Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗಾಝಾ : ಹಸಿವಿನಿಂದಾಗುವ ಸಾವುಗಳು ಇಲ್ಲಿ...

ಗಾಝಾ : ಹಸಿವಿನಿಂದಾಗುವ ಸಾವುಗಳು ಇಲ್ಲಿ ಸುದ್ದಿಯಾಗುವುದೇ ಇಲ್ಲ...

ಎಸ್. ಸುದರ್ಶನ್ಎಸ್. ಸುದರ್ಶನ್22 March 2024 10:54 AM IST
share
ಗಾಝಾ : ಹಸಿವಿನಿಂದಾಗುವ ಸಾವುಗಳು ಇಲ್ಲಿ ಸುದ್ದಿಯಾಗುವುದೇ ಇಲ್ಲ...
ಗಾಝಾದಲ್ಲಿ ಯುದ್ಧ ಶುರುವಾದ ಬಳಿಕ ಈವರೆಗೆ ಸತ್ತವರ ಸಂಖ್ಯೆ 32 ಸಾವಿರವನ್ನೂ ದಾಟಿದೆ. ಈಗ ಇಲ್ಲಿ ಬದುಕಿರುವವರು ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಬದುಕು ಸಾವಿನ ಬಾಯಲ್ಲಿ ಸಿಕ್ಕಿಬಿದ್ದಂತೆ ಒದ್ದಾಡುತ್ತಿದ್ದಾರೆ. ಸಾವಿಗೆ ಮೊದಲು ಅದೆಷ್ಟೋ ದಿನಗಳವರೆಗೆ, ವಾರಗಳ ವರೆಗೆ ಸಾಯುತ್ತಲೇ ಇರುವಂಥ ಸ್ಥಿತಿಯಿದೆ. 13,000 ಮಕ್ಕಳ ಸಾವಿನ ಬಳಿಕವೂ ಅದೆಷ್ಟೋ ಮಕ್ಕಳು ಹಸಿವಿನಿಂದ ಸತ್ತಿರುವ ವರದಿಗಳಿವೆ.

ಗಾಝಾದಲ್ಲಿ ಕಳೆದ ಅಕ್ಟೋಬರ್‌ನಿಂದ ಬಿದ್ದ ಬಾಂಬುಗಳಿಗೆ ಲೆಕ್ಕವಿಲ್ಲ. ಗಾಝಾದ ಮೇಲೆ ಇಸ್ರೇಲ್ ಒಂದಾದ ಮೇಲೊಂದು ಬಾಂಬ್ ಹಾಕಿ ಆ ನಗರವನ್ನು ಸರ್ವನಾಶ ಮಾಡಿಬಿಟ್ಟಿದೆ.

ಅಲ್ಲದೆ ಅದೆಷ್ಟು ಬಾಂಬನ್ನು ಗಾಝಾದ ಮೇಲೆ ಹಾಕಿದೆಯೋ ಅಷ್ಟೇ ಸುಳ್ಳನ್ನು ಇಸ್ರೇಲ್ ಈ ಜಗತ್ತಿಗೆ ಹೇಳಿದೆ.

ಈಗ ಅಲ್ಲಿ ಈವರೆಗೆ ಹಾಕಿರುವ ಬಾಂಬ್‌ಗಳಿಗೆ ಬಲಿಯಾಗದೆ ಉಳಿದವರ ಮೇಲೆ ಹೊಸತೊಂದು ಬಾಂಬ್ ಬಿದ್ದಿದೆ. ಅದು ಹಸಿವಿನ ಬಾಂಬ್. ಅಲ್ಲಿನ ಇಪ್ಪತ್ತು ಲಕ್ಷ ಜನರ ಹೊಟ್ಟೆಗೆ ಹಸಿವಿನ ಬಾಂಬ್ ಕಟ್ಟಿಬಿಡಲಾಗಿದೆ

ಸತತ ಬಾಂಬ್ ದಾಳಿಯಿಂದಾಗಿ ನರಮೇಧವೊಂದು ದೊಡ್ಡ ಮಟ್ಟದಲ್ಲಿ ನಡೆದುಹೋದ ಬೆನ್ನಿಗೇ ಈಗ ಅಲ್ಲಿ ಮತ್ತೊಂದು ಬಗೆಯಲ್ಲಿ ಜನರು ಸಾವಿನ ಬಾಯಿಗೆ ಬೀಳುವಂತಾಗಿದೆ. ಘೋರವೇನೆಂದರೆ, ಹಸಿವಿನಿಂದಾಗುವ ಈ ಸಾವುಗಳು ಸದ್ದೇ ಆಗುವುದಿಲ್ಲ. ತಣ್ಣಗೆಂದರೆ ತಣ್ಣಗೆ ಎಲ್ಲ ನಡೆದುಹೋಗಿರುತ್ತದೆ. ಅದು ಚರ್ಚೆಯೇ ಆಗುವುದಿಲ್ಲ.

