ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳ
ಕಳೆದೆರಡು ವರ್ಷಗಳಲ್ಲಿ ಕೊಡಗಿನಲ್ಲಿ 62 ಮಂದಿ ಬಲಿ

ಮಡಿಕೇರಿ: ಕೊಡಗು ಜಿಲ್ಲೆಯ ನೆರೆಯ ಜಿಲ್ಲೆ ಹಾಸನದಲ್ಲಿ ಸರಣಿ ಹೃದಯಾಘಾತದಿಂದ ಯುವಕ-ಯುವತಿಯರು ಸಾವನ್ನಪ್ಪುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ರಾಜ್ಯದಲ್ಲೆಡೆ ಹೃದಯಾಘಾತದ ಬಗ್ಗೆ ಮತ್ತಷ್ಟು ಆತಂಕವುಂಟಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 62 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ, 62 ಮಂದಿಯ ವಯೋಮಾನದ ಮಾಹಿತಿ ಇಲ್ಲವೆಂದು ಜಿಲ್ಲೆಯ ಆರೋಗ್ಯ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 27 ಮಂದಿ, 2024-25ನೇ ಸಾಲಿನಲ್ಲಿ 32 ಹಾಗೂ ಪ್ರಸಕ್ತ ವರ್ಷ ಹೃದಯಾಘಾತದಿಂದ 3 ಮೂವರು ಮೃತಪಟ್ಟಿದ್ದಾರೆ.
ಕೊಡಗು ಜಿಲ್ಲೆಯಲ್ಲಿಯೂ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಹಾಸನದಲ್ಲಿ ಹೃದಯಾಘಾತದ ಪ್ರಕರಣಗಳ ಅಸಲಿ ಕಾರಣ ತಿಳಿಯಲು ರಾಜ್ಯ ಸರಕಾರ ಮುಂದಾಗಿದ್ದು, ತಜ್ಞರ ಸಮಿತಿ ರಚಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ತಜ್ಞರು ಸೇರಿದಂತೆ ಒಟ್ಟು 10 ಜನರ ತಂಡವನ್ನು ರಚನೆಗೆ ರಾಜ್ಯ ಸರಕಾರದ ಆದೇಶಿಸಲಾಗಿದೆ.
ದಾರಿ ಮಧ್ಯದಲ್ಲೇ ಉಸಿರು ಚೆಲ್ಲುತ್ತಿರುವ ಜೀವಗಳು: ಕೊಡಗು ಜಿಲ್ಲೆಯಲ್ಲಿ ಹೃದಯ ಸಂಬಂಧಿತ ರೋಗಗಳಿಗೆ ಚಿಕಿತ್ಸೆ ನೀಡಲು ಹೃದ್ರೋಗ ತಜ್ಞರು ಸಂಖ್ಯೆ ಕಡಿಮೆ ಇದೆ. ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಹೃದ್ರೋಗ ಸಂಬಂಧಿಸಿದ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಆಧುನಿಕ ತಂತ್ರಜ್ಞಾನದ ವ್ಯವಸ್ಥೆಗಳಿಲ್ಲ. ಜಿಲ್ಲೆಯ ಜನತೆ ಹೃದಯ ಸಂಬಂಧಿಸಿದ ಕಾಯಿಲೆಗೆ ಪಕ್ಕದ ಮೈಸೂರು ಮತ್ತು ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. ಹೃದಯಾಘಾತ ಸಂಬಂಧವಿಸಿದರೆ ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ, ಪಕ್ಕದ ಮೈಸೂರು ಮತ್ತು ಮಂಗಳೂರು ಆಸ್ಪತ್ರೆಗೆ ರವಾನಿಸುವ ದಾರಿ ಮಧ್ಯದಲ್ಲೇ ಅನೇಕ ಮಂದಿ ಮೃತಪಟ್ಟಿರುವ ಹಲವಾರು ನಿದರ್ಶನಗಳು ನಡೆದಿವೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಹಲವರು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕೆಂಬ ಕೂಗು ಇದೆ. ಆದರೆ, ಕನಸು ಕೇವಲ ಕನಸಾಗಿಯೇ ಉಳಿದಿದೆ. ಹೃದಯಾಘಾತ ಉಂಟಾದರೆ ಜಿಲ್ಲಾಸ್ಪತ್ರೆಯಲ್ಲೇ ಸಕಾಲದಲ್ಲಿ ಚಿಕಿತ್ಸೆ ಸಿಗುವ ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಪ್ರಸಕ್ತ ದಿನಗಳಲ್ಲಿ ಅತ್ಯಗತ್ಯವಾಗಿದೆ.
