ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ: ಅಡಿಕೆ, ಕಾಫಿ ಬೆಳೆಗೆ ವ್ಯಾಪಿಸಿದ ಕೊಳೆರೋಗ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಬಾರಿ ಧಾರಾಕಾರ ಮಳೆಯಾಗಿದ್ದು, ಅಡಿಕೆ, ಕಾಫಿ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ನೆಲಕಚ್ಚಿರುವುದರಿಂದ ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದೆ. ಈ ಮಧ್ಯೆ ಅಕ್ಟೋಬರ್ ತಿಂಗಳಲ್ಲೂ ಮಲೆನಾಡು ಭಾಗದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಅಳಿದುಳಿದ ಅಡಿಕೆ, ಕಾಫಿ ಬೆಳೆಯೂ ನೆಲಕಚ್ಚುವ ಆತಂಕ ಬೆಳೆಗಾರರದ್ದಾಗಿದೆ.
ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಅಡಿಕೆ, ಕಾಫಿ ಬೆಳೆಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಕಾಫಿ, ಅಡಿಕೆ ತೋಟಗಳು ಪ್ರತ್ಯಕ್ಷ, ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡಿವೆ. ಆದರೆ, ಹವಾಮಾನ ವೈಪರೀತ್ಯದ ಪರಿಣಾಮ ಕಾಫಿ, ಅಡಿಕೆ ಬೆಳೆಗಳು ಬೆಳೆಗಾರರ ಕೈ ಸೇರದೆ ಮಣ್ಣು ಪಾಲಾಗುತ್ತಿರುವುದರಿಂದ ಬೆಳೆಗಾರರು ಅಪಾರ ನಷ್ಟ ಅನುಭವಿಸುವಂತಾಗಿದೆ.
ಈ ಬಾರಿ ಮಳೆಗಾಲದ ಆರಂಭದಲ್ಲಿ ಸಾಧಾರಣ ಮಳೆಯಾಗಿದ್ದರೆ ಆಗಸ್ಟ್ನಲ್ಲಿ ಜಿಲ್ಲಾದ್ಯಂತ ಭಾರೀ ಮಳೆ ಸುರಿದಿದೆ. ಪರಿಣಾಮ ಅಡಿಕೆ, ಕಾಫಿ ತೋಟಗಳಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬೆಳೆಗಳಿಗೆ ಕೊಳೆ ವ್ಯಾಪಕವಾಗಿ ಹರಡಿದ ಪರಿಣಾಮ ಅಡಿಕೆ ಕಾಯಿಗಳು ಉದುರಿ ಬೆಳೆಗಾರರಿಗೆ ಭಾರೀ ನಷ್ಟವನ್ನುಂಟು ಮಾಡಿದೆ.
ಅಡಿಕೆ ಬೆಳೆಗಾರರು ಕೊಳೆ ರೋಗದಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ತೋಟಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸಿದ್ದರೂ ಬಿಸಿಲಿನ ಕೊರತೆಯಿಂದಾಗಿ ತೋಟಗಳಿಗೆ ಔಷಧ ಸಿಂಪಡಣೆ ಮಾಡಿದರೂ ಅಡಿಕೆ ಕಾಯಿಗಳು ಉದುರುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿರುವ ಬಹುತೇಕ ತೋಟಗಳು ಕೊಳೆ ರೋಗಕ್ಕೆ ತುತ್ತಾಗಿದ್ದು, ಬೆಳೆಗಾರರ ಪಾಲಿಗೆ ಅಡಿಕೆ ಬೆಳೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.
ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿರುವ ಅಡಿಕೆ ತೋಟಗಳು ಅಡಿಕೆ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗದಿಂದ ನಾಶವಾಗುವ ಹಂತದಲ್ಲಿವೆ. ಈ ಮಧ್ಯೆ ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ತೋಟಗಳಲ್ಲಿ ಅಳಿದುಳಿದ ಅಡಿಕೆ ಬೆಳೆಯೂ ಮಣ್ಣು ಪಾಲಾಗುತ್ತಿದೆ. ಅಡಿಕೆ ಬೆಳೆ ರಕ್ಷಣೆ ಮಾಡಿಕೊಳ್ಳಲು ಬೆಳೆಗಾರರು ಸದ್ಯ ಎರಡನೇ ಸುತ್ತಿನ ಬೋರ್ಡೋ ದ್ರಾವಣ ಸಿಂಪಡಣೆಗೆ ಮುಂದಾಗಿದ್ದಾರೆ.