ವಿಶ್ವದ ನಾಯಕರುಗಳಿಗೆಲ್ಲ ಗಾಝಾದಲ್ಲಿನ ಈ ಹಸಿವಿನ ಬಾಯಿಗೆ ಬಿದ್ದ ಅಮಾಯಕ ಜೀವಗಳ ಬಗ್ಗೆ ಯಾವುದೇ ಚಿಂತೆಯಿಲ್ಲವಾಗಿದೆ.

ಹೆಡ್‌ಲೈನ್‌ಗಳಲ್ಲಿ, ಫೋಟೊಗಳಲ್ಲಿ, ವೀಡಿಯೊಗಳಲ್ಲಿ ಮಿಂಚುವ ವಿಶ್ವನಾಯಕರೆಲ್ಲ ತಮ್ಮ ತಮ್ಮ ಚುನಾವಣೆಗಳಲ್ಲಿ ಮುಳುಗಿಹೋಗಿದ್ದಾರೆ. ಯುದ್ಧ ನಿಲ್ಲಿಸುವ ಮಾತಾಡುತ್ತಿದ್ದವರು ಈಗ ತಮ್ಮ ಗೆಲುವಿನ ಲೆಕ್ಕಾಚಾರದಲ್ಲಿ ಬಿದ್ದಿದ್ದಾರೆ. ಗಾಝಾದಲ್ಲಿ ಬಲಿಯಾಗಿರುವ ಮತ್ತು ಈಗಲೂ ಸಾಯುತ್ತಿರುವ ಮಕ್ಕಳ ಲೆಕ್ಕ ಈ ಮಹಾ ನಾಯಕರುಗಳಿಗೆ ಈಗ ಬೇಕಿಲ್ಲವಾಗಿದೆ.

ಗಾಝಾದ ಮೇಲೆ ಇಸ್ರೇಲ್ ಬಾಂಬುಗಳ ಸುರಿಮಳೆ ಸುರಿಸಲು ಪ್ರಾರಂಭಿಸಿದಾಗ ಇಸ್ರೇಲ್‌ಗೆ ಬಂದಿಳಿದು ಇಸ್ರೇಲ್‌ನ ಬೆನ್ನುತಟ್ಟಿ ಪ್ರೋತ್ಸಾಹಿಸಿ, ಅಭಿನಂದಿಸಿ ಹೋದ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರದ ಹಿಂದೆ ಜ್ಞಾನೋದಯ ಆದವರ ಹಾಗೆ ಮಾತಾಡಿದ್ದಾರೆ.

ಗಾಝಾದಲ್ಲಿ ಇಸ್ರೇಲ್ ಆಕ್ರಮಣದಿಂದ ಭಾರೀ ವಿನಾಶವಾಗಿದೆ. ನಾವು ಅಲ್ಲಿನ ಜನರ ಸಂಕಷ್ಟ ನಿವಾರಣೆಗೆ ಅಲ್ಲೊಂದು ತಾತ್ಕಾಲಿಕ ಪರಿಹಾರ ಕೇಂದ್ರವನ್ನು ನಿರ್ಮಿಸುತ್ತೇವೆ. ಅದರ ಮೂಲಕ ಗಾಝಾದ ಜನರಿಗೆ ಬೇಕಾದ ಪರಿಹಾರ ಸಾಮಗ್ರಿಗಳು ಬೇಗ ತಲುಪುವ ಹಾಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇಸ್ರೇಲ್‌ಗೆ ಬೇಕಾದಷ್ಟು ಶಸ್ತ್ರಾಸ್ತ್ರ ಕೊಟ್ಟು ಅದಕ್ಕೆ ಸಂಪೂರ್ಣ ಸಹಕಾರವನ್ನೂ ಕೊಟ್ಟು ಗಾಝಾವನ್ನು ಸರ್ವನಾಶ ಮಾಡುವವರೆಗೆ ಮೂಕ ಪ್ರೇಕ್ಷಕನಾಗಿ ನೋಡಿದ ಬೈಡನ್‌ರನ್ನು ಈಗ ಅಮೆರಿಕನ್ನರೇ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾವು ನಿಮಗೆ ಧನಸಹಾಯ ಮಾಡಿ ಅಧ್ಯಕ್ಷ ಹುದ್ದೆಗೆ ತಲುಪುವಂತೆ ಮಾಡಿದ್ದು ಈ ವಿನಾಶಕ್ಕೆ ಸಹಕರಿಸಲು ಅಲ್ಲ ಎಂದು ಅವರಿಗೆ ದೇಣಿಗೆ ನೀಡಿದವರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಗಾಝಾದ ಜನರ ಪಾಲಿಗೆ ಇದರಿಂದ ಇನ್ನು ದೊಡ್ಡ ಪ್ರಯೋಜನ ಆಗುವುದು ಅಷ್ಟರಲ್ಲೇ ಇದೆ.

