ಕನಕಾಚಲಪತಿ ಜಾತ್ರೆಯಲ್ಲಷ್ಟೇ ಸಿಗುವ ‘ಲಂಬಾಣಿ ಉಡುಗೆಗಳು’

ಕನಕಗಿರಿ : ದೇಶದ ಕಲೆ, ಸಂಸ್ಕೃತಿಗೆ ಲಂಬಾಣಿ ಅಥವಾ ಬಂಜಾರ ಸಮುದಾಯದ ಕೊಡುಗೆ ಅಪಾರವಾಗಿದೆ. ತಮ್ಮ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುವ ಲಂಬಾಣಿಗರು, ತಾಲೂಕಿನ ವಿವಿಧ ತಾಂಡಾಗಳಲ್ಲಿ ಕೃಷಿ ಹಾಗೂ ಕೂಲಿ ಮಾಡುತ್ತಾರೆ. ಅಧುನಿಕತೆ ಬೆಳೆದರೂ ಲಂಬಾಣಿ ಮಹಿಳೆಯರ ಉಡುಗೆ ತೊಡುಗೆಗಳಲ್ಲಿ ಬದಲಾಗಿಲ್ಲ. ಈಗಲೂ ಸಾಂಪ್ರದಾಯಿಕ ಉಡುಗೆಗಳಲ್ಲಿಯೇ ಮಿಂಚುತ್ತಾರೆ.
ಉಡುಗೆ ತೊಡುಗೆಗಳು ಕರಕುಶಲ ಕಲೆಯಿಂದ ಕೂಡಿದ್ದು, ಕನಕಾಚಲಪತಿಯ ಜಾತ್ರಾ ಮಹೋತ್ಸವದಲ್ಲಿ ಸಿಗುತ್ತವೆ. ಕೊಪ್ಪಳ, ವಿಜಯನಗರ, ಬಳ್ಳಾರಿ, ಇಲಕಲ್ ಸೇರಿದಂತೆ ತಾಲೂಕಿನ ಅಡವಿಬಾವಿ ತಾಂಡಾ, ಅಡವಿಬಾವಿ ಗ್ರಾಮ, ದೊಡ್ಡ ಅಡವಿಬಾವಿ ತಾಂಡಾ, ಚಿರ್ಚನಗುಡ್ಡತಾಂಡ, ನವಲಿ ತಾಂಡಾ, ಬೊಮಸಾಗರ ತಾಂಡಾದ ಬಂಜಾರರು ಪಟ್ಟಣಕ್ಕೆ ಮಾರಾಟಕ್ಕಾಗಿ ಬರುತ್ತಾರೆ.
ಕೇವಲ ಆರೇಳು ತಾಸುಗಳವರೆಗೆ ನಡೆಯುವ ವ್ಯಾಪಾರದಲ್ಲಿ ಸಾಮಗ್ರಿಗಳಾದ ಪೇಟಿಯಾ (ಲಂಗ), ಕಾಂಚಳಿ (ರವಿಕೆ) ಗೋಗರಿ (ತಾಳಿ), ಪಾಮಾಡಿ (ಧವನಿ), ಕೋಡಿ (ಸರ), ಜಾಂಜರ್ (ಕಾಲು ಗೆಜ್ಜೆ), ಕೈಖಡ್ಗ, ಫಾವಲಿ (ನಾಲ್ಕಾಣಿ ನಾಣ್ಯ), ಬಳೆ, ಗೋಟ್, ಇತರ ಸಾಮಾಗ್ರಿಗಳನ್ನು ಲಂಬಾಣಿಗರು ಚೌಕಾಸಿ ಮಾಡಿ ಖರೀದಿಸಿದರು.
ಸಾಮಾಗ್ರಿಗಳ ಮಾರಾಟಗಾರರು ಜಾತ್ರೆ ಮುಗಿಯುವವರೆಗೆ ಇರುವುದಿಲ್ಲ. ರಥೋತ್ಸವದ ಮರು ದಿನ ಆರೇಳು ಗಂಟೆ ಮಾತ್ರ ಭರ್ಜರಿ ವ್ಯಾಪಾರ ನಡೆಯುತ್ತದೆ ಎಂದು ಮುತ್ತಣ್ಣ ಲಮಾಣಿ ತಿಳಿಸಿದರು.
