ಕರಾವಳಿ ಊರುಗಳಲ್ಲಿ ಹೆಚ್ಚುತ್ತಿರುವ ನವಿಲು ಸಂತತಿ

ಕರಾವಳಿಯ ಹಳ್ಳಿ, ಸಣ್ಣ ಪಟ್ಟಣಗಳಲ್ಲಿ ನವಿಲಿನ ಸಂತತಿ ವಿಪರೀತ ಎನಿಸುವಷ್ಟು ಹೆಚ್ಚಾಗುತ್ತಿರುವುದು ಈ ಭಾಗದ ರೈತರ ಕಳವಳಕ್ಕೆ ಕಾರಣವಾಗಿದೆ. ರೈತರು ಮಾತ್ರವಲ್ಲ ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳಿಗಳೂ ಕಳವಳಕಾರಿ ಬೆಳವಣಿಗೆ ಕುರಿತು ಆತಂಕಿತರಾಗಿದ್ದಾರೆ.
ನಾಡುಗಳಲ್ಲಿ ಈ ಹಿಂದೆ ಕಾಗೆಗಳು ಕಾಣಿಸುತ್ತಿದ್ದಂತೆ ನವಿಲುಗಳು ಕಾಣಿಸತೊಡಗಿರುವುದು ಅಸಹಜವೆನಿಸಿದೆ. ರಾಷ್ಟ್ರೀಯ ಪಕ್ಷಿ ಎಂಬ ವಿಶೇಷ ರಕ್ಷಣೆ ಇರುವುದರಿಂದ ನವಿಲುಗಳ ನಿಯಂತ್ರಿಸುವುದೂ ಸವಾಲಾಗಿ ಪರಿಣಮಿಸಿದೆ. ಇದು ನೇರವಾಗಿ ಕೃಷಿಗಳಿಗೆ ಕಂಟಕವಾಗಿ ಪರಿಣಮಿಸಿದೆ ಮಾತ್ರವಲ್ಲ, ಪರೋಕ್ಷವಾಗಿ ಪರಿಸರದ ಆಹಾರ ಸರಪಳಿಯಲ್ಲಿನ ಏರುಪೇರಿಗೂ ಕಾರಣವಾಗಿದೆ.
ಊರುಗಳಲ್ಲಿ ನವಿಲುಗಳು ಕಾಣಸಿಗುತ್ತಿರುವುದು ಸಹಜವಾಗಿ ಆಕರ್ಷಕವೆನಿಸಿದರೂ, ಇದರ ಹಿಂದಿರುವ ಪರಿಸರದ ಮೇಲಿನ ಗಂಭೀರ ಅಡ್ಡ ಪರಿಣಾಮವು ಸಾಕಷ್ಟು ರೀತಿಯಲ್ಲಿ ಚರ್ಚೆಯಾ
ಗಿಲ್ಲ. ಮಂಗಳೂರಿನಂತಹ ನಗರ ಪ್ರದೇಶಗಳಿಗೆ ಹತ್ತಿರವಿರುವ ಸಣ್ಣ-ಪುಟ್ಟ ಊರುಗಳಲ್ಲೂ ನವಿಲುಗಳ ಸಂಖ್ಯೆ ಹೆಚ್ಚಾಗಿದ್ದು, ಈ ಮಾರ್ಪಾಟುಗಳಿಗೆ ತಜ್ಞರು ವಿವಿಧ ಕಾರಣಗಳನ್ನು ಮುಂದಿಡುತ್ತಿದ್ದಾರೆ.
ವರದಿಗಳ ಪ್ರಕಾರ, ಕಳೆದ 30 ವರ್ಷಗಳಲ್ಲಿ ಕರ್ನಾಟಕದಲ್ಲಿ 491% ನವಿಲುಗಳ ಸಂತತಿ ಏರುಗತಿ ಕಂಡಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲೇ ಈ ಸಂಖ್ಯೆ ವೇಗವಾಗಿ ವರ್ಧಿಸಿದೆ.