13 ಸಾವಿರಕ್ಕೂ ಹೆಚ್ಚು ಮಕ್ಕಳು ಇಸ್ರೇಲ್‌ನ ಆಕ್ರಮಣದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅಳಿದುಳಿದವರನ್ನು ಹಸಿವು ಕಂಗೆಡಿಸುತ್ತಿದೆ. ಹಸಿವಿನಿಂದ ಕಂಗೆಟ್ಟು ಅಳುತ್ತಿದ್ದ ಗಾಝಾದ ಮಕ್ಕಳು ಈಗ ಅಳುವುದನ್ನೂ ನಿಲ್ಲಿಸಿಬಿಟ್ಟಿದ್ದಾರೆ.

ಪ್ರಾಣಿಗಳಿಗೆ ಹಾಕುವ ಆಹಾರದಿಂದ ಮಾಡಲಾದ ಬ್ರೆಡ್ ಅನ್ನು ತಿನ್ನುವ ಅನಿವಾರ್ಯತೆ ಅಲ್ಲಿನ ಮಕ್ಕಳಿಗೆ ಬಂದೊದಗಿರುವುದಾಗಿ ವರದಿಗಳು ಹೇಳುತ್ತಿವೆ. ಚಹಾದ ರುಚಿ ಕೊಡುವ ಯಾವುದೋ ಎಲೆಗಳನ್ನು, ಮರದ ಕಡ್ಡಿಗಳನ್ನು ಕುದಿಸಿ ಕುಡಿಯುವ ಹತಾಶ ಸ್ಥಿತಿ ಅಲ್ಲಿದೆ. ಕುಡಿಯಲು ಸ್ವಚ್ಛ ನೀರು ಕೂಡ ಸಿಗದಂಥ ಸ್ಥಿತಿಯಲ್ಲಿ ಅವರ ಬದುಕು ಕರಾಳವಾಗಿದೆ.

ತಾವು ತಿನ್ನುತ್ತಿರುವುದು ಪ್ರಾಣಿಗಳೂ ತಿನ್ನಲಾರದ ಮಟ್ಟದಲ್ಲಿದೆ ಎಂದು ಗಾಝಾಪಟ್ಟಿಯ ಆ ಜೀವಗಳು ಅಳಲು ತೋಡಿಕೊಳ್ಳುತ್ತಿವೆ. ಆಹಾರ ಎಷ್ಟು ಕೆಟ್ಟದಾಗಿದೆ ಮತ್ತು ಎಷ್ಟು ಕಡಿಮೆ ಪ್ರಮಾಣದಲ್ಲಿದೆ ಎಂದರೆ, ಪ್ರತೀ ಕುಟುಂಬವೂ ಒಂದು ಹೊತ್ತಿನ ಊಟವನ್ನು ಬಿಡಲೇಬೇಕಾಗಿದೆ.