ಕಾರ್ಯರೂಪಕ್ಕೆ ಬಾರದ ಅತ್ಯಾಧುನಿಕ ಹೃದ್ರೋಗ ಘಟಕ: 2024ರ ರಾಜ್ಯ ಬಜೆಟ್ನಲ್ಲಿ ಮಡಿಕೇರಿ ಶಾಸಕರ ಮುತುವರ್ಜಿಯಿಂದ ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಸಗಿ ಸಹ ಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಹೃದ್ರೋಗ ಘಟಕ ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಈ ಯೋಜನೆ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.
ಹೃದ್ರೋಗ ಘಟಕದ ಆರಂಭಗೊಂಡರೆ ಜಿಲ್ಲೆಯ ಜನತೆಗೆ ಸ್ಟಂಟ್ ಅಳವಡಿಕೆವರೆಗಿನ ಹೃದಯ ಸಂಬಂಧಿತ ಚಿಕಿತ್ಸೆ ಮಡಿಕೇರಿಯಲ್ಲಿ ಲಭ್ಯವಿರುತ್ತಿತ್ತು. ಇಂದಿಗೂ ಹೃದಯಾಘಾತ ಸಂಭವಿಸಿದರೆ ಜಿಲ್ಲೆಯ ಜನತೆ ಮೈಸೂರು ,ಮಂಗಳೂರು ಆಸ್ಪತ್ರೆಗಳ ಮಾರ್ಗ ಮಧ್ಯದಲ್ಲಿ ಉಸಿರು ಚೆಲ್ಲುತ್ತಿದ್ದಾರೆ.
ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ವರದಿಯಾಗುತ್ತಿದ್ದಂತೆ ಸದ್ಯ 86 ತಾಲೂಕು ಆಸ್ಪತ್ರೆಗಳಲ್ಲಿರುವ ಸ್ಟೆಮಿ ಯೋಜನೆಯನ್ನು ಇನ್ನೂ ಮುಂದೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆಯನ್ನು ದೊರೆಯುವಂತೆ ಆದೇಶಿಸಲಾಗಿದೆ.
ಸ್ಟೆಮಿ ಯೋಜನೆಯು ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ರೂಪಿಸಲಾದ ಚಿಕಿತ್ಸಾ ವಿಧಾನ. ಹೃದಯಾಘಾತದ ಲಕ್ಷಣಗಳಾದ ಎದೆನೋವು, ಉಸಿರಾಟ ತೊಂದರೆ ಇರುವ ರೋಗಿಗಳು ತಾಲೂಕು ಆಸ್ಪತ್ರೆಗೆ ತೆರಳಿದಾಗ ತಕ್ಷಣವೇ ಇಸಿಜಿ ಪರೀಕ್ಷೆ ನಡೆಸಿ ಆ ಮಾಹಿತಿಯನ್ನು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞರಿಗೆ ರವಾನಿಸಲಾಗುತ್ತದೆ. ರಾಜ್ಯದಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಲಸಿಕೆಯ ಪರಿಣಾಮ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಜೀವನ ಶೈಲಿಯಲ್ಲಿನ ಬದಲಾವಣೆಗಳು, ಆಹಾರ ಕ್ರಮದಲ್ಲಿ ಬದಲಾವಣೆಗಳು ಎಂಬಿತ್ಯಾದಿ ನಾನಾ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಾವಿನ ಬಗ್ಗೆ ಎಲ್ಲರಲ್ಲೂ ಆತಂಕವುಂಟು ಮಾಡಿದೆ. ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಹೃದ್ರೋಗ ಘಟಕ ಸ್ಥಾಪನೆಗೆ ಸರಕಾರ 10 ಕೋಟಿ ರೂ. ಮೀಸಲಿಟ್ಟಿದೆ. ಸದ್ಯದಲ್ಲೇ ಹೃದ್ರೋಗ ಘಟಕ ಸ್ಥಾಪನೆಯಾಗಲಿದೆ. ಹೃದಯ ಸಂಬಂಧಿಸಿದ ರೋಗಗಳಿಗೆ ವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ದಿನಗಳಲ್ಲಿ ಚಿಕಿತ್ಸೆ ಸಿಗಲಿದೆ.
-ಡಾ.ಲೋಕೇಶ್ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ







