ಆಹಾರ ಸುರಕ್ಷತೆ ಬಾಯಿ ಮಾತಿಗೆ ಸಿಮೀತವಾಗದಿರಲಿ

ಜಪಾನ್ ದೇಶವು ಆಹಾರ ಸುರಕ್ಷತೆಯ ದೃಷ್ಟಿಯಿಂದ ಭಾರತದ ಮಾವಿನ ಹಣ್ಣುಗಳಲ್ಲಿ ‘ಕೀಟನಾಶಗಳ ಉಳಿಕೆ ಹಾಗೂ ಹಣ್ಣಿನ ನೊಣಗಳ ನಿಯಂತ್ರಣದಲ್ಲಿ ದೋಷಗಳು’ ಪತ್ತೆಯಾದ ಕಾರಣ ತಾತ್ಕಾಲಿಕವಾಗಿ ರಫ್ತು ನಿಷೇಧಿಸಿದೆ. ಜಪಾನ್ ದೇಶವು ದೇಶೀಯ ಕೃಷಿ ಮತ್ತು ತೋಟಗಾರಿಕೆಯನ್ನು ರಕ್ಷಿಸಲು ಹಣ್ಣಿನ ನೊಣಗಳಂತಹ ಆಕ್ರಮಣಕಾರಿ ಕೀಟಗಳ ವಿಷಯದಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ. ಹಣ್ಣಿನಲ್ಲಿ ಯಾವುದೇ ಕೀಟ ಅಥವಾ ಲಾರ್ವಾ ಪತ್ತೆಯಾಗದಂತೆ ತಡೆಯಲು ತಪಾಸಣೆಗಳನ್ನು ನಡೆಸುತ್ತದೆ.
ಮಾವಿನ ಹಣ್ಣುಗಳನ್ನು ಜಪಾನ್ಗೆ ಕಳುಹಿಸುವ ಮುನ್ನ ಗಿಚಿಠಿouಡಿ ಊeಚಿಣ ಖಿಡಿeಚಿಣmeಟಿಣ (ಗಿಊಖಿ) ಪ್ರಕ್ರಿಯೆಯ ಮೂಲಕ ಕೀಟಗಳನ್ನು ನಾಶಪಡಿಸುವುದು ಕಡ್ಡಾಯವಾಗಿದೆ. ಆದರೆ ಭಾರತದ ಉತ್ತರ ಪ್ರದೇಶದ ರಹಮಾನ್ಪುರದಲ್ಲಿರುವ ಘಟಕದಲ್ಲಿನ ಫ್ಯೂಮಿಗೇಶನ್ ಮತ್ತು ಸೋಂಕು ನಿವಾರಣೆ ಪ್ರಕ್ರಿಯೆಗಳಲ್ಲಿ ಗಂಭೀರ ನ್ಯೂನತೆಗಳನ್ನು ಜಪಾನ್ ಅಧಿಕಾರಿಗಳು ಗುರುತಿಸಿದ್ದು ನಿಷೇಧಕ್ಕೆ ಪ್ರಮುಖ ಕಾರಣವಾಯಿತು. ಆದರೆ ನಾವು ಮಾತ್ರ ಹಣ್ಣಿನ ಅಂದ ಚೆಂದವನ್ನೋ, ಅದರ ಅಗ್ಗದ ಬೆಲೆಯನ್ನೋ ನೋಡಿ ಅದೇ ನಿಷೇಧಿತ ಹಣ್ಣನ್ನು ಚಪ್ಪರಿಸಿ ತಿನ್ನುತ್ತಿದ್ದೇವೆ. ಕಾರಣ ನಮ್ಮಲ್ಲಿ ಜಪಾನ್ ಮತ್ತು ಯುರೋಪಿಯನ್ ಯೂನಿಯನ್ ದೇಶಗಳು ಆಹಾರ ಸುರಕ್ಷತೆಯ ವಿಷಯದಲ್ಲಿ ಪಾಲಿಸುವ ‘ಸೊನ್ನೆ ಸಹಿಷ್ಣುತಾ ನೀತಿ’ ಇಲ್ಲ.