ಯುವ ಪೀಳಿಗೆಯವರು ಉಡುಗೆ ತೊಡುಗೆಗಳಿಂದ ದೂರವಿದ್ದರೂ ಹಬ್ಬ ಹರಿದಿನಗಳಲ್ಲಿ ಕಡ್ಡಾಯವಾಗಿ ಧರಿಸುತ್ತಾರೆ. ಸೇವಾಲಾಲ್ ಜಯಂತಿ, ಶೀತಲ್ ಹಬ್ಬ (ಹುಂಜದ ಮಾಂಸ ತಿನ್ನುವುದು), ದೀಪಾವಳಿ ಹೀಗೆ ವಿವಿಧ ಹಬ್ಬಗಳಲ್ಲಿ ಲಂಬಾಣಿ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ ಎಂದು ವಿದ್ಯಾರ್ಥಿನಿ ಸಂಗೀತಾ ಚವ್ಹಾಣ ಹೇಳಿದರು.
ಒಂದು ಜತೆ ಉಡುಗೆ ಸಿದ್ಧಪಡಿಸಲು ಕನಿಷ್ಟ 18ರಿಂದ 20 ಸಾವಿರ ರೂ. ಬೇಕಾಗುತ್ತದೆ. ಎಷ್ಟೇ ಬಡವರಿದ್ದರೂ ಮದುವೆ ಸಮಯದಲ್ಲಿ ವಧುವಿನ ಕಡೆಯವರು ಕಡ್ಡಾಯವಾಗಿ ಈ ಉಡುಗೆಯನ್ನು ವಧುವಿಗೆ ಕೊಡಬೇಕಾಗುತ್ತದೆ. ಮುಂಬರುವ ಬಸವ ಜಯಂತಿ ಸಮಯದಲ್ಲಿ ಮದುವೆ ಸೀಝನ್ ಆರಂಭವಾಗುವ ಹಿನ್ನೆಲೆಯಲ್ಲಿ ಕರಕುಶಲ ಸಾಮಗ್ರಿ ಖರೀದಿಸಿ ಮನೆಯಲ್ಲಿ ಕಸೂತಿ ಮಾಡಿ, ಉಡುಗೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ ಎಂದು ಲಕ್ಷ್ಮವ್ವ ದೊಡ್ಡ ಅಡವಿಬಾವಿ ತಾಂಡಾ ಹಾಗೂ ದೊಡ್ಡ ತಾಂಡದ ಕಾವೇರಿ ತಿಳಿಸಿದ್ದಾರೆ.
ರಾಯಚೂರು, ವಿಜಯನಗರ, ಇತರ ಜಿಲ್ಲೆಗಳ ವರ್ತಕರು ಇಲ್ಲಿಗೆ ಬಂದು ವ್ಯಾಪಾರ ವಹಿವಾಟು ಮಾಡುತ್ತಾರೆ. ವ್ಯಾಪಾರಕ್ಕೆ ಸಾಮಗ್ರಿ ಕೊಡುವ ಮಾಲಕರು ಸಹ ಜಾತ್ರೆಗೆ ಬಂದು ಸಂಜೆ ವೇಳೆಯಲ್ಲಿ ಹಣ ಪಡೆದುಕೊಂಡು ಹೋಗುತ್ತಾರೆ ಎಂದು ಮುತ್ತಣ್ಣ ಲಮಾಣಿ ಹೇಳಿದರು.
ಕೊಪ್ಪಳದ ಯಾವ ಜಾತ್ರೆಯಲ್ಲೂ ಲಂಬಾಣಿಗರ ಸಾಮಾಗ್ರಿಗಳ ಮಾರಾಟ ಇರುವುದಿಲ್ಲ. ಹೀಗಾಗಿ ಜಿಲ್ಲೆಯ ಬಂಜಾರರು ಇಲ್ಲಿಗೆ ಬಂದು ಖರೀದಿಸುತ್ತಾರೆ. ಹೈದರಾಬಾದ್ನಿಂದ ಸಾಮಾಗ್ರಿ ತರಿಸುತ್ತೇವೆ. ಕಳೆದ ಹದಿನೇಳು ವರ್ಷಗಳಿಂದ ಜಾತ್ರೆಗೆ ಬಂದು ಲಮಾಣಿ ಐಟಂ ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಉತ್ತಮವಾಗಿದೆ.
ಚಂದ್ರು ನಾಯ್ಕ್
ವ್ಯಾಪಾರಿ, ವಿಜಯನಗರ
ಲಂಬಾಣಿಗರ ಉಡುಗೆ ತೊಡುಗೆಗಳ ಸಾಮಗ್ರಿಗಳು ಈ ಜಾತ್ರೆ ಬಿಟ್ಟರೆ ಗದಗ, ಗಜೇಂದ್ರಗಡದಲ್ಲಿ ಸಿಗುತ್ತವೆ. ಇದು ಸಮೀಪವಾಗುವ ಕಾರಣ ಇಲ್ಲಿ ಖರೀದಿ ಮಾಡುತ್ತೇವೆ.
ಸರೋಜಮ್ಮ
ನವಲಿ ತಾಂಡಾ ನವಲಿ ತಾಂಡಾ







