ಕಮ್ಮಾರ ಜಾತಿ ಪ್ರಮಾಣಪತ್ರದಲ್ಲಿ ನೂರೆಂಟು ಗೊಂದಲಗಳು..!

ವಿಶ್ವಕರ್ಮದ ವ್ಯಾಪ್ತಿಯಲ್ಲಿ ಅಧಿಕೃತವಾಗಿರುವ ನಲವತ್ತೊಂದು ಉಪ ಪಂಗಡಗಳಲ್ಲಿ ಕಮ್ಮಾರ ಜನಾಂಗವೂ ಒಂದು. ಸದ್ಯ ಮೈಸೂರು ವಿವಿಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರವು ಕುಲಶಾಸ್ತ್ರೀಯ ಅಧ್ಯಯನ ನಡೆಸುತ್ತಿದೆ. ಈ ಜನಾಂಗವು ಪ್ರಾಚೀನ ಕಾಲದಿಂದ ಇಂದಿನ ವರೆಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಯಾವುದೇ ಅಭಿವೃದ್ಧಿ ಕಾಣದೆ ಬಹಳ ಹಿಂದುಳಿದ ಸಮುದಾಯವಾಗಿ ಗುರುತಿಸಿಕೊಂಡಿದೆ. ಇವರು ಮಾಡುವ ಕಮ್ಮಾರಿಕೆ ಉದ್ಯೋಗ ಕಡಿಮೆಯಾಗಿ ಜೀವನದ ನಿರ್ವಹಣೆ ಬಹಳ ಕಷ್ಟವಾಗಿದೆ. ರಾಜ್ಯದ ಎಲ್ಲಾ ಊರುಗಳಿಗೆ ಬದುಕಿಗಾಗಿ ದುಡಿಮೆ ಹುಡುಕುತ್ತಾ ಗುಳೆ ಹೋಗುವಂತಾಗಿದೆ. ಇವರ ಪ್ರಕಾರ ಕಮ್ಮಾರ ಜಾತಿಯಲ್ಲಿ ಬರುವ ಉಪಜಾತಿಗಳಾದ ಮರಾಠಾ ಕಮ್ಮಾರ, ಕ್ಷತ್ರಿಯ ಕಮ್ಮಾರ, ಆರ್ಯ ಕಮ್ಮಾರ ಹೀಗೆ ಹಿಂದಿನವರು ಮಾಡಿದ ತಪ್ಪಿನಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿ ತಪ್ಪಾಗಿವೆ. ಇದರಿಂದಾಗಿ ಸರಕಾರದಿಂದ ಬರುವ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಈ ಸಂಬಂಧ ಸಮಾಜದ ಸಂಘ ಸಂಸ್ಥೆಗಳಿಂದ ಸರಕಾರಕ್ಕೆ ಹಲವಾರು ಮನವಿಗಳನ್ನು ನೀಡಲಾಗಿದ್ದು ಇಲ್ಲಿಯವರೆಗೆ ಸರಕಾರಗಳಿಂದ ಯಾವುದೇ ರೀತಿಯ ಉಪಯೋಗ ಕಂಡಿಲ್ಲ. ಹಾಗಾಗಿ ಮೈಸೂರು ವಿವಿ ಕುಲಶಾಸ್ತ್ರ ಅಧ್ಯಯನದ ಮುಕ್ತಾಯದ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಸಮಯದಲ್ಲಿ ಮರಾಠ ಕಮ್ಮಾರ, ಕ್ಷತ್ರಿಯ ಕಮ್ಮಾರ, ಆರ್ಯ ಕಮ್ಮಾರ ಈ ಜಾತಿಗಳನ್ನು ರದ್ದುಪಡಿಸಿ ಹಿಂದೂ ಕಮ್ಮಾರ ಎಂದು ಆದೇಶವನ್ನು ಹೊರಡಿಸುವಂತೆ ಅಧ್ಯಯನ ಸಂಸ್ಥೆಯ ಮುಖಾಂತರ ವರದಿ ಸಲ್ಲಿಸಬೇಕಾಗಿ ಕಮ್ಮಾರ ಸಂಘಟನೆಗಳು ಆಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಮ್ಮಾರ ಸಮುದಾಯದ ಕೆಲವು ಸಂಘಟನೆಗಳ ಬೇಡಿಕೆಯನ್ನು ಅಧ್ಯಯನ ತಂಡ ಸ್ವೀಕರಿಸಿ ಲೇಖನದ ರೂಪದಲ್ಲಿ ಸರಕಾರದ ಗಮನಕ್ಕೆ ತರಲು ಯತ್ನಿಸಲಾಗಿದೆ.