ಊಟ ತಯಾರಿಸುತ್ತಿರುವುದು ಕಬ್ಬಿಣದ ಸರಳುಗಳ ಹಿಂದೆ. ಹಸಿದವರು ತಡೆಯಲಾರದೆ ದಾಳಿ ಮಾಡಿಬಿಡಬಹುದು ಎಂಬ ಭಯದಿಂದ ಹಾಗೆ ಮಾಡಲಾಗುತ್ತಿದೆ. ಹಸಿದವರು ಬಾಂಬ್ ಎಸೆಯಲಾರರು, ಬಾಂಬ್ ತಯಾರಿಸಲಾರರು. ಅಬ್ಬಬ್ಬಾ ಎಂದರೆ ರೊಟ್ಟಿಯ ಚೂರುಗಳನ್ನು ಲೂಟಿ ಮಾಡಬಹುದು ಅಷ್ಟೆ.

ಹಾಗೆ ತಯಾರಾಗುತ್ತಿರುವ ಊಟಕ್ಕಾಗಿ ಖಾಲಿ ತಟ್ಟೆ ಹಿಡಿದುಕೊಂಡು ಮಕ್ಕಳೂ ಸೇರಿದಂತೆ ಹಸಿದವರು ಸಾಲಿನಲ್ಲಿ ಕಾದಿದ್ದಾರೆ. ಆ ಹಸಿದ ಮಕ್ಕಳ ಕಣ್ಣುಗಳಲ್ಲಂತೂ ಊಟ ಸಿಗುವುದೇ ಎಂಬ ಆತಂಕ, ಊಟ ಸಿಕ್ಕರೆ ಸಾಕು ಎಂಬ ನಿರೀಕ್ಷೆ ಕುದಿಯುತ್ತಿದೆ.

ಆ ಮಕ್ಕಳ ತಾಯಂದಿರು ಇಲ್ಲಿ ಜೊತೆಯಲ್ಲಿಲ್ಲ. ಅವರು ಇಲ್ಲಿ ಕಾಯಲಾರದಷ್ಟು ಮಟ್ಟಿಗೆ ಹಸಿದು ಬಿದ್ದಿದ್ದಾರೊ ಅಥವಾ ಸತ್ತೇ ಹೋಗಿದ್ದಾರೊ ಗೊತ್ತಿಲ್ಲ.

ಈ ಮಕ್ಕಳಿಗಾಗಿ ಅಳುವುದಕ್ಕೆ, ನೊಂದುಕೊಳ್ಳುವುದಕ್ಕೆ ಯಾರಿಗೂ ಪುರುಸೊತ್ತಿರಲಾರದು. ಒಂದು ಹಂತದ ಬಳಿಕ ಗಾಝಾದಲ್ಲಿನ ವಾಸ್ತವ ಚಿತ್ರಗಳು ಸಿಗುವುದೂ ನಿಲ್ಲುತ್ತ ಬಂದಿರುವುದನ್ನು ಗಮನಿಸಬಹುದು.

ಅದರ ನಡುವೆಯೂ ಕೆಲವು ಪತ್ರಕರ್ತರು ನಿತ್ಯವೂ ಬೆಳಗಾದರೆ ಅಲ್ಲಿನ ಕಟು ಚಿತ್ರಣವನ್ನು ಕೊಡುವ ಯತ್ನ ಮಾಡುತ್ತಲೇ ಇದ್ದಾರೆ.

ಜಗತ್ತಿನ ಹಲವೆಡೆ, ಗಾಝಾದಲ್ಲಿನ ಯುದ್ಧ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ ಗಾಝಾದ ಮಕ್ಕಳಿಗಾಗಿ ಭಾರತದ ಜನ ಹೀಗೆ ಮೆರವಣಿಗೆ ಮಾಡುತ್ತಿಲ್ಲ, ಮಾಡಲಾರರು. ಯಾರಿಗಾದರೂ, ಯಾವ ನಾಯಕರಿಗಾದರೂ ಈ ಮಕ್ಕಳ ಬಗ್ಗೆ ದಯೆ, ಕರುಣೆ ಇರುವಂತೆ ಕಾಣುತ್ತಿಲ್ಲ.

ಭಾರತದ ನಾಯಕರು ಎಲ್ಲರಿಗಿಂತ ಮೊದಲು ಇದಕ್ಕಾಗಿ ದೌಡಾಯಿಸಬೇಕಿತ್ತು. ಏಕೆಂದರೆ ಇದು ಗಾಂಧೀಜಿಯ ಭಾರತ. ಆದರೆ ಹಾಗಾಗಲಿಲ್ಲ.

