ಗಂಗೊಳ್ಳಿ ಬಂದರಿಗೆ ಮತ್ಸ್ಯ ಸಂಪದ ಯೋಜನೆಯಡಿ ನೂತನ ಸ್ಪರ್ಶ
►22.18 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ►ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ

ಕುಂದಾಪುರ : ಗಂಗೊಳ್ಳಿ ಮೀನುಗಾರಿಕಾ ಬಂದರ್ಗೆ ಹೊಸ ರೂಪ ನೀಡುವ ಆಧುನೀಕರಣ, ಉನ್ನತೀಕರಣ ಶರವೇಗದಿಂದ ಸಾಗಿದೆ. ಭಾರತ ಸರಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ(ಪಿಎಂಎಂಎಸ್ವೈ)ಯಡಿ ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಹಳೆ ಜೆಟ್ಟಿಯ ಸಮೀಪ ಎರಡು ಮೀನುಗಾರಿಕಾ ಪ್ರಾಂಗಣ, ಎರಡು ವಿಶ್ರಾಂತಿ ಗೃಹ ಕಟ್ಟಡ ನಿರ್ಮಾಣ ಕಾಮಗಾರಿ, ಟ್ಯಾಂಕ್ ಕೆಲಸ ಬಹುತೇಕ ಮುಗಿದಿದ್ದು, ಬಂದರ್ನ ಸುತ್ತಲೂ ಆವರಣ ಗೋಡೆ ರಚನೆಯಾಗಲಿದೆ. ದಶಕಗಳಿಂದ ಅಭಿವೃದ್ಧಿ ಕಾಣದೆ ಸೊರಗಿದ್ದ ಗಂಗೊಳ್ಳಿ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿರುವುದು ಮೀನುಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಗಂಗೊಳ್ಳಿ ಮೀನುಗಾರಿಕೆ ಬಂದರು: ಕರ್ನಾಟಕ ರಾಜ್ಯವು ವಿಫುಲ ಮತ್ಸ್ಯ ಸಂಪತ್ತನ್ನು ಹೊಂದಿದ್ದು, 343.30ಕಿ.ಮೀ. ಉದ್ದದ ಸಮುದ್ರ ತೀರ ಪ್ರದೇಶವನ್ನು ಹೊಂದಿದೆ.
ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರಿಕೆ ಬಂದರು ಕೂಡ ಒಂದಾಗಿದೆ. ಈ ಹಿಂದೆ ಗಂಗಾವಳಿ ಎಂದು ಕರೆಯಲಾಗುತ್ತಿದ್ದ ಈ ಭಾಗ ಪ್ರಸಕ್ತ ಗಂಗೊಳ್ಳಿ ಎಂದು ಕರೆಯಲ್ಪಡುತ್ತಿದೆ.
ಈ ಭಾಗವು ಕುಂದಾಪುರದ ಪ್ರಮುಖ ಐದು ನದಿಗಳ (ಸೌಪರ್ಣಿಕ, ವಾರಾಹಿ, ಕುಬ್ಜಾ, ಹಾಲಾಡಿ ಮತ್ತು ಚಕ್ರ ನದಿ) ಸಂಗಮ ಸ್ಥಾನವಾಗಿರುವುದರಿಂದ ಪಂಚ ಗಂಗಾವಳಿ ಎಂದು ಕೂಡ ಕರೆಯಲಾಗುತ್ತಿದ್ದು, ಗಂಗೊಳ್ಳಿ ಮೀನುಗಾರಿಕೆ ಜೆಟ್ಟಿ ಇದೇ ನದಿಗಳ ಸಂಗಮ ಸ್ಥಾನದಲ್ಲಿದೆ.
ಸುಮಾರು 22.18 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಎರಡು ಮೀನು ಹರಾಜು ಪ್ರಾಂಗಣ, ಸಾರ್ವಜನಿಕ ಶೌಚಾಲಯಗಳು, ಎರಡು ವಿಶ್ರಾಂತಿ ಕೊಠಡಿ, ಈಟಿಪಿ, ಆವರಣ ಗೋಡೆ, ಭದ್ರತಾ ಕೊಠಡಿ, ಓವರ್ಹೆಡ್ ಟ್ಯಾಂಕ್, ನೀರಿನ ಟ್ಯಾಂಕ್, ಕಾಂಕ್ರಿಟ್ ನೆಲಹಾಸು, ಕಾಂಕ್ರಿಟ್ ರಸ್ತೆ, ಸ್ವಾಗತ ಗೋಪುರ, ಗೇಟು, ಗಾರ್ಡನಿಂಗ್, ವಾಹನ ನಿಲ್ಲಿಸಲು ಜಾಗ, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸುಂದರೀಕರಣ ಕಾಮಗಾರಿಗಳು ನಡೆಯುತ್ತಿದೆ.
ಪಿಎಂಎಂಎಸ್ವೈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದೊಂದಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಎಂಟು ತಿಂಗಳ ಹಿಂದೆ ಕಾಮಗಾರಿ ಆರಂಭಗೊಂಡಿದೆ. 22.18 ಕೋಟಿ ರೂ. ವೆಚ್ಚದಲ್ಲಿ ಈ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಬಂದರಿನ ಸಮಗ್ರ ಪ್ರಗತಿಗೆ ಆದ್ಯತೆ ನೀಡಲಾಗುವುದು. ಕುಡಿಯುವ ನೀರಿನ ಮೂಲದ ಬಗ್ಗೆ ಸ್ಥಳೀಯ ಗ್ರಾಪಂಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನು ಬಂದರಿನ 32 ಎಕರೆ ಜಾಗ ಕಣ್ಗಾವಲಿನಲ್ಲಿರುವಂತೆ ಸಿಸಿಟಿವಿ ಕ್ಯಾಮರಾ ಅಳವಡಿಕೆ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಮನಕ್ಕೆ ತರಲಾಗಿದೆ. ಬಿದ್ದು ಹೋದ ಜೆಟ್ಟಿ ವಿಚಾರದ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಿ ಪತ್ರ ವ್ಯವಹಾರ ನಡೆಸಲಾಗಿದೆ. ಮೀನುಗಾರರ ಹಿತರಕ್ಷಣೆ ಸಲುವಾಗಿ ಅಗತ್ಯಕ್ರಮಕ್ಕೆ ಬದ್ಧರಾಗಿದ್ದೇವೆ.
-ಸಂಜೀವ ಅರಕೇರಿ, ಮೀನುಗಾರಿಕೆ ಉಪ ನಿರ್ದೇಶಕ, ಗಂಗೊಳ್ಳಿ ಬಂದರು ಯೋಜನೆ, ಗಂಗೊಳ್ಳಿ






