದ ಕಾರ್ಯಗಳಿಗೆ ದೂರ ಪ್ರಯಾಣಿಸುವ ತೊಂದರೆ ಕಡಿಮೆಯಾಗಲಿದ್ದು, ಪ್ರಕರಣಗಳ ತ್ವರಿತ ವಿಚಾರಣೆ ಸಾಧ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಒಟ್ಟಾರೆ, ಕುಕನೂರಿನಲ್ಲಿ ಖಾಯಂ ನ್ಯಾಯಾಲಯ ಸ್ಥಾಪನೆ ನ್ಯಾಯದ ಲಭ್ಯತೆಯನ್ನು ವಿಸ್ತರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಖಾಯಂ ನ್ಯಾಯಾಲಯ ಸ್ಥಾಪನೆಯಿಂದ ಪ್ರಕರಣಗಳ ತ್ವರಿತ ಇತ್ಯರ್ಥ ಸಾಧ್ಯವಾಗಲಿದೆ. ಜನರಿಗೆ ನ್ಯಾಯ ಸೇವೆ ಹತ್ತಿರವಾಗಲಿದೆ. ಸಿವಿಲ್ ನ್ಯಾಯಾಧೀಶರು ಇಲ್ಲಿ ಕಾರ್ಯನಿರ್ವಹಿಸುವುದರಿಂದ ವಿಚಾರಣೆ ವೇಗ ಪಡೆಯಲಿದೆ. ಹುದ್ದೆಗಳ ಮಂಜೂರು ಹಾಗೂ ಮೂಲಸೌಕರ್ಯ ಒದಗಿಸುವ ಸರ್ಕಾರದ ನಿರ್ಧಾರ ಸಂತಸದಾಯಕ. ಕುಕನೂರಿನ ನ್ಯಾಯಾಂಗ ಇತಿಹಾಸದಲ್ಲಿ ಇದು ಹೊಸ ಮೈಲಿಗಲ್ಲು.
-ಸುಭಾಸ್ ಎಸ್. ಹೊಂಬಾಳ, ತಾಲೂಕು ವಕೀಲರ ಸಂಘದ ಅಧ್ಯಕ್ಷ, ಕುಕನೂರು
ಕುಕನೂರು ನ್ಯಾಯಾಲಯದಲ್ಲಿ 1,500ಕ್ಕೂ ಹೆಚ್ಚು ಸಿವಿಲ್ ಹಾಗೂ ಅಪರಾಧ ಪ್ರಕರಣಗಳು ಬಾಕಿ ಇದ್ದು, ಇನ್ಮುಂದೆ ಖಾಯಂ ಕೋರ್ಟ್ ಪ್ರತಿದಿನ ನಡೆಯುವುದರಿಂದ ಜನಸಾಮಾನ್ಯರು ಮತ್ತು ಕಕ್ಷಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಯಲಬುರ್ಗಾ ಹೋಗಿ ಬರುವ ತೊಂದರೆ ಕೂಡ ತಪ್ಪಲಿದೆ.
-ಬಸವರಾಜ್ ಜಂಗ್ಲಿ, ವಕೀಲರು, ಕುಕನೂರ
ಪ್ರಕರಣಗಳಿಗಾಗಿ ಯಲಬುರ್ಗಾಕ್ಕೆ ತೆರಳುವುದು ಮಹಿಳೆಯರಿಗೆ ತುಂಬಾ ಕಷ್ಟಕರವಾಗಿತ್ತು. ಸಮಯ, ಹಣ ಮತ್ತು ಪ್ರಯಾಣದ ತೊಂದರೆ ಎದುರಿಸಬೇಕಾಗುತ್ತಿತ್ತು. ಈಗ ಕುಕನೂರಲ್ಲೇ ಖಾಯಂ ನ್ಯಾಯಾಲಯ ಆರಂಭವಾಗುತ್ತಿರುವುದು ನಮಗೆ ದೊಡ್ಡ ನೆರವಾಗಿದ್ದು, ಪ್ರಕರಣಗಳೂ ಬೇಗ ಮುಗಿಯುವ ವಿಶ್ವಾಸ ಬಂದಿದೆ.
- ಹುಲಿಗೆಮ್ಮ ಕುಂಬಾರ, ಸ್ಥಳೀಯ ನಿವಾಸಿ