ಮೊದಲನೆಯದಾಗಿ ಉತ್ತರ ಕರ್ನಾಟಕದ ಹೆಚ್ಚಿನ ಕಮ್ಮಾರ ಅಭಿವೃದ್ಧಿ ಸಂಘ ಸಂಸ್ಥೆಗಳ ಕೋರಿಕೆ ಏನೆಂದರೆ ‘‘ಕಮ್ಮಾರ, ಬಯಲು ಕಮ್ಮಾರ ಎಂಬ ಹೆಸರಿನ ಜಾತಿಯ ಜನರು ವಿಶ್ವಕರ್ಮ ಜಾತಿಯ ಉಪಜಾತಿ ಆಗಿರುವುದಿಲ್ಲ. ಈ ಬಗ್ಗೆ ಸತತ 25 ವರ್ಷಗಳಿಂದ ನಡೆಸಿದ ಅಧ್ಯಯನದ ಮೇಲೆ ಕಮ್ಮಾರ ಮತ್ತು ವಿಶ್ವಕರ್ಮ ಜಾತಿಯ ನಡುವೆ ಇರುವ ವ್ಯತ್ಯಾಸಗಳನ್ನು ಕಂಡುಕೊಂಡು ನಿಮ್ಮ ಗಮನಕ್ಕೆ ಈ ಮನವಿ ಪತ್ರದೊಂದಿಗೆ ಲಗತ್ತಿಸಿಕೊಡಲಾಗಿದೆ. ಆದ್ದರಿಂದ ಕಮ್ಮಾರ, ಬಯಲು ಕಮ್ಮಾರ ಎಂಬ ಹೆಸರಿನಲ್ಲಿ ಕಂಡು ಬರುವ ಜಾತಿ ಜನರನ್ನು ವಿಶ್ವಕರ್ಮ ಜಾತಿಯ ವ್ಯಾಪ್ತಿಗೆ ಬರುವುದಿಲ್ಲವೆಂದು ಪರಿಗಣಿಸಿ ಹಿಂದುಳಿದ ವರ್ಗಗಳ ಜಾತಿ ಕಾಲಂನಲ್ಲಿ ಕಮ್ಮಾರ ಮತ್ತು ಬಯಲು ಕಮ್ಮಾರ ಜಾತಿಗಳಿಗೆ ಪ್ರತ್ಯೇಕ ಸಂಖ್ಯೆ ನೀಡಲು ಸರಕಾರಕ್ಕೆ ತಾವುಗಳು ಶಿಫಾರಸು ಮಾಡಬೇಕಾಗಿದೆ’’ ಎಂದು ಮನವಿ ಮಾಡಿದ್ದಾರೆ. ಮುಂದುವರಿದು ‘‘ನಾವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದು ತೀವ್ರ ಆರ್ಥಿಕ ತೊಂದರೆಯಲ್ಲಿದ್ದೇವೆ ಮತ್ತು ಕುಲುಮೆಗೆ ಬೇಕಾಗುವ ಕಚ್ಚಾ ವಸ್ತುಗಳಾದ ಇದ್ದಿಲು, ತೌಡು ಹಾಗೂ ಕಬ್ಬಿಣ ದೊರೆಯುತ್ತಿಲ್ಲ. ಅಲ್ಲದೆ ಆಧುನಿಕ ಯಂತ್ರಗಳಿಂದಾಗಿ ರೈತರಿಗೆ ಬೇಕಾಗುವ ಉಪಕರಣಗಳು, ಮನೆಗೆ ಬೇಕಾಗುವ ಕಬ್ಬಿಣ ವಸ್ತುಗಳು ರೆಡಿಮೇಡ್ ಆಗಿಯೇ ಸಿಗುತ್ತಿವೆ. ವಿಶ್ವಕರ್ಮದಲ್ಲಿ ನಾವು ಒಂದು ಉಪಜಾತಿಯಾಗಿದ್ದರೂ ಅವರು ನಮ್ಮನ್ನು ಯಾವುದೇ ಶುಭಕಾರ್ಯಗಳಿಗೆ, ಮದುವೆ ಮುಂಜಿಗಳಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ಸರಕಾರದ ಆದೇಶ ಸಂಖ್ಯೆ ಸಕಇ 40 ಬಿಸಿಎ 95, ಬೆಂಗಳೂರು ದಿನಾಂಕ 8ನೇ ಫೆಬ್ರವರಿ 1995: ಪರಿಶಿಷ್ಟ ವರ್ಗ ಭಾಗ-4 ಕ್ರಮ ಸಂಖ್ಯೆ 17ರಲ್ಲಿ (ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಳ್ಳೇಗಾಲ ತಾಲೂಕು ಈಗಿನ ಚಾಮರಾಜನಗರ ಜಿಲ್ಲೆಯಲ್ಲಿ ಇವರು ಪರಿಶಿಷ್ಟ ವರ್ಗಕ್ಕೆ ಬರುತ್ತಾರೆ) ಕಮ್ಮಾರ ಜನಾಂಗವಿದೆ. ಅಲ್ಲದೆ ಕೆಟಗರಿ II (A) 9(Q)ನಲ್ಲಿಯೂ ಕಮ್ಮಾರ ಜಾತಿಯಿದ್ದು ಇದರಿಂದ ಜನರು ಗೊಂದಲಕ್ಕೆ ಈಡಾಗಿದ್ದಾರೆ. ಆದುದರಿಂದ ತಾವುಗಳು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಕಮ್ಮಾರ ಮತ್ತು ಬಯಲು ಕಮ್ಮಾರರನ್ನು ಎಸ್ಸಿ ವರ್ಗಕ್ಕೆ ಸೇರಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇವೆ’’ ಎನ್ನುವುದಾಗಿದೆ.
ಬಳ್ಳಾರಿ ಜಿಲ್ಲಾ ಕಮ್ಮಾರರ ಕ್ಷೇಮಾಭಿವೃದ್ಧಿ ಸಂಘ ಇವರು: ‘‘ಕಮ್ಮಾರ, ಬಯಲು ಕಮ್ಮಾರ ಎಂಬ ಹೆಸರಿನ ಜಾತಿಯ ಜನರು ವಿಶ್ವಕರ್ಮ ಜಾತಿಯ ಉಪಜಾತಿ ಆಗಿರುವುದಿಲ್ಲ. ಇವರು ಶೂದ್ರ ಮೂಲದ ಜನಾಂಗವಾಗಿದ್ದಾರೆ. ಈ ಬಗ್ಗೆ ಸತತ 25 ವರ್ಷಗಳಿಂದ ಅಧ್ಯಯನದ ಮೇಲೆ ಕಮ್ಮಾರ ಮತ್ತು ವಿಶ್ವಕರ್ಮ ಜಾತಿಯ ನಡುವೆ ಇರುವ ವ್ಯತ್ಯಾಸಗಳನ್ನು ಕಂಡುಕೊಂಡು ನಿಮ್ಮ ಗಮನಕ್ಕೆ ಈ ಮೂಲಕ ತರಲಾಗಿದೆ. ಹಾಗಾಗಿ ಕಮ್ಮಾರ, ಬಯಲು ಕಮ್ಮಾರ ಎಂಬ ಹೆಸರಿನಲ್ಲಿ ಕಂಡುಬರುವ ಜಾತಿ ಜನರನ್ನು ವಿಶ್ವಕರ್ಮ ಜಾತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಪರಿಗಣಿಸಿ ಜಾತಿ ಕಾಲಂನಲ್ಲಿ ಕಮ್ಮಾರ ಮತ್ತು ಬಯಲು ಕಮ್ಮಾರ ಜಾತಿಗಳಿಗೆ ಪ್ರತ್ಯೇಕ ಕ್ರಮ ಸಂಖ್ಯೆ ನೀಡಲು ಸರಕಾರಕ್ಕೆ ತಾವು ಶಿಫಾರಸು ಕೊಡಬೇಕಾಗಿ ಮನವಿ ಮಾಡಿರುತ್ತೇವೆ. ನಾವು ಈ ನೆಲದ ಮೂಲ ನಿವಾಸಿಗಳಾಗಿದ್ದು ತೀವ್ರ ಆರ್ಥಿಕ ತೊಂದರೆಯಲ್ಲಿದ್ದೇವೆ. ಸರಕಾರದ ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ ಎಂಬುದರ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇವೆ’’ ಎನ್ನುವ ಒತ್ತಾಯ ಮಾಡುತ್ತಿದ್ದಾರೆ.
