ಮಳೆ ಬಿಡುವು: ಭೂಮಿ ಹದಗೊಳಿಸುವ ಕಾರ್ಯಕ್ಕೆ ಚುರುಕು

ಕನಕಗಿರಿ: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಪರಿಣಾಮ ತಾಲೂಕಿನಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿವೆ. ಭೂಮಿ ಸ್ವಚ್ಛಗೊಳಿಸುವುದು, ಹದಗೊಳಿಸುವುದು ಕೆಲವೆಡೆ ಬಿತ್ತನೆ ಮುಂದಾಗಿರುವುದು ಕಂಡು ಬರುತ್ತಿದೆ.
ಕಳೆದ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಳೆದೊಂದು ವಾರದಿಂದ ಮಳೆ ಬಿಡುವು ನೀಡಿದೆ. ಭೂಮಿಯಲ್ಲಿನ ತೇವಾಂಶ ಸ್ವಲ್ಪ ಆರುವುದನ್ನೇ ಕಾಯುತ್ತಿದ್ದ ರೈತರು ತಮ್ಮ ಜಮೀನುಗಳತ್ತ ಮುಖ ಮಾಡಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಟ್ರ್ಯಾಕ್ಟರ್ಗಳಿಗೆ ಬೇಡಿಕೆ: ಬಹುತೇಕ ಕಡೆ ಮಳೆಕಡಿಮೆಯಾದ ಕಾರಣ ರೈತರು ಭೂಮಿ ಹದಗೊಳಿಸಲು, ಬಿತ್ತನೆ ಸೇರಿದಂತೆ ನಾನಾ ಕೃಷಿ ಚಟುವಟಿಕೆಗೆ ಟ್ಯಾಕ್ಟರ್ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಜಮೀನುಗಳಲ್ಲಿ ಟ್ರ್ಯಾಕ್ಟರ್ ಸದ್ದು ಕೇಳಿ ಬರುತ್ತಿದೆ. ಟ್ರ್ಯಾಕ್ಟರ್ ಹೊಂದಿರದ ರೈತರು ಬಾಡಿಗೆಗೆ ಪಡೆಯಲು ಮುಂಗಡವಾಗಿ ಬುಕ್ ಮಾಡುತ್ತಿದ್ದಾರೆ.
ಇನ್ನೊಂದು ಮಳೆ ರೈತರ ಲೆಕ್ಕಾಚಾರ: ತೊಗರಿ, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆಗೆ ಸಾಕಷ್ಟು ಕಾಲಾವಕಾಶ ಇರುವುದರಿಂದ ಭೂಮಿ ಹದಗೊಳಿಸುತ್ತಿರುವ ರೈತರು ಬಿತ್ತನೆಗೆ ತಯಾರಿ ನಡೆಸುತ್ತಿದ್ದಾರೆ. ಭೂಮಿ ಹದಗೊಳಿಸಿದ ನಂತರ ಭೂಮಿಯಲ್ಲಿನ ತೇವಾಂಶ ಸ್ವಲ್ಪ ಇಳಿಮುಖವಾಗುವುದರಿಂದ ಇನ್ನೊಂದು ಮಳೆ ಸುರಿದರೆ ಬಿತ್ತನೆ ಮಾಡಬಹುದು ಎಂಬುದು ರೈತರ ಲೆಕ್ಕಾಚಾರವಾಗಿದೆ.
ತಾಲೂಕಿನಲ್ಲಿ ಪ್ರಸಕ್ತ ರೈತ ಸಂಪರ್ಕದ ಅಂದಾಜು ಪ್ರಕಾರ, ಮುಂಗಾರು ಹಂಗಾಮಿನಲ್ಲಿ ತೊಗರಿ 3,724 ಹೆಕ್ಟೇರ್, ಮೆಕ್ಕೆಜೋಳ 1,667 ಹೆಕ್ಟೇರ್, ಸಜ್ಜೆ 3,600 ಹೆಕ್ಟೇರ್, ಹತ್ತಿ 500 ಹಾಗೂ ನವಣೆ 800 ಹೆಕ್ಟೇರ್, ಹಾಗೂ ಸೂರ್ಯಕಾಂತಿ ಸೇರಿದಂತೆ ಇನ್ನು ಇತರೆ ಬೆಳೆಗಳನ್ನು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಇಲ್ಲಿ ಮಾಮೂಲಾಗಿ ಬೆಳೆಯುತ್ತಿದ್ದ ಉದ್ದು ಮತ್ತು ಹೆಸರಿನ ಬೇಡಿಕೆ ಕಡಿಮೆಯಾಗಿದ್ದು, ಯಾರು ಕೊಳ್ಳಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
ತಾಲೂಕಿನಲ್ಲಿ ಮಳೆಯಾದರೆ ಬಿತ್ತನೆಯ ಪ್ರಮಾಣ ಹೆಚ್ಚಾಗುತ್ತದೆ. ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಸಮರ್ಪಕ ದಾಸ್ತಾನು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜತೆಗೆ ನಕಲಿ ಬೀಜದ ಬಗ್ಗೆ ಎಚ್ಚರ ವಹಿಸಬೇಕು.
-ಕೆ.ನವೀನ್ ಕೃಷಿ ಅಧಿಕಾರಿ, ಕನಕಗಿರಿ
ಮುಂಗಾರು ಮಳೆ ಸುರಿದು ಭೂಮಿ ಹದವಾಗಿದೆ. ಆದರೆ ಡೀಸೆಲ್ ಅಭಾವದಿಂದ ಟ್ರ್ಯಾಕ್ಟರ್ ಉಳುಮೆ, ಬಿತ್ತನೆ ಕೆಲಸ ಸಂಪೂರ್ಣ ಕುಂಠಿತವಾಗಿದೆ. ಬಂಕ್ಗಳಲ್ಲಿ ಕ್ಯಾನ್ಗೆ ಡೀಸೆಲ್ ಕೊಡುತ್ತಿಲ್ಲ. ರೈತರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದೆ. ಜಿಲ್ಲಾಡಳಿತ ಹಾಗೂ ಪೂರೈಕೆ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಎಲ್ಲ ಬಂಕ್ಗಳಿಗೆ ಡೀಸೆಲ್ ಪೂರೈಕೆ ಮಾಡಿಸಬೇಕು.
-ಯಮನೂರು ಇದ್ಲಾಪೂರ ರೈತ ಬುನ್ನಟ್ಟಿ
ಉಳುಮೆ ಮುಗಿದಿದೆ. ಮಳೆ ಬಂದ ಕೂಡಲೇ ಸಜ್ಜೆ ಬಿತ್ತನೆ. ಡೀಸೆಲ್ ಸಿಕ್ಕರೆ ಕೆಲಸ ಸುಗಮವಾಗಲಿದೆ.
-ಹೇಮರಾಜ, ರೈತ ತಿಪ್ಪನಾಳ