ಶ್ವೇತಭವನದ ನಾಯಕರು ವಿಮಾನದಿಂದ ಫುಡ್ ಪ್ಯಾಕೆಟ್ ಕೆಳಗೆಸೆದಾದರೂ ತಾವು ದಯಾಮಯಿಗಳು ಎಂದು ತೋರಿಸಿಕೊಳ್ಳಬಹುದಿತ್ತು.

ಗಾಝಾದ ಜನರ ವಿರುದ್ಧ ಹಸಿವನ್ನೇ ಅಸ್ತ್ರವಾಗಿ ಇಸ್ರೇಲ್ ಬಳಸುತ್ತಿರುವುದರ ಬಗ್ಗೆ ಕಳೆದ ಡಿಸೆಂಬರಿನಿಂದಲೂ ವರದಿಗಳು ಬರುತ್ತಲೇ ಇವೆ.

ಜನರನ್ನು ಹಸಿವಿಗೆ ದೂಡಲಾಗುತ್ತಿದೆ. ಬಂದೂಕಿನ ಗುಂಡುಗಳು ಮತ್ತು ಬಾಂಬುಗಳ ಬದಲಿಗೆ ಕೊಲ್ಲಲು ಹಸಿವನ್ನೇ ಅಸ್ತ್ರವಾಗಿಸಿಕೊಳ್ಳಲಾಗಿದೆ.

ಗಾಝಾದ ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ತನ್ನ ಪಾಲಿನ ರೊಟ್ಟಿಯನ್ನು ಕೊಟ್ಟಿರುವುದಾಗಿ ಹೇಳಿದ್ದು ವರದಿಯಾಗಿತ್ತು.

ಹಸಿವಿನಿಂದಲೇ ಸಾಯುತ್ತೇನೆ ಎಂದು ಮಗು ಹೇಳುವುದನ್ನು ತಾಯಿ ಕೇಳಿಸಿಕೊಳ್ಳಬೇಕಾದ ದಾರುಣ ಸ್ಥಿತಿಯಿರುವ ಬಗ್ಗೆ ಇನ್ನೊಂದು ವರದಿ ಹೇಳಿತ್ತು.

ಆ ತಾಯಂದಿರ ಚಡಪಡಿಕೆ, ಆ ಸಂಕಟ ಅದೆಷ್ಟು ಭಯಂಕರವಾಗಿರಬಹುದು. ಅದೆಂಥ ದುಃಖವನ್ನು ಅವರು ತಮ್ಮ ಮಕ್ಕಳಿಗೆ ಕಾಣದಂತೆ ಒಳಗೊಳಗೇ ಅಳುತ್ತ ಭರಿಸಿರಬಹುದು ಎಂದು ಊಹಿಸಿದರೆ ಕರುಳು ಕಿತ್ತು ಬರುತ್ತದೆ.

ಕುಡಿಯುವುದಕ್ಕೂ ಶುದ್ಧ ನೀರಿಲ್ಲದ ಗಾಝಾದಲ್ಲಿ ಹಸಿ ಹಸಿ ಕಂದಮ್ಮಗಳು ಗಂಭೀರ ಸ್ಥಿತಿಯಲ್ಲಿವೆ. ಇಲಿಗಳು ತಿಂದು ಬಿಟ್ಟ ಆಹಾರವನ್ನು ತಿನ್ನಬೇಕಾದ ದಾರುಣ ಸ್ಥಿತಿ ಅಲ್ಲಿದೆ.

ಉತ್ತರ ಗಾಝಾದಲ್ಲಿ ಪ್ರತೀ ಮೂವರು ಮಕ್ಕಳಲ್ಲಿ ಒಂದು ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ವರದಿಗಳು ಖಚಿತಪಡಿಸಿವೆ. ಅಳುವುದಕ್ಕೂ ಶಕ್ತಿಯಿಲ್ಲದ ಸ್ಥಿತಿಯನ್ನು ಆ ಕಂದಮ್ಮಗಳು ಮುಟ್ಟಿವೆ.

ಇಸ್ರೇಲ್ ಅದೆಷ್ಟು ಕ್ರೂರವಾಗಿ ಗಾಝಾ ವಿರುದ್ಧ ವರ್ತಿಸುತ್ತಿದೆ ಎಂದರೆ, ಹಸಿವಿನಿಂದಲೇ ಅವರೆಲ್ಲ ಸಾಯಲಿ ಎಂದು ಅದು ಬಯಸುತ್ತಿದೆ.