ವಿಶ್ವಕರ್ಮ ಸಮಾಜದ ಅಭಿವೃದ್ಧಿ ಸೇವಾ ಸಂಘ, ಗೋಕಾಕ ಇವರ ಕೋರಿಕೆಯೆಂದರೆ: ‘‘ವಂಶಪಾರಂಪರ್ಯವಾಗಿ ಕುಲ ಕಸುಬಾದಂತಹ ಬಡಗಿತನ, ಕಮ್ಮಾರಿಕೆ ವೃತ್ತಿಯನ್ನು ಮಾಡಿಕೊಂಡು ನಮ್ಮ ಸಮಾಜ ಬಂದಿದೆ. ನಮ್ಮ ವಿಶ್ವಕರ್ಮ ಸಮಾಜವು ಮಾನವನ ವಿಕಾಸಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತದೆ. ನಮ್ಮ ಪೂರ್ವಜರು ತಮ್ಮ ಮುಗ್ಧತೆಯ ಪರಿಣಾಮ ಮತ್ತು ಶಿಕ್ಷಣದ ಜ್ಞಾನದ ಕೊರತೆಯಿಂದ ಗೋಕಾಕ ನಗರದ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿಯ ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ನಮ್ಮ ವಿಶ್ವಕರ್ಮ ಬಹಳಷ್ಟು ಕುಲಬಾಂಧವರು ಕರ್ನಾಟಕ ಸರಕಾರ ಕಂದಾಯ ಇಲಾಖೆಯಿಂದ ಮಾಡಿಕೊಡುವ ಜಾತಿ ಪ್ರಮಾಣ ಪತ್ರದಲ್ಲಿ ‘ಹಿಂದೂ ಮರಾಠಾ’ ಎಂದು ಉಲ್ಲೇಖವಾಗಿರುತ್ತದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವುದರಿಂದ ಸಹಜವಾಗಿ ನಿತ್ಯ ಬದುಕಿಗೆ ಉದ್ಯೋಗಗಳಿಗೆ, ವ್ಯವಹಾರಗಳಿಗೆ ಮರಾಠಿ ಭಾಷೆ ಅಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಭಾವವನ್ನು ಹೊಂದಿತ್ತು. ಗಡಿ ಭಾಗದ ಮರಾಠಿ ಭಾಷೆಯ ಪರಿಣಾಮದಿಂದಾಗಿ ಸಾಮಾಜಿಕ ಜೀವನದಲ್ಲಿ ಮತ್ತು ವೃತ್ತಿಯಲ್ಲಿ ಮರಾಠಿ ಭಾಷೆಯ ಫಲವಾಗಿ ತಹಶೀಲ್ದಾರ ಕಚೇರಿಗಳಲ್ಲಿಯ ಜಾತಿ ಪ್ರಮಾಣ ಪತ್ರದಲ್ಲಿ ಹಿಂದೂ ಮರಾಠಾ ಎಂದು ದಾಖಲಿಸಿದ್ದಾರೆ. ತಮಗೆ ಮುಂದಿನ ಜೀವನದ ಅರಿವು ಮೂಡದೆ ಅಥವಾ ಮುಗ್ಧತೆಯ ಪ್ರಭಾವ ಮತ್ತು ಅಸಂಘಟನೆ ಕಾರಣ ಇವತ್ತಿನ ದಿನಗಳವರೆಗೂ ನಮ್ಮ ಸಮಾಜದ ಶೇ. 