ಬಿತ್ತನೆಗೆ ಸಿದ್ಧತೆ: ಕಲಬುರಗಿ ಜಿಲ್ಲೆಯಲ್ಲಿ 8.90 ಲಕ್ಷ ಹೆಕ್ಟೇರ್ ಗುರಿ

ಕಲಬುರಗಿ: ಇತ್ತೀಚೆಗೆ ಸುರಿದಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಅನ್ನದಾತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ರೈತರ ಅಗತ್ಯತೆಗಳಿಗೆ ಬೆನ್ನೆಲುಬಾಗಿ ಜಿಲ್ಲಾಡಳಿತ ನಿಂತಿದ್ದು, ಒಟ್ಟಾರೆ 8.90 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಹೊಂದಿ ಬಿತ್ತನೆಗೆ ಬೇಕಾಗುವ ಅಗತ್ಯ ಬೀಜ, ರಸಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳನ್ನು ಪೂರೈಸಲು ಸಿದ್ಧತೆ ಮಾಡಿಕೊಂಡಿದೆ.
ಇತ್ತೀಚೆಗೆ ಸುರಿದ ಮಳೆಯು ಪ್ರಾಥಮಿಕ ಉಳುಮೆಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಬಿತ್ತನೆಗೆ ಬೇಕಾಗುವಷ್ಟು ತೇವಾಂಶ ಮಣ್ಣಿನಲ್ಲಿ ಸೃಷ್ಟಿಯಾಗಿಲ್ಲ. ಹಾಗಾಗಿ ಬಿತ್ತನೆ ಕೈಗೊಳ್ಳುವ ರೈತರು ಆತುರ ಪಡಬಾರದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆದರೆ ಬಿತ್ತನೆಗೆ ಭೂಮಿ ಹದವಾಗಲಿದೆ. ಆಗ ಕೃಷಿ ಚಟುವಟಿಕೆಗಳು ನಡೆಸಬಹುದು ಎಂದು ಇಲಾಖೆಯ ಮೂಲಗಳು ಹೇಳಿವೆ.
ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 22,828.03 ಕ್ವಿಂಟಲ್ ಬಿತ್ತನೆ ಬೀಜ ಹಂಚಿಕೆ ಮಾಡಲಾಗಿದೆ. ಇದರಲ್ಲಿ ತೊಗರಿಗೆ 6,011.17 ಕ್ವಿಂಟಲ್, ಹೆಸರಿಗೆ 535.93 ಕ್ವಿಂಟಲ್, ಉದ್ದಿಗೆ 379.40 ಕ್ವಿಂಟಲ್ ಹಾಗೂ ಸೋಯಾಬೀನ್ಗೆ 15,681.64 ಕ್ವಿಂಟಲ್ ಸೇರಿದೆ. ಈಗಾಗಲೇ ಒಟ್ಟು 22,608.14 ಕ್ವಿಂಟಲ್ ಬೀಜಗಳ ಇಂಡೆಂಟ್ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ರೈತ
ಸಂಪರ್ಕ ಕೇಂದ್ರಗಳಲ್ಲಿ (ಆರ್ಎಸ್ಕೆ) ಸಮರ್ಪಕವಾಗಿ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜದ ಕೊರತೆ ಯಾವುದೇ ರೀತಿಯಲ್ಲಿ ಇಲ್ಲ. ಹೀಗಾಗಿ ರೈತರು ಆತಂಕ ಪಡಬಾರದು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ರಸಗೊಬ್ಬರ ದಾಸ್ತಾನಿನ ಆತಂಕವಿದೆಯೇ?
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 99,863 ಮೆಟ್ರಿಕ್ ಟನ್ ರಸಗೊಬ್ಬರ ಹಂಚಲಾಗಿದೆ. ಜೂನ್ ತಿಂಗಳ ಕೊನೆಯವರೆಗೆ ಒಟ್ಟು 50,297 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದ್ದು, 59,402 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಈಗಾಗಲೇ 21,051 ಮೆಟ್ರಿಕ್ ಟನ್ ರಸಗೊಬ್ಬರ ರೈತರಿಗೆ ವಿತರಿಸಲಾಗಿದೆ. ಬಿತ್ತನೆಗೆ ಬೇಕಾಗುವ ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರ ಸೇರಿದಂತೆ ಒಟ್ಟು 38,351 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಹಾಗಾಗಿ ರಸಗೊಬ್ಬರ ಕುರಿತು ರೈತರು ಆತಂಕ ಪಡಬಾರದು ಎಂದು ಇಲಾಖೆ ತಿಳಿಸಿದೆ.