ಗುಡ್ಡ ಕಾಡುಗಳನ್ನು ಕಡಿದು ವಸತಿ ನಿರ್ಮಿಸುತ್ತಿರುವುದು ನವಿಲುಗಳು ಊರಿನತ್ತ ಮುಖ ಮಾಡಲು ಪ್ರಮುಖ ಕಾರಣ ವಾದರೆ, ಕೆಲವು ದಶಕಗಳಿಂದ ಪರಿಸರದಲ್ಲಿ ಉಂಟಾದ ಅಸಮ ತೋಲನದ ಪಾತ್ರವು ಇದರ ಹಿಂದೆ ದೊಡ್ಡದಾಗಿ ಇದೆ. ಉದಾ ಹರಣೆಗೆ, ಊರ ಸರಹದ್ದಿನಲ್ಲಿದ್ದ ನರಿಗಳ ಸಂತತಿ ಅಳಿವಿನಂಚಿಗೆ ತಲುಪಿರುವುದು ಹಾಗೂ ನವಿಲುಗಳ ಸಂಖ್ಯೆ ವೃದ್ಧಿಸಿರುವುದರ ಹಿಂದೆ ಅನಿರ್ವಚನೀಯ ಸಂಬಂಧವೊಂದಿದೆ ಎನ್ನುತ್ತಾರೆ ತಜ್ಞರು.
‘‘ಒಂದೆರಡು ದಶಕಗಳ ಹಿಂದಿನವರೆಗೂ ಕರಾವಳಿಯ ಹಳ್ಳಿಗಳಲ್ಲಿ ಊರ ಕೋಳಿಗಳನ್ನು ಸಾಕುವ ಪರಿಪಾಠವು ಸಾಮಾನ್ಯವಾಗಿತ್ತು. ಫಾರಂ ಕೋಳಿಗಳ ಲಗ್ಗೆಯ ಬಳಿಕ ಹಾಗೂ ಬದಲಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯು ಕರಾವಳಿಯಲ್ಲಿ ಊರ ಕೋಳಿ ಸಾಕುವವರ ಸಂಖ್ಯೆಯು ಕ್ಷೀಣಿಸುವಂತೆ ಮಾಡಿದೆ. ಹಳ್ಳಿಗಳಲ್ಲಿ ಕೋಳಿಗಳನ್ನು ಸಾಕುತ್ತಿದ್ದಾಗ ನರಿಗಳು ಹೊಂಚು ಹಾಕಿ ದಾಳಿ ಮಾಡಿ ಕೋಳಿಗಳನ್ನು, ಅದರ ಮೊಟ್ಟೆಗಳನ್ನು ತಿಂದು ಹೊಟ್ಟೆ ಹೊರೆಯುತ್ತಿದ್ದವು. ಯಾವಾಗ ಊರಿನಲ್ಲಿ ಕೋಳಿ ಸಾಕಣೆಯು ಕ್ಷೀಣಗೊಂಡಿತೋ, ಬಳಿಕ ನರಿಗಳೂ ಆಹಾರ ಅರಸಿ ಊರಿನ ಒಳಗೆ ಬರುವುದು ಕಡಿಮೆಯಾಗಿತ್ತು. ಆದರೆ, ಈ ಅವಧಿಯಲ್ಲಿ ಕಾಡು-ಗುಡ್ಡಗಳೂ ನೆಲಸಮಗೊಂಡದ್ದರಿಂದ, ಹಾಗೂ ಆಹಾರದ ಕೊರತೆಯಿಂದಾಗಿ ನರಿಗಳ ಸಂಖ್ಯೆಯು ಕ್ಷೀಣಿಸುತ್ತಾ ಬಂದಿದೆ.
ನರಿಗಳು ಕಾಡಿನಲ್ಲಿ ಪಕ್ಷಿಗಳ ಮೊಟ್ಟೆಗಳನ್ನೂ ತಿನ್ನುತ್ತಿದ್ದವು. ಮುಖ್ಯವಾಗಿ ನವಿಲಿನದ್ದು. ಆದರೆ ಯಾವಾಗ, ಆಹಾರದ ಅಸಮೋತಲನ ದೊರೆಯುವಿಕೆಯಿಂದ ನರಿಗಳ ಸಂಖ್ಯೆಯು ಕುಂಠಿತವಾಯಿತೋ, ನವಿಲುಗಳ ಮೊಟ್ಟೆಗಳಿಗಿದ್ದ ಅಪಾಯವೂ ಕಡಿಮೆಯಾಯಿತು, ಇದು ಅಸಮತೋಲನಕ್ಕೆ ಮುಖ್ಯ ಕಾರಣ’’ ಎನ್ನುತ್ತಾರೆ ಹವ್ಯಾಸಿ ಚಾರಣಿಗ ಸಫ್ವಾನ್.