30ರಷ್ಟು ಕುಲ ಬಾಂಧವರಿಗೆ ಕರ್ನಾಟಕ ಸರಕಾರ ಕಂದಾಯ ಇಲಾಖೆಯಿಂದ ಕೊಡಮಾಡುವ ಜಾತಿ ಪ್ರಮಾಣ ಪತ್ರದಲ್ಲಿ ಹಿಂದೂ ಮರಾಠಾ, ಹಿಂದುಳಿದ ವರ್ಗಗಳ ಪ್ರವರ್ಗ III(ಬಿ) ಎಂದು ಉಲ್ಲೇಖವಾಗಿರುತ್ತದೆ. ಇಂತಹ ಸಮಯದಲ್ಲಿ ನಮ್ಮ ವಿಶ್ವಕರ್ಮ ಸಮಾಜದ ಬಡಿಗೇರ, ಸುತಾರ, ಕಮ್ಮಾರ, ಲೋಹಾರ ಜಾತಿ ಪ್ರಮಾಣ ಪತ್ರದಲ್ಲಿ ಬದಲಾವಣೆ ಹೊಂದುವುದು ಅಷ್ಟೇ ಅವಶ್ಯಕವಾಗಿದೆ. ನಮ್ಮ ಸಮಾಜ ಮೂಲತಃ ವಿಶ್ವಕರ್ಮ ಸಮಾಜ. ಅದರಂತೆ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ (ಗೆಜೆಟ್ ಆಧಾರಿತ) ಹಿಂದುಳಿದ ವರ್ಗಗಳ II(ಎ)ರಲ್ಲಿ ಬರುವ ವಿಶ್ವಕರ್ಮ ಸಮಾಜದ ಜಾತಿಯ ಹೆಸರುಗಳಲ್ಲಿ ಸಹ ಬಡಿಗ, ಬಡಿಗೇರ, ಸುತಾರ, ಕಮ್ಮಾರ, ಕಂಬಾರ, ಲೋಹಾರ ವಿಶ್ವಕರ್ಮ ಎಂದು ಪ್ರಕಟಣೆಗೊಂಡಿರುತ್ತದೆ. ಇಷ್ಟೆಲ್ಲಾ ಇದ್ದರೂ ನಾವು ಜಾತಿ ಪ್ರಮಾಣ ಪತ್ರದಲ್ಲಿ ಹಿಂದೂ ವಿಶ್ವಕರ್ಮ ಆಗದೆ ಇದ್ದುದರಿಂದ ಸರಕಾರ ನೀಡುವ ಯೋಜನೆಗಳಿಂದ ವಂಚಿತರಾಗಿದ್ದೇವೆ. ಈ ಕಾರಣದಿಂದ ತಾವು ನಮ್ಮೆಲ್ಲ ವಂಚಿತರಾದ ವಿಶ್ವಕರ್ಮ ಕುಲಬಾಂಧವರಿಗೆ ಕರ್ನಾಟಕ ಸರಕಾರ ಕಂದಾಯ ಇಲಾಖೆಯಿಂದ ಕೊಡಮಾಡುವ ಜಾತಿ ಪ್ರಮಾಣ ಪತ್ರದಲ್ಲಿ ‘ಹಿಂದೂ ಮರಾಠಾ’ ಬದಲಾಗಿ ‘ಹಿಂದೂ ವಿಶ್ವಕರ್ಮ’ ಎಂದು ತಿದ್ದುಪಡಿ ಮಾಡಿಸಿ ಕೊಡುವುದು. ಕರ್ನಾಟಕ ಸರಕಾರ ಈಗಾಗಲೇ ವಿಶ್ವಕರ್ಮ ಸಮಾಜವನ್ನು ಹಿಂದುಳಿದ ವರ್ಗಗಳ II(ಎ)ರಲ್ಲಿ ಸೇರ್ಪಡೆ ಮಾಡಿದೆ. ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ವಿಶೇಷವಾಗಿ ಪ್ರಧಾನ ಮಂತ್ರಿಯವರು ವಿಶ್ವಕರ್ಮದವರಿಗೆ ತಂದಿರುವ ಯೋಜನೆಗಳನ್ನು ಉಪಯೋಗಿಸಿಕೊಂಡು ನಾವು ಸಹ ಇತರರಂತೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆಯಲು, ಬದುಕಲು ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.’’
ಈ ಕುರಿತು ಸದ್ಯ ಅಧ್ಯಯನ ತಂಡ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದೆ.