ಕಾಫಿ ತೋಟಗಳಲ್ಲೂ ಕೊಳೆ ರೋಗ ವ್ಯಾಪಕವಾಗಿ ಕಂಡು ಬಂದಿದ್ದು, ಈ ಬಾರಿ ಸಮೃದ್ಧವಾಗಿ ಬೆಳೆದಿದ್ದ ಕಾಫಿ ಬೆಳೆ ಗಿಡಗಳಲ್ಲೇ ಕೊಳೆಯಲಾರಂಭಿಸಿದೆ. ಪರಿಣಾಮ ಭಾರೀ ಪ್ರಮಾಣದಲ್ಲಿ ನಷ್ಟವಾಗಿದ್ದು, ತೋಟಗಾರಿಕೆ ಇಲಾಖೆ ಹಾಗೂ ಕಾಫಿ ಮಂಡಳಿಯಿಂದ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗಿದ್ದರೂ ಬೆಳೆಗಾರರಿಗೆ ಇನ್ನೂ ಪರಿಹಾರ ದಕ್ಕಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೆ, ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಅಡಿಕೆ ಬೆಳೆಗೆ ಉತ್ತಮ ಧಾರಣೆ ಇದೆ. ಆದರೆ, ಭಾರೀ ಮಳೆಯಿಂದಾಗಿ ಕಾಫಿ, ಅಡಿಕೆ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿ ಬೆಳೆಗಾರರಿಗೆ ಅಪಾರ ನಷ್ಟ ಸಂಭವಿಸಿರುವುದರಿಂದ ಬೆಳೆಗಾರರು ಆತಂಕಗೊಂಡಿದ್ದಾರೆ. ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಅಳಿದುಳಿದ ಬೆಳೆಯೂ ಮಣ್ಣು ಪಾಲಾಗುವ ಭೀತಿ ಬೆಳೆಗಾರರದ್ದಾಗಿದೆ. ಸರ್ಫೇಸಿ ಕಾಯ್ದೆ, ಅತಿವೃಷ್ಟಿಯಿಂದಾಗಿ ಕಾಫಿ ಬೆಳೆಗಾರರು ಹೈರಾಣಾಗಿದ್ದು, ಸರಕಾರಗಳು ಕಾಫಿ, ಅಡಿಕೆ ಬೆಳೆಗಾರರ ನೆರವಿಗೆ ಬರಬೇಕೆಂದು ರೈತರು, ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಈ ಬಾರಿಯ ಮಳೆಗಾಲದಲ್ಲಿ ಮುಂಗಾರು ಕೈಕೊಟ್ಟಿದ್ದರೂ ನಂತರ ಭಾರೀ ಮಳೆಯಾಗಿದೆ. ಪರಿಣಾಮ ಮಲೆನಾಡು ಭಾಗದಲ್ಲಿರುವ ಅಡಿಕೆ, ಕಾಫಿ ತೋಟಗಳಿಗೆ ಕೊಳೆ ರೋಗ ವ್ಯಾಪಿಸಿ ಅಪಾರ ಬೆಳೆ ನಷ್ಟವನ್ನುಂಟು ಮಾಡಿದೆ. ಕಾಫಿ ಬೆಳೆಯಂತೂ ಸಂಪೂರ್ಣವಾಗಿ ಮಣ್ಣು ಪಾಲಾಗಿದ್ದು, ಅಳಿದುಳಿದ ಬೆಳೆ ರಕ್ಷಣೆಗೆ ಬೆಳೆಗಾರರು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಸದ್ಯ ಮತ್ತೆ ಮಳೆ ಶುರುವಾಗಿದೆ. ಕಾಫಿ ಬೆಳೆ ನಷ್ಟದ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು.
ಸೂರಪ್ಪನಹಳ್ಳಿ ಅಶೋಕ್, ಕಾಫಿ ಬೆಳೆಗಾರ