ನಮಗೆ ಹಣ್ಣಿನ ನೊಣಗಳು ಹಾಗೂ ಕೀಟನಾಶಕಗಳ ಉಳಿಕೆ ದೊಡ್ಡ ಸಂಗತಿಯೆಂದು ಎಂದಿಗೂ ಅನಿಸುವುದಿಲ್ಲ. ಕಾರಣ ನಾವು ಕಾಯನ್ನು ಬೇಗನೆ ಹಣ್ಣು ಮಾಡಲು ಅತ್ಯಂತ ಅಪಾಯಕಾರಿಯಾದ ‘ಕ್ಯಾಲ್ಸಿಯಂ ಕಾರ್ಬೈಡ್’ ರಾಸಾಯನಿಕವನ್ನು ಬಳಸುತ್ತೇವೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ನಿಯಂತ್ರಿತ ಪ್ರಮಾಣದಲ್ಲಿ ಬಳಸಲು ಅನುಮತಿಯಿರುವ ‘ಎಥೆಫಾನ್’ ಅಥವಾ ‘ಎಥಿಲಿನ್ ಗ್ಯಾಸ್’ ಅನ್ನು ಕೂಡ ಬಳಸಲಾಗುತ್ತಿದೆ. ಆದರೆ ಭಾರತದ ಮಾರುಕಟ್ಟೆಗಳಲ್ಲಿ ಇಂದಿಗೂ ದುಡ್ಡು ಉಳಿಸುವ ಮತ್ತು ಬೇಗನೆ ಹಣ್ಣು ಮಾಡುವ ಆಸೆಗೆ ಕ್ಯಾಲ್ಸಿಯಂ ಕಾರ್ಬೈಡ್ ಅನ್ನೇ ಕಾನೂನುಬಾಹಿರವಾಗಿ ಹೆಚ್ಚಾಗಿ ಬಳಸಲಾಗುತ್ತಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಡಿಯಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣು ಮಾಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವ ವ್ಯಾಪಾರಿಗಳಿಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೂ ನಮ್ಮಲ್ಲಿ ಇಂದಿಗೂ ರಾಜಾರೋಷವಾಗಿ ಅದರ ಬಳಕೆಯಾಗುತ್ತಿದೆ.
ಕ್ಯಾಲ್ಸಿಯಂ ಕಾರ್ಬೈಡ್ ಹಣ್ಣಿನಲ್ಲಿರುವ ತೇವಾಂಶದೊಂದಿಗೆ ವರ್ತಿಸಿದಾಗ ‘ಅಸಿಟಿಲಿನ್’ ಎಂಬ ಅನಿಲ ಬಿಡುಗಡೆಯಾಗುತ್ತದೆ. ಇದು ಹಣ್ಣು ಬೇಗನೆ ಪಕ್ವವಾಗುವಂತೆ ಮಾಡುತ್ತದೆ. ಆದರೆ ಈ ಕ್ಯಾಲ್ಸಿಯಂ ಕಾರ್ಬೈಡ್ನಲ್ಲಿ ಅತ್ಯಂತ ವಿಷಕಾರಿಯಾದ ‘ಆರ್ಸೆನಿಕ್’ ಮತ್ತು ‘ಫಾಸ್ಫರಸ್’ ರಾಸಾಯನಿಕಗಳ ಅಂಶವಿರುತ್ತದೆ. ಅಗ್ಗದ ಬೆಲೆಯೋ ಅಥವಾ ಹಣ್ಣಿನ ಅಂದ ಚೆಂದ ನೋಡಿ ಕೊಂಡು ಚಪ್ಪರಿಸಿ ತಿಂದ ಇದೇ ಹಣ್ಣು ಜೀವಕ್ಕೆ ಮಾರಕ ಎಂಬುದೇ ಜನರಿಗೆ ತಿಳಿದಿಲ್ಲ. ಹೀಗಿರುವಾಗ ನಮ್ಮ ಜನರಿಗೆ, ಸರಕಾರಕ್ಕೆ ಹಣ್ಣಿನ ನೋಟಗಳು, ಕೀಟನಾಶಕಗಳ ಉಳಿಕೆ ದೊಡ್ಡ ಸಂಗತಿ ಹೇಗಾಗಲು ಸಾಧ್ಯ.