ಗಾಝಾಕ್ಕೆ ಮಾನವೀಯ ನೆರವನ್ನು ನೀಡಲು ಮುಂದಾಗುವಂತೆ ತನಗೆ ತುರ್ತು ಆದೇಶ ನೀಡಕೂಡದೆಂದು ಅದು ಅಂತರ್ ರಾಷ್ಟ್ರೀಯ ಕೋರ್ಟ್ ಅನ್ನು ಕೇಳಿಕೊಂಡಿದೆ.

ಗಾಝಾದಲ್ಲಿನ ಹಸಿವನ್ನು ನೀಗಿಸುವುದು ಅದಕ್ಕೆ ಬೇಕಿಲ್ಲ. ಅಲ್ಲಿ ಕುಡಿಯವ ನೀರಿನ ವ್ಯವಸ್ಥೆಯನ್ನು ಒದಗಿಸುವುದು ಅದಕ್ಕೆ ಬೇಕಿಲ್ಲ.

ಊಟಕ್ಕೆ ಸರತಿಯಲ್ಲಿ ನಿಂತಿದ್ದವರ ಮೇಲೆಯೂ ಗುಂಡಿನ ದಾಳಿ ಮಾಡಿ ನೂರಕ್ಕೂ ಹೆಚ್ಚು ಜನರನ್ನು ಕೊಂದ ಅದು ಯಾವ ಕರುಣೆಯನ್ನು ತೋರಿಸಬಲ್ಲುದು?.

ಎಲ್ಲವನ್ನೂ ಬಾಂಬ್ ಹಾಕಿ ಹಾಳುಗೆಡವಿರುವ ಇಸ್ರೇಲ್, ಗಾಝಾದಲ್ಲಿ ಬದುಕುಗಳನ್ನು ಅರಳಿಸುವ ಯಾವ ಉದ್ದೇಶವನ್ನೂ ಹೊಂದಿಲ್ಲ. ಅದು ನಿರ್ದಯಿ ರಣಹದ್ದಿನಂತೆ ಅಲ್ಲಿನ ಸಾವುಗಳನ್ನು ನೋಡಲು ಕಾದಿದೆ.

ಗಾಝಾದಲ್ಲಿ ಯುದ್ಧ ಶುರುವಾದ ಬಳಿಕ ಈವರೆಗೆ ಸತ್ತವರ ಸಂಖ್ಯೆ 32 ಸಾವಿರವನ್ನೂ ದಾಟಿದೆ. ಈಗ ಇಲ್ಲಿ ಬದುಕಿರುವವರು ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಬದುಕು ಸಾವಿನ ಬಾಯಲ್ಲಿ ಸಿಕ್ಕಿಬಿದ್ದಂತೆ ಒದ್ದಾಡುತ್ತಿದ್ದಾರೆ. ಸಾವಿಗೆ ಮೊದಲು ಅದೆಷ್ಟೋ ದಿನಗಳವರೆಗೆ, ವಾರಗಳ ವರೆಗೆ ಸಾಯುತ್ತಲೇ ಇರುವಂಥ ಸ್ಥಿತಿಯಿದೆ. 13,000 ಮಕ್ಕಳ ಸಾವಿನ ಬಳಿಕವೂ ಅದೆಷ್ಟೋ ಮಕ್ಕಳು ಹಸಿವಿನಿಂದ ಸತ್ತಿರುವ ವರದಿಗಳಿವೆ.

ಅಲ್ಲಿನ ಪರಿಸ್ಥಿತಿ ಅದೆಷ್ಟು ದಾರುಣ ಅಂದರೆ, ಎರಡು ವಾರಗಳ ಹಿಂದೆ ಯಾವುದೋ ದೇಶದ ವಿಮಾನದಿಂದ ಹಾಕಲಾದ ಪರಿಹಾರ ಸಾಮಗ್ರಿ ತಮ್ಮ ಮೇಲೆ ಬಿದ್ದೇ ಅಲ್ಲಿ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಇದೆಯೇ?

ಗಾಝಾದಲ್ಲಿನ ಈ ಸದ್ದಿಲ್ಲದ ಸಾವುಗಳ ಬಗ್ಗೆ ಕನಲುವವರು, ಕಣ್ಣೀರಿಡುವವರು ಯಾರು?

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X