ಐದು ತಿಂಗಳು ಕಳೆದರೂ ರಸ್ತೆ ಕಾಮಗಾರಿ ಅಪೂರ್ಣ

ಚಡಚಣ: ತಾಲೂಕಿನ ಧೂಳಖೇಡ-ಶಿರನಾಳ, ಏಳಗಿ-ಹಲಸಂಗಿ, ಹಾಗೂ ಲೋಣಿ-ಗೊಟ್ಯಾಳ ಗ್ರಾಮಗಳ ಜನರಿಗೆ ಸುಗಮ ಸಂಚಾರದ ಭರವಸೆ ನೀಡಿ ಆರಂಭಿಸಲಾದ ರಸ್ತೆ ಕಾಮಗಾರಿಗಳು ಐದು ತಿಂಗಳು ಕಳೆದರೂ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಾಮಗಾರಿಯ ಆಮೆಗತಿಯ ನಡಿಗೆಯಿಂದಾಗಿ ಈ ಭಾಗದ ಸಾರ್ವಜನಿಕರು ಮತ್ತು ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಅದ್ದೂರಿ ಭೂಮಿ ಪೂಜೆ, ಮಂದಗತಿ ಕಾಮಗಾರಿ: ಕಳೆದ ಜನವರಿ ತಿಂಗಳಿನಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಅತ್ಯಂತ ಉತ್ಸಾಹದಿಂದ ಈ ರಸ್ತೆಗಳ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ರಸ್ತೆಗಳು ಶೀಘ್ರದಲ್ಲೇ ಅಭಿವೃದ್ಧಿಯಾಗಲಿವೆ ಎಂದು ಗ್ರಾಮಸ್ಥರು ಸಂತಸ ಪಟ್ಟಿದ್ದರು. ಆದರೆ ಭೂಮಿ ಪೂಜೆ ಮುಗಿದು ಐದು ತಿಂಗಳು ಉರುಳಿದರೂ, ಕೆಆರ್ಡಿಎಲ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಇನ್ನೂ ಅರ್ಧಕ್ಕೆ ನಿಂತಿದೆ.
ಆರೋಗ್ಯ ಸಮಸ್ಯೆ: ರಸ್ತೆಯನ್ನು ಅಗೆದು ಹಾಗೇ ಬಿಟ್ಟಿರುವುದರಿಂದ ವಾಹನಗಳು ಚಲಿಸುವಾಗ ಭಾರೀ ಪ್ರಮಾಣದ ಧೂಳು ಏಳುತ್ತಿದೆ. ಇದರಿಂದ ರಸ್ತೆ ಪಕ್ಕದ ನಿವಾಸಿಗಳು ಹಾಗೂ ಸವಾರರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ.
ಸಂಚಾರಕ್ಕೆ ಸಂಚಕಾರ: ರಸ್ತೆಯ ಮಧ್ಯೆ ಜಲ್ಲಿಕಲ್ಲುಗಳನ್ನು ಸುರಿದು ಅರ್ಧಕ್ಕೆ ಬಿಟ್ಟಿರುವುದರಿಂದ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಾತ್ರಿ ವೇಳೆಯಂತೂ ಇಲ್ಲಿ ಸಂಚರಿಸುವುದು ಪ್ರಾಣಕ್ಕೆ ಕುತ್ತು ತಂದೊಡ್ಡುವ ಭೀತಿಯಿದೆ.
ಮುಂಗಾರು ಮಳೆಯ ಆತಂಕ: ಈಗಾಗಲೇ ಮುಂಗಾರು ಆರಂಭವಾಗುವ ಮುನ್ಸೂಚನೆ ಇರುವುದರಿಂದ, ಮಳೆಯಾದರೆ ಈ ರಸ್ತೆಗಳು ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಡಲಿವೆ. ಆಗ ಗ್ರಾಮಸ್ಥರು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಪರಿಹಾರಕ್ಕಾಗಿ ಹೊಲದ ಮಾಲೀಕರ ಆಗ್ರಹ:
ಧೂಳಖೇಡ ಹೆದ್ದಾರಿಗೆ ಸುಮಾರು 3.5 ಕಿಮೀ ದೂರದಲ್ಲಿ ಶಿರನಾಳ ಗ್ರಾಮವಿದೆ. ಇದರ ಮಧ್ಯೆ ಈಗಾಗಲೇ ರಸ್ತೆಯಿದ್ದು, ಸಂಚಾರಕ್ಕೆ ಯಾವುದೇ ತರಹದ ಯೋಗ್ಯ ಸ್ಥಿತಿಯಲ್ಲಿಲ್ಲ. ರಸ್ತೆ ನಮ್ಮ ಜಮೀನನಲ್ಲಿ ಹಾಯ್ದು ಹೋಗುತ್ತಿದ್ದು, ಇದಕ್ಕೆ ಸರಕಾರ ಯಾವುದೇ ಪರಿಹಾರ ನೀಡಿಲ್ಲ ಎಂದು ಸ್ಥಳೀಯ ಹೊಲದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪರಿಹಾರ ನೀಡದ ಕಾರಣ ಕಾಮಗಾರಿ ಮುಂದುವರಿಯಲೇ ಇಲ್ಲ. ಸ್ಥಳೀಯ ಹೊಲದ ಮಾಲೀಕರ ಆಕ್ಷೇಪಗಳಿಗೆ ಪರಿಹಾರವನ್ನು ಕಂಡುಕೊಂಡು ರಸ್ತೆ ಕಾಮಗಾರಿ ಮುಂದುವರಿಸುವುದರೊಂದಿಗೆ ರಸ್ತೆ ಡಾಂಬರಿಕರಣ ಪೂರ್ಣ ಮಾಡಬೇಕಾದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಪ್ರಚಾರಕ್ಕಾಗಿ ಭೂಮಿ ಪೂಜೆ ಮಾಡುತ್ತಾರೆಯೇ ಹೊರತು, ಸಾರ್ವಜನಿಕರ ಕಷ್ಟ ಅವರಿಗೆ ಬೇಡವಾಗಿದೆ. ಐದು ತಿಂಗಳಿನಿಂದ ನರಕ ಯಾತನೆ ಅನುಭವಿಸುತ್ತಿದ್ದೇವೆ. ಇನ್ನಾದರೂ ಕೆಆರ್ಡಿಎಲ್ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಮಳೆಗಾಲ ಆರಂಭವಾಗುವ ಮುನ್ನ ರಸ್ತೆ ಕೆಲಸ ಮುಗಿಸಬೇಕು.
-ಪ್ರವೀಣ ಬಿರಾದಾರ, ಏಳಗಿ ಗ್ರಾಮಸ್ಥ
ರಸ್ತೆಗಳ ದುರಸ್ತಿ ಕಾರ್ಯ ಇಷ್ಟೊಂದು ವಿಳಂಬವಾಗುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಉನ್ನತ ಅಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನಹರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಮುಗಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಲಿದ್ದೇವೆೆ.
-ಕಲ್ಲಪ್ಪ ಗುಮತೆ, ಶಿರನಾಳ ಗ್ರಾಮಸ್ಥ