ಭಾರತೀಯ ಮಾರುಕಟ್ಟೆಗೆ ಬರುವ ಮಾವಿನ ಹಣ್ಣುಗಳು ಈSSಂI ನಿಗದಿಪಡಿಸಿದ 2.0 mg/ಞg ಒಳಗಿದ್ದರೆ ನಮ್ಮ ದೇಶದಲ್ಲಿ ಕಾನೂನುಬದ್ಧವಾಗಿ ಮಾರಾಟ ಮಾಡಬಹುದು. ಆದರೆ ಅದೇ ಹಣ್ಣನ್ನು ಜಪಾನ್ಗೆ ರಫ್ತು ಮಾಡಿದಾಗ, ಅಲ್ಲಿನ 0.01 mg/ಞg ಮಿತಿಗಿಂತ ಕಡಿಮೆ ಇರಬೇಕು. ಇಲ್ಲದಿದ್ದರೆ ಅದು ರಫ್ತು ನಿಷೇಧಕ್ಕೆ ಒಳಗಾಗುತ್ತದೆ. ಆದ್ದರಿಂದಲೇ, ಜಪಾನ್ ಮತ್ತು ಯುರೋಪ್ ದೇಶಗಳಿಗೆ ರಫ್ತು ಮಾಡುವ ಮಾವಿನ ತೋಟಗಳಲ್ಲಿ ಹಣ್ಣು ಕೊಯ್ಯುವ 20 ದಿನಗಳ ಮುಂಚೆಯೇ ಯಾವುದೇ ರಾಸಾಯನಿಕ ಸಿಂಪಡಿಸದಂತೆ ‘ಅಪೆಡಾ’ ಸಂಸ್ಥೆಯು ರೈತರಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡುತ್ತದೆ.
ಆದರೆ ನಮ್ಮಲ್ಲಿ ಮಾವಿನ ಕೃಷಿಯಲ್ಲಿ ಕೇವಲ ಹಣ್ಣು ಮಾಡುವಾಗ ಮಾತ್ರವಲ್ಲದೆ, ಗಿಡ ನೆಟ್ಟಾಗಿನಿಂದ ಹಿಡಿದು ಹಣ್ಣು ಕೊಯ್ಲು ಮಾಡುವವರೆಗೆ ಬೇರೆ ಬೇರೆ ಹಂತಗಳಲ್ಲಿ ಕೀಟನಾಶಕಗಳು, ಶಿಲೀಂಧ್ರನಾಶಕಗಳು ಮತ್ತು ಬೆಳವಣಿಗೆ ನಿಯಂತ್ರಕಗಳಂತಹ ಹಲವಾರು ರಾಸಾಯನಿಕಗಳನ್ನು ಬಳಸಲಾಗುತ್ತದೆ. ‘ಭಾರತೀಯ ಕೃಷಿ ಸಂಶೋಧನಾ ಮಂಡಳಿ’ ಮತ್ತು ‘ಅಪೆಡಾ’ ನಿಯಮಾವಳಿಗಳ ಪ್ರಕಾರ ಮಾವಿನ ಬೆಳೆಗೆ ಎಷ್ಟು ಪ್ರಮಾಣದ ರಾಸಾಯನಿಕ ಬಳಸಬೇಕೆಂದು ಸೂಚಿಸುತ್ತದೆ. ಆದರೆ ನಮ್ಮಲ್ಲಿ ಎಷ್ಟು ರೈತರಿಗೆ ಅದರ ಜ್ಞಾನವಿದೆ. ಒಂದೊಮ್ಮೆ ಜ್ಞಾನವಿದ್ದರೂ ಎಷ್ಟು ಪ್ರತಿಶತ ರೈತರು ಅದನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾರೆ ಎಂಬುದೇ ಪ್ರಶ್ನೆ.