ಪರಿಸರದ ಆಹಾರ ಸರಪಳಿಯ ಅಸಮತೋಲನವೇ ಈ ಅಸ್ತವ್ಯಸ್ತಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಡುತ್ತಾರೆ.
‘‘ಒಂದೆಡೆ, ನವಿಲುಗಳ ಊರ ಸವಾರಿಯಿಂದಾಗಿ ಈಗಾಗಲೇ ಕ್ಷಯಿಸುತ್ತಾ ಬಂದಿರುವ ಕೃಷಿಗೂ ತಾತ್ವಾರ ಉಂಟಾಗಿದೆ. ರೈತರು ತಮ್ಮ ಬೆಳೆಗಳನ್ನು ನವಿಲುಗಳಿಂದ ರಕ್ಷಿಸಲು ಕೃಷಿಯ ಸುತ್ತಲೂ ಬೇಲಿಗಾಗಿ ಖರ್ಚು ಮಾಡಬೇಕಾದ ಅನಿವಾರ್ಯವೂ ಎದುರಾಗಿದೆ. ಆದರೆ, ಬೇಲಿಗಳನ್ನೂ ಹಾರಿ ಬರುವ ನವಿಲುಗಳಿಂದ ಕೃಷಿಯನ್ನು ಸಂಪೂರ್ಣವಾಗಿ ರಕ್ಷಿಸುವುದು ಸವಾಲೇ ಸರಿ. ಇದರಿಂದಾಗಿ, ಮುಂದಿನ ವರ್ಷದಿಂದ ಕೃಷಿ ಮಾಡುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ’’ ಎನ್ನುತ್ತಾರೆ ಕರಾವಳಿಯ ಕೃಷಿಕರು.
ಬೆಳ್ತಂಗಡಿ ತಾಲೂಕಿನ ಮಿತ್ತಬೈಲ್ ಮೂಲದ ಕೃಷಿಕ ಪರಮೇಶ್ವರ್ ರಾವ್ ಹೇಳುವಂತೆ, ‘‘ನವಿಲುಗಳಿಂದ ಕೃಷಿಕರಿಗೆ ತೊಂದರೆ ಮಾತ್ರ ಇದೆ ಎನ್ನಲಾಗದು. ಕೃಷಿಗೆ ಅಗತ್ಯವಿಲ್ಲದ ಹುಳು-ಹುಪ್ಪಟೆಗಳನ್ನು ನವಿಲುಗಳು ತಿನ್ನುತ್ತವೆ. ಅದರ ಹಿಕ್ಕೆ ಗಳು ಮಣ್ಣಿನ ಫಲವತ್ತಕ್ಕೂ ಕಾರಣವಾಗುತ್ತದೆ. ಆದರೆ, ತೊಂದ ರೆಯ ಕಡೆಗೆ ಗಮನಿಸುವುದಾದರೆ, ಅದು ಕಟಾವ್ಗೆ ಬಂದ ಭತ್ತಗಳನ್ನು, ತರಕಾರಿಗಳನ್ನು ತಿನ್ನುವುದರಿಂದ ಕೃಷಿಕರ ಇಳು ವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬೆಳೆದ ಬೆಳೆಗಳನ್ನು ಸುಭದ್ರವಾಗಿ ಕಾಪಾಡಲು ಸಾಧ್ಯವಾದರೆ, ನವಿಲು ಅಷ್ಟೇನು ಉಪದ್ರವಕಾರಿಯಲ್ಲ ಎನ್ನಬಹುದು. ಆದರೆ, ಇದು ಸವಾಲಿನ ಕೆಲಸ’’ ಎನ್ನುತ್ತಾರೆ ಅವರು.
ಪರಿಸರ ತಜ್ಞ ದಿನೇಶ್ ಹೊಳ್ಳ ಈ ಸಮಸ್ಯೆಯ ಕುರಿತು ಬೇರೆಯದೇ ಆಯಾಮದ ಕಡೆಗೆ ಬೊಟ್ಟು ಮಾಡುತ್ತಾರೆ.
