ಮಂಗಳೂರು ಜೈಲಿಗಿಲ್ಲ ಖಾಯಂ ವೈದ್ಯರ ಸೇವೆ

ಮಂಗಳೂರು : ರಾಜ್ಯದ ಅತೀ ಸೂಕ್ಷ್ಮ ಬಂಧೀಖಾನೆಯಾಗಿರುವ ಮಂಗಳೂರು ಕಾರಾಗೃಹದಲ್ಲಿ ಆಗಾಗ್ಗೆ ಹೊಡೆದಾಟ, ಹಲ್ಲೆ ಪ್ರಕರಣಗಳು ನಡೆಯುತ್ತಿರುತ್ತವೆ. ಹಾಗಿದ್ದರೂ ಜೈಲಿಗೆ ಖಾಯಂ ವೈದ್ಯರಾಗಲಿ, ಫಾರ್ಮಾಸಿಸ್ಟ್ ಗಳಾಗಲಿ, ದಾದಿಯರಾಗಲಿ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಇಲ್ಲವಾಗಿದೆ. ಇದು ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ತೀರಾ ಪೇಚಾಟಕ್ಕೆ ಕಾರಣವಾಗುತ್ತಿದೆ.
ಮೇ 16ರ ಮಾಹಿತಿಯ ಪ್ರಕಾರ ದ.ಕ. ಜಿಲ್ಲಾ ಕಾರಾಗೃಹದಲ್ಲಿ ಶಿಕ್ಷೆಗೊಳಗಾದವರು, ವಿಚಾರ ಣಾಧೀನ 349 ಕೈದಿಗಳಿದ್ದಾರೆ. ಇವರಲ್ಲಿ ನಿರಂತರ ಅಪರಾಧ ಕೃತ್ಯದಲ್ಲಿ ತೊಡಗಿದವರು, ದರೋಡೆ, ಕೊಲೆ, ಹಲ್ಲೆ ಯತ್ನ, ಕಳವು, ಮಾದಕವಸ್ತು ಸೇವನೆ, ಮಾದಕ ಸಾಗಾಟ, ಲೈಂಗಿಕ ದೌರ್ಜನ್ಯ, ದನ ಸಾಗಾಟ ಸೇರಿದಂತೆ ನಾನಾ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿದ್ದಾರೆ. ಕೈದಿಗಳಲ್ಲೂ ಶೇ.20ಕ್ಕೂ ಅಧಿಕ ಮಂದಿ ನಾನಾ ಆರೋಗ್ಯ ಸಮಸ್ಯೆಯಿಂದ ಬಳಲು ತ್ತಿದ್ದು, ಬಹುತೇಕ ಮಂದಿಗೆ ನಿತ್ಯ ವೈದ್ಯಕೀಯ ತಪಾಸಣೆ ಅಗತ್ಯವಿದೆ. ಅಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ ಜಿಲ್ಲಾ ವೈದ್ಯಾಧಿಕಾರಿ ಮೂಲಕ ವೆನ್ಲಾಕ್ ಆಸ್ಪತ್ರೆಯಿಂದ ವೈದ್ಯರನ್ನು ಒದಗಿಸಲಾಗುತ್ತಿದೆ. ರೊಟೇಶನ್ ಮೇರೆೆಗೆ ಲಭ್ಯ ಇರುವ ವೈದ್ಯರನ್ನು ಜೈಲಿಗೆ ಕೈದಿಗಳ ತಪಾಸಣೆ ಅಥವಾ ಚಿಕಿತ್ಸೆಗೆ ಕಳುಹಿಸಲಾಗುತ್ತದೆ. ಆದರೆ, ಇವತ್ತು ಚಿಕಿತ್ಸೆ ನೀಡಿದ ವೈದ್ಯರು ಮುಂದಿನ ಸಲ ಆಗಮಿಸದಿರುವ ಕಾರಣ ಕೈದಿಯ ಚಿಕಿತ್ಸಾ ಇತಿಹಾಸದ ಬಗ್ಗೆ ನಿಖರ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ಕೊಡಿಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ.
ಹಿಂದೆ ವೈದ್ಯರು, ಫಾರ್ಮಾಸಿಸ್ಟ್, ನರ್ಸ್ ಗಳನ್ನು ನೇಮಕ ಮಾಡಲಾಗುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಈ ಜವಾಬ್ದಾರಿಯನ್ನು ವಹಿಸಲಾಗಿದ್ದು, ವೆನ್ಲಾಕ್ನಿಂದ ದಿನಕ್ಕೊಬ್ಬ ವೈದ್ಯರನ್ನು ಜೈಲಿನಲ್ಲಿ ಆರೋಪಿಗಳ ತಪಾಸಣೆಗೆ ಕಳುಹಿಸಿಕೊಡಲಾಗುತ್ತಿದೆ. ಫಾರ್ಮಾ ಸಿಸ್ಟ್ ಗಳೂ ಲಭ್ಯವಿಲ್ಲದ ಕಾರಣ ತುರ್ತು ಸಂದರ್ಭ ದಲ್ಲಿ ಕೈದಿಗಳಿಗೆ ಅಗತ್ಯ ಔಷಧಿಗಳನ್ನು ಒದಗಿಸಲು ಅಧಿಕಾರಿ, ಸಿಬ್ಬಂದಿ ಪೇಚಾಡುವ ಪರಿಸ್ಥಿತಿ ಇದೆ. ಹಾಗಾಗಿ ಜೈಲಿಗೆ ಖಾಯಂ ವೈದ್ಯರು, ಫಾರ್ಮಾಸಿಸ್ಟ್ ಹಾಗೂ ಆಂಬುಲೆನ್ಸ್ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗೆ ಜೈಲು ಅಧೀಕ್ಷಕರು ಮನವಿ ಸಲ್ಲಿಸಿದ್ದಾರೆ.