ಜಪಾನ್ ಬಳಿಕ ಇಂದು ನೆರೆ ನೇಪಾಳ ಕೂಡ ಮಾವಿನ ಹಣ್ಣಿನ ಮೇಲೆ ನಿಷೇಧ ಹೇರಿದೆ. ಇಂದು ಜಗತ್ತಿನ ವಿವಿಧ ರಾಷ್ಟ್ರಗಳು ಭಾರತದ ಮಾವಿನ ಹಣ್ಣಿನ ರಫ್ತಿನ ಮೇಲೆ ಮಾತ್ರ ನಿಷೇಧವನ್ನು ಹೇರಿಲ್ಲ. ಬದಲಾಗಿ ಭಾರತದ ಮಸಾಲೆ ಪದಾರ್ಥಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ನಿಷೇಧ ಹೇರಿವೆ. ಕಾರಣ ಅವರಿಗೆ ತಮ್ಮ ದೇಶದ ಪ್ರಜೆಗಳ ಮೇಲಿರುವ ಅದಮ್ಯ ಕಾಳಜಿಯೇ ಹೊರತು, ಲಾಭಗಳಿಸಬೇಕೆಂಬ ಹಪಹಪಿಯಲ್ಲ.
ಪ್ರಧಾನಿಯವರು ತಮ್ಮ ‘ಮನ್ ಕಿ ಬಾತ್’ನ 134ನೇ ಸಂಚಿಕೆಯಲ್ಲಿ ಭಾರತದ ಶ್ರೀಮಂತ ‘ಮಾವು’ ಪರಂಪರೆ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ವೈವಿಧ್ಯಮಯ ತಳಿಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ ಮಾವು ಬೆಳೆಗಾರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಕೊಂಡಾಡುತ್ತಾ ಭಾರತದ ರೈತರು ಮಾವಿನ ಹಣ್ಣನ್ನು ಸ್ಥಳೀಯ ಮಾರುಕಟ್ಟೆಗಳಿಂದ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಸುತ್ತ ಭಾರತ ಆಹಾರ ಭದ್ರತೆಯ ವಿಷಯದಲ್ಲಿ ಕಟ್ಟುನಿಟ್ಟಾದ ಶೂನ್ಯ ಸಹಿಷ್ಣುತಾ ನೀತಿಯನ್ನು ಮಾತ್ರ ಅಳವಡಿಸಿಕೊಂಡಿಲ್ಲ. ಕೇವಲ ಬಾಯಿ ಮಾತಿನಿಂದ ಬದಲಾವಣೆ ಸಾಧ್ಯವಾಗದು. ನಾಗರಿಕರ ಹಿತದೃಷ್ಟಿಯಿಂದ ಏಕಪ್ರಕಾರದ ನಿಯಮ ಜಾರಿಯಾಗಬೇಕು. ಆಗ ನಾಗರಿಕರ ಆರೋಗ್ಯದೊಂದಿಗೆ, ಕೃಷಿ, ಆಹಾರ ಉತ್ಪನ್ನಗಳಿಗೆ ಹೊರದೇಶಗಳಲ್ಲೂ ಬೇಡಿಕೆ ಹೆಚ್ಚುತ್ತದೆ. ಇದರಿಂದ ಆರ್ಥಿಕ ಹಾಗೂ ಆರೋಗ್ಯ ಅಭಿವೃದ್ಧಿಯೂ ಸಾಧ್ಯ.