ವಿಶ್ವಕರ್ಮ ಸಮಾಜದ ಅಭಿವೃದ್ಧಿ ಸೇವಾ ಸಂಘ, ಗೋಕಾಕ ಇವರ ಪ್ರಕಾರ ಕರ್ನಾಟಕ ಸರಕಾರ, ಕಂದಾಯ ಇಲಾಖೆಯಿಂದ ಕೊಡಮಾಡುವ ‘‘ಗೋಕಾಕ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿಯ ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ ಗಡಿಭಾಗಗಳಲ್ಲಿ ನಮ್ಮ ವಿಶ್ವಕರ್ಮ ಬಹಳಷ್ಟು ಕುಲಬಾಂಧವರ ಜಾತಿ ಪ್ರಮಾಣ ಪತ್ರದಲ್ಲಿ ಹಿಂದೂ ಮರಾಠಾ ಎಂದು ಉಲ್ಲೇಖವಾಗಿರುತ್ತದೆ. ಅದನ್ನು ತಿದ್ದುಪಡಿ ಮಾಡಲು ಯಾವುದೇ ಹಳೆಯ ಜಾತಿ ಮತ್ತು ಆದಾಯ ಪತ್ರದಲ್ಲಾಗಲಿ, ಶಾಲೆಯ ಪತ್ರಗಳಲ್ಲಾಗಲಿ (ಟಿಸಿ/ಎಲ್ಸಿ) ಅಥವಾ ಇನ್ಯಾವುದೇ ವಿಶ್ವಕರ್ಮ, ಬಡಿಗ, ಬಡಿಗೇರ, ಸುತಾರ, ಕಂಬಾರ, ಕಮ್ಮಾರ, ಲೋಹಾರ ಅಂತ ದಾಖಲೆಗಳು ಸಿಗುತ್ತಿಲ್ಲ. ಇದರಿಂದ ನಮ್ಮ ಸಮಾಜದ ಬಹಳಷ್ಟು ಕುಲಬಾಂಧವರು ಜಾತಿ ಪ್ರಮಾಣ ಪತ್ರದಲ್ಲಿ ಮರಾಠಾ ಎಂದು ಸೇರಿರುವುದರಿಂದ ಹಿಂದುಳಿದ ವರ್ಗಗಳ ಪ್ರವರ್ಗ III(ಬಿ)ಯಲ್ಲಿ ದಾಖಲಾಗಿರುತ್ತದೆ. ನಮ್ಮೆಲ್ಲ ಕುಲಬಾಂಧವರು ಬಡಿಗ, ಬಡಿಗೇರ, ಸುತಾರ, ಕಂಬಾರ, ಕಮ್ಮಾರ, ಲೋಹಾರ ಕರ್ನಾಟಕ ಸರಕಾರ ಪ್ರಕಟಿಸಿರುವ ಗೆಜೆಟ್ ಆದೇಶದ ಮೇರೆಗೆ ಹಿಂದುಳಿದ ವರ್ಗಗಳ ಪ್ರವರ್ಗ II(ಎ) ಬರುವ ವಿಶ್ವಕರ್ಮ ಜಾತಿಗೆ ಸೇರಿರುತ್ತಾರೆ. ಈಗಾಗಲೇ ಕಾರಣಾಂತರಗಳಿಂದ ಸರಕಾರದಿಂದ ವಿಶ್ವಕರ್ಮ ಸಮಾಜಕ್ಕೆ ನೀಡಿರುವ ಎಲ್ಲಾ ಯೋಜನೆಗಳಿಂದ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅವಕಾಶ ವಂಚಿತರಾಗಿದ್ದೇವೆ. ಆದುದರಿಂದ ನಮ್ಮೆಲ್ಲ ವಂಚಿತರಾದ ಕುಲಬಾಂಧವರಿಗೆ ಕರ್ನಾಟಕ ಸರಕಾರ ಕಂದಾಯ ಇಲಾಖೆಯಿಂದ ಕೊಡಮಾಡುವ ಜಾತಿ ಪ್ರಮಾಣ ಪತ್ರದಲ್ಲಿ ಹಿಂದೂ ವಿಶ್ವಕರ್ಮ ಅಂತ ಸೇರಿಸಿ ಹಿಂದುಳಿದ ವರ್ಗಗಳ ಪ್ರವರ್ಗ II(ಎ) ಬರುವ ಹಾಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಕಳಕಳಿಯಾಗಿ ವಿನಂತಿಸಿಕೊಳ್ಳುತ್ತೇವೆ.’’
ಒಟ್ಟಿನಲ್ಲಿ ಕಮ್ಮಾರ ಸಮುದಾಯದ ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಸಮುದಾಯದ ವಿನಂತಿಯಾಗಿದೆ. ಕಮ್ಮಾರ ಸಮುದಾಯದಕ್ಕೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರದಲ್ಲಿ ಹತ್ತು-ಹಲವಾರು ತಾಂತ್ರಿಕ ಸಮಸ್ಯೆಗಳಿದ್ದು ಇದರ ಕುರಿತು ತುರ್ತು ಕ್ರಮದ ಅಗತ್ಯವಿದೆ.
(ಲೇಖಕರು ಮೈಸೂರು ವಿವಿಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಕುಲಶಾಸ್ತ್ರೀಯ ಅಧ್ಯಯನ ತಂಡದ ಮುಖ್ಯಸ್ಥರು)