ಬಸ್ಸೇ ಬಾರದ ಸಂತಪೂರ ಬಸ್ ನಿಲ್ದಾಣ

ಬೀದರ್: ಔರಾದ್ ತಾಲೂಕಿನ ಸಂತಪೂರ ಗ್ರಾಮದಲ್ಲಿ ಬಸ್ ನಿಲ್ದಾಣವಿದ್ದರೂ ಕೂಡ ಸುಮಾರು ವರ್ಷಗಳಿಂದ ಬಸ್ಸು ಬಾರದೆ, ಪ್ರಯಾಣಿಕರಿಲ್ಲದೆ ಪಾಳು ಬಿದ್ದಿದೆ. ಕಾರಣ ಈ ಬಸ್ಸು ನಿಲ್ದಾಣವನ್ನು ಊರ ಹೊರಗೆ ನಿರ್ಮಿಸಲಾಗಿದೆ.
ಸಂತಪೂರ ಗ್ರಾಮವು ಔರಾದ್ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಒಂದಾಗಿದ್ದು, ಹೋಬಳಿ ಪ್ರದೇಶವಾಗಿದೆ. ಇಲ್ಲಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಸುತ್ತಮುತ್ತಲಿನ ಹಳ್ಳಿಗಳ ಜನರು ಬೀದರ್, ಔರಾದ್ ಹಾಗೂ ಇತರ ನಗರಗಳಿಗೆ ಹೋಗಬೇಕೆಂದರೆ ಸಂತಪೂರ ಗ್ರಾಮವೇ ಅವರಿಗೆ ಪ್ರಮುಖ ಕೊಂಡಿಯಾಗಿದೆ. ಎಲ್ಲ ಪ್ರಯಾಣಿಕರು ಸಂತಪೂರ ಗ್ರಾಮದ ಮೂಲಕವೇ ಪ್ರಯಾಣಿಸಬೇಕಾಗಿದೆ. ಆದರೆ ಇಲ್ಲಿನ ಬಸ್ ನಿಲ್ದಾಣ ಮಾತ್ರ ಊರಿಗೆ ಬಿಟ್ಟು ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದೆ. ಪಟ್ಟಣದ ಹೊರಗಿರುವ ಬಸ್ ನಿಲ್ದಾಣವು ನಿರೀಕ್ಷಿತ ಪ್ರಮಾಣದಲ್ಲಿ ತನ್ನ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಲು ವಿಫಲವಾಗಿದೆ.
ಪಟ್ಟಣದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರವಿರುವ ಬಸ್ನಿಲ್ದಾಣಕ್ಕೆ ನಡೆದುಕೊಂಡು ಹೋಗಲು ಜನರಿಗೆ ಕಷ್ಟವಾಗುತ್ತಿದ್ದು, ಪ್ರಯಾಣಿಕರು ಇಲ್ಲದ ಬಸ್ ನಿಲ್ದಾಣಕ್ಕೆ ಬಸ್ಸುಗಳೂಪ್ರಯಾಣ ಮಾಡುತ್ತಿಲ್ಲ. ಈ ಬಸ್ ನಿಲ್ದಾಣ ನಿರ್ಮಾಣ ಮಾಡಿ ಸುಮಾರು 10 ವರ್ಷ ಕಳೆದಿರಬಹುದು. ಆದರೆ ಈ ಕಡೆ ಒಂದೇ ಒಂದು ಬಸ್ಸು ಕೂಡ ಸುಳಿದಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಅನೈತಿಕ ಚಟುವಟಿಕೆಗಳ ತಾಣವಾದ ಬಸ್ ನಿಲ್ದಾಣ: ಬಸ್ಸು ಮತ್ತು ಪ್ರಯಾಣಿಕರಿಲ್ಲದ ಸಂತಪೂರ ಬಸ್ ನಿಲ್ದಾಣವು ಸಂಪೂರ್ಣವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗಿದೆ. ಆ ಬಸ್ ನಿಲ್ದಾಣಕ್ಕೆ ಹೋಗಿ ನೋಡಿದರೆ ಲಕ್ಷಾಂತರ ರೂ. ಖರ್ಚು ಮಾಡಿ ಕುಡುಕರಿಗೆ ಕಟ್ಟಡ ಕಟ್ಟಿದ ಹಾಗೆ ಭಾಸವಾಗುತ್ತದೆ. ಅದರ ಮುಂಭಾಗದಲ್ಲೆಲ್ಲ ಕಲ್ಲುಗಳೇ ತುಂಬಿದ್ದು, ಸುತ್ತಲೂ ಹುಲ್ಲು ಬೆಳೆದು ನಿಂತಿದೆ. ಅಲ್ಲಿ ಬಸ್ಸು ಬರುವುದಕ್ಕು ಕೂಡ ಕಷ್ಟವಿದೆ. ಆದ್ದರಿಂದ ಅದು ಸಂಪೂರ್ಣವಾಗಿ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸಂತಪೂರ ಗ್ರಾಮದಲ್ಲಿ ಅನುಭವ ಮಂಟಪದ ಹಿಂದುಗಡೆ ಸರಕಾರಿ ಸ್ಥಳವಿದ್ದು, ಬಸ್ಸು ನಿಲ್ದಾಣ ಆ ಸ್ಥಳದಲ್ಲಿ ನಿರ್ಮಾಣ ಮಾಡಿದರೆ ಎಲ್ಲ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಲ್ಲಿನ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಹೇಳುತ್ತಾರೆ.