ಕಾರಾಗೃಹದಲ್ಲಿ ಮುಂಜೂರಾದ ಹುದ್ದೆಗಳಲ್ಲಿ ಶೇ.80ರಷ್ಟು ಅಧಿಕಾರಿ ಸಿಬ್ಬಂದಿ ಇದ್ದಾರೆ. ಜೈಲಿನ ಸಾಮರ್ಥ್ಯಕ್ಕಿಂತ ಸುಮಾರು ದುಪ್ಪಟ್ಟು ಕೈದಿಗಳು ಇರುವ ಕಾರಣ ಇವರ ನಿರ್ವಹಣೆಗೆ ಸಮಸ್ಯೆ ಎದುರಿಸುವಂತಾಗಿದೆ. ಒತ್ತಡವನ್ನು ತಗ್ಗಿಸುವ ದೃಷ್ಟಿಯಿಂದ ಕಳೆದ 10 ತಿಂಗಳ ಅವಧಿಯಲ್ಲಿ ಸುಮಾರು 100ರಷ್ಟು ಕೈದಿಗಳನ್ನು ಮಡಿಕೇರಿ, ಬೆಳಗಾವಿ, ಹಾಸನ ಸೇರಿದಂತೆ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.
210 ಸಾಮರ್ಥ್ಯ ಬಲ ಹೊಂದಿರುವ ಮಂಗಳೂರು ಕಾರಾಗೃಹದಲ್ಲಿ ಆರು ಶಿಕ್ಷಾ ಕೈದಿಗಳು, 337 ಮಂದಿ ವಿಚಾರಣಾಧೀನ ಕೈದಿಗಳು, ಓರ್ವ ಗೂಂಡಾ ಕಾಯ್ದೆ ಕೈದಿ, ಐವರು ವಿದೇಶಿ ಕೈದಿಗಳು ಸೇರಿದಂತೆ ಒಟ್ಟು 349 ಕೈದಿಗಳಿದ್ದಾರೆ.
ಅಧಿಕಾರಿ, ಸಿಬ್ಬಂದಿಯನ್ನು ಕಾಡುತ್ತಿದೆ ಭಾಷಾ ಸಮಸ್ಯೆ! :
ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿರುವ ಅಧಿಕಾರಿ, ಸಿಬ್ಬಂದಿಯಲ್ಲಿ ಯಾರೂ ಸ್ಥಳೀಯರಲ್ಲ. ಸುಮಾರು 99 ಮಂದಿ ಅಧಿಕಾರಿ, ಸಿಬ್ಬಂದಿಯಲ್ಲಿ ಯಾರಿಗೂ ತುಳು ಭಾಷೆ ಬರುವುದಿಲ್ಲ. ಹಾಗಾಗಿ ಬಹುತೇಕ ಸ್ಥಳೀಯರೇ ಆಗಿರುವ ಕೈದಿಗಳ ಜೊತೆ ಸಂವಹನಕ್ಕೆ ತೊಂದರೆಯಾಗುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ವಿಚಾರಣಾಧೀನ ಕೈದಿಗಳು ಅಧಿಕಾರಿ, ಸಿಬ್ಬಂದಿಯನ್ನು ತುಳುವಿನಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಅರ್ಥವಾಗದ ಪರಿಸ್ಥಿತಿ ಇದೆ ಎನ್ನುತ್ತಾರೆ ಜೈಲಿನ ಅಧಿಕಾರಿಗಳು.
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಲ್ಲಿ ಕೆಲವರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ಸಂದರ್ಭ ಆರೋಗ್ಯಾಧಿಕಾರಿಗಳ ಮೂಲಕ ವೆನ್ಲಾಕ್ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಲಾಗುತ್ತದೆ. ಆದರೆ ತುರ್ತು ಸಂದರ್ಭದಲ್ಲಿ ಕೈದಿಗಳ ಚಿಕಿತ್ಸೆಗೆ ಖಾಯಂ ವೈದ್ಯರು, ಫಾರ್ಮಾಸಿಸ್ಟ್ ಹಾಗೂ ಆಂಬುಲೆನ್ಸ್ನ ಅಗತ್ಯವಿದೆ. ಜಿಲ್ಲಾ ಆರೋಗ್ಯಾಧಿಕಾರಿಗೆ ಈ ಬಗ್ಗೆ ಮನವಿ ನೀಡಲಾಗಿದೆ. ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಂಡು ವೈದ್ಯರನ್ನು ಒದಗಿಸಲು ಪ್ರಯತ್ನಿಸುವುದಾಗಿ ಆರೋಗ್ಯಾಧಿಕಾರಿ ಭರವಸೆ ನೀಡಿದ್ದಾರೆ.
-ಶರಣಬಸಪ್ಪ, ಅಧೀಕ್ಷರು, ಮಂಗಳೂರು ಕಾರಾಗೃಹ