‘‘ಊರಿನಲ್ಲಿ ನವಿಲು-ಮಂಗಗಳ ಕಾಟ ಇದೆ ಎಂದು ಕೃಷಿಕರು ದೂರುತ್ತಿದ್ದಾರೆ. ಆದರೆ, ಸಮಸ್ಯೆಯ ಮೂಲದ ಕಡೆಗೆ ಯಾರೂ ಗಮನ ಹರಿಸುತ್ತಿಲ್ಲ. ಪಶ್ಚಿಮ ಘಟ್ಟದಲ್ಲಿ ಕಾಡು ಪ್ರಾಣಿಗಳಿಗಿದ್ದ ವಾತಾವರಣವು ಪ್ರವಾಸೋದ್ಯಮದಿಂದಾಗಿ ಹದಗೆಟ್ಟಿದೆ. ಕಾಡುಗಳ ನಡುವೆ ಹೋಂ ಸ್ಟೇ ಮಾಡಿ, ಅದಕ್ಕೆ ರಸ್ತೆಗಳನ್ನು ಮಾಡುವ ಭರದಲ್ಲಿ ಕಾಡುಪ್ರಾಣಿಗಳು ನೆಲೆ ಕಳೆದುಕೊಳ್ಳುತ್ತಿವೆ. ಹಾಗಾಗಿ, ಘಟ್ಟ ಇಳಿದು ನಾಡಿನ ಕಡೆಗೆ ಅವು ವಲಸೆ ಬರುತ್ತಿವೆ. ಕಾಡಿನ ತಪ್ಪಲಿನಲ್ಲಿರುವ ಕೃಷಿಗಳಿಗೆ ಇದು ಮಾರಕವಾಗುತ್ತಿದೆ. ಅಲ್ಲದೆ, ಕಾಡುಗಳಿಂದ ನವಿಲು ಮೊದಲಾದ ಜೀವ ವೈವಿಧ್ಯವು ವಲಸೆ ಹೋಗುವುದರಿಂದ ಕಾಡಿನ ಬೆಳವಣಿಗೆಯೂ ಕುಂಠಿತವಾಗಿದೆ. ಮಂಗ-ನವಿಲುಗಳು ಒಂದೆಡೆ ಸೇವಿಸಿದ ಹಣ್ಣುಗಳ ಬೀಜಗಳನ್ನು ಇನ್ನೆಲ್ಲೋ ಹಾಕುತ್ತವೆ. ಇದರಿಂದಾಗಿ ಅಲ್ಲಿ ಅದರ ಗಿಡಗಳು ಬೆಳೆಯುತ್ತವೆ, ಆದರೆ, ಬದಲಾದ ಪರಿಸ್ಥಿತಿಯಲ್ಲಿ ಕಾಡು ಬೆಳವಣಿಗೆಗೆ ಮುಖ್ಯ ಕಾರಣವಾಗಿರುವ ಈ ಪ್ರಕ್ರಿಯೆ ಕುಂಠಿತವಾಗಿದೆ. ಹಾಗಾಗಿ, ಕಾಡಿನ ಸಹಜ ಬೆಳವಣಿಗೆಗೂ ತೊಡಕುಂಟಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದರಿಂದ ಕಾಡಿಗೂ-ನಾಡಿಗೂ ಸಮಾನ ತೊಂದರೆಗಳಿವೆ’’ ಎನ್ನುತ್ತಾರೆ ದಿನೇಶ್ ಹೊಳ್ಳ.
ಒಟ್ಟಾರೆ, ಕರಾವಳಿಯ ಊರುಗಳಿಗೆ ಅರಸಿ ಬರುತ್ತಿರುವ ನವಿಲುಗಳು ನೋಡುಗರ ಕಣ್ಣಿಗೆ ಆನಂದದಾಯಕವಾಗಿ ಕಂಡರೂ, ಹೆಚ್ಚಾಗುತ್ತಿರುವ ಅರಣ್ಯ-ನಾಗರಿಕತೆ ಸಂಘರ್ಷಕ್ಕೆ ಅತ್ಯಂತ ಜ್ವಲಂತ ಉದಾಹರಣೆಯಂತೆ ಹೆಡೆಯೆತ್ತಿ ನಿಂತಿದೆ. ಕರಾವಳಿಯ ರಾಜಕಾರಣ, ಧರ್ಮ ಸಂಘರ್ಷಗಳ ಅಬ್ಬರದಲ್ಲಿ ಸಮಾಜವು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯೊಂದು ಸದ್ದಿಲ್ಲದೆ ಬಿಗಡಾಯಿಸುತ್ತಿದೆ.