ಕರೆ ಸ್ವೀಕರಿಸದ ಅಧಿಕಾರಿಗಳು: ಸಂತಪೂರ ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ಪ್ರತಿಕ್ರಿಯೆ ಕೇಳಲು ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.
ಮಳೆ, ಬಿಸಿಲಲ್ಲೇ ನಿಲ್ಲುವ ಪ್ರಯಾಣಿಕರು
ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಇಲ್ಲಿನ ಪ್ರಯಾಣಿಕರು ತುಂಬಾ ಕಷ್ಟ ಅನುಭವಿಸುತ್ತಾರೆ. ಮಳೆ ಬಂದರೆ ರಸ್ತೆಯ ಅಕ್ಕಪಕ್ಕದ ಅಂಗಡಿಗಳೇಅವರಿಗೆ ಆಸರೆಯಾಗುತ್ತವೆ. ಬಿಸಿಲಲ್ಲೂ ಎಲ್ಲಿಯೂ ಕೂಡ ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಅಲ್ಲಲ್ಲಿ ಅಂಗಡಿಗಳ ಹತ್ತಿರ ಜನ ನಿಂತಿರುತ್ತಾರೆ. ಅಂಗಡಿಯವರು ಬಸ್ಸಿಗೆ ಕಾಯುವವರನ್ನು ಅಲ್ಲಿಂದ ಹೋಗಿ ಎನ್ನುತ್ತಾರೆ, ಆದರೂ, ಗತ್ಯಂತರವಿಲ್ಲದೆ ಜನರು ಅಂಗಡಿ ಬಾಗಿಲುಗಳಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾರೆ.
ಸಂತಪೂರ ಬಸ್ ನಿಲ್ದಾಣ ಊರು ಬಿಟ್ಟು ತುಂಬಾ ದೂರ ಇದೆ. ಬಸ್ಸುಗಳೆಲ್ಲ ಗ್ರಾಮದಲ್ಲಿರುವ ವೃತ್ತದ ಹತ್ತಿರವೇ ನಿಲ್ಲುತ್ತವೆ. ಇದರಿಂದಾಗಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅನುಭವ ಮಂಟಪದ ಹಿಂದೆ ಸ್ಥಳವಿದ್ದು, ಅಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ.
-ಗಣಪತಿ ದೇಶಪಾಂಡೆ,ಸ್ಥಳೀಯ ನಿವಾಸಿ
ನಾವು ಎಲ್ಲಿಗಾದರೂ ಪ್ರಯಾಣಿಸಬೇಕು ಎಂದರೆ ನಮ್ಮ ಊರಿಂದ ಸಂತಪೂರಗೆ ಬರಲೇಬೇಕು. ಇಲ್ಲಿ ಬಂದಾಗ ಬಸ್ ನಿಲ್ದಾಣವಿಲ್ಲದೆ ತೊಂದರೆ ಅನುಭವಿಸುತ್ತೇವೆ. ಬಿಸಿಲು, ಮಳೆಯಲ್ಲಿ ರಸ್ತೆ ಪಕ್ಕದಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬಸ್ ನಿಲ್ದಾಣವಿದ್ದರೂ ಅದು ಊರು ಬಿಟ್ಟು ಅರ್ಧ ಕಿಲೋಮೀಟರ್ ದೂರ ಇದೆ. ಹಾಗಾಗಿ ಅದು ಉಪಯೋಗಕ್ಕೆ ಬಾರದಾಗಿದೆ. ಆದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಗ್ರಾಮದ ಹತ್ತಿರವೇ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು.
- ಮಂಗಲಾ ಸ್ವಾಮಿ, ನಾಗೂರ್ ಗ್ರಾಮದ ಪ್ರಯಾಣಿಕರು







